Advertisement

ಗೋ ಹತ್ಯೆ ನಿಷೇಧ: ಹೆಚ್ಚಿದ ಸರಕಾರದ ಹೊಣೆಗಾರಿಕೆ

11:22 PM Feb 26, 2021 | Team Udayavani |

ಗೋವು ಮತ್ತು ಗ್ರಾಮಗಳು ನಮ್ಮ ದೇಶದ ಬೆನ್ನೆಲುಬುಗಳಿದ್ದಂತೆ. ಗ್ರಾಮ ಪ್ರಧಾನವಾದ ನಮ್ಮ ದೇಶದ ಆರ್ಥಿಕತೆಗೆ ಕೃಷಿ ಹಾಗೂ ಹೈನು ಗಾರಿಕೆಯ ಕೊಡುಗೆ ಅಪಾರ. ಗ್ರಾಮೀಣ ಆರ್ಥಿ ಕತೆ ಕೃಷಿ ಹಾಗೂ ಹೈನುಗಾರಿಕೆಯನ್ನೇ ಹೆಚ್ಚಾಗಿ ಅವಲಂಬಿಸಿರುವುದರಿಂದ ಉತ್ತಮ ತಳಿಯ ಗೋವುಗಳೇ ಗ್ರಾಮೀಣ ಜನರ ಬದುಕಿಗೆ ಆಧಾರ ವಾಗಿದೆ. ಗೋವು ತನ್ನ ಕರುವಿಗೆ ಮಾತ್ರ ತಾಯಿಯಲ್ಲ ,  ಇಡೀ ಮಾನವ ಜಗತ್ತಿಗೆ ತಾಯಿ. ಶಿಶುವಿದ್ದಾಗಿನಿಂದ ಬದುಕಿನ ಕೊನೆಯವರೆಗೂ ಗೋಮಾತೆ ಅಮೃತ ಸಮಾನ ತನ್ನ ಹಾಲಿನಿಂದ ಮಾನವನನ್ನು ಪೊರೆ ಯುತ್ತಾಳೆ. ಅದು ಸರ್ವ ದೇವತೆಗಳ ಆವಾಸ ಸ್ಥಾನ. ಮಹಾರಾಜ ದಿಲೀಪನಿಂದ ಮಹಾತ್ಮಾ ಗಾಂಧೀಜಿಯವರೆಗೆ, ಶ್ರೀ ಕೃಷ್ಣನಿಂದ ಹಿಡಿದು ವೀರ ಶಿವಾಜಿಯವರೆಗೆ ನಮ್ಮದು ಗೋ ಸಂರಕ್ಷಕರ, ಗೋ ಪೂಜಕರ ದೇಶವಾಗಿದೆ.

Advertisement

ಅಪಾರ ಪಶು ಸಂಪತ್ತಿನ ರಾಷ್ಟ್ರವಾಗಿದ್ದ ಭಾರತ ಇಂದು ಅತ್ಯಂತ ವೇಗವಾಗಿ ಗೋ ಸಂಪತ್ತನ್ನು ಕಳೆದುಕೊಳ್ಳುತ್ತಿದೆ. ಗೋವಿನ ಅಳಿವಿನಿಂದಾಗಿ ಗೋ ಆಧಾರಿತ, ಪ್ರಕೃತಿ ಸ್ನೇಹಿ ಕೃಷಿ ಪದ್ಧತಿ ಮೂಲೆಗುಂಪಾಗಿ ಭೂತಾಯಿಯ ಒಡಲಿಗೆ ವಿಷ ಬೆರೆಸುವ ರಸಗೊಬ್ಬರ ಮತ್ತು ಯಂತ್ರಾಧಾರಿತ ಕೃಷಿಯನ್ನು ರೈತರು ಅವಲಂಬಿಸುವಂತಾಗಿದೆ. ಇದರಿಂದ ಆಹಾರ ಧಾನ್ಯಗಳ ಉತ್ಪಾದನ ವೆಚ್ಚವು ಅಧಿಕವಾಗಿ ಬೆಲೆಗಳೂ ಏರುತ್ತಿವೆ. ಹಿಂದಿನ ಗೋ ಆಧಾರಿತ ಕೃಷಿಯಲ್ಲಿ ಸಿಗುತ್ತಿದ್ದ ಖುಷಿ ಈಗಿನ ಅಧುನಿಕ ಪದ್ಧತಿಯ ಕೃಷಿಯಲ್ಲಿ ಸಿಗುತ್ತಿಲ್ಲ.  ಗೋ ಕಳ್ಳರಿಂದ ತಮ್ಮ ಗೋವುಗಳನ್ನು ರಕ್ಷಿಸಿಕೊಳ್ಳುವುದು ಹೇಗೆ ಎಂಬುದೇ ರೈತರ ದೊಡ್ಡ ಚಿಂತೆಯಾಗಿದೆ.  ಗೋ ಕಳ್ಳರಿಂದಾಗಿ ಜಗತ್ತಿನಲ್ಲೇ ಅತೀ ಶ್ರೇಷ್ಠವಾದ ಭಾರತೀಯ ಗೋತಳಿಗಳು ಇಂದು ನಾಶದ ಅಂಚಿನಲ್ಲಿವೆ. ಗೋ ಸಂರಕ್ಷಣೆಗಾಗಿ ಇದುವರೆಗೆ ನಮ್ಮ ದೇಶದಲ್ಲಿ ಯಾವುದೇ ಕಠಿನವಾದ ಕಾಯಿದೆಯನ್ನು ಜಾರಿಗೊಳಿಸದೇ  ಇದ್ದದ್ದು ಗೋವಿನ ಅಳಿವಿಗೆ ಮುಖ್ಯ ಕಾರಣವಾಗಿದೆ.

