Advertisement

Karnataka Election: ಕಲ್ಪತರು ನಾಡಲ್ಲಿ ಮೂರೂ ಪಕ್ಷಗಳ ಬಿರುಸಿನ ಹಣಾಹಣಿ

11:50 PM May 01, 2023 | Team Udayavani |

ಕಲ್ಪತರು ನಾಡಿನಲ್ಲಿ ರಾಜಕೀಯ ರಂಗೇರುತ್ತಿದೆ. ಬಿಜೆಪಿ ಸರ್ಕಾರದ ಪ್ರಭಾವಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್‌, ಕಾಂಗ್ರೆಸ್‌ನ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಕ್ಷೇತ್ರಗಳು ಪ್ರತಿಷ್ಠೆಯ ಕ್ಷೇತ್ರಗಳಾಗಿವೆ. 11ವಿಧಾನಸಭಾ ಕ್ಷೇತ್ರ ಹೊಂದಿರುವ ಜಿಲ್ಲೆ ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ನಂತರ ಹಂತ ಹಂತವಾಗಿ ಜೆಡಿಎಸ್‌ ತನ್ನ ಪ್ರಾಬಲ್ಯ ಸಾಧಿಸಿತ್ತಾದರೂ 2018ರ ಚುನಾವಣೆಯಲ್ಲಿ ಬಿಜೆಪಿ ಜಿಲ್ಲೆಯನ್ನು ತನ್ನ ಹತೋಟಿಗೆ ತೆಗೆದುಕೊಳ್ಳುವ ಮೂಲಕ ನೆಲೆಯೂರಿತು. ಈ ಬಾರಿ ಮೂರೂ ಪಕ್ಷಗಳು ತಮ್ಮ ಅಸ್ತಿತ್ವ ಹೆಚ್ಚಿಸಿಕೊಳ್ಳಲು ಭರ್ಜರಿ ಕಾರ್ಯತಂತ್ರ ರೂಪಿಸುತ್ತಿವೆ

Advertisement

ಪಾವಗಡ
ತುಮಕೂರು ಜಿಲ್ಲೆಯ ಗಡಿ ತಾಲೂಕು ಪಾವಗಡ ಮೀಸಲು ಕ್ಷೇತ್ರ. 1952ರಿಂದ ಇಲ್ಲಿಯವರೆಗೆ ಕಾಂಗ್ರೆಸ್‌ 10 ಬಾರಿ ಗೆದ್ದಿದೆ. ಜೆಡಿಎಸ್‌ ನಾಲ್ಕು ಬಾರಿ, ಒಂದು ಬಾರಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಗೆಲುವು ಸಾಧಿಸಿರುವುದು ವಿಶೇಷ. ಈಗ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಜೆಡಿಎಸ್‌ನಿಂದ ಸ್ಪರ್ಧಿಸಿದ್ದು, ಹಾಲಿ ಶಾಸಕ ವೆಂಕಟರಮಣಪ್ಪ ಅವರ ಪುತ್ರ ಜಿಪಂ ಮಾಜಿ ಸದಸ್ಯ ಎಚ್‌.ವಿ. ವೆಂಕಟೇಶ್‌ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಕೃಷ್ಣಾನಾಯಕ ಸ್ಪರ್ಧಿಸಿದ್ದಾರೆ. ಒಟ್ಟು 11 ಅಭ್ಯರ್ಥಿಗಳು ಕಣದಲ್ಲಿದ್ದು, ನೇರ ಸ್ಪರ್ಧೆ ಇರುವುದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ. ಈ ಕ್ಷೇತ್ರದಲ್ಲಿ ದಲಿತರು, ನಾಯಕರು, ಯಾದವರು, ಕುರುಬರು, ಅಲ್ಪಸಂಖ್ಯಾತರ ಮತಗಳಿದ್ದು, ನಾಯಕ, ಯಾದವ, ಕುರುಬ ಸಮುದಾಯದ ಮತಗಳೇ ನಿರ್ಣಾಯಕ.

