Advertisement

ಮಂಗಳೂರು: ಕಡಲ ತಡಿಯ ನಾಡಿನಲ್ಲಿ ಚುನಾವಣೆಯ ಬಿಗ್‌ ಫೈಟ್‌!

08:10 AM May 04, 2018 | Team Udayavani |

ಮಂಗಳೂರು: ನಾಲ್ಕನೇ ಬಾರಿ ರಾಜ್ಯ ವಿಧಾನಸಭೆಗೆ ಪ್ರವೇಶ ಪಡೆಯುವ ಇರಾದೆಯಿಂದ ಸಚಿವ ಯು.ಟಿ. ಖಾದರ್‌ ಸ್ಪರ್ಧಿಸುತ್ತಿರುವ ಮಂಗಳೂರು ವಿಧಾನಸಭಾ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರ. ಇಲ್ಲಿ ಬಿಜೆಪಿಯ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌ ಪ್ರತಿಸ್ಪರ್ಧಿ. ಖಾದರ್‌ ಅವರನ್ನು ಮಣಿಸಲು ವ್ಯವಸ್ಥಿತ ರಾಜಕೀಯ ತಂತ್ರಗಾರಿಕೆ ಹೆಣೆಯುವ ಮೂಲಕ ಕಡಲ ಮಡಿಲಿನ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ (ಉಳ್ಳಾಲ) ಓಟಿದ ಬೇಟೆಗೆ ರಣಾಂಗಣ ಸಿದ್ಧವಾಗುತ್ತಿದೆ.

Advertisement

ಮನೆ ಮನೆ ಭೇಟಿ ಮೂಲಕ ಎಲ್ಲ ಪಕ್ಷಗಳ ಕಾರ್ಯಕರ್ತರು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ವಿಶೇಷವೆಂದರೆ ಕಳೆದ ಬಾರಿ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಜಿಲ್ಲೆಯಲ್ಲೇ ಗರಿಷ್ಠ ಎಂಬಷ್ಟು ಸ್ಪರ್ಧಿಗಳಿದ್ದರು. ಅದರಲ್ಲಿ ಬಹುಮಂದಿ ಪಕ್ಷೇತರರು. ಆದರೆ ಈ ಬಾರಿ ಕಣದ ಚಿತ್ರಣವೇ ಬದಲಾಗಿದೆ. ಕೇವಲ ಐವರು ಅಭ್ಯರ್ಥಿ ಗಳು ತಮ್ಮ ಭವಿಷ್ಯ ನಿರ್ಧರಿಸಲು ಅಖಾಡಕ್ಕೆ ಇಳಿದಿದ್ದಾರೆ. ಇದರಲ್ಲಿ ಕಾಂಗ್ರೆಸ್‌ – ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಬಹುತೇಕ ಖಚಿತವಾದಂತಾಗಿದೆ. 2008ರ ವಿಧಾನಸಭಾ ಕ್ಷೇತ್ರ ಪುನರ್‌ ವಿಂಗಡನೆಯವರೆಗೆ ಇದು ಉಳ್ಳಾಲ ಕ್ಷೇತ್ರವಾಗಿತ್ತು. ಈಗ ಅಕ್ಕಪಕ್ಕದ ಒಂದಿಷ್ಟು ಭೌಗೋಳಿಕ ಪ್ರದೇಶಗಳು ಸೇರ್ಪಡೆಯಾಗಿ ಒಂದಿಷ್ಟು ಪ್ರದೇಶಗಳನ್ನು ಮಂಗಳೂರು ದಕ್ಷಿಣಕ್ಕೆ ಕೊಟ್ಟು ಮಂಗಳೂರು ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ.

