Advertisement

ಶತಮಾನೋತ್ಸವದ ಸಂಭ್ರಮದಲ್ಲಿ ಕರ್ಣಾಟಕ ಬ್ಯಾಂಕ್‌

12:03 AM Feb 18, 2024 | Team Udayavani |

ರಾಜ್ಯದ ಕರಾವಳಿಯಲ್ಲಿ 100 ವರ್ಷಗಳ ಹಿಂದೆ ಸ್ಥಾಪನೆಯಾದ ಕರ್ಣಾಟಕ ಬ್ಯಾಂಕ್‌ ಈಗ ಶತಮಾನೋತ್ಸವದ ಸಡಗರದದಲ್ಲಿದೆ. ಫೆ.18ರ ರವಿವಾರದಂದು ಮಂಗಳೂರಿನಲ್ಲಿ ಕರ್ಣಾಟಕ ಬ್ಯಾಂಕ್‌ನ
ಶತಮಾನೋತ್ಸವದ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕರ್ಣಾಟಕ ಬ್ಯಾಂಕ್‌ ನಡೆದುಬಂದ ಹಾದಿ, ಬೆಳವಣಿಗೆ, ಸಾಧನೆಗಳತ್ತ ಒಂದು ಹಿನ್ನೋಟ ಇಲ್ಲಿದೆ.

Advertisement

“ಬ್ಯಾಂಕ್‌ಗಳ ತೊಟ್ಟಿಲು’ ಎಂದೇ ಪ್ರಸಿದ್ಧವಾದ ಕರ್ನಾಟಕದ ಕರಾವಳಿಯಲ್ಲಿ “ಕರ್ಣಾಟಕ ಬ್ಯಾಂಕ್‌’ 1924ರ ಫೆಬ್ರವರಿ 18ರಂದು ಉದಯವಾಯಿತು. ಆಗಷ್ಟೇ ಕರಾವಳಿಯಲ್ಲಿ ಸ್ವದೇಶೀ ಚಳವಳಿಯ ಗಾಳಿ ಬಲವಾಗಿ ಬೀಸತೊಡಗಿತ್ತು. ಮಹಾತ್ಮಾ ಗಾಂಧಿಯವರು ಮಂಗಳೂರಿಗೆ ಬಂದ ಮೇಲೆ ಚಳವಳಿ ಇನ್ನಷ್ಟು ತೀವ್ರವಾಯಿತು. ಆಲೂರು ವೆಂಕಟರಾಯರ ನೇತೃತ್ವದಲ್ಲಿ “ಕರ್ಣಾಟಕ ಏಕೀಕರಣ’ದ ಹೊಂಗನಸು ಕೂಡ ಬಲವಾಗತೊಡಗಿತ್ತು. ಅದೇ ಸ್ಫೂರ್ತಿಯಲ್ಲಿ ಜನಿಸಿದ ಬ್ಯಾಂಕ್‌ “ಕರ್ಣಾಟಕ ಬ್ಯಾಂಕ್‌’ ಎಂದೇ ಹೆಸರಾಯಿತು.

