Advertisement

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಗೋಕಾಕ ಕ್ಷೇತ್ರದ ಅನಿರೀಕ್ಷಿತ ರಾಜಕೀಯ ಬೆಳವಣಿಗೆಗಳು ಮತ್ತೆ ಸುದ್ದಿ ಹಾಗೂ ಸದ್ದು ಮಾಡುತ್ತಿವೆ. ಕಾಂಗ್ರೆಸ್‌ ಪಕ್ಷದ ಎರಡನೇ ಪಟ್ಟಿ ಘೋಷಣೆಯಾದ ಬೆನ್ನಲ್ಲೇ ಒಳಒಪ್ಪಂದ ಮತ್ತು ಹೊಂದಾಣಿಕೆ ರಾಜಕಾರಣದ ವಾಸನೆ ಬಹಳ ದಟ್ಟವಾಗಿ ಬರಲಾರಂಭಿಸಿದೆ.

Advertisement

ಗೋಕಾಕ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಲಿಂಗಾಯತ ಪಂಚಮಸಾಲಿ ಸಮಾಜದ ಡಾ| ಮಹಾಂತೇಶ ಕಡಾಡಿ ಹೆಸರು ಅಂತಿಮವಾಗಿದೆ. ಇದು ಬಹುಶಃ ಯಾರೂ ನಿರೀಕ್ಷೆ ಮಾಡಲಾರದ ಸುದ್ದಿ. ಕಳೆದ ಒಂದು ವರ್ಷದಿಂದ ಈ ಕ್ಷೇತ್ರದಲ್ಲಿ ಅಶೋಕ ಪೂಜಾರಿ ಹೆಸರು ಬಿಟ್ಟು ಬೇರೆ ಯಾವ ಹೆಸರೂ ಕೇಳಿ ಬಂದಿರಲಿಲ್ಲ. ಟಿಕೆಟ್‌ ಕೊಡುತ್ತೇವೆಂಬ ಕರಾರಿನ ಮೇಲೆಯೇ ಬಂದಿದ್ದ ಪೂಜಾರಿ ಸಹ ಒಂದು ವರ್ಷದಿಂದ ಕ್ಷೇತ್ರದಲ್ಲಿ ಬಹಳ ಜೋರಾಗಿ ಓಡಾಡಿದ್ದರು. ನನಗೇ ಟಿಕೆಟ್‌ ಎಂದು ಎಲ್ಲರ ಎದುರು ವಿಶ್ವಾಸದಿಂದ ಹೇಳಿದ್ದರು.

ಆದರೆ ಈಗ ಎಲ್ಲವೂ ತಲೆಕೆಳಗಾಗಿದೆ. ಅಶೋಕ ಪೂಜಾರಿ ಹೆಸರು ಬರಬೇಕಾದ ಜಾಗದಲ್ಲಿ ಮಹಾಂತೇಶ ಕಡಾಡಿ ಹೆಸರು ಕಾಣಿಸಿಕೊಂಡಿದೆ. ನಾಮಪತ್ರ ಸಲ್ಲಿಸುವವರೆಗೆ ಯಾವುದೇ ಬದಲಾವಣೆ ಆಗದೆ ಹೋದರೆ ಕಾಂಗ್ರೆಸ್‌ ನಂಬಿಕೊಂಡು ಬಂದಿದ್ದ ಅಶೋಕ ಪೂಜಾರಿ ಅವರ ರಾಜಕೀಯ ಜೀವನ ಅತಂತ್ರವಾಗಲಿದೆ. ಇದುವರೆಗೆ ಜೆಡಿಎಸ್‌ ಅನಂತರ ಬಿಜೆಪಿಯಲ್ಲಿದ್ದ ಪೂಜಾರಿ ಮುಂದೆ ಯಾರ ಜತೆ ಹೋಗುತ್ತಾರೆ ಎಂಬುದು ಈಗ ಕ್ಷೇತ್ರದ ಜನರ ಮುಂದಿರುವ ಕುತೂಹಲ.

ಗೋಕಾಕ ಕ್ಷೇತ್ರದಲ್ಲಿ ಅಶೋಕ ಪೂಜಾರಿಗೆ ಟಿಕೆಟ್‌ ತಪ್ಪಿದೆ. ಲಿಂಗಾಯತ ಪಂಚಮಸಾಲಿ ಮುಖಂಡರಿಗೆ ಟಿಕೆಟ್‌ ಕೊಡಲಾಗಿದೆ ಎನ್ನುವುದಕ್ಕಿಂತ ಟಿಕೆಟ್‌ ತಪ್ಪಿಸಿದ್ದರ ಹಿಂದಿರುವ ಕೈಗಳ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಇದರ ಹಿಂದೆ ಆಗಿರುವ ಒಳಒಪ್ಪಂದ ಮತ್ತು ಹೊಂದಾಣಿಕೆ ಬರುವ ಚುನಾವಣೆಯಲ್ಲೂ ತನ್ನ ಪ್ರಭಾವ ತೋರಿಸಲಿದೆ ಎಂಬುದರ ಸುಳಿವು ನೀಡಿದೆ.