ನಮ್ಮ ದೇಶದಲ್ಲಿ ಗೋಹತ್ಯೆ ನಿಷೇಧ ಕಾನೂನು ಬಹಳ ವರ್ಷಗಳ ಹಿಂದಿನಿಂದಲೇ ಜಾರಿಯಲ್ಲಿದೆ ಯಾದರೂ ಈ ಕಾನೂನು ಅಷ್ಟು ಬಲವಾಗಿರದ ಕಾರಣ ನಿಷ್ಪ್ರಯೋಜಕವೆನಿಸಿಕೊಂಡಿದೆ. ಇದರಿಂದ ಗೋ ಕಳ್ಳರು ಹಾಗೂ ಅಕ್ರಮವಾಗಿ ಗೋಹತ್ಯೆ ಮಾಡಿದವರು ಸುಲಭವಾಗಿ ಒಂದೇ ದಿನದಲ್ಲಿ ಜಾಮೀನು ಪಡೆದು ಹೊರ ಬರುತ್ತಾರೆ. ಯಾವುದೇ ರೀತಿಯ ಶಿಕ್ಷೆಯಿಲ್ಲದೆ ಹೊರಬರುವ ಇವರು ಮತ್ತೆ ಅದೇ ಕೃತ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ನಮ್ಮ ದೇಶದಲ್ಲಿ ವನ್ಯಜೀವಿಗಳನ್ನು ಕೊಂದವರಿಗೆ ಕಠಿನವಾದ ಶಿಕ್ಷೆಯಿದೆ. ಆದರೆ ಅದಕ್ಕಿಂತಲೂ ಬೆಲೆಬಾಳುವ ಮತ್ತು ರೈತರ ಬದುಕಿಗೆ ಆಧಾರ ವಾಗಿರುವ ಹಸುವನ್ನು ಕದ್ದು ಕೊಂದವನು ಯಾವುದೇ ಶಿಕ್ಷೆಯಿಲ್ಲದೆ ಸುಲಭವಾಗಿ ಹೊರ ಬರುತ್ತಾನೆ. ಮೇಯಲು ಬಿಟ್ಟ ದನಗಳನ್ನು ಕದಿಯು ವುದು ಮಾತ್ರವಲ್ಲ, ರಾತ್ರಿ ಹೊತ್ತು ಮಾರಕಾ ಯುಧಗಳೊಂದಿಗೆ ಹಟ್ಟಿಗೆ ನುಗ್ಗಿ ದನಗಳನ್ನು ಕದ್ದು ಕಸಾಯಿಖಾನೆಗೆ ಸಾಗಿಸುವ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಇಂದು ಕೊನೆ ಎಂಬುದೇ ಇಲ್ಲವಾಗಿದೆ.  ಕೃಷಿ ಹಾಗೂ ಹೈನುಗಾರಿಕೆಯನ್ನೇ ಜೀವನೋಪಾ ಯವನ್ನಾಗಿ ಮಾಡಿಕೊಂಡವರು ಇಂದು ದನ ಸಾಕಲು ಹೆದರುತ್ತಿದ್ದಾರೆ.  ಯಾಕೆಂದರೆ ದನ ಕಳವಾ ದರೆ ಯಾವುದೇ ರೀತಿಯ ಪರಿಹಾರವೂ ಇವರಿಗೆ ಸರಕಾರದಿಂದ ಸಿಗುವುದಿಲ್ಲ.