ಕೊರಟಗೆರೆ
ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಪ್ರತಿನಿಧಿಸುತ್ತಿರುವ ಕೊರಟಗೆರೆ ಕ್ಷೇತ್ರ ರಾಜಕೀಯವಾಗಿ ತೀವ್ರ ಕುತೂಹಲ ಕೆರಳಿಸಿದೆ. 2008ರಲ್ಲಿ ಮೀಸಲು ಕ್ಷೇತ್ರವಾದ ನಂತರ ಪಕ್ಕದ ಮಧುಗಿರಿಯಿಂದ ಇಲ್ಲಿಗೆ ಬಂದ ಡಾ.ಜಿ.ಪರಮೇಶ್ವರ್‌ ಎರಡು ಬಾರಿ ಗೆಲುವು ಸಾಧಿಸಿ, ಮತ್ತೆ ಅದೇ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಈ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ. ಈ ಬಾರಿ ಜೆಡಿಎಸ್‌ನಿಂದ ಮಾಜಿ ಶಾಸಕ ಸುಧಾಕರಲಾಲ್‌, ಬಿಜೆಪಿಯಿಂದ ಐಎಎಸ್‌ ನಿವೃತ್ತ ಅಧಿಕಾರಿ ಅನಿಲ್‌ಕುಮಾರ್‌ ಸ್ಪರ್ಧಿಸಿದ್ದು, 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಬಾರಿ ತ್ರಿಕೋನ ಸ್ಪರ್ಧೆ ಕಂಡು ಬಂದಿದೆ. ಈ ಕ್ಷೇತ್ರದಲ್ಲಿ ಒಕ್ಕಲಿಗರು, ಲಿಂಗಾಯತರು, ದಲಿತರು, ಕುರುಬರು ಮತ್ತು ಇತರೆ ಹಿಂದುಳಿದ ಸಮುದಾಯ, ಅಲ್ಪಸಂಖ್ಯಾತ ಮತಗಳಿವೆ. ದಲಿತರಲ್ಲಿ ಆದಿ ಕರ್ನಾಟಕ ಸಮುದಾಯ ಹೆಚ್ಚಾಗಿ  ಕ್ಷೇತ್ರದಲ್ಲಿದೆ. ಕಣದಲ್ಲಿರುವ ಡಾ.ಜಿ.ಪರಮೇಶ್ವರ್‌ ಆದಿ ದ್ರಾವಿಡ. ಇವರಿಗೆ ಎದುರಾಗಿ ಬಿಜೆಪಿಯಿಂದ ಆದಿಕರ್ನಾಟಕ ಸಮುದಾಯದ ಐಎಎಸ್‌ ನಿವೃತ್ತ ಅಧಿಕಾರಿ ಅನಿಲ್‌ಕುಮಾರ್‌ ಸ್ಪರ್ಧಿಸಿದ್ದು, ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ.

ಮಧುಗಿರಿ
ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕೆ.ಎನ್‌.ರಾಜಣ್ಣ, ಬಿಜೆಪಿಯಿಂದ ನಿವೃತ್ತ ಕೆಎಎಸ್‌ ಅಧಿಕಾರಿ ಎಲ್‌.ಸಿ.ನಾಗರಾಜ, ಜೆಡಿಎಸ್‌ನಿಂದ ಹಾಲಿ ಶಾಸಕ ಎಂ.ವಿ.ವೀರಭದ್ರಯ್ಯ ಸೇರಿ 12 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇಲ್ಲಿ ಕುಂಚಿಟಿಗರೇ ಪ್ರಾಬಲ್ಯ. ಉಳಿದಂತೆ ದಲಿತ, ಹಿಂದುಳಿದ ಅಲ್ಪ ಸಂಖ್ಯಾತ ಮತಗಳೂ ಇವೆ. ನಾಯಕ ಸಮುದಾಯದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎನ್‌ ರಾಜಣ್ಣರಿಗೆ ಪ್ರತಿಸ್ಪರ್ಧಿಯಾಗಿ ಅದೇ ಸಮುದಾಯದ ನಿವೃತ್ತ ಕೆಎಎಸ್‌ ಅಧಿಕಾರಿ ಎಲ್‌.ಸಿ.ನಾಗರಾಜ್‌ ಬಿಜೆಪಿಯಿಂದ ಕಣದಲ್ಲಿದ್ದು, ಮತಬುಟ್ಟಿಗೆ ಕೈ ಇಟ್ಟಿದ್ದಾರೆ.

