Advertisement

ಫ‌ಲಪ್ರದವಾಗಲಿ ವಿಧಾನಮಂಡಲ ಅಧಿವೇಶನ

12:17 AM Jan 28, 2021 | Team Udayavani |

ಇಂದಿನಿಂದ ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಪ್ರಾರಂಭವಾಗಲಿದೆ. ಸಹಜವಾಗಿಯೇ ವಿಧಾನಮಂಡಲ ಅಧಿವೇಶ ನದಲ್ಲಿ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಹಾಗೂ ಪರಿಹಾರ, ಪ್ರಮುಖ ಕಾನೂನು ರಚನೆ ಸಹಿತ ಪ್ರಮುಖ ವಿಷಯಗಳ ಬಗ್ಗೆ ಫ‌ಲಪ್ರದ ಚರ್ಚೆಗಳು  ನಡೆಯಲಿ ಎಂಬುದು ಜನಸಾಮಾನ್ಯರ ನಿರೀಕ್ಷೆಯಾಗಿದೆ. ಮೊದಲ ದಿನ ರಾಜ್ಯಪಾಲರು ಜಂಟಿ ಸದನ  ಉದ್ದೇಶಿಸಿ ಮಾತನಾಡಿದ ಅನಂತರ ಇತರೆ ಕಾರ್ಯಕಲಾಪಗಳು ಮುಂದುವರಿಯಲಿವೆ.

Advertisement

ಆದರೆ ಇತ್ತೀಚೆಗಿನ ಅಧಿವೇಶನ ಗಮನಿಸಿದರೆ ಗಲಾಟೆ, ಕೋಲಾಹಲ, ಗದ್ದಲದಲ್ಲೇ ಕಲಾಪ ಮುಗಿಯುತ್ತಿದೆ. ಯಾವುದೇ ವಿಷಯ ಅಥವಾ ಯೋಜನೆಗಳ ಕುರಿತು ಸಮಗ್ರ ಚರ್ಚೆ, ಪರ-ವಿರೋಧ ಅಭಿಪ್ರಾಯ ಆಲಿಸುವಿಕೆ, ಮನವರಿಕೆ ಕೆಲಸವೇ ಆಗುತ್ತಿಲ್ಲ.

ಒಂದೆಡೆ ವಿಪಕ್ಷ ವಿರೋಧಿಸಬೇಕೆಂಬ ಕಾರಣಕ್ಕಾಗಿಯೇ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರೆ, ಇನ್ನೊಂದೆಡೆ ಬಹುಮತ ಇದೆ ಎನ್ನುವ ಕಾರಣಕ್ಕೆ ಆಡಳಿತ ಪಕ್ಷ ಧ್ವನಿಮತದ ಮೂಲಕ ಅಂಗೀಕಾರ ಮಾಡಿಕೊಂಡು ನಾವು ಮಾಡಿದ್ದೇ ಸರಿ ಎಂಬ ವರ್ತನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಲ್ಲ.  ಮಹತ್ವದ ಮಸೂದೆಗಳ ವಿಚಾರದಲ್ಲೂ ಇದೇ ರೀತಿಯ ತೀರ್ಮಾನ ಆಗುತ್ತಿದೆ. ಜತೆಗೆ ಕೆಲವು ಮಸೂದೆಗಳು ವಿಧಾನಸಭೆಯಲ್ಲಿ ಅಂಗೀಕಾರವಾದರೆ ಪರಿಷತ್‌ನಲ್ಲಿ ಅಂಗೀಕಾರ ವಾಗದೆ ವಾಪಸ್‌ ಕಳುಹಿಸಿದ್ದೂ ಇದೆ.