ಹಳೆಯ ಕಾನೂನನ್ನು ತಿದ್ದುಪಡಿ ಮಾಡಿ ಕಠಿನವಾದ ಗೋಹತ್ಯೆ ನಿಷೇಧ ಮಸೂದೆಯನ್ನು ಜಾರಿಗೆ ತರಬೇಕೆಂಬ ಕೂಗು ಆನೇಕ ವರ್ಷಗಳಿಂದ ದೇಶದೆಲ್ಲೆಡೆ ಕೇಳಿ ಬರುತ್ತಿದ್ದರೂ ಓಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಅಧಿಕಾರದಲ್ಲಿದ್ದ ಹಲವು ಪಕ್ಷಗಳು ಅದನ್ನು ಜಾರಿಗೆ ತರುವ ಮನಸ್ಸು ಮಾಡಿರಲಿಲ್ಲ. ಆದರೆ ಈಗ ದೇಶದ ಕೆಲವು ರಾಜ್ಯಗಳು ಕಠಿನವಾದ ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತಂದಿವೆ. ನಮ್ಮ ರಾಜ್ಯದಲ್ಲೂ ಇತ್ತೀಚೆಗೆ ಗೋಹತ್ಯೆ ನಿಷೇಧ ಮಸೂದೆಯನ್ನು  ಸರಕಾರ ವಿಧಾನಮಂಡಲದ ಎರಡೂ ಸದನಗಳಲ್ಲಿ ಮಂಡಿಸಿ ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಗೋ ಹತ್ಯೆ ಮೇಲೆ ನಿಷೇಧವನ್ನು ಹೇರುವ ಮೂಲಕ ದೇಶದಲ್ಲಿಯೇ ಅತ್ಯಂತ ಕಠಿನ ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಅಕ್ರಮವಾಗಿ ಗೋ ಸಾಗಾಟ ಮಾಡುವುದನ್ನೂ ನಿಷೇಧಿಸಲಾಗಿದೆ. ಈ ಕಾನೂನನ್ನು ಉಲ್ಲಂ ಸುವವರಿಗೆ 5 ಲಕ್ಷ  ರೂ. ದಂಡ ಸಹಿತ ಕಠಿನ ಜೈಲು ಶಿಕ್ಷೆ ನೀಡಲು ಈ ಕಾಯ್ದೆಯಲ್ಲಿ ಅವಕಾಶವಿದೆ.

ಈ ಕಠಿನ ಕಾಯ್ದೆ ಇಂದಿನ ಪರಿಸ್ಥಿತಿಯಲ್ಲಿ ಅನಿವಾರ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಸರಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದು ತನ್ನ ಕೆಲಸ ಮುಗಿಯಿತೆಂದು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳಬಾರದು. ಮೊದಲನೆಯದಾಗಿ ಗೋ ಕಟುಕರ ವಿರುದ್ಧ ಈ ಕಾಯ್ದೆಯಡಿ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಸೂಚನೆ ನೀಡಬೇಕು.  ಎರಡನೆಯದಾಗಿ ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ವಯಸ್ಸಾದ ಹಸುಗಳು ಹಾಗೂ ಗಂಡು ಕರುಗಳ ಸಾಕಣೆ ಕಷ್ಟಸಾಧ್ಯ. ಅಂಥವರು ಇಂಥ ಹಸು-ಕರುಗಳನ್ನು ಬೀದಿಗಳಿಗೆ ಬಿಟ್ಟರೆ ಇದು ಹಲವಾರು ಸಮಸ್ಯೆಗಳಿಗೆ ಎಡೆಮಾಡಿ ಕೊಡಬಹುದು. ಅವು ಅನಾಯಾಸವಾಗಿ ಕಳ್ಳರ ಪಾಲಾಗಬಹುದು. ಆದ್ದರಿಂದ ಸರಕಾರವು ಪ್ರತೀ ತಾಲೂಕುಗಳಲ್ಲಿ ಸರಕಾರಿ ಗೋಶಾಲೆಗಳನ್ನು ತೆರೆ ಯುವುದು ಅನಿವಾರ್ಯವಾಗಿದೆ.  ಗೋವುಗಳನ್ನು ಸಾಕಲು ಅಶಕ್ತರಾದವರು ತಮ್ಮ ಗೋವುಗಳನ್ನು ಈ ಗೋಶಾಲೆಗಳ ಸುಪರ್ದಿಗೆ ಒಪ್ಪಿಸಲು ಅವಕಾಶ ಕಲ್ಪಿಸಿಕೊಡಬೇಕು.

