Advertisement

ಎಲ್ಲಿದ್ದರೂ ಊರಿಗೆ ಬನ್ನಿ , ಮತದ ಜತೆ ಜಯ ತನ್ನಿ

11:26 PM May 07, 2023 | Team Udayavani |

ಕಾರ್ಕಳ: ಕಟ್ಟಡ ಗಟ್ಟಿ ಯಾಗಿರಲು ಒಂದೊಂದು ಇಟ್ಟಿಗೆಯೂ ಮುಖ್ಯ. ಹಾಗೆಯೇ ಚುನಾವಣೆಯಲ್ಲಿ ಒಂದೊಂದು ಮತ ಕೂಡ ಮಹತ್ವ ಪಡೆಯುತ್ತದೆ. ಚುನಾವಣೆ ನಡೆದು ಮತ ಎಣಿಕೆ ನಡೆದಾಗ ಪ್ರತಿಯೊಂದು ಓಟು ಸಹ ನಿರ್ಣಾಯಕವೇ. ಪ್ರತಿಷ್ಠೆಯ ಕಣವಾದ ಕಾರ್ಕಳ ಕ್ಷೇತ್ರದಲ್ಲಿ ಪ್ರತೀ ಮತದಾರನನ್ನೂ ತನ್ನತ್ತ ಒಲಿಸಿಕೊಳ್ಳುವ ಪ್ರಯತ್ನಗಳು ವಿವಿಧ ಅಭ್ಯರ್ಥಿಗಳ ಬೆಂಬಲಿಗರಿಂದ ಸತತವಾಗಿ ನಡೆಯುತ್ತಿದೆ.

Advertisement

ಜನತಂತ್ರ ವ್ಯವಸ್ಥೆಯಲ್ಲಿ ಪ್ರತೀ ಓಟಿಗೂ ಮೌಲ್ಯವಿದೆ. ಅಭ್ಯರ್ಥಿ ಗಳ ಸೋಲು-ಗೆಲುವು ನಿರ್ಧರಿಸುವುದೂ ಪ್ರತೀ ಮತಗಳು. ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಗೊಳಿಸಿ ಅಚ್ಚರಿ ಮತ್ತು ಆಘಾತದ ಫ‌ಲಿತಾಂಶ ನೀಡುವ ಶಕ್ತಿ ಇರುವುದೂ ಇದೇ ಮತಗಳಿಗೆ. ಈ ಬಾರಿ ಕಾರ್ಕಳ ಕ್ಷೇತ್ರದಲ್ಲಿ ಪಕ್ಷಗಳ ಮಧ್ಯೆ ತುಸು ಕಠಿನ ಸ್ಪರ್ಧೆ ಇದೆ. ಹಾಗಾಗಿ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರ ಮತ ಬೇಟೆಯೂ ಅಷ್ಟೇ ಪೈಪೋಟಿಯಿಂದ ಚಾಲ್ತಿಯಲ್ಲಿದೆ.

ಕಣದಲ್ಲಿರುವ ಪಕ್ಷಗಳು ಅದರಲ್ಲೂ ಕಾಂಗ್ರೆಸ್‌, ಬಿಜೆಪಿ ಪರ ಪ್ರಚಾರಕರು ಕ್ಷೇತ್ರದ ಪ್ರತೀ ಮನೆಯ ಬಾಗಿಲಿಗೆ ತೆರಳುತ್ತಿದ್ದಾರೆ. ಮೇ 10ರ ಬೆಳಗ್ಗೆ ಯೊಳಗೆ ಎಷ್ಟು ಮತಗಳು ತಮ್ಮ ಬುಟ್ಟಿಗೆ ವರ್ಗಾಯಿಸಿಕೊಳ್ಳಬಲ್ಲವು ಎಂಬುದು ಎಲ್ಲರ ಲೆಕ್ಕಾಚಾರ.

