Advertisement

ಕರಾವಳಿ ಕಣ ಖಡಕ್ ಚಿತ್ರಣ; ಸದ್ಯ ಕರಾವಳಿಯಲ್ಲಿ ತಾಪಮಾನದ್ದೇ ಪ್ರತಾಪ

06:36 PM Mar 08, 2023 | Team Udayavani |

ಕರಾವಳಿಯ ಕಣದ ರಂಗು ಇನ್ನೂ ಬದಲಾಗಲು ಸ್ವಲ್ಪ ದಿನಗಳು ಬೇಕು. ಸಿದ್ಧವಾಗಿರುವ ಅಖಾಡದಲ್ಲಿ ಸೆಣಸಾಳುಗಳು ಯಾರು ಎಂಬುದರ ಮೇಲೂ ಕಣದ ರಂಗಿನ ತೀವ್ರತೆ ಬದಲಾಗುತ್ತದೆ. ತರಹೇವಾರಿ ಯಾತ್ರೆಗಳು ಬಂದು ಹೋಗಿವೆ. ಅವುಗಳ್ಯಾವೂ ಇನ್ನೂ ಜನರ ಮೇಲೆ ಪ್ರಭಾವ ಬೀರಿದಂತಿಲ್ಲ, ಮತದಾರರು ಊರ ಹಬ್ಬದ ಸಂಭ್ರಮದಲ್ಲಿ ಮುಳುಗಿದ್ದಾರೆ.

Advertisement

ಮಂಗಳೂರು/ಉಡುಪಿ: ಒಂದು, ಎರಡು ಮುಗಿದಿದೆ. ಮೂರನೇ ಆವೃತ್ತಿ ಚಾಲ್ತಿಯಲ್ಲಿದೆ ! ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಅದರ ಪ್ರಯುಕ್ತವೆಂಬಂತೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲೂ ಆವೃತ್ತಿ ಒಂದು ಎಂಬಂತೆ ಬಿಜೆಪಿಯ “ಬೂತ್‌ ವಿಜಯ ಅಭಿಯಾನ’, ವಿಜಯ ಸಂಕಲ್ಪ ಅಭಿಯಾನ ನಡೆದಿದೆ. ಕಾಂಗ್ರೆಸ್‌ನ ಪ್ರಜಾಧ್ವನಿ, ಕರಾವಳಿ ಪ್ರಜಾಧ್ವನಿ ಯಾತ್ರೆಯೂ ಬಂದು ಹೋಗಿದೆ. ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆಯೂ ಘೋಷಣೆಯಾಗಿದೆ.

ಎರಡನೆಯ ಆವೃತ್ತಿಯಾಗಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರ ಭೇಟಿಯೂ ಸೇರಿದಂತೆ ಜನ ಸಂಪರ್ಕ ಸಮಾವೇಶಗಳನ್ನು ನಡೆಸಲಾಗಿದೆ. ಕಾಂಗ್ರೆಸ್‌ನಲ್ಲೂ ಸದ್ದಿಲ್ಲದೇ ಕರಾವಳಿ-ಮಲೆನಾಡು ಸಮಾವೇಶ, ಜಿಲ್ಲಾಮಟ್ಟದ ಪ್ರಮುಖರ ಬ್ಲಾಕ್‌ ಪ್ರತಿನಿಧಿಗಳೊಂದಿಗಿನ ಸಭೆಯೂ ನಡೆದಿವೆ.

ಮೂರನೆಯ ಆವೃತ್ತಿಯೆಂಬಂತೆ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೆವಾಲಾ ಉಭಯ ಜಿಲ್ಲೆಗೆ ಭೇಟಿ ನೀಡಿ, ಕಾಂಗ್ರೆಸ್‌ ಭವನದಲ್ಲಿ ಪ್ರಮುಖರ ಸಭೆ ನಡೆಸಿ, ಪಕ್ಷ ಈಗಾಗಲೇ ಘೋಷಿಸಿರುವ ಗ್ಯಾರಂಟಿ ಕಾರ್ಡ್‌ ಬಿಡುಗಡೆ ಮಾಡಿ, ಬಿಜೆಪಿ ಆಡಳಿತದ ವಿರುದ್ಧ ವಾಗ್ಧಾಳಿಯೇ ನಡೆಸಿದ್ದರು. ಇದಕ್ಕೆ ಪೈಪೋಟಿಯೆಂಬಂತೆ ಬಿಜೆಪಿ ಜಿಲ್ಲಾವಾರು ವಿವಿಧ ಮೋರ್ಚಾಗಳ ಸಭೆಯನ್ನು ನಡೆಸಲು ಸಿದ್ಧತೆ ನಡೆಸಿದೆ. ಜತೆಗೆ ಸರಕಾರದ ಅಧಿಕೃತ ಕಾರ್ಯಕ್ರಮವಾಗಿ ನಡೆಯುವ ಫ‌ಲಾನುಭವಿಗಳ ಸಮಾವೇಶದ ಲಾಭವನ್ನು ಪಡೆಯಲು ಬಿಜೆಪಿ ತಯಾರಿ ಮಾಡಿಕೊಳ್ಳುತ್ತಿದೆ. ಮುಂದಿನ ವಾರದಲ್ಲಿ ಜಿಲ್ಲಾದ್ಯಂತ ವಿಜಯ ಸಂಕಲ್ಪ ರಥಯಾತ್ರೆ ಸಂಚರಿಸಲಿದೆ.