Advertisement

ಗೋಶಾಲೆಗಳ ನಿರ್ವಹಣೆಗೆ ಹೆಚ್ಚಿನ ಅರ್ಥಿಕ ಹೊರೆ ಸರಕಾರದ ಮೇಲೆ ಬೀಳಬಹುದು. ಆದ್ದರಿಂದ ಈ ಗೋಶಾಲೆಗಳಲ್ಲಿ ಸಾವಯವ ಗೊಬ್ಬರ ಹಾಗೂ ಇತರ ಗೋ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಿದರೆ ಸ್ವಲ್ಪ ಮಟ್ಟಿಗೆ ಅರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು.  ಹೆಚ್ಚಿನ ಅನುದಾನ ನೀಡುವುದರ ಮೂಲಕ ಖಾಸಗಿಯವರಿಗೂ ಗೋ ಶಾಲೆಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಬೇಕು. ಗೋಹತ್ಯೆ ನಿಷೇಧ ಕಾಯಿದೆ ಜಾರಿಗೊಳಿಸಿದಾಕ್ಷಣ ಸರಕಾರದ ಜವಾಬ್ದಾರಿ ಮುಗಿಯಲಾರದು. ಕಾಯ್ದೆಯ ಕಟ್ಟುನಿಟ್ಟಿನ ಜಾರಿ ಮತ್ತು ಅನಾಥ ಗೋವುಗಳ ಪಾಲನೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಹೊಣೆಗಾರಿಕೆ ಸರಕಾರದ್ದಾಗಿದೆ. ಇದಕ್ಕೆ ಜನತೆಯ ಸಹಕಾರ ಕೂಡ ಅತೀ ಮುಖ್ಯ.

 ಗೋ ಶಾಲೆಗಳ  ಸ್ಥಾಪನೆಗೆ ಆದ್ಯತೆ ;

ಗೋ ಸಂಸ್ಕೃತಿಯ ಉಳಿವಿನಿಂದ ಧಾರ್ಮಿಕ ನಂಬಿಕೆಗಳ ಜತೆಜತೆಯಲ್ಲಿ ಪಾರಂಪರಿಕ ವ್ಯವಸಾಯ ಪದ್ಧತಿಯ ಪುನುರುತ್ಥಾನ ಸಾಧ್ಯ. ಇದರಿಂದ ಸಶಕ್ತ ಮತ್ತು ಶಾಂತಿಯುತ ಸಮಾಜ ಸೃಷ್ಟಿಯೂ ಸಾಧ್ಯ. ಕಾಯ್ದೆಯ ಕಟ್ಟುನಿಟ್ಟಿನ ಜಾರಿಯ ಜತೆಯಲ್ಲಿ ಅನಾಥ ಮತ್ತು ಮುದಿ ಗೋವು, ಎತ್ತುಗಳ ರಕ್ಷಣೆಗೆ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲೇಬೇಕಿದೆ. ಗೋ ಶಾಲೆಗಳನ್ನು ತೆರೆಯುವ ಮೂಲಕ ಇಂಥ ಗೋವುಗಳ ಪಾಲನೆಗೆ ಮುಂದಾಗಬೇಕು. ಅಲ್ಲದೆ ಗೋ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವ ಹೊಣೆಗಾರಿಕೆಯೂ ಸರಕಾರದ ಮೇಲಿದೆ. ಗೋ ಶಾಲೆಗಳ ನಿರ್ವಹಣೆಗೆ ಖಾಸಗಿ ಸಂಘ-ಸಂಸ್ಥೆಗಳ ಸಹಕಾರ ಪಡೆದುಕೊಂಡಲ್ಲಿ ಸರಕಾರ ಮೇಲಿನ ಆರ್ಥಿಕ ಹೊರೆಯೂ ಕಡಿಮೆಯಾಗಲಿದೆ.

 

ನರಹರಿ ರಾವ್‌ ಕೈಕಂಬ

Advertisement

Udayavani is now on Telegram. Click here to join our channel and stay updated with the latest news.

Next