Advertisement

Karnataka Politics: ಇಂಡಿಯಾ ವರ್ಸಸ್‌ ಭಾರತ

10:33 PM Sep 06, 2023 | Team Udayavani |

ರಾಷ್ಟ್ರಪತಿಯವರ ಆಹ್ವಾನ ಪತ್ರಿಕೆಯಲ್ಲಿ “ಇಂಡಿಯಾ’ ಬದಲು “ಭಾರತ’ ಎಂದು ಬಳಕೆಯಾಗಿರುವುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ದೇಶದ ಹೆಸರನ್ನು ಕೇಂದ್ರ ಸರಕಾರ ಬದಲಾಯಿಸಲು ಹೊರಟಿದೆಯೇ ಎಂಬ ಪ್ರಶ್ನೆ ಮೂಡಿರುವ ನಡುವೆಯೇ ಬಿಜೆಪಿ ನಾಯಕರು ಈ ಬೆಳವಣಿಗೆಯನ್ನು ಸಮರ್ಥಿಸಿಕೊಂಡರೆ, ಕಾಂಗ್ರೆಸ್‌ ನಾಯಕರು ಪ್ರತಿರೋಧದ ದನಿ ಎತ್ತಿದ್ದಾರೆ.

Advertisement

ವಿಪಕ್ಷಗಳ ವಿರೋಧ ಅರ್ಥಹೀನ: ಬೊಮ್ಮಾಯಿ
ಬೆಂಗಳೂರು: ರಿಪಬ್ಲಿಕ್‌ ಆಫ್ ಇಂಡಿಯಾ ಹೆಸರನ್ನು ಕೇಂದ್ರ ಸರಕಾರ ರಿಪಬ್ಲಿಕ್‌ ಆಫ್ ಭಾರತ ಎಂದು ಮರುನಾಮಕರಣ ಮಾಡುತ್ತಿರುವುದಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸುವುದು ಅರ್ಥಹೀನ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಹಿಮಾಲಯದಿಂದ ಹಿಡಿದು ಹಿಂದೂ ಮಹಾಸಾಗರದ ವರೆಗಿನ ಪ್ರದೇಶವನ್ನು ಭಾರತ ಅಂತಲೇ ಕರೆಯಲಾಗುತ್ತದೆ. ಬ್ರಿಟಿಷರು ತಮ್ಮ ಅನುಕೂಲಕ್ಕೆ ತಕ್ಕಂತೆ ಭಾರತ ಸಹಿತ ಅನೇಕ ನಗರಗಳ ಹೆಸರುಗಳನ್ನು ಬದಲಾಯಿಸಿದ್ದರು. ಚೆನ್ನೈ, ಕೋಲ್ಕತಾ, ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ನಗರಗಳ ಹೆಸರುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಂಡಿದ್ದರು. ಅವುಗಳನ್ನು ಈಗ ಮೂಲ ಹೆಸರುಗಳಾಗಿ ಬದಲಾಯಿಸಿಕೊಳ್ಳಲಾಗಿದೆ. ಅದೇ ರೀತಿ ಇಂಡಿಯಾವನ್ನು ಭಾರತ ಎಂದು ಬದಲಾಯಿಸುವುದರಲ್ಲಿ ತಪ್ಪೇನಿಲ್ಲ ಎಂದು ಅಭಿಪ್ರಾಯಪಟ್ಟರು.