ಕಲಾಪ ಸಲಹಾ ಸಮಿತಿಯಲ್ಲಿ ಎಲ್ಲ ಪಕ್ಷದ ನಾಯಕರು ಕುಳಿತು ಚರ್ಚಿಸಿದರೂ ಸದನದಲ್ಲಿ ಒಮ್ಮತ ಅಥವಾ ಸಹಮತ ಕಂಡುಬರು ವುದಿಲ್ಲ. ಇದರಿಂದ ಗದ್ದಲ, ಕೋಲಾಹಲವುಂಟಾಗಿ ಸದನ ಮುಂದೂಡಿಕೆಯಾಗುವುದು ಸಾಮಾನ್ಯವಾಗಿದೆ. ಇಡೀ ದಿನದ ಕಲಾಪದಲ್ಲಿ ಒಂದೆರಡು ಗಂಟೆ ಮಾತ್ರ ಚರ್ಚೆ ನಡೆದದ್ದನ್ನೂ ನೋಡಿದ್ದೇವೆ. ಇಷ್ಟಕ್ಕೆ ಅಧಿಕಾರಿಗಳನ್ನು ಗುಡ್ಡೆ ಹಾಕಿಕೊಂಡು ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡಬೇಕಾ ಎನ್ನುವ ಪ್ರಶ್ನೆ ಈ ಕಾರಣಕ್ಕಾಗಿಯೇ ಆಗಾಗ ಎದುರಾಗುತ್ತಿರುವುದು. ಈ ಬಗ್ಗೆ ಆಡಳಿತ ಹಾಗೂ ಪ್ರತಿಪಕ್ಷ ಆತ್ಮಾವಲೋಕನ ಮಾಡಿಕೊಳ್ಳಬೇಕು.

ವರ್ಷಕ್ಕೆ ಕನಿಷ್ಠ 60 ದಿನ ಅಧಿವೇಶನ ನಡೆಸಬೇಕು ಎಂಬ ತೀರ್ಮಾನವಾಗಿದೆ. ಆದರೆ 2002ರಿಂದ ಇದುವರೆಗೂ ಅದು ಪಾಲನೆಯಾಗಿಲ್ಲ. ಈ ವರ್ಷವಾದರೂ 60 ದಿನ ಕಲಾಪ ನಡೆಯುವಂತಾಗಲಿ. ರಾಜ್ಯದ ಆರ್ಥಿಕ ಸ್ಥಿತಿಗೆ ಕೋವಿಡ್‌ ಸಮಯದಲ್ಲಿ ಎದುರಾಗಿರುವ ಸಂಕಷ್ಟ ಅಷ್ಟಿಷ್ಟಲ್ಲ. ಇನ್ನು ಲಾಕ್‌ಡೌನ್‌ ಸಮಯದಲ್ಲಿ, ಅನಂತರದ ನಿರ್ಬಂಧಗಳು ಹಾಗೂ ಆರ್ಥಿಕ ಕೊರತೆಯಿಂದಾಗಿ ಅನೇಕ ಅಭಿವೃದ್ಧಿ ಯೋಜನೆಗಳೂ ಅನಷ್ಠಾನಕ್ಕೆ ಬರದೇ ನಿಂತಿವೆ. ಆಡಳಿತ ಪಕ್ಷ ಹಾಗೂ ವಿಪಕ್ಷಗಳು  ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ಕಾನೂನು, ಯೋಜನೆಗಳ ವಿಚಾರದಲ್ಲಿ ಚರ್ಚೆ, ಪರ-ವಿರೋಧ ಅಭಿಪ್ರಾಯ ಎಲ್ಲದಕ್ಕೂ ಅವಕಾಶ ಇರುವಂತೆ ಮಾಡಿ, ಅಂತಿಮವಾಗಿ ಜನಹಿತಕ್ಕಾಗಿ ಸರ್ವಸಮ್ಮತ ನಿರ್ಧಾರ ಕೈಗೊಳ್ಳಬೇಕು. ಅಧಿವೇಶನ ಎನ್ನುವುದು ಬಲಪ್ರದರ್ಶನದ ಅಖಾಡವಾಗದಿರಲಿ. ಇಲ್ಲಿ ಯಾರೂ ಸಹ ಸೋಲು-ಗೆಲುವು ಎಂದು ಭಾವಿಸಬೇಕಿಲ್ಲ. ಜನರ ಸಮಸ್ಯೆಗಳಿಗೆ ಪರಿಹಾರ ಮುಖ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next