Advertisement

ಐದು ದಶಕಗಳ ಬಳಿಕ ಸಿಕ್ಖ್ ಸಮುದಾಯಕ್ಕೆ ತೆರೆದ ಕರ್ತಾಪುರ

10:11 AM Nov 07, 2019 | sudhir |

ಕರ್ತಾಪುರ ಸಾಹಿಬ್‌. ಸಿಕ್ಖ್ ಸಮುದಾಯದ ಪ್ರಮುಖ ಶ್ರದ್ಧಾ ಕೇಂದ್ರ. ಗುರು ನಾನಕ್‌ ಅವರು ತಮ್ಮ ಕೊನೆಗಾಲದಲ್ಲಿ ಇದ್ದ ಕಾರಣಕ್ಕೆ ಸಿಕ್ಖ್ರಿಗೆ ಇದು ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಪಾಕಿಸ್ಥಾನ ಸರಕಾರದ ತೀರ ಅವಜ್ಞೆಗೆ ಒಳಗಾಗಿದ್ದ ಈ ಕೇಂದ್ರವನ್ನು ಈಗಿನ ಹಂತಕ್ಕೆ ತರಬೇಕಾದರೆ, ಭಾರತದ ಸಿಕ್ಖ್ ಸಮುದಾಯ, ಭಾರತ ಸರಕಾರ ಮತ್ತು ಅಂ.ರಾ. ಸಿಕ್ಖ್ ಸಮುದಾಯದ ದೀರ್ಘ‌ ಹೋರಾಟ ಕಾರಣ. ಈಗ ಪುನರ್‌ನಿರ್ಮಾಣದ ಬಳಿಕ ಅದು ಸಿಕ್ಖ್ ಯಾತ್ರಾರ್ಥಿಗಳಿಗೆ ತೆರೆದುಕೊಂಡಿದ್ದು, ಇಲ್ಲಿನ ವಾರ್ಷಿಕ ಯಾತ್ರೆ ನ.9ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಕರ್ತಾಪುರ ಸಾಹಿಬ್‌, ಅಲ್ಲಿನ ವಿಶೇಷಗಳೇನು? ಎಂಬ ಕುರಿತ ವಿವರಗಳು ಇಲ್ಲಿವೆ.

Advertisement

ಕರ್ತಾಪುರ ಗುರುದ್ವಾರ ಎಲ್ಲಿದೆ?
ಭಾರತ-ಪಾಕಿಸ್ಥಾನ ಗಡಿಯಿಂದ ಕೇವಲ 5 ಕಿ.ಮೀ. ದೂರದಲ್ಲಿ ಈ ಗುರುದ್ವಾರವಿದೆ. ಪಾಕ್‌ನ ನರೋವಲ್‌ ಜಿಲ್ಲೆಯ ಶಾಕಾರಗಢ ತಾಲೂಕಿನಲ್ಲಿ ಈ ಶ್ರದ್ಧಾಕೇಂದ್ರವಿದೆ. ಬಯಲು ಪ್ರದೇಶದಲ್ಲಿ ರಾವಿ ನದಿ ದಂಡೆಯಲ್ಲಿ ಗುರುದ್ವಾರವಿದ್ದು, ಇದರ ಸುತ್ತಲೂ ಆವರಿಸಿದ ಭಾರೀ ಗಾತ್ರದ ಹುಲ್ಲುಗಳನ್ನು ಪಾಕ್‌ ಆಡಳಿತ ಕಟಾವು ಮಾಡಿದಾಗ ಭಾರತದ ಗಡಿಯಿಂದಲೇ ಈ ಗುರುದ್ವಾರ ಕಾಣಿಸುತ್ತದೆ. ಇದು ಜಗತ್ತಿನ ಅತಿ ದೊಡ್ಡ ಗುರುದ್ವಾರವೂ ಹೌದು. ಲಾಹೋರ್‌ನಿಂದ ಇಲ್ಲಿಗೆ 120 ಕಿ.ಮೀ. ದೂರವಿದೆ. ಈ ಜಾಗವೀಗ ಪಾಕ್‌ನಲ್ಲಿ ಪ್ರಮುಖ ಪ್ರವಾಸಿ ಕೇಂದ್ರವಾಗಿದೆ.