ಭಾರತ ಎಂದರೆ ಉರಿದು ಬೀಳುವುದೇಕೆ?
ಬೆಂಗಳೂರು: ಇಂಡಿಯಾ ಎಂಬುದು ಗುಲಾಮಿತನದ ಸಂಕೇತ. ಭಾರತ ಎಂಬುದು ಈ ದೇಶದ ಅಸ್ಮಿತೆ, ಅಸ್ತಿತ್ವ ಹಾಗೂ ಆತ್ಮ. ಭಾರತ ಎಂದರೆ ಕೆಲವರು ಉರಿದು ಬೀಳುವುದೇಕೆ? ಮಾನಸಿಕ ಗುಲಾಮಗಿರಿಯಿಂದ ಹೊರಬಂದರಷ್ಟೇ ಈ ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಗಲು ಸಾಧ್ಯ. ಭಾರತ ಘರ್ಜಿಸುತ್ತಿದೆ. ಅದಿರಂದ ಕೆಲವರಿಗೆ ದಿಗಿಲು ಹುಟ್ಟಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಭಾರತ ಎಂಬ ಹೆಸರು ಇಂದು-ನಿನ್ನೆ ಹುಟ್ಟಿದ್ದಲ್ಲ. ಪುರಾಣಗಳಿಂದ ಹಿಡಿದು ಹಲವೆಡೆ ಭಾರತದ ಉಲ್ಲೇಖಗಳಿವೆ. ವಿದೇಶಿಗರು ಭಾರತ ಎಂಬುದರ ಅರ್ಥ ಕೇಳಿದರೆ ಅನೇಕ ರೀತಿಯಲ್ಲಿ ವಿವರಿಸಲು ಅವಕಾಶಗಳಿವೆ. ಇಂಡಿಯಾ ಎಂಬುದರ ಅರ್ಥ ಕೇಳಿದರೆ ವಿದೇಶಿಗರ ಆಕರಗಳನ್ನೇ ಉಲ್ಲೇಖೀಸಬೇಕು. ಭಾರತೀಯ ಸಾಹಿತ್ಯಗಳಲ್ಲೆಲ್ಲೂ ಇಂಡಿಯಾ ಶಬ್ದವಿಲ್ಲ. ವಸಾಹತುಶಾಹಿ ಆಳ್ವಿಕೆ ಜತೆಗೆ ಇಂಡಿಯಾ ಥಳಕು ಹಾಕಿಕೊಂಡಿದೆ. ಪರಕೀಯರ ಆಕ್ರಮಣ ಆಗುವವರೆಗೆ ನಮಗೆ ಅಸ್ತಿತ್ವದ ಸಂಘರ್ಷವೇ ಇರಲಿಲ್ಲ. ಹೀಗಾಗಿ ಭಾರತ ಎಂಬುದು ಈ ದೇಶದ ಅಸ್ಮಿತೆ, ಅಸ್ತಿತ್ವ. ಇದೇ ಇಲ್ಲದಿದ್ದರೆ, ಆತ್ಮವೇ ಇಲ್ಲದ ವ್ಯಕ್ತಿಯಂತಾಗುತ್ತದೆ.

Advertisement

ಹೆಸರಿಗಿಂತ ಜನರ ಬದುಕು ಬದಲಾವಣೆ ಮುಖ್ಯ

ಬೆಂಗಳೂರು: ದೇಶದ ಹೆಸರು ಬದಲಾಯಿಸಿದರೆ ಏನು ಲಾಭ? ಅದರ ಬದಲು ಜನರ ಜೀವನದಲ್ಲಿ ಬದಲಾವಣೆ ಆಗುವುದು ಮುಖ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಹೇಳಿದರು.

ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿ, ದೇಶದ ಎಲ್ಲ ಜನರಿಗೂ ಅನ್ನ, ಉದ್ಯೋಗ, ಮನೆ ಸಿಕ್ಕರೆ ಅದನ್ನು ಬದಲಾವಣೆ ಎನ್ನಬಹುದು. ಕಳೆದ 9 ವರ್ಷಗಳಲ್ಲಿ ಜನರ ಆದಾಯ ದುಪ್ಪಟ್ಟಾಯಿತೇ? 15 ಲಕ್ಷ ರೂ. ಬ್ಯಾಂಕ್‌ ಖಾತೆಗೆ ಬಂದಿದೆಯೇ? ಇಲ್ಲ. ಒಂದೇ ಒಂದು ಅಕ್ಕಿಕಾಳು ಕಡಿಮೆ ಕೊಟ್ಟರೂ ಬಿಡುವುದಿಲ್ಲ ಎಂದು ಬಿಜೆಪಿ ಹೇಳಿಕೊಂಡಿತ್ತು. ನಾವು ಕೊಟ್ಟ ಮಾತನ್ನು ಉಳಿಸಿದ್ದೇವೆ. ಆದರೆ ಅವರು ಒಂದು ಮಾತನ್ನಾದರೂ ಉಳಿಸಿಕೊಂಡಿ¨ªಾರೆಯೇ ಎಂದು ಪ್ರಶ್ನಿಸಿದರು.
ಸರಕಾರ ಜನರ ಕಲ್ಯಾಣಕ್ಕಾಗಿ ಹೊಸ ಕಾನೂನುಗಳನ್ನು ತರಬೇಕು. ಯುಪಿಎ ಸರಕಾರ ಮಾಹಿತಿಹಕ್ಕು, ಆರ್‌ಟಿಐ, ನರೇಗಾ, ಆಹಾರ ಭದ್ರತಾ ಕಾಯ್ದೆಗಳನ್ನು ಜಾರಿಗೊಳಿಸಿದೆ. ಇಂತಹ ಯೋಚನೆಗಳು ಬಿಜೆಪಿಯವರಿಗೆ ಬರುವುದಿಲ್ಲವೇ ಎಂದು ಪ್ರಶ್ನಿಸಿದರು.

