Advertisement

karnataka election 2023; ಹೊಸಮುಖಗಳ ಹಣಾಹಣಿಗೆ ಸಜ್ಜಾಗಿದೆ ಕಣ

03:54 PM Apr 15, 2023 | Team Udayavani |

ಸುಳ್ಯ: ಕೇರಳದ ಕಾಸರಗೋಡು, ಕೊಡಗಿನ ಸಂಪಾಜೆ ಗಡಿಗೆ ತಾಗಿಕೊಂಡಿರುವ ದ.ಕ. ಜಿಲ್ಲೆಯ ಏಕೈಕ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರ ಸುಳ್ಯ. ಈ ಬಾರಿ ಹೊಸ ಮುಖಗಳ ನಡುವೆ ನೇರ ಹಣಾಹಣಿ ಇದೆ. ಜತೆಗೆ ಪಕ್ಷೇತರ ಅಭ್ಯರ್ಥಿಗಳು ಕಣಕ್ಕಿಳಿಯಲು ಯೋಚಿಸಿರುವುದು ಚುನಾವಣ ಕಣ ರಂಗೇರಿಸಿದೆ. ಇಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ.

Advertisement

1952ರಲ್ಲಿ ಮದ್ರಾಸ್‌ ರಾಜ್ಯ ಹಾಗೂ 1957ರಲ್ಲಿ ಮೈಸೂರು ರಾಜ್ಯ ವ್ಯಾಪ್ತಿಯಲ್ಲಿ ಚುನಾವಣೆಯನ್ನು ಕಡಿರುವ ಪುತ್ತೂರು ಆಗ ಸುಳ್ಯವನ್ನು ಒಳಗೊಂಡ ದ್ವಿ- ಸದಸ್ಯ ಕ್ಷೇತ್ರವಾಗಿತ್ತು. ಈ ಎರಡು ಅವಧಿಯಲ್ಲಿ ಸುಳ್ಯ ಪುತ್ತೂರಿನ ಕ್ಷೇತ್ರಕ್ಕೆ ಸೇರಿತ್ತು. 1962ರಲ್ಲಿ ಸುಳ್ಯವು ಪುತ್ತೂರು ಕ್ಷೇತ್ರದಿಂದ ಬೇರ್ಪಟ್ಟು ಪ್ರತ್ಯೇಕ ಕ್ಷೇತ್ರವಾಗಿ ಮೊದಲ ಚುನಾವಣೆ ಎದುರಿಸಿತು. ಪ್ರಸ್ತುತ ಈ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯೆಂದು ಪರಿಗಣಿಸಲ್ಪಟ್ಟಿದೆ.

