Advertisement

ಆರ್ಥಿಕ ಚೇತರಿಕೆ ಜತೆ ಅಭಿವೃದ್ಧಿ ಮೂಲಮಂತ್ರ: ಸಾಲದ ಮೂಲಕ ಆರ್ಥಿಕ ಸಂಕಷ್ಟ ನಿರ್ವಹಣೆ ಪ್ರಯತ್ನ

03:17 AM Mar 09, 2021 | Team Udayavani |

ಬೆಂಗಳೂರು: ಕೋವಿಡ್‌ನ‌ ದೀರ್ಘಾವಧಿ ಅಡ್ಡ ಪರಿಣಾಮದಿಂದ ಕಂಗೆಟ್ಟಿರುವ ಜನರಿಗೆ ತೆರಿಗೆ ಹೊರೆ ಹೊರಿಸಲು ಬಯಸದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ದೊಡ್ಡ ಮೊತ್ತದ ಸಾಲ ಪಡೆಯುವ ಮೂಲಕ ಆರ್ಥಿಕ ಸಂಕಷ್ಟದ ಸ್ಥಿತಿಯನ್ನು ನಿಭಾಯಿಸಲು ಪ್ರಯತ್ನ ನಡೆಸಿದ್ದಾರೆ.

Advertisement

ಕೋವಿಡ್‌ ಹಿನ್ನೆಲೆಯಲ್ಲಿ ಸ್ವಂತ ತೆರಿಗೆ ಮೂಲದಿಂದ ಹೆಚ್ಚುವರಿ ಆದಾಯ ಸಂಗ್ರಹ ನಿರೀಕ್ಷೆ ಖಾತರಿಯಿಲ್ಲದ ಕಾರಣ ಬರೋಬ್ಬರಿ 71,332 ಕೋಟಿ ರೂ. ಸಾಲ ಪಡೆಯುವ ಗುರಿಯನ್ನು ಬಜೆಟ್‌ನಲ್ಲಿ ಹೊಂದಲಾಗಿದೆ. ಅಬಕಾರಿ ತೆರಿಗೆ ಹೊರತುಪಡಿಸಿದರೆ ಉಳಿದ ಮೂಲದಿಂದ ನಿರೀಕ್ಷಿತ ಆದಾಯ ಸಂಗ್ರಹ ಅಸಾಧ್ಯವೆಂಬುದು ಸರ್ಕಾರಕ್ಕೆ ಮನವರಿಕೆಯಾದಂತಿದೆ. ಆ ಹಿನ್ನೆಲೆಯಲ್ಲಿ ಮುಂದಿನ ಹಣಕಾಸು ವರ್ಷದಲ್ಲಿ ಕೆಲ ಸ್ವಂತ ತೆರಿಗೆ ಮೂಲದ ಆದಾಯ ಗುರಿಯನ್ನೇ ಇಳಿಕೆ ಮಾಡಿದರೆ ಕೆಲ ಆದಾಯದ ಗುರಿಯನ್ನು ಯಥಾಸ್ಥಿತಿಯಲ್ಲೇ ಉಳಿಸಿಕೊಂಡಿರುವುದು ಕಾಣುತ್ತದೆ.

ವಾಣಿಜ್ಯ ತೆರಿಗೆ ಗುರಿ ಇಳಿಕೆ: ಸರ್ಕಾರದ ಪ್ರಮುಖ ಆದಾಯ ಮೂಲವಾದ ವಾಣಿಜ್ಯ ತೆರಿಗೆಯಿಂದ 76,473 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಆದರೆ ಪ್ರಸಕ್ತ ಸಾಲಿನಲ್ಲಿ 82,443 ಕೋಟಿ ರೂ. ಸಂಗ್ರಹ ಗುರಿ ಹೊಂದಲಾಗಿತ್ತು. ಅಂದರೆ, 2020-21ನೇ ಸಾಲಿಗೆ ಹೋಲಿಸಿದರೆ 2021-22ನೇ ಸಾಲಿನಲ್ಲಿ ವಾಣಿಜ್ಯ ತೆರಿಗೆ ಆದಾಯ ಗುರಿಯಲ್ಲಿ 5,970 ಕೋಟಿ ರೂ. ಇಳಿಕೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಫೆಬ್ರವರಿ ಅಂತ್ಯದ ಹೊತ್ತಿಗೆ 71,833 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹವಾಗಿದೆ.