ಕಾಂಗ್ರೆಸ್‌ ಲೆಕ್ಕಾಚಾರ


ಕಾಂಗ್ರೆಸ್‌ನಿಂದ ಸತತ ಮೂರು ಬಾರಿ ಗೆಲುವು ಕಂಡ ಪ್ರಸಕ್ತ ಸಚಿವ ಸ್ಥಾನ ಪಡೆದುಕೊಂಡ ಯು.ಟಿ. ಖಾದರ್‌ ನಾಲ್ಕನೇ ಬಾರಿಗೆ ಸ್ಪರ್ಧೆ ಬಯಸಿದ್ದಾರೆ. ಕಳೆದ ಸುದೀರ್ಘ‌  ಅವಧಿಯಲ್ಲಿ ಕ್ಷೇತ್ರದ ಮೇಲೆ ತಾನು ತೋರಿದ ಕಾಳಜಿ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಕೈಗೊಂಡಿರುವ ಕಾರ್ಯಗಳನ್ನು ಪರಿಗಣಿಸಿ ಮತ ನೀಡುವಂತೆ ಅವರು ಮತದಾರರಲ್ಲಿ ಯಾಚಿಸುತ್ತಿದ್ದಾರೆ. ಹಿಂದೆ ಶಾಸಕರಾಗಿದ್ದ ಯು.ಟಿ. ಫರೀದ್‌ ಅವರ ನಿಧನದ ಕಾರಣ 2007ರಲ್ಲಿ ನಡೆದ ಉಪಚುನಾವಣೆಯಲ್ಲಿ ಫರೀದ್‌ ಅವರ ಪುತ್ರ ಯು.ಟಿ. ಖಾದರ್‌ (46,271) ಅವರು ಚಂದ್ರಶೇಖರ ಉಚ್ಚಿಲ (38,239) ಅವರನ್ನು ಪರಾಜಯಗೊಳಿಸಿ ಶಾಸಕ ಸ್ಥಾನ ಗಳಿಸಿದ್ದರು. 2008ರ ಚುನಾವಣೆಯಲ್ಲಿ ಖಾದರ್‌ (50,718) ಅವರು ಬಿಜೆಪಿಯ ಪದ್ಮನಾಭ ಕೊಟ್ಟಾರಿ (43,669) ವಿರುದ್ಧ  ಜಯ ಸಾಧಿಸಿದ್ದರು. 2013ರ ಚುನಾವಣೆಯಲ್ಲಿ ಯು.ಟಿ. ಖಾದರ್‌ (69,450) ಬಿಜೆಪಿಯ ಚಂದ್ರಹಾಸ್‌ ಉಳ್ಳಾಲ (40,339)ವಿರುದ್ಧ ಜಯ ಗಳಿಸಿದ್ದರು. ಇದೇ ಹುಮ್ಮಸ್ಸಿನಲ್ಲಿ ಈ ಬಾರಿಯೂ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ಯು.ಟಿ. ಖಾದರ್‌.


ಆದರೆ ಕಾಂಗ್ರೆಸ್‌ನ ಗೆಲುವಿನ ಓಟಕ್ಕೆ ಈ ಬಾರಿಯಾದರೂ ಕಡಿವಾಣ ಹಾಕಬೇಕು ಎಂಬ ನೆಲೆಯಲ್ಲಿ ಬಿಜೆಪಿ ಟೊಂಕಕಟ್ಟಿ ನಿಂತಿದೆ. ಶತಾಯಗತಾಯ ಖಾದರ್‌ ಅವರನ್ನು ಸೋಲಿಸಲೇಬೇಕು ಎಂಬ ದೃಢ ನಿರ್ಧಾರದಿಂದ ಬಿಜೆಪಿ ಇಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದೆ. ಜಿ.ಪಂ. ಸದಸ್ಯನಾಗಿ, ಸಂಘಟಕನಾಗಿ, ಧಾರ್ಮಿಕ ಚಟುವಟಿಕೆಗಳ ಉಸ್ತುವಾರಿ ಇತ್ಯಾದಿ ಸಮಾಜಮುಖೀ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಸಂತೋಷ್‌ ಕುಮಾರ್‌ ರೈ ಬೋಳಿಯಾರು ಈ ಬಾರಿ ಖಾದರ್‌ ಗೆಲುವಿನ ಓಟಕ್ಕೆ ತಡೆಯೊಡ್ಡುವ ಹುಮ್ಮಸ್ಸಿನಲ್ಲಿದ್ದಾರೆ. ತಾನು ಸರ್ವಧರ್ಮಗಳನ್ನು ಸಮಭಾವದಲ್ಲಿ ಕಾಣುವವನಾದ್ದರಿಂದ ಎಲ್ಲರ ಮತಗಳೂ ತನಗೆ ಬೀಳಲಿವೆ ಎಂಬ ವಿಶ್ವಾಸವನ್ನು ಅವರು ಹೊಂದಿದ್ದಾರೆ.

ಎಡಪಕ್ಷಗಳೂ ಇಲ್ಲಿ ನಿರ್ಣಾಯಕ ಪಾತ್ರ ವಹಿಸುವ ಕಾರಣ ಸಿಪಿಐಎಂ ಈ ಬಾರಿ ಪ್ರಚಾರ ಕಾರ್ಯದಲ್ಲಿ ಮುಂದೆ ಇದೆ. ವಕೀಲರಾಗಿರುವ ನಿತಿನ್‌ ಕುತ್ತಾರು ಸ್ಪರ್ಧಿಸುತ್ತಿದ್ದು, ಗೆಲುವಿನ ವಿಶ್ವಾಸ ಹೊಂದಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿರುವ ಮಾಜಿ ಮೇಯರ್‌ ಕೆ. ಅಶ್ರಫ್‌ ಅವರು ಜೆಡಿಎಸ್‌ ಮೂಲಕ ಸ್ಪರ್ಧೆಗೆ ಇಳಿದಿರುವುದು ಕ್ಷೇತ್ರದಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದೆ. ಇವರಷ್ಟೇ ಅಲ್ಲದೆ ಲೋಕ್‌ ಆವಾಜ್‌ ದಳದಿಂದ ಬಾಲಕೃಷ್ಣ ಪೂಜಾರಿ ಹಾಗೂ ಎಂ.ಇ.ಪಿ.ಯಿಂದ ಶಮೀರ್‌ ಸ್ಪರ್ಧಾ ಕಣದಲ್ಲಿದ್ದಾರೆ.

