Advertisement

“ಸುತಾರ’ಎಂಬ “ಸೂಫಿ ಸಂತ’

11:25 PM Feb 05, 2022 | Team Udayavani |

ಐದು ದಶಕಗಳ ಕಾಲ ಭಜನೆ, ಪ್ರವಚನ, ವಚನ ವಾಚನ ಮೂಲಕ ನಾಡಿನಾದ್ಯಂತ ಭಾವೈಕ್ಯದ ಸಂದೇಶ ಬೀರುತ್ತ ಬಂದಿದ್ದ ಸೂಫಿ ಸಂತ ಇಬ್ರಾಹಿಂ ಸುತಾರ ಇನ್ನು ನೆನಪು ಮಾತ್ರ.

Advertisement

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪಟ್ಟಣದ ನಬೀಸಾಬ ಮತ್ತು ಆಮಿನಾಬಿ ದಂಪತಿ ಮಗನಾಗಿ 1940ರ ಮೇ 10ರಂದು ಜನಿಸಿದ್ದ ಅವರು ಕಲಿತದ್ದು ಕೇವಲ ಮೂರನೇ ತರಗತಿ. ಆದರೆ ಜ್ಞಾನ ಬೆಳೆಸಿಕೊಂಡಿದ್ದು ಮಾತ್ರ ಅಗಾಧ.

ಮಹಾಲಿಂಗಪುರದ ಬಸವಾನಂದರು, ಕುಬಸದ ಬಸಪ್ಪಜ್ಜನವರ ಗರಡಿಯಲ್ಲಿ ಬೆಳೆದ ಅವರು ಸಹಜಾನಂದ ಸ್ವಾಮೀಜಿ, ಕಟಗಿ ಮಲ್ಲಪ್ಪ, ದಿ| ಮಲ್ಲಪ್ಪ ಶಿರೋಳ ಶರಣರ ಜತೆಗೆ ಅಧ್ಯಾತ್ಮದ ಅಧ್ಯಯನ ನಡೆಸಿದರು. ವೃತ್ತಿಯಲ್ಲಿ ನೇಕಾರರಾಗಿದ್ದು, ಪ್ರವಚನ-ಭಜನೆ ಹೇಳುತ್ತ ಸಂಚರಿಸಿದರು. 1970ರಲ್ಲಿ ಭಾವೈಕ್ಯ ಜಾನಪದ ಸಂಗೀತ ಮೇಳ ಕಟ್ಟಿದ ಅವರು ತಿರುಗದ ಊರುಗಳಿಲ್ಲ, ನೋಡದ ಕ್ಷೇತ್ರಗಳಿಲ್ಲ.

ಸದ್ಗುರುಗಳ ಒಡನಾಟ: ಸಿದ್ಧಾರೂಢ ಸಂಪ್ರದಾಯದ ಬೀದರ ಶಿವಕುಮಾರ ಸ್ವಾಮೀಜಿ, ಇಂಚಲ ಶಿವಾನಂದ ಭಾರತಿ ಸ್ವಾಮೀಜಿ, ಹುಬ್ಬಳ್ಳಿ ಶಿವಾನಂದ ಭಾರತಿ ಸ್ವಾಮೀಜಿ ಮುಂತಾದವರ ಒಡನಾಟ ಬೆಳೆಸಿಕೊಂಡು ಬಂದ ಅವರು, ಅಧ್ಯಾತ್ಮದ ಚಿಂತನೆಯೊಂದಿಗೆ ನೀತಿ ಬೋಧಕ ತಣ್ತೀಪದಗಳನ್ನು ಬೋಧಿಸಿದರು. ಶರಣರ ವಚನಗಳನ್ನಾಧರಿಸಿ ಪ್ರಖರ ಪ್ರವಚನಗಳನ್ನು ಹೇಳುತ್ತ ಬಂದರು. ಆರು ಜನರ ತಂಡ ಕಟ್ಟಿಕೊಂಡು ನಡೆಸುತ್ತಿದ್ದ ಸಂವಾದ ನಾಡಿನ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.

ಭಾವೈಕ್ಯದ ಕೊಂಡಿ: ಶ್ರೀಮದ್‌ ನಿಜಗುಣ ಶಿವಯೋಗಿಗಳ ಶಾಸ್ತ್ರ, ಸಿದ್ಧಾರೂಢರ ಚರಿತ್ರೆ, ಶಿವಶರಣರ ವಚನಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದ ಅವರು, ಜಾತಿ-ಸಮುದಾಯಗಳ ನಡುವಿನ ಭೇದ-ಭಾವ ಅಳಿಸಲು ಪ್ರಯತ್ನಿಸಿದ್ದರು. ಮನುಷ್ಯ ಜಾತಿ ಒಂದೇ ಎಂದು ಸಾರಿದ್ದರು. ಎಲ್ಲರೂ ಒಂದೇ ಎಂದು ಸಾರಿ ಸಾರಿ ಹೇಳಿದ್ದರು.

Advertisement

ತಣ್ತೀಚಿಂತನೆಯ ಸಂವಾದ: ಸುತಾರ ಅವರು ಪ್ರಶ್ನೋತ್ತರದೊಂದಿಗೆ ಆರು ಮಂದಿ ಸಹ ಕಲಾವಿದರೊಂದಿಗೆ ನಡೆಸುತ್ತಿದ್ದ ಭಾವೈಕ್ಯ ಭಕ್ತಿ ರಸಮಂಜರಿ, ಅಧ್ಯಾತ್ಮ ಸಂವಾದ ತರಂಗಿಣಿ, ಗೀತ ಸಂವಾದ, ತರಂಗಿಣಿ ಸಂವಾದ ಕಾರ್ಯಕ್ರಮಗಳು ಸರ್ವರಿಗೂ ಹಿಡಿಸಿದ್ದವು. ಜನಸಾಮಾನ್ಯರಿಗೆ ಅಧ್ಯಾತ್ಮದ ಮರ್ಮವನ್ನು, ತಣ್ತೀ ಚಿಂತನೆಯನ್ನು ತಿಳಿಸುವ ವಿನೂತನ ಕಲಾ ಪ್ರಕಾರವಾದ್ದರಿಂದ ಇವರ ಸಂವಾದ ಎಲ್ಲೇ ನಡೆದರೂ ಸಾವಿರಾರು ಜನರು ಭಾಗವಹಿಸುತ್ತಿದ್ದರು. ಸುತಾರ ಅವರು ತಮ್ಮ ವಾಕ್‌ಚಾತುರ್ಯದ ಮೂಲಕ ಬೆಲ್ಲದ ನಾಡು, ಭಾವೈಕ್ಯದ ಬೀಡು, ಕಲಾವಿದರ ತವರೂರು ಮಹಾಲಿಂಗಪುರದ ಕೀರ್ತಿಯನ್ನು ದೇಶ್ಯಾದಂತ ಬೆಳಗಿಸಿದ್ದರು.

ಸುತಾರ ಸಾಹಿತ್ಯ ಸೇವೆ: ಭಜನೆ, ಪ್ರವಚನ, ಸಂವಾದ ಕಾರ್ಯಕ್ರಮಗಳ ಜತೆಜತೆಗೆ ಪಾರಮಾರ್ಥ ಲಹರಿ, ನಾವೆಲ್ಲರೂ ಭಾರತೀಯರೆಂಬ ಭಾವ ಮೂಡಲಿ, ತಣ್ತೀಜ್ಞಾನಕ್ಕೆ ಸರ್ವರೂ ಅಧಿ ಕಾರಿಗಳು ಸೇರಿದಂತೆ ಹಲವು ಗ್ರಂಥಗಳನ್ನು ರಚಿಸಿದ್ದರು.

ಧ್ವನಿ ಸುರಳಿ ಸರದಾರ: ಜಗವೊಂದು ಧರ್ಮಶಾಲೆ, ಸೌಡಿಲ್ಲದ ಸಾವುಕಾರ, ಮೊದಲು ಮಾನವನಾಗು, ಪಾಪ ಕರ್ಮಗಳನ್ನು ಮಾಡ ಬೇಡ, ದೇವರು ಕಾಡುವುದಿಲ್ಲ, ಪುಣ್ಯವನೇ ಮಾಡು, ಯಾರು ಜಾಣರು, ಹಣ ಹೆಚ್ಚೋ? ಗುಣ ಹೆಚ್ಚೋ?, ಭಾವೈಕ್ಯತೆ ಎಂದರೇನು? ಸೇರಿದಂತೆ ಸುಮಾರು 20ಕ್ಕೂ ಅಧಿ ಕ ನೀತಿ ಬೋಧಕ, ಅಧ್ಯಾತ್ಮಿಕ ಚಿಂತನೆಯ ಧ್ವನಿ ಸುರುಳಿಗಳನ್ನು ಹೊರತಂದಿದ್ದರು.

