Advertisement

N.M. Suresh: ಸವಾಲುಗಳನ್ನು ಮೆಟ್ಟಿನಿಲ್ಲುವ ಸಾಮರ್ಥ್ಯ ಕನ್ನಡ ಚಿತ್ರರಂಗಕ್ಕಿದೆ

10:48 AM Jan 25, 2024 | Team Udayavani |

“ಒಳ್ಳೆಯ ಕಂಟೆಂಟ್‌ ಸಿನಿಮಾಗಳನ್ನು ಜನ ಖಂಡಿತವಾಗಿಯೂ ಸ್ವೀಕರಿಸುತ್ತಾರೆ. ನಿರ್ಮಾಪಕರು, ನಿರ್ದೇಶಕರು ಒಳ್ಳೆಯ ಕಂಟೆಂಟ್‌ ಸಿನಿಮಾಗಳ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ಇದರಿಂದ ಸಿನಿಮಾ ಇಂಡಸ್ಟ್ರಿ ಬೆಳೆಯುವುದರ ಜೊತೆಗೆ, ನಾನು ಕೂಡ ಪರಭಾಷೆಯ ಸಿನಿಮಾಗಳ ಜೊತೆಗೆ ಕಂಪಿಟೇಷನ್‌ ಮಾಡೋದಕ್ಕೆ ಸಾಧ್ಯ. ಸಿನಿಮಾದಲ್ಲಿ ಒಳ್ಳೆಯ ಕಂಟೆಂಟ್‌ ಮತ್ತು ಕ್ವಾಲಿಟಿಯಿದ್ದರೆ, ಖಂಡಿತವಾಗಿಯೂ ನಾವು ಎಲ್ಲ ಕಡೆಗಳಲ್ಲೂ ತಲುಪಬಹುದು’ ಇದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌. ಎಂ. ಸುರೇಶ್‌ ಅಭಿಪ್ರಾಯ.

Advertisement

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ “ಉದಯವಾಣಿ’ ಕಚೇರಿಗೆ ಭೇಟಿ ನೀಡಿ ಸಂವಾದ ನಡೆಸಿದ ಎನ್‌. ಎಂ. ಸುರೇಶ್‌, ಚಿತ್ರರಂಗದ ಬೆಳವಣಿಗೆಗಳು ಆಗಬೇಕಾದ ಕೆಲಸಗಳ ಬಗ್ಗೆ ಒಂದಷ್ಟು ಮಾತನಾಡಿದರು.

“ಕನ್ನಡದಂತಹ ಪ್ರಾದೇಶಿಕ ಭಾಷೆಯ ಸಿನಿಮಾಗಳಿಗೆ ಇಂದು ಸಾಕಷ್ಟು ಸಮಸ್ಯೆ, ಸವಾಲುಗಳಿವೆ. ಓಟಿಟಿಯಲ್ಲಿ ಕನ್ನಡ ಸಿನಿಮಾಗಳನ್ನು ತೆಗೆದುಕೊಳ್ಳುತ್ತಿಲ್ಲ, ಮಲ್ಟಿಫ್ಲೆಕ್ಸ್‌ನಲ್ಲಿ ಕನ್ನಡ ಸಿನಿಮಾಗಳಿಗೆ ಸರಿಯಾದ ಪ್ರದರ್ಶನ ಸಿಗುತ್ತಿಲ್ಲ, ಸಿಂಗಲ್‌ ಸ್ಕ್ರೀನ್‌ ಥಿಯೇಟರ್‌ಗಳಿಗೆ ಜನ ಬರುತ್ತಿಲ್ಲ, ಥಿಯೇಟರ್‌ಗಳಿಗೆ ಸಿನಿಮಾಗಳಿಗೆ ಗಳಿಕೆಯಾಗುತ್ತಿಲ್ಲ ಹೀಗೆ ಹತ್ತಾರು ಸಮಸ್ಯೆಗಳು ಕನ್ನಡ ಚಿತ್ರರಂಗದಲ್ಲಿವೆ. ಆದರೆ ಅವುಗಳೆಲ್ಲವನ್ನೂ ಎದುರಿಸಿ ನಿಲ್ಲುವ ಸಾಮರ್ಥ್ಯ ಕನ್ನಡ ಚಿತ್ರರಂಗಕ್ಕಿದೆ. ನಮ್ಮಲ್ಲಿ ಗುಣಮಟ್ಟದ ಮತ್ತು ಒಳ್ಳೆಯ ಸಿನಿಮಾಗಳ ನಿರ್ಮಾಣದ ಕಡೆಗೆ ನಿರ್ಮಾಪಕರು, ನಿರ್ದೇಶಕರು ಗಮನ ಹರಿಸಿದರೆ, ಖಂಡಿತವಾಗಿಯೂ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ’ ಎಂಬುದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್‌. ಎಂ. ಸುರೇಶ್‌ ಮಾತು.