ಇವಿಷ್ಟು ಹೊರತುಪಡಿಸಿದರೆ ಒಂದಿಷ್ಟು ಮಂದಿ ಟಿಕೆಟ್‌ ಆಕಾಂಕ್ಷಿಗಳು ತಮ್ಮ ಬೆಂಬಲಿಗರ ಸಹಾಯದಿಂದ ಮತದಾರರನ್ನು ತಲುಪಿ ಅಲೆ ಸೃಷ್ಟಿಸುವ ಪ್ರಯತ್ನ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮೇಲಿಂದ ಮೇಲೆ ಪೋಸ್‌ rಗಳನ್ನು ಹಾಕುವ ಮೂಲಕ ಸ್ವಯಂ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಳ್ಳುತ್ತಿದ್ದಾರೆ. ಆನ್‌ಲೈನ್‌, ಆಫ್ ಲೈನ್‌ ಸುತ್ತಾಟ ಆರಂಭಿಸಿದ್ದಾರೆ. ಇದಕ್ಕಾಗಿ ವಿಶೇಷ ವಾಟ್ಸಪ್‌ ಗುಂಪುಗಳನ್ನೂ ಒಳಗೊಂಡಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಕಂಗೊಳಿಸತೊಡಗಿದ್ದಾರೆ.

Advertisement

ಧಾರ್ಮಿಕ ಉತ್ಸವಗಳಿಗೂ ಕೊರತೆಯಿಲ್ಲ. ಎಂದೂ ದುಡ್ಡು ಬಿಚ್ಚದ ಜನಪ್ರತಿನಿಧಿಗಳೂ ಈಗ ಕೈ ತುಂಬಾ ಎನ್ನುವಂತೆ ದೇಣಿಗೆ ನೀಡಿ ಫ್ಲೆಕ್ಸ್‌ಗಳಲ್ಲಿ ರಾರಾಜಿಸ ತೊಡಗಿದ್ದಾರೆ. ಇನ್ನು ಕೆಲವರು ಊರಲ್ಲಿ ನಡೆಸುವ ಎಲ್ಲ ಉತ್ಸವಗಳಲ್ಲಿ ಮುಂಚೂಣಿಯಲ್ಲಿ ನಿಂತು ಶೋಭಿಸತೊಡಗಿದ್ದಾರೆ. ವಿಶೇಷವೆಂದರೆ ಎರಡು ತಿಂಗಳಿಂದ ಸಣ್ಣ ಉತ್ಸವಗಳ ಮಾತೇ ಇಲ್ಲ. ಎಲ್ಲ ಉತ್ಸವಗಳೂ ದೊಡ್ಡದೆಂಬಂತೆ ಬಿಂಬಿಸಿ ಅದರಲ್ಲಿ “ಮೈಲೇಜ್‌’ ಪಡೆಯಲು ಕೆಲವು ಹಾಲಿ, ಮಾಜಿ ಜನಪ್ರತಿನಿಧಿಗಳು, ಟಿಕೆಟ್‌ ಆಕಾಂಕ್ಷಿಗಳು ಮುಗಿಬಿದ್ದಿದ್ದಾರೆ. ಏನಕೇನ ಪ್ರಕಾರೇಣ ನಿತ್ಯವೂ ಮಾಧ್ಯಮಗಳಲ್ಲಿ ಪ್ರಸ್ತುತತೆ ಪಡೆಯಬೇಕೆಂಬುದು ಎಲ್ಲರ ಸದ್ಯದ ಲೆಕ್ಕಾಚಾರ.

