Advertisement

Karnataka Rajyotsava: ಕನ್ನಡತನ ನಮ್ಮೊಳಗಿದ್ದರೆ ಮಾತ್ರ ಬದುಕು ಸಾರ್ಥಕ

04:45 PM Oct 31, 2023 | Team Udayavani |

“ಕನ್ನಡ…  ರೋಮಾಂಚನವೀ ಕನ್ನಡ. ಚಿಂತಿಸು, ವಂದಿಸು, ಪೂಜಿಸು ” ಎಂದು ಕನ್ನಡದ ಅಪ್ಪಟ ಅಭಿಮಾನಿ ಹಂಸಲೇಖ ಬರೆದ ಸಾಲುಗಳನ್ನು ಕೇಳಿದಾಗ ಈಗಲೂ ಮೈ ರೋಮಾಂಚವಾಗುತ್ತದೆ. ಕನ್ನಡ ನಾಡು, ಕನ್ನಡ ನುಡಿ ಇದರಲ್ಲೇನೋ ಮೋಡಿಯಿದೆ. ಕನ್ನಡಾಂಬೆಯ ಮಕ್ಕಳು ನಾವು ಎನ್ನುವ ಹಿರಿಮೆಯಂತೂ ಖಂಡಿತ ಇದೆ. ನಾವು ಮೊದಲು ನುಡಿದ ಭಾಷೆ ಕನ್ನಡ ಹಾಗಾಗಿ ಜೀವನದಲ್ಲಿ ಎಷ್ಟೇ ಭಾಷೆ ಕಲಿತರೂ ಮೊದಲು ನಮ್ಮ ಬಾಯಲ್ಲಿ ಬರುವುದು ಕನ್ನಡ ಭಾಷೆಯೊಂದೇ. ಕನ್ನಡ ಕಾದಂಬರಿಗಳಾಗಲಿ, ಕನ್ನಡ ಹಾಡುಗಳಾಗಲಿ ಒಂದು ಬಾರಿ ವ್ಯಕ್ತಿ ಅದನ್ನು ಆಲಿಸಿದರೆ ಸಾಕು ಮತ್ತೆ ಆತ ಬೇರೆ ಭಾಷೆಯತ್ತ ಹೋಗಲಾರ. ಅಂತಹದ್ದೊಂದು ಶಕ್ತಿ ಹೆಮ್ಮೆಯ ಕನ್ನಡ ಭಾಷೆಗಿದೆ.

Advertisement

ಭಾರತ ಮಾತೆಯ ಕೂಸಾದ ಕನ್ನಡಾಂಬೆಯ ನಾಡಲ್ಲಿ ಇಲ್ಲದಿರುವುದು ಏನೂ ಇಲ್ಲ. ಕನ್ನಡನಾಡು ಹಚ್ಚ ಹಸುರಿನ ದಟ್ಟವಾದ ವನಗಳಿರುವ ಗಂಧದ ಬೀಡು  . ಮೈದುಂಬಿ ಹರಿಯುತ್ತಿರುವ ಕೃಷ್ಣೆ, ಶರಾವತಿ, ತುಂಗೆ, ಕಾವೇರಿಯರ ಉಗಮದ ನಾಡು. ಶಂಕರ, ರಮಾನುಜ, ವಿದ್ಯಾರಣ್ಯ, ಬಸವೇಶ್ವರರು ನೆಲೆಸಿದ ಪುಣ್ಯದ ನೆಲೆಯಿದು. ರನ್ನ, ಷಡಕ್ಷರಿ, ಪೊನ್ನ, ಪಂಪ, ಲಕ್ಷ್ಮೀಶ ಮತ್ತು ಜನ್ನರು ಹುಟ್ಟಿದ ಪುಣ್ಯಭೂಮಿಯಿದು. ನಮ್ಮ ನಾಡು ಕರ್ನಾಟಕ ನಮ್ಮ ಭಾಷೆ ಕನ್ನಡದ ಎಂದು ಎದೆ ತಟ್ಟಿ ಗರ್ವದಿಂದ ಹೇಳಲು ಇಷ್ಟು ವಿಚಾರಗಳು ಸಾಕಲ್ಲವೇ!