ಶಿರಾ
2018ರ ಚುನಾವಣೆಯಲ್ಲಿ ಜೆಡಿಎಸ್‌ನ ಬಿ.ಸತ್ಯನಾರಾಯಣ ವಿರುದ್ಧ ಮಾಜಿ ಸಚಿವ ಟಿ.ಬಿ.ಜಯಚಂದ್ರ ಸೋತಿದ್ದರು. ಸತ್ಯನಾರಾಯಣ ಅನಾರೋಗ್ಯದಿಂದ ನಿಧನರಾದ ನಂತರ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಟಿ.ಬಿ.ಜಯಚಂದ್ರ ವಿರುದ್ಧ  ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‌ ಗೌಡ ಗೆಲುವು ಸಾಧಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ  ಹಾಲಿ ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಟಿ.ಬಿ.ಜಯಚಂದ್ರ, ಜೆಡಿಎಸ್‌ನಿಂದ ಆರ್‌.ಉಗ್ರೇಶ್‌ ಸೇರಿ 15 ಮಂದಿ ಕಣದಲ್ಲಿದ್ದಾರೆ. ಒಕ್ಕಲಿಗರು, ಹಿಂದುಳಿದವರು, ಅಲ್ಪ ಸಂಖ್ಯಾತರು  ಹಾಗೂ ವೀರಶೈವರ ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ ಹಿಂದುಳಿದವರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಈ ಕ್ಷೇತ್ರದಲ್ಲೂ  ತ್ರಿಕೋನ ಸ್ಪರ್ಧೆ ಕಂಡು ಬಂದಿದೆ.

Advertisement

ಚಿಕ್ಕನಾಯಕನಹಳ್ಳಿ
ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ 1983ರಲ್ಲಿ ಎಸ್‌.ಜಿ. ರಾಮಲಿಂಗಯ್ಯ ಬಿಜೆಪಿ ಅಭ್ಯರ್ಥಿಯಾಗಿ ಗೆಲವು ಸಾಧಿಸಿ ಗಮನ ಸೆಳೆದಿದ್ದರು. ಆನಂತರ ಸಂಯುಕ್ತ ಜನತಾ ದಳ, ಜೆಡಿಎಸ್‌ ಹೆಚ್ಚು ಅಧಿಕಾರ ಹಿಡಿದಿವೆ. ಈ ಬಾರಿ ಬಿಜೆಪಿಯಿಂದ ಸಚಿವ ಜೆ.ಸಿ.ಮಾಧುಸ್ವಾಮಿ, ಜೆಡಿಎಸ್‌ನಿಂದ ಮಾಜಿ ಶಾಸಕ ಸಿ.ಬಿ.ಸುರೇಶ್‌ ಬಾಬು, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಕೆ.ಎಸ್‌. ಕಿರಣ್‌ ಕುಮಾರ್‌ ಸೇರಿ 13 ಸ್ಪರ್ಧಿಗಳು ಕಣದಲ್ಲಿದ್ದಾರೆ. ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳ ನಡುವೆ ತ್ರಿಕೋನ ಫೈಟ್‌ ಇದೆ. ವೀರಶೈವರು, ದಲಿತರು, ಹಿಂದುಳಿದವರು, ಅಲ್ಪ ಸಂಖ್ಯಾತರು ಹಾಗೂ ಒಕ್ಕಲಿಗರ ಪ್ರಾಬಲ್ಯವಿದೆ. ಮೂರೂ ಪಕ್ಷಗಳ ನಡುವೆ ತೀವ್ರ ಪೈಪೋಟಿ ಎದುರಾಗಿದೆ. ಹಲವು  ವರ್ಷಗಳಿಂದ ಬಿಜೆಪಿಯಲ್ಲಿದ್ದ ಕೆ.ಎಸ್‌.ಕಿರಣ್‌ ಕುಮಾರ್‌ ಈಗ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ.