“ಇಂಡಿಯಾ”ಕ್ಕೆ ಹೆದರಿದ ಮೋದಿ: ಹೆಬ್ಟಾಳಕರ್‌
ಬೆಳಗಾವಿ: ವಿಪಕ್ಷಗಳ ಒಕ್ಕೂಟಕ್ಕೆ ಇಂಡಿಯಾ ಎಂದು ಹೆಸರು ಇಟ್ಟುಕೊಂಡಿರುವುದರಿಂದ ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಹೆದರಿಕೆ ಆರಂಭವಾಗಿದೆ. ಪ್ರಧಾನಿಯೂ ಹೆದರಿದಂತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಟಾಳಕರ್‌ ಹೇಳಿದರು. ಭಾರತ ಎಂಬ ಹೆಸರನ್ನು ನಾವು ವಿರೋಧಿಸುತ್ತಿಲ್ಲ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಎಂದು ನೋಟಿನ ಮೇಲೆ ಬರೆದಿದ್ದಾರೆ. ಅದನ್ನು ಕೂಡ ಬದಲಾಯಿಸುತ್ತಾರಾ ಎಂದು ಅವರು ಪ್ರಶ್ನಿಸಿದರು.

ನಮ್ಮ ನಾಡಿಗೆ ರಾಷ್ಟ್ರಪತಿ, ಪ್ರಧಾನಿ ಬಂದಾಗ ಭಾರತದ ಪ್ರಧಾನಿ, ಭಾರತದ ರಾಷ್ಟ್ರಪತಿ ಬಂದರು ಎನ್ನುತ್ತೇವೆಯೋ ಹೊರತು ಇಂಡಿಯಾ ಎನ್ನುವುದಿಲ್ಲ. ಭಾರತ ಎನ್ನುವುದಕ್ಕೂ ಅಸಹ್ಯ, ಅಂಜಿಕೆ ಆಗುತ್ತದೆಯೆಂದರೆ ಎಲ್ಲವನ್ನೂ ಚುನಾವಣೆ ರಾಜಕೀಯದ ದೃಷ್ಟಿಯಿಂದಲೇ ನೋಡುತ್ತಿದ್ದಾರೆ ಎಂದರ್ಥ.
-ಬಿ.ವೈ. ವಿಜಯೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ

ಭಾರತವನ್ನು ಇಂಡಿಯಾ ಎನ್ನುವುದೇ ದುರ್ದೈವ. ಭಾರತ ಇಂದು ಯಶಸ್ವಿ ರಾಷ್ಟ್ರವಾಗಲು ಇಲ್ಲಿನ ಆಚಾರ, ವಿಚಾರ, ಸಂಸ್ಕಾರಗಳೇ ಕಾರಣ. ಈ ಹೆಸರಿಂದಲೇ ಕರೆಯಬೇಕೆಂಬ ಕೆಲಸ ಎಂದೋ ಆಗಬೇಕಿತ್ತು. ಈಗ ಆ ಕಾಲ ಬಂದಿದೆ. ರಾಜಕೀಯ ಕಾರಣಗಳಿಂದ ಕೆಲವರು ಇದನ್ನು ಒಪ್ಪುತ್ತಿಲ್ಲ.
-ಡಿ.ವಿ. ಸದಾನಂದ ಗೌಡ, ಮಾಜಿ ಸಿಎಂ

ಇಂಡಿಯಾ ಬದಲು ಭಾರತ ಎನ್ನುವ ಹೆಸರು ಅ ಧಿಕೃತಗೊಳಿಸುವ ಕೇಂದ್ರ ಸರಕಾರದ ಕ್ರಮ ಸರಿಯಲ್ಲ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಬಂದ ಬಳಿಕ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ಏರಿಕೆ ಮಾಡಿ ಜನರಿಂದ ಸುಲಿಗೆ ಮಾಡುತ್ತಿದ್ದಾರೆ. ಭಾವನಾತ್ಮಕ ವಿಷಯಗಳಿಂದ ಜನರ ಹಸಿವು ಹೋಗುವುದಿಲ್ಲ. ದೇಶದ ಅಭಿವೃದ್ಧಿಯಿಂದ ಮಾತ್ರ ಬದಲಾವಣೆ ಸಾಧ್ಯ.
-ಕೃಷ್ಣ ಭೈರೇಗೌಡ, ಕೃಷಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next