ಅಂತೆಯೇ ಈ ಬಾರಿ ನಾವು 68ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. ಕರ್ನಾಟಕ ಏಕೀಕರಣಗೊಂಡು ಇಷ್ಟು ವರ್ಷಗಳು ಉರುಳಿದರೂ ಕನ್ನಡ ನಾಡು ಹುಟ್ಟಿಕೊಂಡ ಪರಿ ಇನ್ನೂ ಹಲವರಿಗೆ ತಿಳಿದಿಲ್ಲ. ಓರ್ವ ಕನ್ನಡಿಗನಾಗಿ ಇದನ್ನು ತಿಳಿದುಕೊಳ್ಳುವುದು ಬಹಳ ಪ್ರಾಮುಖ್ಯ. ಸ್ವಾತಂತ್ರ ಪೂರ್ವದಲ್ಲೇ ಕನ್ನಡ ನಾಡಿನ ಬಗೆಗಿನ ಚರ್ಚೆಗಳು ಪ್ರಾರಂಭವಾಗಿದ್ದು 1905 ರಲ್ಲಿ. ಕನ್ನಡದ ಕುಲ ಪುರೋಹಿತರೆಂದು ಪ್ರಖ್ಯಾತಗೊಂಡ ಆಲೂರು ವೆಂಕಟರಾವ್ ಕರ್ನಾಟಕ ಏಕೀಕರಣ ಚಳುವಳಿಯನ್ನು ಆರಂಭಿಸುತ್ತಾರೆ. ಆದರೆ ಅದು ದೇಶವನ್ನು ಬ್ರಿಟಿಷರಿಂದ ರಕ್ಷಿಸಿಕೊಂಡು, ಸ್ವಾತಂತ್ರ್ಯವನ್ನು ಪಡೆದುಕೊಳ್ಳುವ ಸಮಯವಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ನಾಡು, ನುಡಿಗಳ ಹೋರಾಟ ಆರಂಭವಾಗಿ ರಾಜ್ಯವಾರು ವಿಂಗಡಣೆ ಪ್ರಕ್ರಿಯೆ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಮದ್ರಾಸ್ ಸರ್ಕಾರದ ಭಾಗವಾಗಿದ್ದ ಕರ್ನಾಟಕ 1950 ರಲ್ಲಿ ಮೈಸೂರು ರಾಜ್ಯವಾಗಿತ್ತು. ಆಗ ಕನ್ನಡ ಮಾತನಾಡುವ ಜನರ ಹಲವಾರು ಸ್ಥಳಗಳು ಬೇರೆ ರಾಜ್ಯದವರ ಕಪಿಮುಷ್ಠಿಯಲ್ಲಿತ್ತು.

ಇದು ಕನ್ನಡಿಗರ ಏಕತೆಗೆ ವಿರುದ್ಧವಾಗಿತ್ತು. ಕನ್ನಡ ನುಡಿಯುವ ಮಂದಿ ಸೇರಿ ಒಂದು ನಾಡನ್ನ ಕಟ್ಟಬೇಕು ಎನ್ನುವಂತ ಆಶಯ ಕನ್ನಡಿಗರಲ್ಲಿ ಮೂಡಿ, ಹಲವು ಕಾಯ್ದೆಗಳನ್ನು ಜಾರಿಗೊಳಿಸಲಾಯಿತು. ಇವೆಲ್ಲದರ ಪರಿಣಾಮ ಮೈಸೂರು ರಾಜ್ಯ 1956 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಈ ದಿನವನ್ನೇ ನಾವು ಕನ್ನಡ ರಾಜ್ಯೋತ್ಸವವನ್ನಾಗಿ ಆಚರಿಸುತ್ತಿರುವುದು. ಕೆಲ ವರ್ಷದ ನಂತರ ಉತ್ತರ ಕರ್ನಾಟಕದ ಜನರು ಮೈಸೂರು ರಾಜ್ಯ ಎಂಬ ಹೆಸರು ಬದಲಾಗಬೇಕು ಎನ್ನುವ ವಿಚಾರವನ್ನು ವ್ಯಕ್ತಪಡಿಸಿದ ಬಳಿಕ ರಾಜ್ಯದ ಹೆಸರನ್ನು ನವೆಂಬರ್ 1,1973 ರಂದು ಕರ್ನಾಟಕ ಎಂಬುವುದಾಗಿ ಬದಲಾವಣೆ ಮಾಡಿಸಿದರು. ಈ ಮಹತ್ವಪೂರ್ಣ ನಿರ್ಧಾರಕ್ಕೆ ಮುನ್ನುಡಿ ಬರೆದ ದೇವರಾಜ್ ಅರಸು ಅವರು ಕರ್ನಾಟಕ ರಾಜ್ಯದ ಮೊದಲ ಮುಖ್ಯಮಂತ್ರಿಯಾದರು. ಕರ್ನಾಟಕ ಏಕೀಕರಣದಲ್ಲಿ ನಮ್ಮವರೇ ಆದ ಕೋಟ ಶಿವರಾಮ ಕಾರಂತರು, ಕುವೆಂಪು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಬಿ. ಎಂ. ಶ್ರೀಕಂಠಯ್ಯ ಹಾಗೂ ಎ. ಏನ್. ಕೃಷ್ಣರಾವ್ ಅವರ ಕೊಡುಗೆಗಳೂ ಗಣನೀಯ.

