Advertisement

ವರ್ಷದಿಂದ ಬಯಲಲ್ಲೇ ನಿಂತ ಅಕಾಡೆಮಿ! ಉತ್ತರದ ಏಕೈಕ ಬಯಲಾಟ ಅಕಾಡೆಮಿ

06:14 PM Jan 22, 2022 | Team Udayavani |

ಬಾಗಲಕೋಟೆ: ಉತ್ತರ ಕರ್ನಾಟಕದ ಏಕೈಕ ಅಕಾಡೆಮಿ ಎಂಬ ಖ್ಯಾತಿ ಪಡೆದ ಬಾಗಲಕೋಟೆ ಕೇಂದ್ರ ಸ್ಥಾನ ಹೊಂದಿರುವ ಕರ್ನಾಟಕ ಬಯಲಾಟ ಅಕಾಡೆಮಿ, ಕಳೆದೊಂದು ವರ್ಷದಿಂದ ಬಯಲಲ್ಲಿ ನಿಂತಿದೆ. ಹೌದು, ರಾಜ್ಯದಲ್ಲಿ ಪುಸ್ತಕ ಪ್ರಾಧಿಕಾರ ಸಹಿತ ಒಟ್ಟು 16 ಅಕಾಡೆಮಿಗಳಿದ್ದು, ಬಹುತೇಕ ಅಕಾಡೆಮಿಗಳು ಬೆಂಗಳೂರು ಕೇಂದ್ರೀಕೃತವಾಗಿದ್ದು, ತುಳು ಅಕಾಡೆಮಿ ಸಹಿತ ಕೆಲವೇ ಕೆಲವು ಅಕಾಡೆಮಿಗಳು, ದಕ್ಷಿಣ ಕರ್ನಾಟಕ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿವೆ. ಉತ್ತರ ಕರ್ನಾಟಕದ, ಅದರಲ್ಲೂ ಬಸವನಾಡು ಬಾಗಲಕೋಟೆ ಕೇಂದ್ರ ಸ್ಥಾನ ಹೊಂದಿರುವ ಬಯಲಾಟ ಅಕಾಡೆಮಿಗೆ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ ಎಂಬ ಆಕ್ರೋಶ ಕೇಳಿ ಬರುತ್ತಿದೆ.

Advertisement

ಕಳೆದ 2017ರಲ್ಲಿ ಪ್ರತ್ಯೇಕ ಅಕಾಡೆಮಿ ಮಾನ್ಯತೆ ಪಡೆದ ಬಯಲಾಟದಲ್ಲಿ ಸಣ್ಣಾಟ, ದೊಡ್ಡಾಟ, ಶ್ರೀಕೃಷ್ಣ ಪಾರಿಜಾತ, ಸೂತ್ರದ ಗೊಂಬೆ ಹಾಗೂ ತೊಗಲು ಗೊಂಬೆಯಾಟ ಹೀಗೆ ಒಟ್ಟು ಐದು ಪ್ರಕಾರದ ಕಲೆಗಳು ಇದರಲ್ಲಿವೆ. ಇಂದಿನ ಆಧುನಿಕ ಯುಗದಲ್ಲಿ ದೊಡ್ಡಾಟ, ಸಣ್ಣಾಟ ಹಾಗೂ ಪಾರಿಜಾತದಂತಹ ಕಲೆಗಳು ಮರೆಯಾಗುತ್ತಿದ್ದು, ಇಂತಹ ಭಾರತೀಯ ಸಂಸ್ಕೃತಿಯ ಪಾರಂಪರಿಕ ಕಲೆಗಳನ್ನು ಉಳಿಸಿ, ಯುವ ಸಮುದಾಯಕ್ಕೆ ಪರಿಚಯಿಸುವ ಮಹತ್ವದ ಉದ್ದೇಶದಿಂದ ಹುಟ್ಟಿಕೊಂಡ ಈ ಅಕಾಡೆಮಿ, ಹಲವು ಸಮಸ್ಯೆ ಎದುರಿಸುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಬಾಗಲಕೋಟೆ ಜಿಲ್ಲೆಯೂ ಸೇರಿದಂತೆ ರಾಜ್ಯದಲ್ಲಿ 3600ಕ್ಕೂ ಹೆಚ್ಚು ಈ ಕಲೆ ಬಲ್ಲವರಿದ್ದು, ಅವರಿಗೆ ಸೂಕ್ತ ಅವಕಾಶಗಳೂ ದೊರೆಯುತ್ತಿಲ್ಲ.

