Advertisement

ಸಂತೋಷ್‌ ಸಾವಿಗೆ ಸರಕಾರ,ಈಶ್ವರಪ್ಪ ಕಾರಣ; ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆರೋಪ

12:34 AM Apr 14, 2022 | Team Udayavani |

ಬೆಂಗಳೂರು: ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆಗೆ ರಾಜ್ಯ ಸರಕಾರ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರೇ ಕಾರಣ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆರೋಪಿಸಿದ್ದಾರೆ.

Advertisement

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಕಮಿಷನ್‌ಗೆ ಕಡಿವಾಣ ಹಾಕದಿದ್ದರೆ 15 ದಿನಗಳಲ್ಲಿ 6 ಸಚಿವರು ಮತ್ತು 25 ಶಾಸಕರಿಗೆ ಕಮಿಷನ್‌ ನೀಡಿರುವ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮೇ 25ರಿಂದ ಕಾಮಗಾರಿ ಸ್ಥಗಿತ
ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ಅಥವಾ ಹೈಕೋರ್ಟಿನ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಈಶ್ವರಪ್ಪರ ರಾಜೀನಾಮೆ ಪಡೆದು ಕಮಿಷನ್‌ ದಂಧೆಗೆ ಕಡಿವಾಣ ಹಾಕಬೇಕು. ಕೂಡಲೇ ಗುತ್ತಿಗೆ ಹಣ ಬಿಡುಗಡೆ ಮಾಡಬೇಕು. ಜತೆಗೆ ಸಂತೋಷ್‌ ಪತ್ನಿಗೆ 2 ಕೋಟಿ ರೂ. ಪರಿಹಾರ ಹಾಗೂ ಸರಕಾರಿ ನೌಕರಿ ನೀಡಬೇಕು. ಇಲ್ಲದಿದ್ದರೆ ಮೇ 25ರಿಂದ ರಾಜ್ಯಾದ್ಯಂತ ಒಂದು ತಿಂಗಳ ಕಾಲ ಎಲ್ಲ ರೀತಿಯ ಕಾಮಗಾರಿಗಳನ್ನೂ ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಆರೋಗ್ಯ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಕಮಿಷನ್‌ ಕಾರಣದಿಂದಾಗಿ ಕಾಮಗಾರಿಗಳೂ ಕಳಪೆಯಿಂದ ಕೂಡಿವೆ. ಶಾಸಕರ ಮಕ್ಕಳೂ ಗುತ್ತಿಗೆದಾರರಾಗಿದ್ದಾರೆ. ಇಷ್ಟೆಲ್ಲ ಆದರೂ ಮುಖ್ಯಮಂತ್ರಿ ಬೊಮ್ಮಾಯಿ  ನಮ್ಮನ್ನು ಕರೆದು ಮಾತನಾಡಲಿಲ್ಲ. ಹೀಗಾಗಿಯೇ ಪ್ರಧಾನಿಗೆ ಪತ್ರ ಬರೆದೆವು ಎಂದರು.

ರಾಜ್ಯಾದ್ಯಂತ ಗುತ್ತಿಗೆದಾರರಿಂದ ತೀವ್ರ ಆಕ್ರೋಶ
ಸಂತೋಷ್‌ ಸಾವಿನ ಬೆನ್ನಲ್ಲೇ ರಾಜ್ಯಾದ್ಯಂತ ಗುತ್ತಿಗೆದಾರರ ಕಡೆಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಧಾರವಾಡದಲ್ಲಿ ಮಾತನಾಡಿದ ಉತ್ತರ ಕರ್ನಾಟಕ ಸಿವಿಲ್‌ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಶ್‌ ಪಾಟೀಲ್‌, ಈಶ್ವರಪ್ಪ ಅವರನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.  ಬಹಳ ಕಾಲದಿಂದ ಈ ಕಮಿಷನ್‌ ಪದ್ಧತಿ ಇದ್ದು, ಈಗ ಅದರ ಪ್ರಮಾಣ ಹೆಚ್ಚಳವಾಗಿರುವುದೂ ಸತ್ಯ. ಧಾರವಾಡ ಜಿಲ್ಲೆಯಲ್ಲಿ ಈ ಹಿಂದೆ ಶೇ.2 ಇದ್ದ ಕಮಿಷನ್‌ ಈಗ  ಶೇ.5ಕ್ಕೆ ಹೆಚ್ಚಳವಾಗಿದೆ ಎಂದು ಅವರು ತಿಳಿಸಿದ್ದಾರೆ.  ಕಲಬುರಗಿಯಲ್ಲೂ ಶೇ.10 ಪರ್ಸೆಂಟ್‌ ತೆಗೆದುಕೊಂಡ ಬಳಿಕವೇ ಶಾಸಕರು ಭೂಮಿಪೂಜೆ ಮಾಡುತ್ತಾರೆ ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗನ್ನಾಥ ಶೇಗಜಿ ಧಂಗಾಪುರ ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next