ಕರ್ತಾಪುರಕ್ಕೇಕೆ ಮಹತ್ವ?
ಸಿಕ್ಖ್ ಸಂಸ್ಥಾಪಕರು, ಧರ್ಮಗುರುಗಳೂ ಆದ ಪೂಜ್ಯ ಗುರುನಾನಕರು ದೇಹವನ್ನು ತ್ಯಜಿಸಿದ ಜಾಗವಿದು. ಅವರು ಕೊನೆಗಾಲದಲ್ಲಿ ಇಲ್ಲೇ ವಾಸವಿದ್ದರು. ಈ ಭಾಗದಲ್ಲಿ ಸಿಕ್ಖ್ ಸಮುದಾಯವನ್ನು ಈ ಭಾಗದಲ್ಲಿ ಒಗ್ಗೂಡಿಸಿದ್ದಲ್ಲದೆ, ಸುಮಾರು 18 ವರ್ಷ ಕಾಲ ಇಲ್ಲಿ ಜೀವಿಸಿದ್ದರು. ಬಳಿಕ 1539ರಲ್ಲಿ ಗುರು ನಾನಕ್‌ ಅವರು ಕಾಲವಾದರು. ಆ ಬಳಿಕ ಇದೇ ಜಾಗದಲ್ಲಿ ಕರ್ತಾಪುರ ಗುರು ಸಾಹಿಬ್‌ ತಲೆ ಎತ್ತಿತು. ಕರ್ತಾಪುರ ಗುರು ನಾನಕರು ದೈವಾಧೀನರಾದ ಸ್ಥಳವಾದರೆ, ನನಕಾನದಲ್ಲಿರುವ ಜನಮ್‌ ಆಸ್ಥಾನ್‌ ಗುರುನಾನಕರ ಜನ್ಮ ಸ್ಥಳವಾಗಿದೆ. ಈ ಎರಡೂ ಗುರುದ್ವಾರಗಳು ಪಾಕಿಸ್ಥಾನದಲ್ಲಿವೆ.

ಶಿಥಿಲಾವಸ್ಥೆಯಲ್ಲಿದ್ದ ಗುರುದ್ವಾರ
ಕರ್ತಾಪುರ ಸಾಹಿಬ್‌ ಅತಿ ಮುಖ್ಯವಾದ ಗುರುದ್ವಾರವಾಗಿದ್ದರೂ ಪಾಕಿಸ್ಥಾನ ಅದನ್ನು ಸಂಪೂರ್ಣವಾಗಿ ಅವಗಣನೆ ಮಾಡಿತ್ತು. 1990ರವರೆಗೂ ಅಲ್ಲಿ ಯಾವುದೇ ಅಭಿವೃದ್ಧಿ ಕೆಲಸ, ರಸ್ತೆಯೂ ಇರಲಿಲ್ಲ. ಈ ಬಗ್ಗೆ ಪಾಕಿಸ್ಥಾನದಲ್ಲಿರುವ ಸಿಕ್ಖ್ ಸಮುದಾಯ ಮತ್ತು ಭಾರತೀಯ ಸಿಕ್ಖ್ ಸಮುದಾಯಗಳು ತೀವ್ರವಾಗಿ ಪಾಕ್‌ ಸರಕಾರಕ್ಕೆ ಒತ್ತಡ ಹೇರುತ್ತ ಬಂದಿದ್ದವು. 1990ರಲ್ಲಿ ಕಟ್ಟಡದ ಗಾರೆಗಳಲ್ಲ ಕಿತ್ತು ಹೋಗಿ ಇನ್ನೇನು ಬೀಳಬಹುದು ಎಂಬ ಸ್ಥಿತಿ ಇತ್ತು. ಬಳಿಕ ಭಾರತ ಸರಕಾರವೂ ಸೇರಿದಂತೆ ಸಿಕ್ಖ್ ಸಮುದಾಯದ ಒತ್ತಾಯಕ್ಕೆ ಮಣಿದು ಅದರ ಬಗ್ಗೆ ತುಸು ಗಮನ ಹರಿಸಲಾಗಿತ್ತು. ವರ್ಷಕ್ಕೆ ನಾಲ್ಕು ಬಾರಿ ಸಿಕ್ಖ್ ಸಮುದಾಯದ ಮಂದಿ ಜಾಥಾ ಹೋಗುತ್ತಿದ್ದರೂ ಅಭಿವೃದ್ಧಿಗೆ ಅಲ್ಲಿನ ಸರಕಾರ ಮುಂದಾಗಿರಲಿಲ್ಲ. ಬಳಿಕ ವಿದೇಶದಿಂದ ಸಿಕ್ಖ್ ಧರ್ಮೀಯರು ಆಗಮಿಸಿದ್ದು, ಪಾಕ್‌ ಸರಕಾರದ ಮೇಲೆ ಒತ್ತಡ ಹೆಚ್ಚಲು ಕಾರಣವಾಗಿತ್ತು. 2000ರಲ್ಲಿ ಗುರು ಸಾಹಿಬ್‌ ಸ್ಥಾಪನೆಯಾಗಿದ್ದು, 2004ರಲ್ಲಿ ಜೀರ್ಣೋದ್ಧಾರ ಮಾಡಲಾಗಿತ್ತು. 2005ರಿಂದ ಭಾರತೀಯರು ಭೇಟಿ ನೀಡಲು ಆರಂಭಿಸಿದ್ದರು.