ಗುಬ್ಬಿ
ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಿಡಿತವೇ ಹೆಚ್ಚು. ಸ್ವಾತಂತ್ರಾéನಂತರ ಎರಡು ಬಾರಿ ಬಿಟ್ಟು ಉಳಿದೆಲ್ಲಾ ಸಂದರ್ಭದಲ್ಲೂ ಕಾಂಗ್ರೆಸ್‌ ಗೆದ್ದಿದೆ. ಜೆಡಿಎಸ್‌ಗೆ ರಾಜೀನಾಮೆ ನೀಡಿರುವ ಎಸ್‌.ಆರ್‌.ಶ್ರೀನಿವಾಸ್‌ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್‌ನಿಂದ ನಾಗರಾಜು, ಬಿಜೆಪಿಯಿಂದ ಎಸ್‌.ಡಿ ದಿಲೀಪ್‌ ಕುಮಾರ್‌ ಸೇರಿ 10 ಮಂದಿ ಕಣದಲ್ಲಿದ್ದಾರೆ. ಇಲ್ಲಿ ಒಕ್ಕಲಿಗರು ಮತ್ತು ಲಿಂಗಾಯತರು ಪ್ರಬಲವಾಗಿದ್ದು ದಲಿತ, ಹಿಂದುಳಿದ ವರ್ಗಗಳ ಮತಗಳು ನಿರ್ಣಾಯಕವಾಗಿವೆ. ಅಲ್ಪಸಂಖ್ಯಾತ ಮತಗಳೂ ಚುನಾವಣೆಯಲ್ಲಿ  ಪ್ರಮುಖ ಪಾತ್ರ ವಹಿಸಲಿವೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಅಭ್ಯರ್ಥಿಗಳು ಒಕ್ಕಲಿಗರು. ಈ ಮತಗಳು ಇಬ್ಬರ ನಡುವೆ ಹಂಚಿಹೋಗುವ ಸಾಧ್ಯತೆ ಇದೆ. ಬಿಜೆಪಿಯಿಂದ ಲಿಂಗಾಯತ ಸಮುದಾಯದ ದಿಲೀಪ್‌ ಕುಮಾರ್‌ ಇದ್ದು, ಆ ಸಮುದಾಯದ ಮತಗಳನ್ನು ಪಡೆಯಲಿದ್ದಾರೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿರುವ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮತಗಳು ಯಾರ ಪಾಲಾಗಲಿವೆ ಎಂಬುದು ಕುತೂಹಲ ಮೂಡಿಸಿದೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಕಂಡು ಬಂದಿದೆ.

ತಿಪಟೂರು
ಕೊಬ್ಬರಿಗೆ ಹೆಸರುವಾಸಿಯಾಗಿರುವ ಈ ಕ್ಷೇತ್ರ ಮೂರು ಪಕ್ಷಗಳಿಗೂ ಒಲಿದಿದೆ. ಈಗ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯಿಂದ ಸಚಿವ ಬಿ.ಸಿ.ನಾಗೇಶ್‌, ಕಾಂಗ್ರೆಸ್‌ನಿಂದ ಕೆ.ಷಡಾಕ್ಷರಿ, ಜೆಡಿಎಸ್‌ನಿಂದ ಟಿ.ಕೆ.ಶಾಂತಕುಮಾರ್‌ ಸೇರಿ 12 ಮಂದಿ ಕಣದಲ್ಲಿದ್ದಾರೆ. ವೀರಶೈವರೇ ಪ್ರಬಲವಾಗಿರುವ ಈ ಕ್ಷೇತ್ರದಲ್ಲಿ ದಲಿತರು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಮತ್ತು ಕುರುಬರ ಮತಗಳು ಪ್ರಮುಖ ಪಾತ್ರ ವಹಿಸಲಿವೆ. ಈ ಕ್ಷೇತ್ರದಲ್ಲೂ ತ್ರಿಕೋನ ಸ್ಪರ್ಧೆ ಇದೆ.

ಕುಣಿಗಲ್‌
ನೀರಾವರಿ ಹೋರಾಟಗಾರ ವೈ.ಕೆ. ರಾಮಯ್ಯ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಕುಣಿಗಲ್‌. ಈಗ ಇಲ್ಲಿ  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಂಬಂಧಿ ಹಾಲಿ ಶಾಸಕ ಡಾ.ಎಚ್‌.ಡಿ.ರಂಗನಾಥ್‌ ಕಾಂಗ್ರೆಸ್‌ ಅಭ್ಯರ್ಥಿ. ಬಿಜೆಪಿಯಿಂದ ಸತತವಾಗಿ ಸೋಲು ಕಂಡಿದ್ದ ಡಿ.ಕೃಷ್ಣಕುಮಾರ್‌ ಮತ್ತು ಜೆಡಿಎಸ್‌ ಅಭ್ಯರ್ಥಿಯಾಗಿ ಮಾಜಿ ಸಚಿವ ಡಿ.ನಾಗರಾಜಯ್ಯ ಅವರ ಪುತ್ರ ಜಿ.ಪಂ. ಮಾಜಿ ಅಧ್ಯಕ್ಷ ಡಾ.ಬಿ.ಎನ್‌.ರವಿ, ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಬಿ.ಬಿ.ರಾಮಸ್ವಾಮಿ ಗೌಡ ಸೇರಿದಂತೆ 8 ಮಂದಿ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಒಕ್ಕಲಿಗರೇ ಪ್ರಾಬಲ್ಯ. ಉಳಿದಂತೆ ಹಿಂದುಳಿದ ವರ್ಗ ದಲಿತ ಸಮದಾಯ, ಅಲ್ಪಸಂಖ್ಯಾತ ಮತಗಳೂ ಹೆಚ್ಚಾಗಿವೆ. ಮೂರೂ ಪಕ್ಷಗಳ ಅಭ್ಯರ್ಥಿಗಳ ನಡುವೆ ಹಣಾಹಣಿ ಜೋರಾಗಿದೆ.