ಬಜೆಟ್‌ ಮೇಲೆ ನಿರೀಕ್ಷೆ: “ಸರ್ಕಾರದ ಕಡೆಯಿಂದ ಚಿತ್ರರಂಗಕ್ಕೆ ಆಗಬೇಕಾದ ಕೆಲಸಗಳು ಸಾಕಷ್ಟಿದೆ. ಇವುಗಳ ಪೈಕಿ ಆದ್ಯತೆಯ ಮೇರೆಗೆ ಆಗಬೇಕಾದ ಕೆಲಸಗಳನ್ನು ತುರ್ತಾಗಿ ಮಾಡಿಸಿಕೊಳ್ಳಲು ವಾಣಿಜ್ಯ ಮಂಡಳಿ ಸರ್ಕಾರದ ಸಚಿವರು, ಇಲಾಖೆಗಳು ಮತ್ತು ಅಧಿಕಾರಿಗಳ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದು ಕೆಲಸ ಮಾಡುತ್ತಿದೆ. ಈ ಬಾರಿಯ ಬಜೆಟ್‌ನಲ್ಲೂ ಚಿತ್ರರಂಗದಲ್ಲಿ ತುರ್ತಾಗಿ ಆಗಬೇಕಾದ ಒಂದಷ್ಟು ಕೆಲಸಗಳಿಗೆ ಅನುದಾನ ಸಿಗಬಹುದು ಎಂಬ ನಿರೀಕ್ಷೆಯಿದೆ’ ಎಂದರು ಎನ್‌. ಎಂ. ಸುರೇಶ್‌.

ಸವಾಲು ಸಾಕಷ್ಟಿದೆ… “ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗಕ್ಕೂ ಉತ್ತರ ಭಾರತದ ಚಿತ್ರರಂಗಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅಲ್ಲಿನ ಸಿನಿಮಾಗಳನ್ನು ನೋಡುವ ರೀತಿ ಮತ್ತು ಅವುಗಳಿಗೆ ಸಿಗುವ ಪ್ರಾಮುಖ್ಯತೆಯೇ ಬೇರೆ, ನಮ್ಮ ಕನ್ನಡ ಸಿನಿಮಾಗಳಿಗೆ ಸಿಗುವ ಮನ್ನಣೆ, ಪ್ರಾಮುಖ್ಯತೆಯೇ ಬೇರೆ. ಈ ತಾರತಮ್ಯ ದೂರವಾಗಬೇಕಿದೆ. ಕರ್ನಾಟಕದಲ್ಲಿ ಎಲ್ಲ ಭಾಷೆಯ ಸಿನಿಮಾಗಳೂ ಬಿಡುಗಡೆಯಾಗುತ್ತದೆ. ಎಲ್ಲರೂ ಎಲ್ಲಾ ಭಾಷೆಯ ಸಿನಿಮಾಗಳನ್ನೂ ನೋಡುತ್ತಾರೆ. ಆದರೆ ನಮ್ಮ ಸಿನಿಮಾಗಳು ಬೇರೆ ಕಡೆಗೆ ಹೋಗದಂಥ ಪರಿಸ್ಥಿತಿ ಸೃಷ್ಟಿಸಲಾಗಿದೆ. ಇದರಿಂದ ಕನ್ನಡ ಚಿತ್ರರಂಗವನ್ನು ಹೊರತರಬೇಕಾಗಿದೆ. ಹೀಗಾದಾಗ ಚಿತ್ರರಂಗ ಸಹಜವಾಗಿಯೇ ಬೆಳೆದುಕೊಂಡು ಹೋಗುತ್ತದೆ’ ಎನ್ನುತ್ತಾರೆ ಎನ್‌. ಎಂ. ಸುರೇಶ್‌.