ಪ್ರತೀ ಮನೆಗೆ ಹೋದಾಗ ಮೊದಲು ಕೇಳುವ ಪ್ರಶ್ನೆ ಎಂದರೆ, “ನಿಮ್ಮ ಮನೆಯಲ್ಲಿ ಎಷ್ಟು ವೋಟು ಇದೆ ಸರ್‌’ ಎಂಬುದಾಗಿ. ಆ ವಿವರ ಪಡೆದ ಮೇಲೆ, ಎಲ್ಲರೂ ಇಲ್ಲೇ ಇದ್ದಾರಾ? ಹೊರಗೆ ಇದ್ದಾರಾ (ಉದ್ಯೋಗ ಇತ್ಯಾದಿ). ಉದ್ಯೋಗದಲ್ಲಿ ಬೇರೆ ಊರಲ್ಲಿದ್ದಾರೆ ಎಂಬ ಉತ್ತರ ಮನೆಯವರಿಂದ ಬಂದರೆ, “ವೋಟಿಗೆ ಬರ್ತಾರಲ್ವ?’ ಎಂಬ ಪ್ರಶ್ನೆ ಪಕ್ಷಗಳ ಕಾರ್ಯಕರ್ತರಿಂದ. “ಹೌದು, ಬರುತ್ತಾರೆ’ ಎಂಬ ಉತ್ತರ ಸಿಕ್ಕರೆ ನಿರಾಳ. ಇಲ್ಲವಾದರೆ ಅವರ ವಿವರ ಪಡೆದು, ಎಲ್ಲಿ ವೋಟಿದೆ ಇತ್ಯಾದಿ ಮಾಹಿತಿ ಪಡೆದು ಸಂಪರ್ಕ ಸಂಖ್ಯೆ ಪಡೆದು ಫೋನ್‌ ಮಾಡಿ, “ದಯವಿಟ್ಟು ಬನ್ನಿ, ವೋಟು ಹಾಕಿ, ಮರೆಯಬೇಡಿ’ ಎಂದು ವಿನಂತಿಸಲಾಗುತ್ತದೆ. ಮತ ದಾನ ಹೆಚ್ಚಳಕ್ಕೆ ಸ್ವೀಪ್‌ ಮಾಡುವ ಪ್ರಯತ್ನವನ್ನೇ ಈಗ ಪಕ್ಷದವರು ಆರಂಭಿಸಿದ್ದಾರೆ. ಹೊರಗೆ ವಾಸವಿ
ರುವ ಕಾರ್ಕಳದ ಮೂಲದವರಿಗೆ ನಿರಂತರ ಮೊಬೈಲ್‌ ಕರೆಗಳು ಹೋಗುತ್ತಿವೆ. ಈ ಮಾತು ಬರೀ ಕಾರ್ಕಳಕ್ಕಲ್ಲ, ಎಲ್ಲ ಕ್ಷೇತ್ರಗಳಲ್ಲಿಯೂ ಈ ಕಾರ್ಯಾಚರಣೆ ಆರಂಭವಾಗಿದೆ.

ಊರಿಗೆ ಬರಲು ಬಸ್‌ನ ವ್ಯವಸ್ಥೆ
ಒಂದು ವೇಳೆ ಹೊರಗಿದ್ದು ಇದೇ ಕ್ಷೇತ್ರದ ಬೂತ್‌ನಲ್ಲಿ ಮತ ಮಾಡು ವುದಿದ್ದರೆ ಅವರನ್ನು ಮತದಾನ ದಿನ ಕರೆಯಿಸುವ ಎಲ್ಲ ಪ್ರಯತ್ನಗಳು ಬೆಂಬಲಿಗರಿಂದ ನಡೆಯುತ್ತದೆ. ಮತದಾನ ದಿನ ಕ್ಷೇತ್ರಕ್ಕೆ ಆಗಮಿಸಲು ಬಸ್‌, ಇನ್ನಿತರ ವಾಹನ ವ್ಯವಸ್ಥೆ ಕಲ್ಪಿಸಲೂ ಪಕ್ಷಗಳು ಏಜೆಂಟರನ್ನು ನೇಮಿಸಿಕೊಂಡಿದ್ದಾರೆ. ಆ ಏಜೆಂಟರು ಈ ಮತದಾರರ ಹೋಗುವುದು ಮತ್ತು ಬರುವುದರ ಪ್ರಯಾಣ ವ್ಯವಸ್ಥೆ ಮಾಡುತ್ತಾರೆ.

Advertisement

ಮುಂಬಯಿ, ಪುಣೆ, ಬೆಂಗಳೂರು ಮುಂತಾದ ಕಡೆ ಕಾರ್ಕಳ ಕ್ಷೇತ್ರದವರು ಅತೀ ಹೆಚ್ಚು ಮಂದಿ ಉದ್ಯೋಗ, ಉದ್ದಿಮೆ ಇನ್ನಿತರ ಕ್ಷೇತ್ರಗಳಲ್ಲಿ ತೊಡಗಿದ್ದಾರೆ. ಪ್ರತೀ ಮತದಾರ
ರನ್ನು ಕರೆಸುವ ವ್ಯವಸ್ಥೆ ಪಕ್ಷಗಳು ಸದ್ದಿಲ್ಲದೇ ಮಾಡುತ್ತಿವೆ. ಇದರಲ್ಲಿ ಕಾಂಗ್ರೆಸ್‌, ಬಿಜೆಪಿ ಎರಡೂ ಪಕ್ಷಗಳು ಮುಂದಿವೆ.

