Advertisement

ಪುತ್ತೂರು: ಕಾಂಗ್ರೆಸ್‌ಗೆ ಉಳಿಸಿಕೊಳ್ಳುವ, ಬಿಜೆಪಿಗೆ ಮರಳಿ ಪಡೆವ ತವಕ

08:00 AM May 09, 2018 | Karthik A |

ಪುತ್ತೂರು: ಸಂಘ ಪರಿವಾರದ ಗಟ್ಟಿ ನೆಲ ಪುತ್ತೂರಿನಲ್ಲಿ ಬಿಜೆಪಿ ಪಕ್ಷಕ್ಕೆ ಕಳೆದ ಬಾರಿ ಕಳೆದುಕೊಂಡ ಸ್ಥಾನವನ್ನು ಮರಳಿ ಪಡೆಯುವ ಅನಿವಾರ್ಯತೆಯಾದರೆ, ಹಲವು ವರ್ಷಗಳಿಂದ ಕೈ ತಪ್ಪಿದ್ದ ಸ್ಥಾನವನ್ನು ಮರಳಿ ಪಡೆದಿದ್ದರೂ ಅದನ್ನು ಉಳಿಸಿಕೊಳ್ಳುವ ತವಕ ಕಾಂಗ್ರೆಸ್‌ ಪಕ್ಷಕ್ಕಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 11 ಮಂದಿ ಸ್ಪರ್ಧಾಕಣದಲ್ಲಿದ್ದಾರೆ. ಆದರೆ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಮಧ್ಯೆ ನೇರ ಸ್ಪರ್ಧೆ ಇದೆ. ಕಾಂಗ್ರೆಸ್‌ ಅಭ್ಯರ್ಥಿ ಶಕುಂತಳಾ ಟಿ. ಶೆಟ್ಟಿ, ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ಕಣದಲ್ಲಿದ್ದಾರೆ. ಉಳಿದಂತೆ ಜೆಡಿಎಸ್‌ ನಿಂದ ಐ.ಸಿ. ಕೈಲಾಸ್‌, ಕಾಂಗ್ರೆಸ್‌ ಗೆ ಬಂಡಾಯವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಬಶೀರ್‌ ಬೂಡಿಯಾರ್‌ ಅವರು ಸ್ಪರ್ಧಿಸುತ್ತಿದ್ದಾರೆ. ಸ್ವತಂತ್ರ ತುಳುನಾಡು ಪಕ್ಷದ ವಿದ್ಯಾಶ್ರೀ, ಪ್ರಜಾ ಪರಿವರ್ತನಾ ಪಕ್ಷದಿಂದ ಶೇಖರ್‌ ಮಾಡಾವು, ಜೆಡಿಯು ಪಕ್ಷದ ಮಜೀದ್‌ ಎನ್‌.ಕೆ., ಆಲ್‌ ಇಂಡಿಯಾ ಮಹಿಳಾ ಎಂಪವರ್‌ ವೆುಂಟ್‌ ಪಾರ್ಟಿಯ ಶಬನಾ ಎಸ್‌. ಶೇಖ್‌, ಸಾಮಾನ್ಯ ಜನತಾ ಪಕ್ಷದ ಎಂ.ಎಸ್‌. ರಾವ್‌, ಸ್ವತಂತ್ರ ಅಭ್ಯರ್ಥಿಗಳಾಗಿ ಚೇತನ್‌ ಕುಮಾರ್‌, ಅಮರನಾಥ ಬಿ.ಕೆ., ಬಶೀರ್‌ ಬೂಡಿಯಾರ್‌ ಸ್ಪರ್ಧಾ ಕಣದಲ್ಲಿದ್ದಾರೆ.