Advertisement

ಮಂಗಳೂರಿಗಿದೆ ಎಡಪಕ್ಷಗಳ ನಂಟು!
ಕಾರ್ಮಿಕರು ಬಹುಸಂಖ್ಯೆಯಲ್ಲಿರುವ ಮಂಗಳೂರು (ಉಳ್ಳಾಲ) ಕ್ಷೇತ್ರಕ್ಕೂ ಎಡಪಕ್ಷಗಳಿಗೂ ಬಹುವಿಧದ ಸಂಬಂಧವಿದೆ. 1962ರಲ್ಲಿ ಇಲ್ಲಿ ಸಿಪಿಐ, 1983ರಲ್ಲಿ ಇಲ್ಲಿ ಸಿಪಿಎಂ ಜಯಿಸಿತ್ತು. ಉಳಿದಂತೆ 1989ರವರೆಗಿನ 8 ಚುನಾವಣೆಗಳಲ್ಲಿ ಎಡಪಕ್ಷಗಳು ಆರು ಬಾರಿ ಎರಡನೇ ಸ್ಥಾನ (ಸಿಪಿಐ 1, ಸಿಪಿಎಂ 5) ಪಡೆಯಲು ಶಕ್ತವಾಗಿದ್ದವು. 2008ರ ಚುನಾವಣೆಯಲ್ಲಿ 4,065 ಮತಗಳ ಮೂಲಕ ಸಿಪಿಎಂ 3ನೇ ಸ್ಥಾನದಲ್ಲಿತ್ತು. ಕಳೆದ ಬಾರಿ 3815 ಮತಗಳ ಮೂಲಕ ಸಿಪಿಎಂ ನಾಲ್ಕನೇ ಸ್ಥಾನದಲ್ಲಿತ್ತು.

ಮಂಗಳೂರು ಕ್ಷೇತ್ರದಲ್ಲಿ ಕಳೆದ ಸಾಲಿನಲ್ಲಿ ಕಾಂಗ್ರೆಸ್‌ ಸರಕಾರ ಮಾಡಿದ ಎಲ್ಲ ಯೋಜನೆ ಹಾಗೂ ಜನೋಪಯೋಗಿ ಕಾರ್ಯಗಳಿಗೆ ಕ್ಷೇತ್ರದ ಜನರು ಆಶೀರ್ವಾದ ನೀಡಲಿದ್ದಾರೆ ಎಂಬ ಪೂರ್ಣ ಭರವಸೆ ಇದೆ. ಇದಕ್ಕಾಗಿ ಸಮರ್ಥ ಕಾರ್ಯಕರ್ತರ ತಂಡ ನಿರಂತರ ದುಡಿಯುತ್ತಿದೆ ಹಾಗೂ ಕ್ಷೇತ್ರದ ಜನತೆ ನನ್ನ ಮೇಲೆ ಆಶೀರ್ವಾದ ಮಾಡಲಿದ್ದಾರೆ. ಕ್ಷೇತ್ರದ ಎಲ್ಲಾ ಜನ ಸಾಮಾನ್ಯರ  ಮನೆಗಳಿಗೆ ಸ್ಪಂದಿಸುವ ಕೆಲಸವನ್ನು ಈಗಾಗಲೇ ನಡೆಸಲಾಗಿದೆ. 
– ಯು.ಟಿ. ಖಾದರ್‌, ಕಾಂಗ್ರೆಸ್‌ ಅಭ್ಯರ್ಥಿ

ಕ್ಷೇತ್ರದಲ್ಲಿ ಮೂಲ ಸೌಕರ್ಯ ಕೊರತೆ ಕಾಡುತ್ತಿದೆ. ಇದನ್ನು ಪರಿಹರಿಸುವ ನೆಲೆಯಲ್ಲಿ ಕ್ಷೇತ್ರದ ಸಾಮಾನ್ಯ ಜನರ ಅಂಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸ್ಪರ್ಧಿಸಿದ್ದೇನೆ. ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯದವರ ವಿಶ್ವಾಸ ಗಳಿಸಿಕೊಂಡಿರುವ ನನಗೆ, ಮತದಾರರು ನನ್ನನ್ನು ಪೂರ್ಣ ಮತಗಳೊಂದಿಗೆ ಬೆಂಬಲಿಸುವ ಪೂರ್ಣ ನಂಬಿಕೆಯಿದೆ. 
– ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌, ಬಿಜೆಪಿ ಅಭ್ಯರ್ಥಿ

— ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next