ತುರುವೇಕೆರೆ
ತುರುವೇಕೆರೆ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆ. ಅನಂತರ ಅದು ಜನತಾ ಪಕ್ಷ ಮತ್ತು ಜೆಡಿಎಸ್‌ನ ತೆಕ್ಕೆಗೆ ಬಂತು. 1999ರಲ್ಲಿ ಬಿಜೆಪಿಯಿಂದ ಎಂ.ಡಿ. ಲಕ್ಷಿ¾à ನಾರಾಯಣ್‌ ಗೆಲುವು ಸಾಧಿಸಿದ್ದರು. ನಂತರ ಈ ಕ್ಷೇತ್ರ ಜೆಡಿಎಸ್‌ನ ಭದ್ರ ಕೋಟೆಯಾಗಿತ್ತು, 2008ರಲ್ಲಿ ನಟ ಜಗ್ಗೇಶ್‌ ಕಾಂಗ್ರೆಸ್‌ ನಿಂದ ಗೆಲುವು ಸಾಧಿಸಿ ಆಪರೇಷನ್‌ ಕಮಲದ ಮೂಲಕ ಬಿಜೆಪಿ ಸೇರಿದರು. ನಂತರ ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ನ ಎಂ.ಟಿ. ಕೃಷ್ಣಪ್ಪ ಶಾಸಕರಾದರು. ಅಲ್ಲಿಂದ ಎಂ.ಟಿ. ಕೃಷ್ಣಪ್ಪ ಕ್ಷೇತ್ರದಲ್ಲಿ ಹಿಡಿತ ಸಾಧಿತೊಡಗಿದರು. 2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಮಸಾಲೆ ಜಯರಾಮ್‌ ಗೆಲುವು ಸಾಧಿಸಿದರು. ಈಗಲೂ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಮಸಾಲೆ ಜಯರಾಮ್‌, ಕಾಂಗ್ರೆಸ್‌ನಿಂದ ಬಿ.ಎಂ.ಕಾಂತರಾಜು, ಜೆಡಿಎಸ್‌ನಿಂದ ಎಂ.ಟಿ.ಕೃಷ್ಣಪ್ಪ ಸೇರಿ 11 ಮಂದಿ ಕಣದಲ್ಲಿದ್ದಾರೆ. ಇಲ್ಲಿ ಒಕ್ಕಲಿಗರ ಪ್ರಾಬಲ್ಯವಿದ್ದರೂ, ವೀರಶೈವ ಮತಗಳು, ಹಿಂದುಳಿದ, ಅಲ್ಪಸಂಖ್ಯಾತ ದಲಿತ ಮತಗಳು ನಿರ್ಣಾಯಕವಾಗಲಿವೆ.