ಕಳೆದ ನಾಲ್ಕು ಚುನಾವಣೆಗಳಲ್ಲಿ ರಮೇಶ್‌ ಜಾರಕಿಹೊಳಿ ಅವರ ನಿದ್ದೆಗೆಡಿಸಿದ್ದ ಅಶೋಕ ಪೂಜಾರಿ ಅವರ ಮುಂದಿನ ನಡೆ ಈಗ ಸಾಕಷ್ಟು ಮಹತ್ವ ಪಡೆದಿದೆ. ಇದೇ ಹಿನ್ನೆಲೆಯಲ್ಲಿ ಅಶೋಕ ಪೂಜಾರಿ ಅವರು ಬರುವ ಸೋಮವಾರ ಗೋಕಾಕದಲ್ಲಿ ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ.

Advertisement

ಗೋಕಾಕ ಕ್ಷೇತ್ರದಲ್ಲಿ ನಿಗದಿಯಾಗಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ “ಪ್ರಜಾಧ್ವನಿ’ ಯಾತ್ರೆ ಮೂರು ಬಾರಿ ರದ್ದಾಗಿದ್ದು, ಅವರು ಕ್ಷೇತ್ರಕ್ಕೆ ಬರದಂತೆ ನೋಡಿಕೊಂಡಿದ್ದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತ್ತು. ಈಗ ಅಶೋಕ ಪೂಜಾರಿ ಅವರಿಗೆ ಟಿಕೆಟ್‌ ತಪ್ಪಿಸುವ ಮೂಲಕ ಈ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ. ಅಶೋಕ ಪೂಜಾರಿ ಅವರ ಹೆಸರು ಪಟ್ಟಿಯಿಂದ ಹಾರುವುದರ ಹಿಂದೆ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳ ನಾಯಕರ ಪ್ರಯತ್ನ ಬಹಳ ಕೆಲಸ ಮಾಡಿದೆ. ಇಲ್ಲಿಯೂ ಸಹ ಜಾರಕಿಹೊಳಿ ಸಹೋದರರು ಮತ್ತು ಬಿಜೆಪಿಯ ಪ್ರಭಾವಿ ನಾಯಕರ ಕಡೆ ಅನುಮಾನದಿಂದ ನೋಡುವಂತೆ ಮಾಡಿದ್ದು ಸುಳ್ಳಲ್ಲ. ಜತೆಗೆ ಕಳೆದ ನಾಲ್ಕೈದು ತಿಂಗಳಿಂದ ಅಶೋಕ ಪೂಜಾರಿ ವಿರುದ್ಧ ವ್ಯವಸ್ಥಿ§ತವಾಗಿ ಕೆಲಸ ಮಾಡುತ್ತಿದ್ದ ಶಕ್ತಿಗಳ ಶ್ರಮಕ್ಕೆ ಈಗ ಫಲ ಸಿಕ್ಕಿದೆ.

ಮೊದಲೇ ಅನುಮಾನವಿತ್ತೆ?: ಅಶೋಕ ಪೂಜಾರಿಗೆ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಟಿಕೆಟ್‌ ಸಿಗದಂತೆ ನೋಡಿಕೊಳ್ಳಬೇಕೆಂದು ಕೆಲವು ನಾಯಕರು ಹಗಲು ರಾತ್ರಿ ಓಡಾಡಿದ್ದರು. ಇದರಲ್ಲಿ ಬಿಜೆಪಿ ನಾಯಕರೇ ಹೆಚ್ಚಾಗಿದ್ದುದು ವಿಶೇಷ. ಇದೇ ನಾಯಕರು ಗೋಕಾಕ ಕ್ಷೇತ್ರದಲ್ಲಿ ಸಿದ್ದರಾ ಮಯ್ಯ ಅವರ ಕಾರ್ಯಕ್ರಮ ನಡೆಯದಂತೆ ನೋಡಿ ಕೊಂಡರು. “ಪ್ರಜಾಧ್ವನಿ’ ಯಾತ್ರೆ ಮೂಲಕ ಬೆಳಗಾವಿ ಜಿಲ್ಲೆಗೆ ಸಿದ್ದರಾ ಮಯ್ಯ ಮೂರು ಬಾರಿ ಬಂದರೂ ಗೋಕಾಕ ಕ್ಷೇತ್ರದ ಕಡೆ ತಲೆ ಹಾಕಲಿಲ್ಲ. ಇವೆಲ್ಲದರ ಹಿಂದೆ ಅಶೋಕ ಪೂಜಾರಿ ಅವರಿಗೆ ಟಿಕೆಟ್‌ ತಪ್ಪಿಸಬೇಕು. ನಾವು ಹೇಳಿದಂತೆ ನಡೆಯ ಬೇಕೆಂಬ ಕುತಂತ್ರವಿತ್ತು ಎಂಬ ಮಾತುಗಳು ಕೇಳಿಬಂದಿವೆ.