17 ವರ್ಷ ಗಡಿಯಲ್ಲೇ ಪ್ರಾರ್ಥಿಸಿದ್ದ ಶಾಸಕ
ಕರ್ತಾಪುರ ತೆರೆದುಕೊಳ್ಳಬೇಕು. ಸಿಕ್ಖ್ ಶ್ರದ್ಧಾಳುಗಳ ಭೇಟಿಗೆ ಸಾಧ್ಯವಾಗಬೇಕು ಎಂದು ಸುಮಾರು 17 ವರ್ಷಗಳಿಂದ ಪಂಜಾಬ್‌ ಶಾಸಕ ಕುಲದೀಪ್‌ ಸಿಂಗ್‌ ವಾಡಾಲಾ ಅವರು ಪ್ರಾರ್ಥಿಸುತ್ತಲೇ ಇದ್ದರು. ಗಡಿಯಲ್ಲೇ ಕರ್ತಾಪುರದತ್ತ ತಿರುಗಿ ಅವರು ಪ್ರತಿ ತಿಂಗಳು ನಮಸ್ಕರಿಸುತ್ತಿದ್ದರು. ಭೇಟಿಗೆ ಅವರು ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಆದರೆ ಭಾರತದ ಯಾತ್ರಾರ್ಥಿಗಳಿಗೆ ತೆರೆದುಕೊಳ್ಳುವ ಮನಸ್ಸು ಪಾಕಿಸ್ಥಾನಕ್ಕಿರಲಿಲ್ಲ. ಕೊನೆಗೆ 2001ರಲ್ಲಿ ಅವರು ಕಾಲವಾದರು.

Advertisement

ಕೊನೆಗೂ ಈಡೇರಿದ ಆಸೆ
ಕರ್ತಾಪುರ ಕಾರಿಡಾರ್‌ನ ಪರಿಕಲ್ಪನೆ ಮೊಳಕೆಯೊಡೆದಿದ್ದು, ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ. 1999ರ ಲಾಹೋರ್‌ ಬಸ್‌ ಯಾತ್ರೆ ವೇಳೆ ಅವರು ಪಾಕ್‌ ಆಡಳಿತದೊಂದಿಗೆ ವಿಚಾರ ಪ್ರಸ್ತಾವಿಸಿದ್ದರು. ಅದರಂತೆ ಗುರುದಾಸ್‌ಪುರದ ದೇರಾ ಬಾಬಾ ನಾನಕ್‌ ಗುರುದ್ವಾರದಿಂದ ಕರ್ತಾಪುರಕ್ಕೆ ಕಾರಿಡಾರ್‌ ಮಾಡುವ ಪ್ರಸ್ತಾವನೆಯಿತ್ತು. ಪಾಕ್‌ ಮಿಶ್ರ ಪ್ರತಿಕ್ರಿಯೆ ನೀಡಿತ್ತು. ಬಳಿಕ ಒತ್ತಾಯದ ಮೇರೆಗೆ ಇದಕ್ಕೆ ಸಮ್ಮತಿ ನೀಡಿತ್ತ. ಬಳಿಕ ಈ ಬಗ್ಗೆ ಒಪ್ಪಂದಕ್ಕೆ ತೀರ್ಮಾನಿಸಲಾಗಿದ್ದು, ಪಾಕ್‌ ಕಾರಿಡಾರ್‌ ಸ್ಥಾಪನೆ, ಜೀರ್ಣೋದ್ಧಾರಕ್ಕೆ ಮುಂದಾಗಿತ್ತು. ಈ ವರ್ಷ ಸಹಿ ಹಾಕಲಾಗಿದೆ. ಜೀರ್ಣೋದ್ಧಾರವೂ ಆಗಿ ತೆರೆದುಕೊಂಡಿದೆ.