ಮಂಗಳೂರು ನಗರದ ಪ್ರಸಿದ್ಧ ವಕೀಲರಾಗಿದ್ದ ಬಿ.ಆರ್‌. ವ್ಯಾಸರಾಯ ಆಚಾರ್‌ ಅವರು ಇದರ ಸಂಸ್ಥಾ ಪಕ ಅಧ್ಯಕ್ಷರು. ಉಳಿದಂತೆ ನೆಲ್ಲಿಕಾಯಿ ವೆಂಕಟ್ರಾವ್‌, ಪೇಜಾವರ ನಾರಾಯಣಾಚಾರ್ಯ, ಕಲ್ಮಾಡಿ ಲಕ್ಷ್ಮೀ ನಾರಾಯಣ ರಾವ್‌, ಪಾಂಗಾಳ ಸುಬ್ಬರಾವ್‌, ಉಡುಪಿ ವೆಂಕಟ ರಾವ್‌, ಶೇಷ ಭಟ್‌ ಭಿಡೆ, ನರಿಕೊಂಬು ರಾಮ ರಾವ್‌ ಮತ್ತು ಕಕ್ಕುಂಜೆ ಸದಾಶಿವ ಅಡಿಗ ಆಡಳಿತ ಮಂಡಳಿಯ ಇತರ ಸದಸ್ಯರು. ಐದು ಲಕ್ಷ ರೂ.ಗಳ ಅಧಿಕೃತ ಬಂಡವಾಳ ಮತ್ತು 11, 580ರೂ. ಪಾವತಿ ಯಾದ ಬಂಡವಾಳದಲ್ಲಿ ಬ್ಯಾಂಕ್‌ ಸ್ಥಾಪನೆಗೊಂಡಿತು. ಅದರ ಮೊದಲ ಶಾಖೆ ಮಂಗಳೂರಿನ ಡೊಂಗರಕೇರಿ ಯಲ್ಲಿ ಆರಂಭವಾಯಿತು. ಜನಮನದ ಆಕಾಂಕ್ಷೆಗಳಿಗೆ ಸ್ಪಂದಿಸಿದ ಬ್ಯಾಂಕ್‌ ಬಹು ಬೇಗನೇ ಪ್ರಸಿದ್ಧಿಯನ್ನು ಪಡೆಯಿತು. ಮದರಾಸು (1930), ಉಡುಪಿ (1934), ಕುಂದಾಪುರ (1937), ಪುತ್ತೂರು ಮತ್ತು ಕಾರ್ಕಳ (1944), ಬೆಂಗಳೂರು (1947) ಹೀಗೆ ಬ್ಯಾಂಕ್‌ನ ಶಾಖಾ ಜಾಲ ವಿಸ್ತಾರಗೊಳ್ಳುತ್ತಾ ಸಾಗಿ ಇದೀಗ ನೂರನೆಯ ವರ್ಷಾ ಚರಣೆಯ ಸಂದರ್ಭದಲ್ಲಿ ದೇಶದಾದ್ಯಂತ ಇದರ ಒಟ್ಟು ಶಾಖೆಗಳ ಸಂಖ್ಯೆ 915ನ್ನು ತಲುಪಿದೆ! 2023ರ ಡಿಸೆಂಬರ್‌ಗೆ ಬ್ಯಾಂಕ್‌ನ ಒಟ್ಟು ಠೇವಣಿ 92,195 ಕೋಟಿ ರೂ. ಮತ್ತು ಒಟ್ಟು ಮುಂಗಡ 69,741 ಕೊಟಿ ರೂ.ಗಳಿಗೆ ಏರಿ 1,032 ಕೋಟಿ ರೂ.ಗಳ ಗರಿಷ್ಠ ನಿವ್ವಳ ಲಾಭವನ್ನು ದಾಖಲಿಸಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌, 1958ರಲ್ಲಿ ಕರ್ಣಾಟಕ ಬ್ಯಾಂಕ್‌ ಅನ್ನು ಅನುಸೂಚಿತ ಬ್ಯಾಂಕ್‌ ಎಂದು ಪರಿಗಣಿಸಿತು. ಆ ವರ್ಷವೇ ಕೆ. ಸೂರ್ಯ ನಾರಾಯಣ ಅಡಿಗರು ಬ್ಯಾಂಕ್‌ನ ಅಧ್ಯಕ್ಷತೆಯನ್ನು ವಹಿಸಿಕೊಂಡರು. ಗಾಂಧೀ ವಿಚಾರಧಾರೆಗಳಲ್ಲಿ ಆಸಕ್ತರಾಗಿದ್ದ ಅಡಿಗರು ಬ್ಯಾಂಕ್‌ನ ಸರ್ವಾಂಗೀಣ ಅಭಿವೃದ್ದಿಗೆ ಕಟಿಬದ್ಧರಾದರು. ಗ್ರಾಮೀಣಾಭಿವೃದ್ದಿಯ ಕಡೆಗೆ ಆದ್ಯ ಗಮನವನ್ನು ಹರಿಸಿದ ಅವರು ಸಮಾಜದ ಕೆಳ ಮತ್ತು ಮಧ್ಯಮ ವರ್ಗದ ಜನರ ಅಭ್ಯುದಯದ ಕನಸು ಕಂಡರು. ಏತನ್ಮಧ್ಯೆ ಮೂರು ಸಣ್ಣ ಬ್ಯಾಂಕ್‌ಗಳಾದ ಶೃಂಗೇರಿಯ ಶ್ರೀಶಾರದಾ ಬ್ಯಾಂಕ್‌, ಲಿ. (1960), ಚಿತ್ರದುರ್ಗದ ಚಿತ್ತಲದುರ್ಗ ಬ್ಯಾಂಕ್‌ ಲಿ. (1964) ಮತ್ತು ಹುಬ್ಬಳ್ಳಿಯ ಬ್ಯಾಂಕ್‌ ಆಫ್ ಕರ್ನಾಟಕ (1966), ಕರ್ಣಾಟಕ ಬ್ಯಾಂಕ್‌ನೊಂದಿಗೆ ವಿಲೀನವಾದವು. ತನ್ಮೂಲಕ ಬ್ಯಾಂಕ್‌ ಸುಭದ್ರ ತಳಪಾಯವನ್ನು ಹೊಂದಿತು. ಅನಂತರ ಬಂದ ಕೆ.ಎನ್‌.ಬಾಸ್ರಿ (1979-1980), ಪಿ.ರಘುರಾಮ್‌ (1980-1985), ಪಿ. ಸುಂದರ ರಾವ್‌ (1985-1989), ಎಚ್‌.ಎಂ. ರಾಮ ರಾವ್‌ (1990- 1993), ಯು.ವಿ. ಭಟ್‌ (1993-1995), ಎಂ.ಎಸ್‌. ಕೃಷ್ಣ ಭಟ್‌ (1995-2000), ಅನಂತಕೃಷ್ಣ (2000- 2016), ಪಿ.ಜಯರಾಮ ಭಟ್‌ (2017- 2021) ಬಾಂಕ್‌ನ ಅಧ್ಯಕ್ಷರುಗಳಾಗಿಯೂ, ಮಹಾಬಲೇಶ್ವರ ಎಂ.ಎಸ್‌ (2017-2023) ಎಂಡಿ ಮತ್ತು ಸಿಇಒ ಆಗಿಯೂ ದಕ್ಷತೆಯಿಂದ ಕಾರ್ಯನಿರ್ವ ಹಿಸಿದರು. ಪ್ರಸ್ತುತ ಅಧ್ಯಕ್ಷರಾಗಿ ಪಿ. ಪ್ರದೀಪ ಕುಮಾರ್‌ (2001 ರಿಂದ), ಕಾರ್ಯಕಾರಿ ನಿರ್ದೇಶಕರಾಗಿ ಶೇಖರ್‌ ರಾವ್‌ (2023ರಿಂದ) ಮತ್ತು ಎಂಡಿ, ಸಿಇಒ ಆಗಿ ಶ್ರೀಕೃಷ್ಣನ್‌ ಎಚ್‌. (2023ರಿಂದ) ಸಮರ್ಥವಾಗಿ ಬ್ಯಾಂಕ್‌ ಅನ್ನು ಮುನ್ನಡೆಸುತ್ತಿದ್ದಾರೆ.