ರಾಜ್ಯ ಘೋಷಣೆಯಾದ ಬಳಿಕ ಕನ್ನಡಕ್ಕೊಂದು ಬಾವುಟ ಬೇಕು ಎನ್ನುವುದನ್ನು ಯೋಚಿಸಿದ ಕನ್ನಡ ಹೋರಾಟಗಾರ ಎಂ ರಾಮಮೂರ್ತಿ ಅವರು ಕರುನಾಡಿನ ಸ್ವಾಭಿಮಾನದ ಸಂಕೇತವಾದ ಹಳದಿ ಹಾಗೂ ಕೆಂಪು ಬಣ್ಣದ ಬಾವುಟವನ್ನು ಸಿದ್ದಗೊಳಿಸಿದರು. ಈ ಬಾವುಟದಲ್ಲಿ ಹಳದಿ ಶಾಂತಿ ಹಾಗೂ ಸೌಹಾರ್ದತೆಯ ಸಂಕೇತವಾದರೆ, ಕೆಂಪು ಕ್ರಾಂತಿಯ ಸಂಕೇತವಾಗಿತ್ತು. ಇದರ ಅರ್ಥ ಕನ್ನಡಿಗರು ಶಾಂತಿಗೂ ಸೈ, ಕ್ರಾಂತಿಗೂ ಸೈ ಎನ್ನುವುದಾಗಿತ್ತು.

Advertisement

ನವೆಂಬರ್ 1 ಎಂದಾಕ್ಷಣ ಈಗ ಪುಟ್ಟ ಮಗು ಸಹ ಕನ್ನಡ ರಾಜ್ಯೋತ್ಸವ ಎಂದು ಸ್ವರವೆತ್ತಿ ಹೇಳುತ್ತದೆ. ಇದು ಕನ್ನಡ ನಾಡಿನ ಹೆಮ್ಮೆಯ ಹಬ್ಬ. ಇಂದು ನಾಡಗೀತೆ ಎಲ್ಲೆಡೆ ಮೊಳಗುತ್ತದೆ. ಅಂತೆಯೇ ಸರ್ಕಾರ , ವಿವಿಧ ಕ್ಷೇತ್ರದಲ್ಲಿ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನ ಮಾಡುವ ಮುಖಾಂತರ ಗೌರವವನ್ನು ನೀಡುವ ಕೆಲಸವನ್ನೂ ಹಲವು ವರ್ಷಗಳಿಂದ ಮಾಡುತ್ತಿದೆ. ಸಾಹಿತ್ಯ ಲೋಕಕ್ಕೆ 8 ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಸಾಹಿತಿಗಳ ಸೇವೆ ಇಂದಿಗೂ ಅವಿಸ್ಮರಣೀಯ.

ಆದರೆ ಇಂದು ಕರ್ನಾಟಕದಲ್ಲೇ ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂಬುವುದು ವಿಪರ್ಯಾಸ. ಬೇರೆ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಕನ್ನಡ ಭಾಷೆ ನಮ್ಮದಲ್ಲ ಎನ್ನುವ ಮೂರ್ಖ ಭಾವನೆ ಇಂದಿನ ಜನರಲ್ಲಿ ಮೂಡುತ್ತಿದೆ. ಕನ್ನಡ ಗೊತ್ತಿದ್ದರೂ ಸಹ ಪರಭಾಷೆಯನ್ನೇ ಅವಲಂಬಿಸುತ್ತಿರುವುದನ್ನು ನಾವು ಖಂಡಿಸಬೇಕು. ಕನ್ನಡ ಮಣ್ಣಲ್ಲೇ ಹುಟ್ಟಿ, ಕರ್ನಾಟಕದ ನೀರನ್ನೇ ಕುಡಿದು, ಕನ್ನಡಾಂಬೆಯ ಮಡಿಲಲ್ಲೇ ಬೆಳೆದು ಕನ್ನಡ ಮಾತನಾಡಲು ಹಿಂದು ಮುಂದು ನೋಡುವ ಜನರಿದ್ದಾರೆ ಎಂಬುವುದು ಬೇಸರದ ಸಂಗತಿ.

