ಮೈಸೂರು: ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ನ್ಯಾಕ್ನಿಂದ ಎ ಪ್ಲಸ್ ಮಾನ್ಯತೆ ದೊರೆತಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಇತಿ ಹಾಸದಲ್ಲಿ ಇದೇ ಮೊದಲ ಬಾರಿಗೆ ನ್ಯಾಕ್ ಮಾನ್ಯತೆಗೆ ಅರ್ಜಿ ಸಲ್ಲಿಸಲಾಗಿತ್ತು. ಹೀಗೆ ಅರ್ಜಿ ಸಲ್ಲಿಸಿದ ಮೊದಲ ವರ್ಷದಲ್ಲೇ ನ್ಯಾಕ್ನಿಂದ ಎ ಪ್ಲಸ್ ಮಾನ್ಯತೆ ಲಭ್ಯವಾಗಿದೆ.
ಈ ಮಾನ್ಯತೆಯು ಇನ್ನು ಐದು ವರ್ಷಗಳ ಕಾಲ ಅಂದರೆ ಮೇ 2028ರವರೆಗೆ ಇರಲಿದೆ. ಕರ್ನಾಟಕದಲ್ಲಿ ಈ ವರ್ಷ ನ್ಯಾಕ್ನಿಂದ ಎ ಪ್ಲಸ್ ಮಾನ್ಯತೆ ಪಡೆದ ಏಕೈಕ ವಿಶ್ವವಿದ್ಯಾನಿಲಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯವಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾರ್ಯವೈಖರಿ, ಫಲಿತಾಂಶ, ಮೂಲ ಸೌಕರ್ಯ, ಸಿಬ್ಬಂದಿ ಕಾರ್ಯಕ್ಷಮತೆ ಸೇರಿದಂತೆ ನಾನಾ ಅಂಶಗಳನ್ನು ಪರಿಶೀಲಿಸಿದ ನಂತರ ನ್ಯಾಕ್ ಈ ಮಾನ್ಯತೆ ನೀಡಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲ ಪತಿ ಪ್ರೊ.ಶರಣಪ್ಪ ವಿ.ಹಲ್ಸೆ ಅವರು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಅನುದಾನ ನೀಡಲು ಕೋರಬಹುದು: ನ್ಯಾಕ್ನಿಂದ ಎ ಪ್ಲಸ್ ಮಾನ್ಯತೆ ದೊರೆತಿರುವುದರಿಂದ ಮುಕ್ತ ವಿಶ್ವವಿದ್ಯಾ ನಿಲಯದಿಂದ ವಿದ್ಯಾರ್ಥಿಗಳು ಏಕಕಾಲದಲ್ಲಿ ಎರಡು ಪದವಿಗಳಿಗೆ ಪ್ರವೇಶ ಪಡೆಯಲು ಅವಕಾಶ ಲಭ್ಯವಾಗಿದೆ. ವಿಶ್ವವಿದ್ಯಾನಿಲಯ ಆನ್ಲೈನ್ ಕೋರ್ಸ್ಗಳನ್ನು ನಡೆಸಲು ಸಾಧ್ಯವಾಗಿದೆ. ಈ ಮಾನ್ಯತೆಯಿಂದಾಗಿ ವಿಶ್ವವಿದ್ಯಾನಿಲಯಕ್ಕೆ ಅನುದಾನ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಕೋರಬಹುದು. ಕೇಂದ್ರ ಸರ್ಕಾರದಿಂದ ಸುಮಾರು ನೂರು ಕೋಟಿ ರೂಪಾಯಿ ಅನುದಾನ ಪಡೆ ಯಲು ಪ್ರಯತ್ನಿಸುತ್ತೇನೆ ಎಂದು ಪ್ರೊ.ಶರಣಪ್ಪ ಹಲ್ಸೆ ತಿಳಿಸಿದರು.
ಆದಾಯದಲ್ಲೂ ಹೆಚ್ಚಳ ಉಂಟು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಜನವರಿ ಮತ್ತು ಜುಲೈ ತಿಂಗಳಿನಲ್ಲಿ ಹೀಗೆ ವರ್ಷದಲ್ಲಿ ಎರಡು ಬಾರಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ವಿದ್ಯಾರ್ಥಿಗಳ ಪ್ರವೇಶಾತಿ ಯಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಜನವರಿಯಲ್ಲಿ ಸಾಮಾನ್ಯವಾಗಿ 5-6 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದರು. ಈ ವರ್ಷ ಜನವರಿಯಲ್ಲಿ ವಿಶ್ವವಿದ್ಯಾ ನಿಲಯದ ಸತತ ಪರಿಶ್ರಮದಿಂದ 18,524 ವಿದ್ಯಾರ್ಥಿಗಳು ವಿವಿಧ ಕೋರ್ಸ್ಗಳಿಗೆ ಪ್ರವೇಶ ಪಡೆದಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಹೆಚ್ಚು ಪ್ರಚಾರ ಮಾಡಿದ್ದರಿಂದ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಇದು ವಿಶ್ವವಿದ್ಯಾನಿಲ ಯದ ಆದಾಯದಲ್ಲೂ ಹೆಚ್ಚಳ ಉಂಟು ಮಾಡಿದೆ ಎಂದು ಪ್ರೊ.ಶರಣಪ್ಪ ಹಲ್ಸೆ ವಿವರಿಸಿದರು.