ಕರ್ಣಾಟಕ ಬ್ಯಾಂಕ್‌ ಸಮಾಜದ ಅಭ್ಯುದಯವನ್ನೇ ತನ್ನ ಮೂಲೋದ್ದೇಶವಾಗಿ ಇರಿಸಿಕೊಂಡಿದೆ. ಸ್ಥಾಪನೆ ಯಾದಂದಿನಿಂದಲೂ ಪ್ರತೀ ವರ್ಷವೂ ನಿರಂತರವಾಗಿ ಲಾಭವನ್ನು ಗಳಿಸುತ್ತಲೇ ಬಂದಿದೆ. ಬ್ಯಾಂಕ್‌ ಪ್ರತೀ ವರ್ಷವೂ ತನ್ನ ಲಾಭ ದಲ್ಲಿ ಸ್ವಲ್ಪ ಭಾಗವನ್ನು ಸಮಾಜ ಕಲ್ಯಾಣಕ್ಕಾಗಿಯೇ ಮೀಸಲಿರಿಸಬೇಕೆಂದು ನಿಯಮ ಸೂಚಿಯÇÉೇ ಘೋಷಿಸಿಕೊಂಡಿದೆ. ಭಾರತೀಯ ಬ್ಯಾಂಕ್‌ಗಳ ಸಮುದಾಯ ಸೇವಾ ಕಲ್ಪನೆ ಮೂಡುವ ಎಷ್ಟೋ ವರ್ಷಗಳ ಮುಂಚೆಯೇ ಇಂತಹ ಜನಪರ ಚಿಂತನೆಯನ್ನು ಕರ್ಣಾಟಕ ಬ್ಯಾಂಕ್‌ ಮೈಗೂಡಿಸಿ ಕೊಂಡಿ ರುವುದು ಹೆಮ್ಮೆಪಡುವ ಸಂಗತಿಯಾಗಿದೆ. ದೇಶದಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣಕ್ಕಿಂತ ಮೊದಲೇ ಕರ್ಣಾಟಕ ಬ್ಯಾಂಕ್‌ ಕೃಷಿ ಕ್ಷೇತ್ರಕ್ಕೆ ಸಾಲ ಸೌಲಭ್ಯವನ್ನು ವಿಸ್ತರಿಸುವ ದೂರದೃಷ್ಟಿಯನ್ನು ಮೆರೆಯಿತು. ಬ್ಯಾಂಕ್‌ ಆರಂಭಿಸಿದ “ಕೃಷಿ ಕಾರ್ಡ್‌'(1989) ಯಶಸ್ವೀ ಯೋಜನೆ ಎಂಬು ದನ್ನು ಮನಗಂಡ ಭಾರತ ಸರಕಾರವು ನಬಾರ್ಡ್‌ ಮಾಡಿದ ಶಿಫಾರಸಿನಂತೆ ಸಾರ್ವಜನಿಕ ರಂಗದ ಬ್ಯಾಂಕ್‌ಗಳಲ್ಲಿಯೂ “ಕಿಸಾನ್‌ ಕ್ರೆಡಿಟ್‌ ಕಾರ್ಡ್‌’ ಎಂಬ ಯೋಜನೆಯನ್ನು ಜಾರಿಗೆ ತಂದಿತೆಂಬುದು ಈಗ ಇತಿಹಾಸ.