ಅನ್ಯಭಾಷೆಯ ಪ್ರಾವೀಣ್ಯತೆ ನಮಗಿರಲಿ. ಸಂತೋಷ … ಆದರೆ ನಮ್ಮ ಭಾಷೆಯನ್ನು ಬೇರೆಯವರ ಬಳಿಯೂ ಬಿಟ್ಟು ಕೊಡುವವರು ನಾವಾಗಬಾರದು. ಬೇರೆ ರಾಜ್ಯಗಳಿಗೆ ಅಥವಾ ದೇಶಕ್ಕೆ ಹೋದರೆ ನಮ್ಮ ಮುಂದಿರುವವರಿಗೆ ಕನ್ನಡ ತಿಳಿದಿದ್ದರೂ ಸಹ ನಾವು ಕನ್ನಡದಲ್ಲಿ ಮಾತನಾಡಲು ಹಿಂಜರಿಯುತ್ತೇವೆ. ಏಕೆಂದರೆ ನಮಗೆ ಕನ್ನಡ ಮಾತನಾಡಲು ಮುಜುಗರ. ಎಲ್ಲಿ ನಮ್ಮನ್ನು ನೋಡಿ ನಗುತ್ತಾರೋ ಎಂಬ ಸಂಕೋಚ. ಆಗ ನಾವು ಕನ್ನಡ ಅಷ್ಟೊಂದು ಕೀಳು ಭಾಷೆಯೇ? ನಾವು ಈ ರೀತಿ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಳ್ಳಬೇಕು. ಬೇರೆ ಭಾಷೆಯ ಜನರಿಗಾಗಿ ನಾವು ನಮ್ಮ ಭಾಷೆ ಬಿಟ್ಟು ಅವರ ಭಾಷೆಯಲ್ಲಿ ಮಾತನಾಡುವಾಗ ಅವರೇಕೆ ಕನ್ನಡದಲ್ಲಿ ಮಾತನಾಡಲು ಹಿಂಜರಿಯುತ್ತಾರೆ. ಕಾರಣ ಇಷ್ಟೇ ಅವರಿಗೆ ಅವರ ಭಾಷೆಯ ಮೇಲಿರುವ ಪ್ರೀತಿ, ಅವರ ನುಡಿಯ ಮೇಲಿನ ಅಭಿಮಾನ. ನಮ್ಮ ಕನ್ನಡ ಭಾಷೆಯ ಮೇಲೆ ಕನ್ನಡಿಗರಾದ ನಾವು ಈ ರೀತಿಯ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆಯ ಅಳಿವು ಉಳಿವು ನಮ್ಮೆಲ್ಲರ ಕೈಯ್ಯಲ್ಲೇ ಇದೆ. ಕನ್ನಡಿಗರಾದ ನಾವು ಕನ್ನಡಾಂಬೆಯ ಸೇವೆಗೆ ನಮ್ಮ ಬದುಕನ್ನು ಮುಡಿಪಾಗಿಡಬೇಕು. ನಮ್ಮ ಉಸಿರು, ಹೃದಯದ ಬಡಿತ, ನಮ್ಮ ನರನಾಡಿಗಳು ಕನ್ನಡ ಕನ್ನಡ ಎನ್ನಬೇಕು. ಅಂತಹದ್ದೊಂದು ಭಾವನೆ ಪ್ರತಿಯೊಬ್ಬ ಕನ್ನಡಿಗನಲ್ಲೂ ಮೂಡಿದರೆ ಎಷ್ಟೊಂದು ಚಂದ ಅಲ್ವಾ !

ಲಾವಣ್ಯ. ಎಸ್

ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಸ್ವಾಯತ್ತ ಕಾಲೇಜು ಪುತ್ತೂರು.

Advertisement

Udayavani is now on Telegram. Click here to join our channel and stay updated with the latest news.

Next