Advertisement

ನೇರ ಸ್ಪರ್ಧೆ
ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದಿಂದ 2013ರ ವಿಧಾನಸಭಾ ಚುನಾವಣೆಯ ಅಖಾಡದಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳೇ ಮರಳಿ ಮುಖಾಮುಖೀಯಾಗುತ್ತಿದ್ದಾರೆ. ಅಂದಿನ ಚುನಾವಣೆಯಲ್ಲಿ ಶಕುಂತಳಾ ಟಿ. ಶೆಟ್ಟಿಯವರಿಗೆ ಅನುಕಂಪದ ಮತಗಳೂ ಬಿದ್ದಿದ್ದರೆ ಈ ಬಾರಿ ಆ ಹವಾ ಕಡಿಮೆಯಾದರೂ ಅಭಿವೃದ್ಧಿಯನ್ನು ಮೆಚ್ಚಿ ಮತ ಚಲಾವಣೆಯಾಗುವ ವಿಶ್ವಾಸದಲ್ಲಿ ಕಾಂಗ್ರೆಸ್‌ ಪಕ್ಷವಿದೆ. ಬಿಜೆಪಿ ಪಕ್ಷದಲ್ಲಿ ಹಲವು ದಶಕಗಳಿಂದ ಪಕ್ಷಕ್ಕಾಗಿ ಶ್ರಮಿಸಿದ ನಾಯಕನಿಗೆ ಅಭ್ಯರ್ಥಿತನ ಸಿಕ್ಕಿರುವ ವಿಶ್ವಾಸದ ಗೆಲುವಿನ ನಿರೀಕ್ಷೆ ಇದೆ. ಇಬ್ಬರೂ ರಾಜಕೀಯದಲ್ಲಿ ಪಳಗಿದ ಅಭ್ಯರ್ಥಿಗಳ ಮಧ್ಯೆ ನೇರ ಸ್ಪರ್ಧೆ ನಡೆಯಲಿದೆ.


ಬಿಜೆಪಿ ಅಭ್ಯರ್ಥಿಯು ಗೋ ರಕ್ಷಣೆ, ಹಿಂದುತ್ವ, ನರೇಂದ್ರ ಮೋದಿಯವರ ಸಾಧನೆಯ ಆಧಾರದಲ್ಲಿ ಪ್ರಮುಖ ವಿಚಾರವನ್ನಿಟ್ಟುಕೊಂಡು ಮತಯಾಚನೆ ನಡೆಸುತ್ತಿದ್ದರೆ, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯು ಹಾಲಿ ಪುತ್ತೂರಿನಲ್ಲಿ ನಡೆಸಲಾದ ಅಭಿವೃದ್ಧಿ ಹಾಗೂ ರಾಜ್ಯ ಕಾಂಗ್ರೆಸ್‌ ಸರಕಾರದ ಅಭಿವೃದ್ಧಿ ವಿಚಾರಗಳನ್ನಿಟ್ಟುಕೊಂಡು ಮತಯಾಚನೆ ನಡಸುತ್ತಿದ್ದಾರೆ. ಈ ಮಧ್ಯೆ ಕರಾವಳಿಯ ರಾಜಕೀಯದಲ್ಲೂ ಇತ್ತೀಚೆಗೆ ವಿಪರೀತವೆನಿಸುವಷ್ಟು ಹಾಸು ಹೊಕ್ಕಾಗಿರುವ ಜಾತಿಗಳ ಪರ ಒಲವು ಪುತ್ತೂರಿನಲ್ಲೂ ನಿರ್ಣಾಯಕವಾಗುವ ಸಾಧ್ಯತೆ ಇದೆ. ಒಕ್ಕಲಿಗ ಸಮುದಾಯ, ಮುಸ್ಲಿಂ ಸಮುದಾಯ, ಬಂಟ ಸಮುದಾಯ, ಬಿಲ್ಲವ ಸಮುದಾಯ, ಬ್ರಾಹ್ಮಣ ಸಮುದಾಯ, ಇತರ ಸಮುದಾಯಗಳ ಮತಗಳು ನಿರ್ಣಾಯಕವಾಗಲಿವೆ.