ದೇಶ್ಯಾದಂತ ಕಾರ್ಯಕ್ರಮ: ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ದಿಲ್ಲಿ, ರಾಜಸ್ಥಾನ ರಾಜ್ಯಗಳು ಸೇರಿದಂತೆ ದೇಶ್ಯಾದಂತ 1970ರಿಂದ ಇಲ್ಲಿಯವರೆಗೂ ಸುಮಾರು ನಾಲ್ಕು ಸಾವಿರಕ್ಕೂ ಅಧಿ ಕ ಪ್ರವಚನ ಮತ್ತು ಅಧ್ಯಾತ್ಮ ಸಂವಾದ ಕಾರ್ಯಕ್ರಮಗಳನ್ನು ನೀಡಿ ಸೈ ಎನಿಸಿಕೊಂಡಿದ್ದ ಅವರು ದಸರಾ ಉತ್ಸವ, ಚಾಲುಕ್ಯ ಉತ್ಸವ, ವಿಶ್ವ ಕನ್ನಡ ಸಮ್ಮೇಳನ, ಶ್ರೀಕ್ಷೇತ್ರ ಧರ್ಮಸ್ಥಳದ ಸರ್ವಧರ್ಮ ಸಮ್ಮೇಳನ, ನವರಸಪುರ ಉತ್ಸವ, ಆಳ್ವಾಸ್‌ ನುಡಿಸಿರಿ, ರನ್ನ ಉತ್ಸವ ಸೇರಿದಂತೆ ಹಲವು ಉತ್ಸವಗಳಲ್ಲಿ ಭಾಗವಹಿಸಿ ಕಾರ್ಯಕ್ರಮ ನೀಡಿದ್ದರು. ಇವರ ಕಾರ್ಯಕ್ರಮ ಎಂದರೆ ಜನರು ಕಿಕ್ಕಿರಿದು ಸೇರುತ್ತಿದ್ದರು.

ಹಲವು ಪ್ರಶಸ್ತಿಗಳು: 2018ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರ, 1995ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2009-10ನೇ ಸಾಲಿನಲ್ಲಿ ಕರ್ನಾಟಕ ಕಲಾಶ್ರೀ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿ, ಸೂಫಿ ಸಂತ, ಭಜನಾ ಮೃತ ಸಿಂಧು, ಗಡಿ ನಾಡು ಚೇತನ, ಭಾವೈಕ್ಯತಾ ನಿಧಿ  ಸೇರಿದಂತೆ ನಾಡಿನ ಹೆಸರಾಂತ ಸಂಘ-ಸಂಸ್ಥೆಗಳು, ಮಠ ಮಾನ್ಯಗಳು ಇವರಿಗೆ ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿದ್ದವು.

ಅಮೃತ ಮಹೋತ್ಸವ: 2016 ಜನವರಿ 2 ಮತ್ತು 3ರಂದು ಮಹಾಲಿಂಗಪುರದಲ್ಲಿ ಇವರ ಅಭಿಮಾನಿಗಳು ಇಬ್ರಾಹಿಂ ಸುತಾರ ಅವರ 75ನೇ ವರ್ಷದ ಅಮೃತ ಮಹೋತ್ಸವ ಆಚರಿಸಿ ಭಾವೈಕ್ಯ ದರ್ಶನ ಎಂಬ ಅಭಿನಂದನಾ ಗ್ರಂಥ ಪ್ರಕಟಿಸಿದ್ದರು.

“ಭಾವೈಕ್ಯ’ವೆಂಬ ಮನೆ ಹೆಸರು
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಸಿಯಲ್ಲಿ ತಿಂಗಳುಗಳ ಕಾಲ ಪ್ರವಚನ ನೀಡಿ ಭಕ್ತರ ಮನಗೆದ್ದಿದ್ದರು. ಹೀಗಾಗಿ ಶೇಗುಣಸಿ ಭಕ್ತರು ಇವರಿಗೆ 1980ರ ದಶಕದಲ್ಲಿ ಮನೆಯೊಂದನ್ನು ನಿರ್ಮಿಸಿಕೊಟ್ಟಿದ್ದರು. ಬಳಿಕ ಸುತಾರ ಅವರು ತಮ್ಮ ಮನೆಗೆ “ಭಾವೈಕ್ಯ’ ಎಂಬ ಹೆಸರನ್ನಿಟ್ಟಿದ್ದರು.

-ಚಂದ್ರಶೇಖರ ಮೋರೆ

 

Advertisement

Udayavani is now on Telegram. Click here to join our channel and stay updated with the latest news.

Next