ಅಧಿಕಾರಿಗಳೇ ಇಲ್ಲ: ಐದು ವರ್ಷಗಳ ಹಿಂದೆ ಆರಂಭಗೊಂಡ ಈ ಅಕಾಡೆಮಿ ಸದ್ಯ ನವನಗರ ಕಲಾ ಭವನದಲ್ಲಿರುವ ಮ್ಯೂಜಿಯಂನ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹೆಸರಿಗೆ ರಾಜ್ಯದ ಕೇಂದ್ರ ಸ್ಥಾನ ಹೊಂದಿದ್ದರೂ ಇಲ್ಲಿ ಒಂದು ರಿಜಿಸ್ಟಾರ್‌ ಹುದ್ದೆ, ಕನಿಷ್ಟ ಇಬ್ಬರು ಕ್ಲರ್ಕ್‌ಗಳು ಸೇರಿದಂತೆ ಒಟ್ಟು ಐದು ಜನ ಅಧಿಕಾರಿ-ಸಿಬ್ಬಂದಿ ಇರಬೇಕು. ಸದ್ಯ ರಿಜಿಸ್ಟಾರ್‌
ಹುದ್ದೆಯನ್ನು ಹಂಗಾಮಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ನಿರ್ವಹಿಸುತ್ತಿದ್ದಾರೆ. ಹೊರಗುತ್ತಿಗೆ ಆಧಾರದ ಮೇಲೆ ಇಬ್ಬರು ಸಿಬ್ಬಂದಿ ಇದ್ದಾರೆ. ಉಳಿದಂತೆ ಯಾವುದೇ ಅಧಿಕಾರಿ-ಸಿಬ್ಬಂದಿಯೂ ಇಲ್ಲ. ಸ್ವಂತ ಕಟ್ಟಡವೂ ಇಲ್ಲ. ಕಳೆದ ಒಂದು ವರ್ಷದ ಹಿಂದೆ ಡಾ| ಸೊಲಬಣ್ಣನವರ ನಿಧನದ ಬಳಿಕ ಹೊಸ ಅಧ್ಯಕ್ಷರ ನೇಮಕವೂ ಸರ್ಕಾರ
ಮಾಡಿಲ್ಲ.

15 ಪ್ರಶಸ್ತಿ, 10 ಜನ ಸದಸ್ಯರು: ಈ ಅಕಾಡೆಮಿಯಿಂದ ಬಯಲಾಟ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ರಾಜ್ಯದ ಕಲಾವಿದರನ್ನು ಗುರುತಿಸಿ, ವಾರ್ಷಿಕ (20 ಸಾವಿರ ನಗದು) ಹಾಗೂ ಗೌರವ (50 ಸಾವಿರ ನಗದು) ಹೆಸರಿನಡಿ ಪ್ರಶಸ್ತಿಯೂ ನೀಡಲಾಗುತ್ತಿದೆ. ಕಳೆದೆರಡು ವರ್ಷದಿಂದ ಪ್ರಶಸ್ತಿಯೂ ನೀಡಿಲ್ಲ. ಈ ಅಕಾಡೆಮಿಗೆ ಓರ್ವ ಅಧ್ಯಕ್ಷರು 10 ಜನ ಸದಸ್ಯರನ್ನು ಸರ್ಕಾರವೇ ನೇಮಕ ಮಾಡುತ್ತದೆ. ಸದ್ಯ ಡಾ| ಸೊಲಬಣ್ಣನವರ ನಿಧನದ ಬಳಿಕ ಹೊಸ ಅಧ್ಯಕ್ಷರ ನೇಮಕವಾಗಿಲ್ಲ. ಬಾಗಲಕೋಟೆಯ ಗಂಗವ್ವ ಮುಧೋಳ, ಶಿವಾನಂದ ಶೆಲ್ಲಿಕೇರಿ, ವಿಜಯಪುರದ ಸಿದ್ದು ಬಿರಾದಾರ ಸಹಿತ 10 ಜನ ಸದಸ್ಯರಿದ್ದಾರೆ. ಕಳೆದ ವಾರ ಅಧ್ಯಕ್ಷರಿಲ್ಲದ ಈ ಅಕಾಡೆಮಿಗೆ ಆಡಳಿತಾಧಿಕಾರಿ ನೇಮಕ ಮಾಡಿದ್ದು, ಬಸವರಾಜ ಹೂಗಾರ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ, ಈ ಅಕಾಡೆಮಿಯಿಂದ ನಡೆಯಬೇಕಿದ್ದ ಕೆಲಸ-ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂಬ ಬೇಸರ ಸ್ವತಃ ಅಕಾಡೆಮಿಯ ಸದಸ್ಯರಲ್ಲಿದೆ.

ಬಯಲಾಟ ಅಕಾಡೆಮಿಗೆ ವಾರ್ಷಿಕ 35 ಲಕ್ಷ ಅನುದಾನ ನೀಡುತ್ತಿದ್ದು, ಅದರಲ್ಲಿಯೇ ಪ್ರಶಸ್ತಿ ಪ್ರದಾನ, ಕಚೇರಿ ಸಿಬ್ಬಂದಿ ವೇತನ, ನಿರ್ವಹಣೆ ಎಲ್ಲವೂ ನಡೆಸಲಾಗುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ಈ ವರ್ಷ ಪ್ರಶಸ್ತಿ ಪ್ರದಾನ ಮಾಡಿಲ್ಲ. ಸ್ವಂತ ಕಟ್ಟಡ, ಸಿಬ್ಬಂದಿ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಧ್ಯಕ್ಷರ ನೇಮಕ ವಿಷಯ ಸರ್ಕಾರದ ಹಂತದಲ್ಲಿ ನಡೆಯುತ್ತದೆ. ಸದ್ಯ ನೂತನ ಆಡಳಿತಾಧಿಕಾರಿಯಾಗಿ ಬಸವರಾಜ ಹೂಗಾರ ಅಧಿಕಾರ ವಹಿಸಿಕೊಂಡಿದ್ದು, ಈ ಅಕಾಡೆಮಿಗೆ ಹೊಸ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಸಲಾಗುವುದು.
– ಎನ್‌.ಹೇಮಾವತಿ, ಹಂಗಾಮಿ ರಿಜಿಸ್ಟಾರ್‌, ಕರ್ನಾಟಕ ಬಯಲಾಟ ಅಕಾಡೆಮಿ 

Advertisement

– ಶ್ರೀಶೈಲ ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next