Advertisement

ಬೆಂಗಳೂರಿನಲ್ಲಿ ಯುಎಫ್ಓ/ ಕ್ಯೂಬ್‌ ಅಪ್ಲೋಡ್‌.. “ಚಿತ್ರರಂಗದ ದೃಷ್ಟಿಯಿಂದ ಸರ್ಕಾರ ಒಂದಷ್ಟು ಯೋಜನೆಗಳನ್ನು ಪ್ರಕಟಿಸಿದೆ. ಫಿಲಂ ಸಿಟಿ ನಿರ್ಮಾಣವಾಗಬೇಕು ಎಂಬುದು ಚಿತ್ರರಂಗದ ಹಲವು ವರ್ಷಗಳ ಬೇಡಿಕೆ. ಫಿಲಂ ಸಿಟಿ ಎಲ್ಲಾದರೂ ಆಗಲಿ, ಆದರೆ ಆದಷ್ಟು ಬೇಗ ನಿರ್ಮಾಣವಾಗಲಿ. ಇದರಿಂದ ಇಡೀ ಚಿತ್ರೋದ್ಯಮಕ್ಕೇ ಅನುಕೂಲವಾಗು ತ್ತದೆ. ಇನ್ನು ಹೊಸ ಸಿನಿಮಾಗಳ ಯುಎಫ್ಓ/ ಕ್ಯೂಬ್‌ ಅಪ್ಲೋಡ್‌ಗಾಗಿ ಇಷ್ಟು ಸಮಯ ಚೆನ್ನೈಗೆ ಹೋಗಬೇಕಾಗಿತ್ತು. ಇನ್ನು ಮುಂದೆ ಯುಎಫ್ಓ/ ಕ್ಯೂಬ್‌ ಅಪ್ಲೋಡ್‌ ಅನ್ನು ಬೆಂಗಳೂರಿನಲ್ಲಿ ಮಾಡಬಹುದು. ನಿರಂತರ ಪ್ರಯತ್ನದಿಂದಾಗಿ ಈ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು, ಶೀಘ್ರದಲ್ಲಿಯೇ ಇದು ಅನುಷ್ಠಾನವಾಗಲಿದೆ’ ಎಂದರು.

ಚಿತ್ರನಗರಿ ಕನಸು ಈಡೇರಬೇಕು : ಕನ್ನಡ ಚಿತ್ರರಂಗಕ್ಕಾಗಿಯೇ ಒಂದು ಚಿತ್ರನಗರಿ ಆಗಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಈಗಾಗಲೇ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಿಸುವುದಾಗಿ ಸರ್ಕಾರ ಘೋಷಿಸಿದೆ. ಈ ಕುರಿತು ಮಾತನಾಡುವ ಎನ್‌.ಎಂ.ಸುರೇಶ್‌, “ಕನ್ನಡ ಚಿತ್ರರಂಗದ ದಿನದಿಂದ ದಿನಕ್ಕೆ ದೊಡ್ಡದಾಗಿ ಬೆಳೆಯುತ್ತಿದೆ. ನಾವು ಕೂಡಾ ಬಿಗ್‌ ಬಜೆಟ್‌ನ ಸಿನಿಮಾಗಳನ್ನು ನಿರ್ಮಿಸುತ್ತಿದ್ದೇವೆ. ಹೀಗಿರುವಾಗ ನಮ್ಮದೇ ಆದ ಒಂದು ಸುಸಜ್ಜಿತ ಚಿತ್ರನಗರಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕಿದೆ. ಚಿತ್ರನಗರಿ ನಮ್ಮಲ್ಲೇ ಆದರೆ ಹೊರಗಡೆ ಹೋಗಿ ಚಿತ್ರೀಕರಣ ಮಾಡುವ ಅನಿವಾರ್ಯತೆ ತಪ್ಪುತ್ತದೆ. ಜೊತೆಗೆ ಚಿತ್ರನಗರಿ ಕರ್ನಾಟಕಕ್ಕೆ ಒಂದು ಹೆಮ್ಮೆಯಾಗಲಿದೆ’ ಎನ್ನುತ್ತಾರೆ.

 

Advertisement

Udayavani is now on Telegram. Click here to join our channel and stay updated with the latest news.

Next