ಕುತಂತ್ರಿ ಪಾಕಿಸ್ಥಾನ ಮತ್ತು ಕರ್ತಾಪುರ
ಕರ್ತಾಪುರ ವಿಚಾರದಲ್ಲಿ ಪಾಕಿಸ್ಥಾನ ಇನ್ನಿಲ್ಲದ ಕುತಂತ್ರಗಳನ್ನು ಪ್ರದರ್ಶಿಸುತ್ತಲೇ ಬಂದಿದೆ. ಕರ್ತಾಪುರ ಜೀಣೋದ್ಧಾರದ ಭೇಡಿಕೆ ಇದ್ದಾಗ ಅದಕ್ಕೆ ಬೇಕಾದ ಸಮಿತಿ ಮಾಡಿ ಅದಕ್ಕೆ ಮಾಜಿ ಐಎಸ್‌ಐ ಮುಖ್ಯಸ್ಥ ಲೆ.ಜ.ಜಾವೇದ್‌ ನಾಸಿರ್‌ ಎಂಬವರನ್ನು ಅಧ್ಯಕ್ಷನನ್ನಾಗಿ ಮಾಡಿತ್ತು. 1999ರಲ್ಲಿ ಬೇಡಿಕೆ ತೀವ್ರವಾಗಿದ್ದರೂ ಸೊಪ್ಪು ಹಾಕಿರಲಿಲ್ಲ. ಬಳಿಕ ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ ಮತ್ತೆ ಬೇಡಿಕೆ ಕೇಳಿಬಂದಿದ್ದರಿಂದ ಅದಕ್ಕೆ ಮಣಿದು ಕಾರಿಡಾರ್‌ಗೆ ಸಮ್ಮತಿಸಿತ್ತು. ಸದ್ಯ ಕಾರಿಡಾರ್‌ ತೆರೆದುಕೊಂಡರೂ ಹಲವು ಚಿತಾವಣೆಗಳನ್ನು ಮಾಡಿದೆ. ಯಾತ್ರಾರ್ಥಿಗಳಿಗೆ ದುಬಾರಿ ಶುಲ್ಕ ವಸೂಲಿಯನ್ನು ಮಾಡುತ್ತಿದೆ. ಯಾವುದೇ ಪಾಸ್‌ಪೋರ್ಟ್‌ ಬೇಡ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಟ್ವೀಟ್‌ ಮಾಡಿದ್ದರೂ ಈ ಬಗ್ಗೆ ಯಾವುದೇ ಅಧಿಕೃತ ಸೂಚನೆಗಳನ್ನು ಪಾಕ್‌ ಆಡಳಿತಕ್ಕೆ ನೀಡಲಾಗಿಲ್ಲ. ಯಾತ್ರೆ ಆರಂಭದ ದಿನ ಯಾವುದೇ ಶುಲ್ಕವಿಲ್ಲ ಎಂದು ಹೇಳಿದ್ದರೂ ಆಡಳಿತಕ್ಕೆ ಸೂಚನೆ ಇಲ್ಲ. ಆದ್ದರಿಂದ ಬಗ್ಗೆ ಗೊಂದಲ ಮುಂದುವರಿದಿದೆ. ಕರ್ತಾಪುರಕ್ಕೆ ಭಾರತದಿಂದ ಜಾಥಾ ತೆರಳಲಿದ್ದು, ಅಲ್ಲಿ ಏನೆಲ್ಲ ಸಿದ್ಧತೆಯಾಗಿದೆ ಎಂದು ನೋಡಲು ಒಂದು ನಿಯೋಗಕ್ಕೆ ಅವಕಾಶ ಕೊಡಬೇಕೆಂದು ಭಾರತ ಕೇಳಿದರೂ ನಿರಾಕರಿಸಲಾಗಿದೆ. ಜತೆಗೆ ಇದೀಗ ಕರ್ತಾಪುರಕ್ಕೆ ಆಗಮಿಸುವ ಸಿಕ್ಖ್ ಸಮುದಾಯದವರ ಮನಸ್ಸು ಕೆರಳುವಂತೆ, ಭಾರತ ಒಡೆಯಲು ಪ್ರತ್ಯೇಕ ಖಲಿಸ್ಥಾನ ಚಳವಳಿಗೆ ತುಪ್ಪ ಸುರಿಯಲು ಬಿಂದ್ರನ್‌ವಾಲೆ ವೀಡಿಯೋ ತೋರಿಸಲಾಗುತ್ತದೆ. ಇಂತಹ ಕುತಂತ್ರಗಳ ಬಗ್ಗೆ ಭಾರತೀಯ ಸಿಕ್ಖ್ ಸಮುದಾಯ, ಪಂಜಾಬ್‌ ಸಿಎಂ ಅಮರೀಂದರ್‌ ಸಿಂಗ್‌ ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next