1962ರ ಮೊದಲ ಚುನಾವಣೆ ವೇಳೆ ಈ ಕ್ಷೇತ್ರ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿತ್ತು. ಈ ಅವಧಿಯಲ್ಲಿ ಈ ಕ್ಷೇತ್ರವನ್ನು ಕಾಂಗ್ರೆಸ್‌ ಗೆದ್ದುಕೊಂಡಿತು. 1967ರಿಂದ ಪರಿಶಿಷ್ಟ ಜಾತಿಗೆ ಮೀಸಲಾಯಿತು. ಈ ಅವಧಿಯಲ್ಲಿ ಸ್ವತಂತ್ರ ಪಕ್ಷ, 1972ರಲ್ಲಿ ಕಾಂಗ್ರೆಸ್‌, 1978ರಲ್ಲಿ ಜನತಾ ಪಕ್ಷ, 1983ರಲ್ಲಿ ಬಿಜೆಪಿ, 1985 ಹಾಗೂ 1989ರಲ್ಲಿ ಕಾಂಗ್ರೆಸ್‌ ಪಕ್ಷ ಇಲ್ಲಿ ಗೆಲುವು ಸಾಧಿಸಿತು. 1994ರಿಂದ 2018ರ ತನಕ ಆರು ಅವಧಿಯಲ್ಲಿ ಬಿಜೆಪಿ ಇಲ್ಲಿ ಗೆಲುವು ದಾಖಲಿಸುವ ಮೂಲಕ ಕ್ಷೇತ್ರದಲ್ಲಿ ತನ್ನ ಹಿಡಿತ ಸಾಧಿಸಿದೆ. 1962ರಿಂದ 2018ರ ವರೆಗೆ ಈ ಕ್ಷೇತ್ರದಲ್ಲಿ ನಡೆದಿರುವ ಒಟ್ಟು 13 ಚುನಾವಣೆ ಗಳಲ್ಲಿ 7 ಬಾರಿ ಬಿಜೆಪಿ 4 ಬಾರಿ ಕಾಂಗ್ರೆಸ್‌, 1 ಬಾರಿ ಜನತಾ ಪಾರ್ಟಿ, 1 ಬಾರಿ ಸ್ವತಂತ್ರ ಪಕ್ಷ ಜಯ ಗಳಿಸಿವೆ.
ಕ್ಷೇತ್ರದಲ್ಲಿ ಪರಿಶಿಷ್ಟ ವರ್ಗದ ಓರ್ವ ಹಾಗೂ ಉಳಿದ 12 ಅವಧಿಗೆ 12 ಪರಿಶಿಷ್ಟ ಜಾತಿಯ ಸಮುದಾಯದವರು ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ಅತ್ಯಧಿಕ ಸಂಖ್ಯೆಯಲ್ಲಿದ್ದರೆ, ಅನಂತರದ ಸ್ಥಾನದಲ್ಲಿ ಪರಿಶಿಷ್ಟ ಜಾತಿ- ಪಂಗಡ, ಮುಸ್ಲಿಂ, ಬಂಟ, ತಮಿಳು ಮತದಾರರಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗಿನ ಚುನಾವಣ ಇತಿಹಾಸ ಅವಲೋಕಿಸಿದರೆ ಇಲ್ಲಿ ನಿಕಟ ಸ್ಪರ್ಧೆ ಏರ್ಪಟ್ಟಿದ್ದು ಕಾಂಗ್ರೆಸ್‌ ಹಾಗೂ ಬಿಜೆಪಿ ಮಧ್ಯೆ ಮಾತ್ರ. ಈ ಬಾರಿಯು ಅದೇ ವಾತಾವರಣ ಇದೆ.

ಉನ್ನತ ಸ್ಥಾನಮಾನ
ಕಳೆದ ಹನ್ನೆರಡು ಅವಧಿಯಲ್ಲಿ ಈ ಕ್ಷೇತ್ರದಿಂದ ಆಯ್ಕೆಯಾದ ಶಾಸಕರಿಗೆ ಸಚಿವ ಸಹಿತ ಉನ್ನತ ಸ್ಥಾನಗಳು ಸಿಕ್ಕಿರಲಿಲ್ಲ. 2020ರಲ್ಲಿ ಆರು ಬಾರಿ ಕ್ಷೇತ್ರದಲ್ಲಿ ಶಾಸಕರಾಗಿದ್ದ ಎಸ್‌. ಅಂಗಾರ ಅವರನ್ನು ಸಚಿವರನ್ನಾಗಿ ಮಾಡುವ ಮೂಲಕ ಆ ಕೊರತೆ ನೀಗಿತು.

Advertisement

ವೇದಿಕೆ ಸಜ್ಜು !
ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಯ ಟಿಕೆಟ್‌ ಘೋಷಣೆಯಾಗಿದೆ. ಕಾಂಗ್ರೆಸ್‌ನಿಂದ ವಿ. ಕೃಷ್ಣಪ್ಪ, ಬಿಜೆಪಿಯಿಂದ ಭಾಗೀರಥಿ ಮುರುಳ್ಯ ಕಣದಲ್ಲಿದ್ದಾರೆ. ಇಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ಇದ್ದು ಮಡಿಕೇರಿ ನಗರಸಭೆ ಮಾಜಿ ಅಧ್ಯಕ್ಷ ನಂದಕುಮಾರ್‌ ಪಕ್ಷೇತರರಾಗಿ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ. ಆಮ್‌ ಆದ್ಮಿಯಿಂದ ಮಾಜಿ ಶಾಸಕಿ ಕೆ. ಕುಶಲ ಅವರ ಪುತ್ರಿ ಸುಮನಾ ಅಖಾಡದಲ್ಲಿದ್ದಾರೆ.

-  ದಯಾನಂದ ಕಲ್ನಾರು

Advertisement

Udayavani is now on Telegram. Click here to join our channel and stay updated with the latest news.

Next