Related Articles
ವಿಶ್ವವಿದ್ಯಾನಿಲಯವು ಈ ಬಾರಿ ಆದಾಯ ತೆರಿಗೆ ಇಲಾಖೆಯಿಂದ ಬರಬೇಕಿದ್ದ ಬಾಕಿ ಹತ್ತು ಕೋಟಿಗೂ ಹೆಚ್ಚು ರೂಪಾಯಿಯನ್ನು ಪಡೆದುಕೊಂಡಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ ವಿಶ್ವವಿದ್ಯಾನಿಲಯವು 40 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಕ್ರೂಢೀಕರಿಸಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಪ್ರೊ.ಕೆ.ಎಲ್.ಎನ್.ಮೂರ್ತಿ, ರಿಜಿಸ್ಟ್ರಾರ್ (ಮೌಲ್ಯಮಾಪನ) ಪ್ರೊ.ಕೆ.ಬಿ.ಪ್ರವೀಣ್, ಹಣಕಾಸು ಅಧಿಕಾರಿ ಡಾ.ಎ.ಖಾದರ್ ಪಾಷ, ಡೀನ್ ಅಕಾಡೆಮಿಕ್ ಡಾ.ಎನ್. ಲಕ್ಷ್ಮೀ ಇತರರು ಇದ್ದರು.
ಉನ್ನತ ಶಿಕ್ಷಣ ಎಲ್ಲರಿಗೂ, ಎಲ್ಲೆಡೆ ಎಂಬುದು ನಮ್ಮ ಗುರಿ: ವಿಶ್ವವಿದ್ಯಾನಿಲಯದಲ್ಲಿ ಈಗ 64 ಕೋರ್ಸ್ಗಳಿವೆ. ಸುಮಾರು 51 ಹೊಸ ಕೋರ್ಸ್ಗಳನ್ನು ಪ್ರಾರಂಭಿಸಲು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗಕ್ಕೆ ಮನವಿ ಸಲ್ಲಿಸಿದೆ. ಡೇಟಾ ವಿಜ್ಞಾನ, ಬಯೋಇನ್ಫರ್ಮೇಟಿಕ್ಸ್, ಭೂ ವಿಜ್ಞಾನ, ಕಂಪ್ಯೂಟರ್ ಅಪ್ಲಿಕೇಷನ್ಸ್, ಸೈಬರ್ ಸೆಕ್ಯೂರಿಟಿ ಕೋರ್ಸ್ಗಳನ್ನು ಅಭಿವೃದ್ಧಿಪಡಿಸಿದ್ದು ಸದ್ಯದಲ್ಲೇ ಆರಂಭಿಸಲಾಗುವುದು. ಆನ್ಲೈನ್ ಕೋರ್ಸ್ಗಳನ್ನು ಸದ್ಯದಲ್ಲೇ ಆರಂಭಿಸಲಾಗುವುದು. ಇದರೊಂದಿಗೆ ಎರಡು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.
ವಿಶ್ವವಿದ್ಯಾನಿಲಯದಲ್ಲಿ ಈಗ ಸುಮಾರು 61 ಸಾವಿರ ವಿದ್ಯಾರ್ಥಿಗಳಿದ್ದಾರೆ. ಉನ್ನತ ಶಿಕ್ಷಣ ಎಲ್ಲರಿಗೂ, ಎಲ್ಲೆಡೆ ಎಂಬುದು ನಮ್ಮ ಗುರಿ. ರಾಜ್ಯದಲ್ಲಿ ಮುಕ್ತ ವಿಶ್ವವಿದ್ಯಾನಿಲಯದ 23 ಪ್ರಾದೇಶಿಕ ಕೇಂದ್ರಗಳಿವೆ. ವಿಶ್ವವಿದ್ಯಾನಿಲಯದಲ್ಲಿ ಸುಮಾರು 1,200 ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರಿದ್ದಾರೆ ಎಂದು ಕುಲಪತಿ ಪ್ರೊ.ಶರಣಪ್ಪ ವಿ.ಹಲ್ಸೆ ತಿಳಿಸಿದರು.