ತುಮಕೂರು ನಗರ
ಸೊಗಡು ಎಸ್‌. ಶಿವಣ್ಣ ಅವರು ನಿರಂತರವಾಗಿ ನಾಲ್ಕು ಬಾರಿ ಗೆಲವು ಸಾಧಿಸುವ ಮೂಲಕ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯಾಗಿಸಿದ್ದರು. 2013ರಲ್ಲಿ ಬಿಜೆಪಿ-ಕೆಜೆಪಿ ನಡುವೆ ಮತ ವಿಭಜನೆಯಾಗಿ ಕಾಂಗ್ರೆಸ್‌ ಗೆಲುವು ಸಾಧಿಸಿತ್ತು. 2018ರಲ್ಲಿ ಇಲ್ಲಿ ಬಿಜೆಪಿಯ ಜ್ಯೋತಿ ಗಣೇಶ್‌ ಗೆದ್ದಿದ್ದರು. ಈಗಲೂ ಬಿಜೆಪಿಯಿಂದ ಶಾಸಕ ಜ್ಯೋತಿ ಗಣೇಶ್‌, ಕಾಂಗ್ರೆಸ್‌ನಿಂದ ಇಕ್ಬಾಲ್‌ ಅಹಮದ್‌, ಜೆಡಿಎಸ್‌ನಿಂದ ಎನ್‌.ಗೋವಿಂದರಾಜು, ಪಕ್ಷೇತರ ಅಭ್ಯರ್ಥಿಯಾಗಿ ಸೊಗಡು ಎಸ್‌. ಶಿವಣ್ಣ, ಜೆಡಿಎಸ್‌ ಬಂಡಾಯ ಅಭ್ಯರ್ಥಿಯಾಗಿ ನರಸೇಗೌಡ ಸೇರಿ 14 ಮಂದಿ ಕಣದಲ್ಲಿದ್ದಾರೆ. ಇಲ್ಲಿ ವೀರಶೈವರು ಮತ್ತು ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿದ್ದಾರೆ. ಉಳಿದಂತೆ ದಲಿತರು ಹಿಂದುಳಿದ ವರ್ಗ, ಒಕ್ಕಲಿಗರು, ಅಲ್ಪಸಂಖ್ಯಾತರು ನಿರ್ಣಯಕವಾಗಲಿದ್ದಾರೆ. ಇಲ್ಲಿಯೂ  ಬಿಜೆಪಿ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆಯೇ ಬಿರುಸಿನ ಪೈಪೋಟಿ ಕಂಡು ಬಂದಿದೆ.

ತುಮಕೂರು ಗ್ರಾಮಾಂತರ
ಈ ಕ್ಷೇತ್ರದಲ್ಲಿ 2008 ಮತ್ತು 2013ರಲ್ಲಿ ಬಿಜೆಪಿಯ ಬಿ.ಸುರೇಶ್‌ಗೌಡ ಗೆದ್ದಿದ್ದರೆ, 2018ರಲ್ಲಿ ಜೆಡಿಎಸ್‌ನ ಡಿ.ಸಿ.ಗೌರಿಶಂಕರ್‌ ಜಯಗಳಿಸಿದ್ದರು. ಈಗ ಹಾಲಿ ಶಾಸಕ ಡಿ.ಸಿ.ಗೌರಿಶಂಕರ್‌, ಬಿಜೆಪಿಯಿಂದ ಮಾಜಿ ಶಾಸಕ ಬಿ.ಸುರೇಶ್‌ ಗೌಡ, ಕಾಂಗ್ರೆಸ್‌ನಿಂದ ಜಿ.ಎಚ್‌.ಷಣ್ಮಖಪ್ಪ ಸೇರಿ 13 ಮಂದಿ ಕಣದಲ್ಲಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಡಿ.ಸಿ.ಗೌರಿಶಂಕರ್‌ ಮತ್ತು ಬಿಜೆಪಿಯ ಬಿ.ಸುರೇಶ್‌ ಗೌಡ ಇಬ್ಬರೂ ಭರ್ಜರಿ ಪ್ರಚಾರ ನಡೆಸಿ ಮತದಾರರನ್ನು ಸೆಳೆಯುವಲ್ಲಿ ತಲ್ಲೀನರಾಗಿದ್ದಾರೆ. ಈ ಕ್ಷೇತ್ರದಲ್ಲಿ ಒಕ್ಕಲಿಗರದ್ದೇ ಪ್ರಾಬಲ್ಯ. ಉಳಿದಂತೆ ವೀರಶೈವರ ಮತ ನಿರ್ಣಾಯಕ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತ ಮತಗಳೂ ಪ್ರಮುಖ ಪಾತ್ರವಹಿಸಲಿವೆ. ಇಲ್ಲಿ ಬಿಜೆಪಿ, ಜೆಡಿಎಸ್‌ ನಡುವೆ ನೇರ ಹಣಾಹಣಿ ಇದೆ.

ಈಗಿನ ಬಲಾಬಲ
ಬಿಜೆಪಿ – 5
ಕಾಂಗ್ರೆಸ್‌ -3
ಜೆಡಿಎಸ್‌ – 3

-ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next