ಕರಾವಳಿ ಜಿಲ್ಲೆಗಳ ಈ ಹಿಂದಿನ ಚುನಾವಣೆ ಫ‌ಲಿತಾಂಶಗಳನ್ನು ಗಮನಿಸಿದರೆ, ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಸಾಮಾನ್ಯ. ಜೆಡಿಎಸ್‌, ಎಡ ಪಕ್ಷಗಳು ಸ್ಪರ್ಧೆಯಲ್ಲಿದ್ದರೂ ಪ್ರಭಾವ ಕಡಿಮೆ. ಬಲವರ್ಧಿಸಿಕೊಳ್ಳುವ ಯತ್ನ ಎಸ್‌ಡಿಪಿಐ ನದ್ದು. ಕಾಪು, ಪುತ್ತೂರು ಮೊದಲಾದ ಕ್ಷೇತ್ರದಲ್ಲಿ ಅಭ್ಯರ್ಥಿ ಪ್ರಚಾರ ಆರಂಭಿಸಿದೆ. ಮೂರನೇ ಆವೃತ್ತಿಯ ಬಳಿಕ ಬಿಜೆಪಿ ಸಾರ್ವಜನಿಕ ಸಮಾವೇಶಗಳಲ್ಲದೆ, ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲೂ ಒಬಿಸಿ, ಮಹಿಳಾ, ಯುವ ಹಾಗೂ ಪರಿಶಿಷ್ಟ ಪಂಗಡಗಳ ಸಭೆಗಳನ್ನು ನಡೆಸುವ ಅಂದಾಜಿನಲ್ಲಿದೆ.

ಕಾಂಗ್ರೆಸ್‌ ಸಹ ಪ್ರಮುಖ ನಾಯಕರನ್ನು ಕರೆಸಿ ಕಾರ್ಯಕ್ರಮಗಳನ್ನು ಆಯೋಜಿಸುವತ್ತ ಯೋಚಿಸುತ್ತಿದೆ. ಚುನಾವಣೆ ದಿನಾಂಕ ಘೋಷಣೆಯಾದ ಮೇಲೆ ಕಣದಲ್ಲಿ ಮತ್ತಷ್ಟು ಬಿರುಸಿನ ಚಟುವಟಿಕೆಗಳು ಕಾಣಿಸಬಹುದು. ಸದ್ಯ ಯಾವುದೇ ಕ್ಷೇತ್ರದಲ್ಲಿ ಯಾವ ಜನಪ್ರತಿಯನ್ನು ಕೇಳಿದರೂ ನಾನೇ ಅಭ್ಯರ್ಥಿ. ವರಿಷ್ಠರು ಮುಂದುವರಿಯಲು ಸೂಚಿಸಿದ್ದಾರೆ. ಹೀಗಾಗಿ ಸುತ್ತಾಟ ಆರಂಭಿಸಿದ್ದೇವೆ ಎನ್ನುವ ಮಾತು ಸಾಮಾನ್ಯವಾಗಿಬಿಟ್ಟಿದೆ.

ಇನ್ನೂ ರಂಗೇರಬೇಕಿದೆ ಕರಾವಳಿ ಕಣ
ಕರಾವಳಿಯಲ್ಲಿ ಚುನಾವಣೆ ಹವಾ ಬಿಸಿಯಾಗುವ ಮೊದಲೇ ಬಿಸಿಲಿನ ತಾಪ ನೆತ್ತಿಗೇರಿದೆ. ಮಧ್ಯಾಹ್ನದ ವೇಳೆ ಹೊರಗೆ ಕಾಲಿಡಲು ಸಾಧ್ಯವಾಗದಷ್ಟು ತಾಪಮಾನವಿದೆ. ಹಾಗೆ ನೋಡಿದರೆ ಕರಾವಳಿ ಕಣದಲ್ಲಿ ಈಗಾಗಲೇ ಚುನಾವಣೆಯ ತಾಪವೂ ಏರಬೇಕಿತ್ತು. ಆದರೆ ಇನ್ನೂ ಎಲ್ಲ ಪಕ್ಷಗಳಲ್ಲೂ ಟಿಕೆಟ್‌ ಘೋಷಣೆಯಾಗದ ಕಾರಣ ಕಣಕ್ಕೆ ರಂಗು ಬಂದಿಲ್ಲ. ಚುನಾವಣೆ ಘೋಷಣೆಯಾದ ಬಳಿಕ ಚುನಾವಣೆಯ ಕಾವೂ ತೀವ್ರತೆ ಪಡೆಯಲಿದೆ. ಆ ವೇಳೆಗೆ ಸೂರ್ಯನ ಪ್ರತಾಪವೂ ಕಡಿಮೆ ಇರದು. ಬಿಸಿಲಿನ ತಾಪ ಹಾಗೂ ಚುನಾವಣೆ ಪ್ರತಾಪ ಯಾವುದು ಹೆಚ್ಚಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next