Advertisement

ಆಧುನಿಕ ಕಾಲದ ತಂತ್ರಜ್ಞಾನ ಬ್ಯಾಂಕಿಂಗ್‌ ಚಟುವಟಿಕೆ ಗಳಲ್ಲಿಯೂ ಕರ್ಣಾಟಕ ಬ್ಯಾಂಕ್‌ ದಾಪುಗಾಲು ಹಾಕಿದೆ. “ಲೆಡ್ಜರ್‌ ಯುಗ’ ದಿಂದ “ಡಿಜಿಟಲ್‌ ಯುಗ’ದ ವರೆಗೆ ಅದು ಸಾಗಿ ಬಂದ ದಾರಿ ರೋಚಕವಾದುದು. “ಕೋರ್‌ ಬ್ಯಾಂಕಿಂಗ್‌’ ಪರಿಹಾರದ ಮೂಲಕ ಸದಾ ಸರ್ವತ್ರ ಬ್ಯಾಂಕಿಂಗ್‌ ಸೌಲಭ್ಯ, ಅಂತರ್ಜಾಲ ಬ್ಯಾಂಕಿಂಗ್‌, ಎಟಿಎಂ-ಮನಿಪ್ಲಾಂಟ…, ವಿದೇಶೀ ವಿನಿಮಯ ಪ್ರಕ್ರಿಯೆ, ಸಾಲ ಮಂಜೂರಾತಿಯಲ್ಲಿ ಕೇಂದ್ರೀಕೃತ ವ್ಯವಸ್ಥೆ ಮುಂತಾದ ನೂತನ ಉಪಕ್ರಮಗಳು ಬ್ಯಾಂಕ್‌ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿವೆ. ಡಿಜಿಟಲ್‌ ಬ್ಯಾಂಕಿಂಗ್‌ ಘಟಕಗಳ ಸ್ಥಾಪನೆಯಿಂದ ವಿದ್ಯುನ್ಮಾನ ಸೇವೆಗಳು ಸುಲಭಸಾಧ್ಯವಾಗಿವೆ. ಭಾರತ ಸರಕಾರದ “ಆಜಾದಿ ಕಾ ಅಮೃತ ಮಹೋತ್ಸವ’ ಉಪಕ್ರಮದ ಅಂಗವಾಗಿ ದೇಶಾದ್ಯಂತ ಸ್ಥಾಪನೆಯಾದ 75 ಡಿಜಿಟಲ್‌ ಬ್ಯಾಂಕಿಂಗ್‌ ಘಟಕಗಳಲ್ಲಿ ಎರಡು ಘಟಕಗಳನ್ನು ಸ್ಥಾಪಿಸುವ ಅವಕಾಶ ಕರ್ಣಾಟಕ ಬ್ಯಾಂಕ್‌ಗೆ ಒದಗಿಬಂದಿದೆ. ಅವುಗಳು ಮಂಗಳೂರಿನ ಯೆಯ್ನಾಡಿ ಮತ್ತು ಮೈಸೂರಿನ ವಿಜಯನಗರದಲ್ಲಿ ಈಗಾಗಲೇ ಕಾರ್ಯಪ್ರವೃತ್ತವಾಗಿವೆ.
21ನೇ ಶತಮಾನದ ಗ್ರಾಹಕ ನಿರೀಕ್ಷೆಗಳನ್ನು ಈಡೇರಿಸು ವಲ್ಲಿ ಬ್ಯಾಂಕ್‌ ಆರಂಭಿಸಿದ “ಕೆಬಿಎಲ್‌ ವಿಕಾಸಯಾತ್ರೆ’ ವಿನೂತನ ಹೆಜ್ಜೆಗಳನ್ನು ಇರಿಸಿದೆ. ವಿದ್ಯುನ್ಮಾನ ವಿಧಾನ ಗಳೊಂದಿಗೆ ಮಾನವ ಸಂಪನ್ಮೂಲವನ್ನು ಗ್ರಾಹಕಸ್ನೇಹಿ ಯಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದೆ.