ಸ್ಟಾರ್‌ ಪ್ರಚಾರಕರು ಕಡಿಮೆ

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಪ್ರಮುಖ ಪಕ್ಷಗಳು ಹಾಗೂ ಪಕ್ಷೇತರರ ಕಡೆಯಿಂದ ಸ್ಟಾರ್‌ ಪ್ರಚಾರಕರು ಎನಿಸುವವರು ಕಾಣಿಸಿಕೊಂಡಿಲ್ಲ. ರಾಜ್ಯ ಮಟ್ಟದ ನಾಯಕರು, ರಾಷ್ಟ್ರದಿಂದ ರಾಜ್ಯದ ಉಸ್ತುವಾರಿಗಳು ಮಾತ್ರ ಆಗಮಿಸಿದ್ದಾರೆ.

ಶಾಸಕರಾದವರು
ಕೂಜುಗೋಡು ವೆಂಕಟರಮಣ ಗೌಡ (1952- 1957), ಕೂಜುಗೋಡು ವೆಂಕಟರಮಣ ಗೌಡ (1957- 1962), ಕೂಜುಗೋಡು ವೆಂಕಟರಮಣ ಗೌಡ (1962-1967), ವಿಠಲದಾಸ ಶೆಟ್ಟಿ (1967- 1972), ಶಂಕರ ಆಳ್ವ (1972-77), ಕೆ. ರಾಮ ಭಟ್‌ (1978-1983), ಕೆ. ರಾಮ ಭಟ್‌ (1983-1985), ವಿನಯ ಕುಮಾರ್‌ ಸೊರಕೆ (1985- 1990), ವಿನಯ ಕುಮಾರ್‌ ಸೊರಕೆ (1990-1995), ಡಿ.ವಿ. ಸದಾನಂದ ಗೌಡ (1995- 2000), ಡಿ.ವಿ. ಸದಾನಂದ ಗೌಡ (2000 – 2004), ಶಕುಂತಳಾ ಶೆಟ್ಟಿ (2004- 2009), ಮಲ್ಲಿಕಾ ಪ್ರಸಾದ್‌ (2009- 2013), ಶಕುಂತಳಾ ಶೆಟ್ಟಿ (2013- 2018). ಇವರ ಪೈಕಿ ವಿನಯ ಕುಮಾರ್‌ ಸೊರಕೆ ಸಚಿವರಾದರೆ, ಡಿ.ವಿ. ಸದಾನಂದ ಗೌಡ ರಾಜ್ಯ ಸಚಿವರಾಗಿ, ಮುಖ್ಯಮಂತ್ರಿಯಾಗಿ, ಈಗ ಕೇಂದ್ರ ಸಚಿವರೂ ಆಗಿದ್ದಾರೆ. ಶಕುಂತಳಾ ಶೆಟ್ಟಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.

Advertisement

ಇಲ್ಲಿ ಪಕ್ಷಗಳಿಗೇ ಮತದಾರರ ಆದ್ಯತೆ
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಇದುವರೆಗೆ ಪ್ರಮುಖ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ಗಳಷ್ಟೇ ಪ್ರಾಬಲ್ಯ ಸಾಧಿಸಿವೆ. ಪಕ್ಷೇತರರು ಅಥವಾ ಬಂಡಾಯ ಸ್ಪರ್ಧಿಗಳು ಅಥವಾ ಇತರ ಇತರ ಪಕ್ಷದವರು ಇಲ್ಲಿ ಪ್ರಾಬಲ್ಯ ಸಾಧಿಸಲು ಸಾಧ್ಯವಾಗಿಲ್ಲ. ಹಾಲಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಹಿಂದೆ ಬಿಜೆಪಿಗೆ ಬಂಡಾಯವಾಗಿ ಸ್ವಾಭಿಮಾನಿ ಪಕ್ಷ ಕಟ್ಟಿ ಚುನಾವಣೆ ಎದುರಿಸಿದರೂ 25,000 ಮತಗಳನ್ನು ಪಡೆಯಲಷ್ಟೇ ಶಕ್ಯರಾಗಿದ್ದರು. ಬಳಿಕ ಕಾಂಗ್ರೆಸ್‌ ನಿಂದ ಸ್ಪರ್ಧಿಸಿದಾಗ ಗೆಲುವು ಕಂಡಿದ್ದರು. ಪಕ್ಷಗಳ ಜತೆಗಿನ ಮತದಾರರ ನಂಟು ಇದಕ್ಕೆ ಕಾರಣವಾಗಿದೆ. ಹಾಗೆಂದು ಬಂಡಾಯವಾಗಿ ಸ್ಪರ್ಧಿಸಿದವರು ಪ್ರಮುಖ ಪಕ್ಷದ ಅಭ್ಯರ್ಥಿಗಳನ್ನು ಸೋಲುವಂತೆ ಮಾಡಲಾರರು ಎನ್ನುವಂತಿಲ್ಲ !