ಇನ್ನೊಂದು ಮೂಲಗಳ ಪ್ರಕಾರ ಈ ವಿಷಯದಲ್ಲಿ ಸತೀಶ್‌ಜಾರಕಿಹೊಳಿ ಅವರ ಮೌನ ಅಶೋಕ ಪೂಜಾರಿ ಅವರ ಬೆಂಬಲಿಗರಿಗೆ ನೋವು ತಂದಿದೆ. ಈ ಹಿಂದೆ ಸಹೋದರ ಲಖನ್‌ ಜಾರಕಿಹೊಳಿ ಟಿಕೆಟ್‌ ವಿಷಯದಲ್ಲಿ ಗಟ್ಟಿಯಾಗಿ ಪಟ್ಟು ಹಿಡಿದಿದ್ದ ಸತೀಶ್‌ ಅವರು ಈಗ ಮಾತ್ರ ಸುಮ್ಮನಾಗಿರುವುದು ಅನುಮಾನ ಪಡುವಂತೆ ಮಾಡಿದೆ.

ಹಾಗೆ ನೋಡಿದರೆ ವೃತ್ತಿಯಿಂದ ವೈದ್ಯರಾಗಿರುವ ಮಹಾಂತೇಶ ಕಡಾಡಿ ಅವರ ಹೆಸರನ್ನು ಯಾರೂ ನಿರೀಕ್ಷೆ ಮಾಡಿರಲೇ ಇಲ್ಲ. ಮೇಲಾಗಿ ಕಡಾಡಿ ಸಹ ರಾಜಕೀಯ ಕ್ಷೇತ್ರಕ್ಕೆ ಅಪರಿಚಿತರು. ಅನುಭವ ಅಷ್ಟಕಷ್ಟೇ. ಆದರೆ ಲಿಂಗಾಯತ ಪಂಚಮಸಾಲಿ ಸಮಾಜದ ಮುಖಂಡರೆಂಬ ಬಲವಿದೆ. ಮೊದಲು ಅರಭಾವಿ ಕ್ಷೇತ್ರದಿಂದ ಟಿಕೆಟ್‌ ಬಯಸಿದ್ದ ಮಹಾಂತೇಶ ಕಡಾಡಿ ಅವರು ಅನಂತರ ಕೆಲವು ಪ್ರಭಾವಿಗಳ ಸಲಹೆ ಮೇರೆಗೆ ಗೋಕಾಕ ಕಡೆ ತಿರುಗಿದರು. ಇಲ್ಲಿಯೂ ಸಹ ಬಿಜೆಪಿಯ ಕೆಲವು ಪ್ರಭಾವಿ ನಾಯಕರ ಸಲಹೆಗಳು ಕೆಲಸ ಮಾಡಿವೆ.

ಜಾರಕಿಹೊಳಿ ಕುಟುಂಬದ ವಿರುದ್ಧ ಮೊದಲ ಬಾರಿಗೆ ಲಿಂಗಾಯತ ಅಸ್ತ್ರ ಪ್ರಯೋಗಿಸಿರುವ ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಕಡಾಡಿ ಅವರ ಜತೆ ಎಷ್ಟು ಒಂದಾಗಿ ಹೋಗುತ್ತದೆ ಎಂಬುದು ಅಷ್ಟೇ ಕುತೂಹಲಕ್ಕೂ ಕಾರಣವಾಗಿದೆ.

ಟಿಕೆಟ್‌ ಕೈತಪ್ಪಿರುವುದಕ್ಕೆ ಬಹಳ ನಿರಾಸೆಯಾಗಿದೆ. ಪಕ್ಷದ ನಾಯಕರೇ ಟಿಕೆಟ್‌ ಕೊಡುವುದು ಖಚಿತ. ಕ್ಷೇತ್ರದಲ್ಲಿ ಕೆಲಸ ಮಾಡಿ ಎಂದು ಹೇಳಿದ್ದರು. ಅದರಂತೆ ಪಕ್ಷದ ಕೆಲಸ ಮಾಡುತ್ತಿದ್ದೆ. ಟಿಕೆಟ್‌ಗಾಗಿ ಯಾವುದೇ ಲಾಬಿ ಮಾಡಲಿಲ್ಲ. ಸಹಜವಾಗಿಯೇ ನಮ್ಮ ಬೆಂಬಲಿಗರಿಗೆ ನೋವಾಗಿದೆ. ಸದ್ಯ ಯಾವುದೇ ನಿರ್ಧಾರ ಮಾಡಿಲ್ಲ. ಸೋಮವಾರ ಬೆಂಬಲಿಗರ ಸಭೆ ಕರೆದಿದ್ದೇನೆ. ಅನಂತರ ಮುಂದಿನ ತೀರ್ಮಾನ ಮಾಡುತ್ತೇನೆ.
– ಅಶೋಕ ಪೂಜಾರಿ, ಕಾಂಗ್ರೆಸ್‌ ಮುಖಂಡ

– ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next