ಅಬಕಾರಿ ತೆರಿಗೆ ಗುರಿ ಹೆಚ್ಚಳ: ಪ್ರಸಕ್ತ ಸಾಲಿನಲ್ಲಿ 22,700 ಕೋಟಿ ರೂ. ಅಬಕಾರಿ ತೆರಿಗೆ ಆದಾಯ ನಿರೀಕ್ಷಿಸಲಾಗಿದ್ದು, ಫೆಬ್ರವರಿ ಅಂತ್ಯಕ್ಕೆ 20,900 ಕೋಟಿ ರೂ. ಸಂಗ್ರಹವಾಗಿದೆ. ಮಾರ್ಚ್‌ ಅಂತ್ಯದೊಳಗೆ ಗುರಿ ಮೀರಿ ಸಾಧನೆಯಾಗುವ ವಿಶ್ವಾಸ ಮೂಡಿಸಿದೆ. ಆ ಹಿನ್ನೆಲೆಯಲ್ಲಿ 2021-22ನೇ ಸಾಲಿನಲ್ಲಿ ಅಬಕಾರಿ ತೆರಿಗೆ ಆದಾಯದಿಂದ 24,580 ಕೋಟಿ ರೂ. ನಿರೀಕ್ಷೆ ಹೊಂದಲಾಗಿದೆ.

8123 ಕೋಟಿ ರೂ. ಇಳಿಕೆ!: ಸ್ವಂತ ತೆರಿಗೆ ರಾಜಸ್ವದಲ್ಲಿ 3905 ಕೋಟಿ ರೂ., ಕೇಂದ್ರದ ತೆರಿಗೆ ಆದಾಯದಲ್ಲಿ 4318 ಕೋಟಿ ರೂ. ಇಳಿಕೆಯಾಗುವ ನಿರೀಕ್ಷೆ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿಗೆ ಹೋಲಿಸಿದರೆ ಮುಂದಿನ ಹಣಕಾಸು ವರ್ಷದಲ್ಲಿ ಸ್ವಂತ ರಾಜಸ್ವ ಮೂಲದಿಂದ 8123 ಕೋಟಿ ರೂ. ಇಳಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.

Advertisement

ಒಟ್ಟು ಜಮೆ 2.43 ಲಕ್ಷ ಕೋಟಿ ರೂ.
ಮುಂದಿನ ಹಣಕಾಸು ವರ್ಷದಲ್ಲಿ 1,72,271 ಕೋಟಿ ರೂ. ರಾಜಸ್ವ, 71,332 ಕೋಟಿ ರೂ. ಸಾಲದ ಮೂಲಕ ಒಟ್ಟು 2,43,734 ಕೋಟಿ ರೂ. ಜಮೆಯಾಗುವ ಅಂದಾಜಿದೆ. ಇದರಲ್ಲಿ 1,87,405 ಕೋಟಿ ರೂ. ರಾಜಸ್ವ ವೆಚ್ಚ, 44,237 ಕೋಟಿ ರೂ. ಬಂಡವಾಳ ವೆಚ್ಚ ಹಾಗೂ ಸಾಲದ ಮರುಪಾವತಿಗೆ 14,565 ಕೋಟಿ ರೂ. ಸೇರಿದಂತೆ ಒಟ್ಟು ವೆಚ್ಚ 2,46,207 ಕೋಟಿ ರೂ. ಎಂಬುದಾಗಿ ಅಂದಾಜಿಸಲಾಗಿದೆ.

ಸಾರಿಗೆ ತೆರಿಗೆ ಗುರಿ ತುಸು ಏರಿಕೆ: ಸಾರಿಗೆ ತೆರಿಗೆ ಮೂಲದಿಂದ 7115 ಕೋಟಿ ರೂ. ಸಂಗ್ರಹ ಗುರಿಯಿದ್ದರೂ ಜನವರಿ ಅಂತ್ಯಕ್ಕೆ ಸಂಗ್ರಹವಾಗಿರುವುದು 4294 ಕೋಟಿ ರೂ. ಮಾತ್ರ. ಹಾಗಿದ್ದರೂ ಮುಂದಿನ ಹಣಕಾಸು ವರ್ಷದಲ್ಲಿ 7515 ಕೋಟಿ ರೂ. ಸಾರಿಗೆ ತೆರಿಗೆ ಆದಾಯ ನಿರೀಕ್ಷಿಸಿರುವುದು ಅಚ್ಚರಿ ಮೂಡಿಸಿದೆ.

ಸಂಪನ್ಮೂಲ ಕ್ರೋಡೀಕರಣ: 2021-22ನೇ ಸಾಲಿನಲ್ಲಿ ಜಿಎಸ್‌ಟಿ ಪರಿಹಾರ ಸೇರಿದಂತೆ ರಾಜ್ಯದ ಒಟ್ಟು ಸ್ವಂತ ತೆರಿಗೆ ರಾಜಸ್ವ 1,24,202 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ. ತೆರಿಗೆಯೇತರ ರಾಜಸ್ವಗಳಿಂದ 8,258 ಕೋಟಿ ರೂ., ಕೇಂದ್ರ ತೆರಿಗೆ ಪಾಲಿನಿಂದ 24,273 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರದ ಸಹಾಯಾನುದಾನದಿಂದ 15,538 ಕೋಟಿ ರೂ. ಸಂಗ್ರಹ ನಿರೀಕ್ಷೆ ಹೊಂದಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next