ಸಂಘಟನೆಯ ತವರು
ಸಂಘಟನೆ ವಿಚಾರದಲ್ಲಿ ಎಲ್ಲ ಪಕ್ಷಗಳಿಗೂ ಪುತ್ತೂರು ತವರು ನೆಲ. ಪ್ರಮುಖವಾಗಿ ಬಿಜೆಪಿ ಹಾಗೂ ಸಂಘಪರಿವಾರಕ್ಕೆ ಸಂಬಂಧಿಸಿದಂತೆ ರಾಜಕೀಯ ವಿಚಾರಧಾರೆಗಳು ಟಿಸಿಲೊಡೆಯುವ ಮಣ್ಣು ಪುತ್ತೂರು. ಆದ್ದರಿಂದ ಪುತ್ತೂರು ಕ್ಷೇತ್ರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. 1994ರಿಂದ ತಮ್ಮ ವಶದಲ್ಲಿದ್ದ ಶಾಸಕ ಸ್ಥಾನವನ್ನು ಕಳೆದ ಅವಧಿಯಲ್ಲಿ ಕಾಂಗ್ರೆಸ್‌ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಬಾರಿ ಮರಳಿ ಪಡೆಯುವ ಮತ್ತು ಉಳಿಸಿಕೊಳ್ಳುವ ವಿಚಾರದಲ್ಲಿ ನೇರ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ಸ್ಪರ್ಧೆ ನಡೆಯಲಿದೆ.

ಐದು ವರ್ಷಗಳ ಶಾಸಕ ಸ್ಥಾನದ ಅವಧಿಯಲ್ಲಿ ಪುತ್ತೂರಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಎಲ್ಲ ಸಮುದಾಯದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಪರ, ಶಾಂತಿಯುತ ಪುತ್ತೂರಿಗಾಗಿ ಶ್ರಮಿಸಿದ್ದೇನೆ. ಜನತೆಯಿಂದಲೂ ಪೂರಕ ಸ್ಪಂದನೆ ಇದ್ದು, ಗೆಲುವು ಸಾಧಿಸುವ ವಿಶ್ವಾಸವಿದೆ.
– ಶಕುಂತಳಾ ಶೆಟ್ಟಿ, ಕಾಂಗ್ರೆಸ್‌ ಅಭ್ಯರ್ಥಿ

ಭಾರತವನ್ನು ಅಗ್ರಗಣ್ಯ ರಾಷ್ಟ್ರವನ್ನಾಗಿ ರೂಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರಕಾರಕ್ಕೆ ಪೂರಕವಾಗುವಂತೆ ರಾಜ್ಯದಲ್ಲೂ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ನನ್ನನ್ನು ಗೆಲ್ಲಿಸುವಂತೆ ಮತದಾರರಲ್ಲಿ ವಿನಂತಿ ಮಾಡುತ್ತಿದ್ದೇನೆ. ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ, ಹಿಂದುತ್ವದ ರಕ್ಷಣೆಗಾಗಿ ಜನತೆ ನನ್ನನ್ನು ಗೆಲ್ಲಿಸುವ ವಿಶ್ವಾಸವಿದೆ.
– ಸಂಜೀವ ಮಠಂದೂರು, ಬಿಜೆಪಿ ಅಭ್ಯರ್ಥಿ

— ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next