ಇಂತಹ ಬುದ್ಧಿ-ಭಾವಗಳ ಸಂಲಗ್ನ ಸೂತ್ರವೇ ಕರ್ಣಾಟಕ ಬ್ಯಾಂಕ್‌ನ ಯಶಸ್ಸಿನ ಕೀಲಿಕೈ. ಗ್ರಾಮ ದತ್ತು ಸ್ವೀಕಾರ ಯೋಜನೆ ಯಲ್ಲಿ ಬ್ಯಾಂಕ್‌ ಕುಂದಾಪುರ ಹತ್ತಿರದ ಅಮಾಸೆ ಬೈಲು ಗ್ರಾಮವನ್ನು ಸ್ವೀಕರಿಸಿ ಸಂಪೂರ್ಣ ಸೌರಶಕ್ತಿ ಸೌಲಭ್ಯವನ್ನು ಒದಗಿಸಿ ಗ್ರಾಮೀಣ ಜನರ ಬಾಳಿಗೆ ಬೆಳಕಾಗಿದೆ. ಇದರೊಂದಿಗೆ ಕೆರೆಗಳ ಶುದ್ಧೀಕರಣ, ಗೋರರಕ್ಷಣೆ, ಶಿಕ್ಷಣ, ಆರೋಗ್ಯಸೇವೆ ಮುಂತಾದ ಜನೋಪ ಯೋಗಿ ಕಾರ್ಯಕ್ರಮಗಳಗೆ ಸಹಾಯಹಸ್ತ ಚಾಚಿದೆ. ಕಲೆ ಮತ್ತು ಸಂಸ್ಕೃತಿಯ ಪೋಷಣೆಯಲ್ಲಿಯೂ ಬ್ಯಾಂಕ್‌ ಮುಂಚೂಣಿಯಲ್ಲಿ ನಿಂತಿದೆ. ಯಕ್ಷಗಾನ, ಸಂಗೀತ, ನೃತ್ಯ, ಸಾಹಿತ್ಯ ಸಮ್ಮೇಳನ, ಕ್ರೀಡೆ ಮುಂತಾದವುಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದೆ. ಈ ಮಹೋನ್ನತ ಸಾಧನೆಗಳಿಗಾಗಿ ಕೇಂದ್ರ ಸರಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಕಾನ್ಫಿಡರೇಶನ್‌ ಆಫ್ ಇಂಡಿಯನ್‌ ಇಂಡಸ್ಟ್ರೀಸ್‌, ಇಂಡಿಯನ್‌ ಬ್ಯಾಂಕ್ಸ್‌ ಅಸೋಸಿಯೇಶನ್‌, ಇನ್ಫೋಸಿಸ್‌, ಏಷಿಯಾ ಪೆಸಿಫಿಕ್‌ ಮುಂತಾದ ಸಂಸ್ಥೆಗಳ ಗೌರವ ಪುರಸ್ಕಾರಕ್ಕೆ ಪಾತ್ರವಾಗಿದೆ.

ಫೆ. 18ರ ರವಿವಾರ ಮಂಗಳೂರಿನಲ್ಲಿ ಕರ್ಣಾಟಕ ಬ್ಯಾಂಕ್‌ನ ಶತಮಾನೋತ್ಸವದ ಸಂಭ್ರಮ ನಡೆಯಲಿದೆ. ಇದರ ಪ್ರಯುಕ್ತ “ಶತಕ ಸಂಭ್ರಮ’ ಎಂಬ ಸ್ಮರಣಸಂಚಿಕೆ, ಅಂಚೆಚೀಟಿ, ರಜತನಾಣ್ಯಗಳ ಬಿಡುಗಡೆ ಕಾರ್ಯಕ್ರಮ ನೆರವೇರಲಿದೆ. ಬ್ಯಾಂಕ್‌ನ ಅಧಿಕಾರಿ, ಸಿಬಂದಿ ಜತೆಗೆ ಗ್ರಾಹ ಕರೂ ಸಂಭ್ರಮಿಸುವ ಸುಸಂದರ್ಭ. ನಾಡಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಾಲ್ಗೊಂಡ ಬ್ಯಾಂಕ್‌ನ 100 ವರ್ಷಗಳ ಸಾಹಸ ಗಾಥೆಯನ್ನು ಸಾರ್ವಜನಿಕರು ಕೃತಜ್ಞತೆ ಯಿಂದ ಸ್ಮರಿಸಬೇಕಾದ ಸುದಿನ.

 ಡಾ| ಕಬ್ಬಿನಾಲೆ ವಸಂತ ಭಾರದ್ವಾಜ

Advertisement

Udayavani is now on Telegram. Click here to join our channel and stay updated with the latest news.

Next