Advertisement

ಸುಪ್ರೀಂನಲ್ಲಿ ಬೋಪಯ್ಯ ವಿರುದ್ಧದ ಅರ್ಜಿ ವಜಾ; ಕಾಂಗ್ರೆಸ್ ಗೆ ಹಿನ್ನಡೆ

10:45 AM May 19, 2018 | Team Udayavani |

ನವದೆಹಲಿ:ಹಂಗಾಮಿ ಸ್ಪೀಕರ್ ಕೆಜಿ ಬೋಪಯ್ಯ ಅವರ ಆಯ್ಕೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ವಜಾಗೊಳಿಸಿ ಆದೇಶ ನೀಡಿದ್ದು, ಬೋಪಯ್ಯ ಅವರು ಹಂಗಾಮಿ ಸ್ಪೀಕರ್ ಆಗಿ ಮುಂದುವರಿಯುವ ಹಾದಿ ಸುಗಮವಾದಂತಾಗಿದೆ.

Advertisement

ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾನೂನು ಸಮರಕ್ಕೆ ಭಾರೀ ಹಿನ್ನಡೆ ಉಂಟಾಗಿದ್ದು, ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಮಂಡಿಸಿದ್ದ ವಾದಕ್ಕೆ ಸುಪ್ರೀಂ ಪೀಠ ಮನ್ನಣೆ ನೀಡದೆ, ಶುಕ್ರವಾರ ಪೀಠ ನೀಡಿದ ಮಾರ್ಗಸೂಚಿಯಂತೆ ಹಂಗಾಮಿ ಸ್ಪೀಕರ್ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ಕಪಿಲ್ ಸಿಬಲ್ ವಾದವೇನು?

ಹಿರಿಯ ಶಾಸಕರನ್ನೇ ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡುವುದು ಸಂಪ್ರದಾಯ, ಆದರೆ ಹಿರಿತನ ಕಡೆಗಣಿಸಿ ರಾಜ್ಯಪಾಲರು ಕೆಜಿ ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿದ್ದಾರೆ. ಹೀಗಾಗಿ ವಿಶ್ವಾಸಮತ ಯಾಚನೆ ವೇಳೆ ಕೆಜಿ ಬೋಪಯ್ಯ ಹಂಗಾಮಿ ಸ್ಪೀಕರ್ ಆಗಿರೋದು ಬೇಡ. ಬೋಪಯ್ಯ ಅವರ ಟ್ರ್ಯಾಕ್ ರೆಕಾರ್ಡ್ ಕೂಡಾ ಸರಿಯಿಲ್ಲ, ಅದು ಸುಪ್ರೀಂಕೋರ್ಟ್ ನಲ್ಲಿಯೇ ವಿಚಾರಣೆ ನಡೆದಿತ್ತು ಎಂದು ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದರು.

ಸುಪ್ರೀಂ ತ್ರಿಸದಸ್ಯ ಪೀಠ ಹೇಳಿದ್ದೇನು?

Advertisement

ಹಿರಿತನ ಎಂದರೆ ವಯಸ್ಸಿನಲ್ಲಿ ಅಲ್ಲ, ಹೆಚ್ಚು ಬಾರಿ ಆಯ್ಕೆಯಾದವರು ಎಂದರ್ಥ ಎಂಬುದಾಗಿ ನ್ಯಾ. ಎಸ್ ಎ ಬೋಬ್ಡೆ ಅಭಿಪ್ರಾಯವ್ಯಕ್ತಪಡಿಸಿದ್ದರು. ನಂತರ ಬೋಪಯ್ಯ ನೇಮಕ ಮೊದಲು ಪರಿಶೀಲನೆ ಮಾಡಬೇಕಾದ್ರೆ ವಿಶ್ವಾಸಮತ ಯಾಚನೆ ಮುಂದೂಡಬೇಕಾಗುತ್ತದೆ. ಹಂಗಾಮಿ ಸ್ಪೀಕರ್ ಗೆ ನೋಟಿಸ್ ನೀಡಬೇಕಾಗುತ್ತದೆ ಎಂದು ತ್ರಿಸದಸ್ಯ ಪೀಠದ ಜಡ್ಜ್ ಗಳು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಇದಕ್ಕೆ ಬಿಜೆಪಿ ಪರ ವಕೀಲ ಮುಕುಲ್ ರೋಹ್ಟಗಿ ಕೂಡಾ ಸಹಮತ ಸೂಚಿಸಿದ್ದಾರೆ.

ಸಂವಿಧಾನದ ನಿಯಮಾವಳಿ ಬದಿಗೆ ತೂರಿ ರಾಜ್ಯಪಾಲರು ಬೋಪಯ್ಯ ಅವರನ್ನು ನೇಮಕ ಮಾಡಿದ್ದಾರೆ. ಅಲ್ಲದೆ 2009ರಿಂದ 2013ರವರೆಗೆ ಸ್ಪೀಕರ್ ಆಗಿದ್ದ ಬೋಪಯ್ಯ ಕೆಲವು ವಿವಾದಾತ್ಮಕ ನಿರ್ಧಾರ ತೆಗೆದುಕೊಂಡಿದ್ದರು. ಈ ನಿರ್ಧಾರಗಳನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು.

ಹೀಗಾಗಿ ಕಳಂಕಿತ ಬೋಪಯ್ಯ ಅವರನ್ನು ಸ್ಪೀಕರ್ ಆಗಿ ಮುಂದುವರಿಸಬಾರದು. ಇದು ನಮ್ಮ ಅಳಿವು, ಉಳಿವಿನ ಪ್ರಶ್ನೆಯಾಗಿದ್ದು, ಈ ಕೂಡಲೇ ವಿಚಾರಣೆಗೆ ತೆಗೆದುಕೊಳ್ಳಬೇಕು ಎಂದು ಶುಕ್ರವಾರ ರಾತ್ರಿ 8ಗಂಟೆ ಸುಮಾರಿಗೆ ಕಾಂಗ್ರೆಸ್ ನ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಸುಪ್ರೀಂ ರಿಜಿಸ್ಟ್ರಾರ್ ಗೆ ಮನವಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next