ಅಚ್ಚರಿ, ಅಘಾತದ ಫ‌ಲಿತಾಂಶ
ದೇಶ ಮತ್ತು ರಾಜ್ಯದ ಚುನಾವಣ ಇತಿಹಾಸದಲ್ಲಿ ಓಟುಗಳು ಅಚ್ಚರಿ ಮತ್ತು ಆಘಾತದ ಫ‌ಲಿತಾಂಶ ಕೊಟ್ಟ ಅನೇಕ ಉದಾಹರಣೆ ಗಳಿವೆ. ಕೇವಲ ಒಂದು ಮತದಿಂದ ಸೋತವರು, ಅತೀ ಕಡಿಮೆ ಅಂತರದಿಂದ ಗೆದ್ದವರ ಕಥೆ ಮತ್ತು ವ್ಯಥೆಗೆ ಸುದೀರ್ಘ‌ ಇತಿಹಾಸವಿದೆ. ಹೀಗಾಗಿ ಈ ವಿಧಾನ ಸಭಾ ಚುನಾವಣೆಯಲ್ಲೂ ಪ್ರತೀ ಮತಕ್ಕೂ ಸಾಕಷ್ಟು ಬೆಲೆ ಬರುತ್ತಿದೆ.

ಒಂದು ಮತದ ಕಥೆ
2004ರಲ್ಲಿಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಕೇವಲ ಒಂದು ಮತದಿಂದ ಸೋತ ಎ.ಆರ್‌. ಕೃಷ್ಣಮೂರ್ತಿ ಇತಿಹಾಸ ಬರೆದು ಬಿಟ್ಟರು. ಕಾಂಗ್ರೆಸ್‌ನಿಂದ ಗೆದ್ದ ಆರ್‌.ಧ್ರುವನಾರಾಯಣ 40,752 ಮತಗಳನ್ನು ಪಡೆದಿದ್ದರೆ, ಕೃಷ್ಣಮೂರ್ತಿ 40,751 ಓಟುಗಳನ್ನು ಪಡೆದು ಕೇವಲ ಒಂದು ಓಟಿನ ಅಂತರದಿಂದ ಸೋತಿದ್ದರು. ವಿಪರ್ಯಾಸವೆಂದರೆ ಆ ದಿನ ಅವರ ವಾಹನ ಚಾಲಕ ಮತ ಚಲಾವಣೆ ಮಾಡಿರಲಿಲ್ಲ. 2008ರಲ್ಲಿ ರಾಜಸ್ಥಾನ ವಿಧಾನಸಭಾ ಚುನಾವಣೆ ಯಲ್ಲಿ ಸಿ.ಪಿ.ಜೋಶಿಯವರು ಮುಖ್ಯಮಂತ್ರಿ ಸ್ಥಾನದ ಪ್ರಬಲ ಅಭ್ಯರ್ಥಿಯಾಗಿದ್ದರು. ಜೋಶಿಯವರು ಕೇವಲ ಒಂದು ಓಟಿನಿಂದ ಬಿಜೆಪಿ ಅಭ್ಯರ್ಥಿ ಕಲ್ಯಾಣ್‌ ಸಿಂಗ್‌ ಚೌಹಾಣ್‌ ವಿರುದ್ಧ ಸೋತಿದ್ದರು. ಜೋಶಿಯವರ ಪತ್ನಿ, ಮಗಳು ಹಾಗೂ ವಾಹನ ಚಾಲಕ ದೇವಸ್ಥಾನಕ್ಕೆ ಹೋಗಿದ್ದರು. ಮತ ಚಲಾಯಿಸಿರಲಿಲ್ಲ.

ಹೀಗೆ ಒಂದು ಮತದ ಅಂತರದಿಂದ ಸೋತ ಅನೇಕ ದೃಷ್ಟಾಂತಗಳು ಹಿಂದಿನ ಎಲ್ಲ ವಿಧಾನಸಭಾ, ಲೋಕಸಭಾ ಚುನಾವಣೆಗಳಲ್ಲಿ ನಮಗೆ ಕಾಣಸಿಗುತ್ತವೆ. ಇದೇ ಕಾರಣಕ್ಕೆ ಒಂದು ಮತ ಎಂದು ನಿರ್ಲಕ್ಷ ವಹಿಸುವಂತಿಲ್ಲ. ಇದು ಎಲ್ಲ ಅಭ್ಯರ್ಥಿಗಳ ಮನಸ್ಸಿನಲ್ಲಿ ಇರುವುದರಿಂದ ಒಂದು ಮತಕ್ಕೂ ಈಗ ಮೌಲ್ಯ ಇದೆ ಎನ್ನುವ ಅರಿವು ಅಭ್ಯರ್ಥಿಗಳಿಗೆ ತಿಳಿದಿದೆ. ಅದಕ್ಕೇ ಎಲ್ಲರನ್ನೂ ಕರೆತರುವ ಕಸರತ್ತು ಚಾಲ್ತಿಯಲ್ಲಿದೆ.

–  ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next