Advertisement

ಪಶು ಭಾಗ್ಯ ಯೋಜನೆಗೆ ಕೋಕ್‌! ಬೇಡಿಕೆ ಇದ್ದರೂ ಯೋಜನೆಯೇ ಇಲ್ಲ

07:04 PM Sep 17, 2020 | sudhir |

ಶಿರಸಿ: ಬೇಡಿಕೆ ಇದ್ದರೂ, ಇಡೀ ರಾಜ್ಯದ ಸಾವಿರರು ಹೈನು ಕುಟುಂಬಗಳಿಗೆ ನೆರವಾಗಿದ್ದರೂ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಸಿದ್ದರಾಮಯ್ಯ ಜಾರಿಗೆ ತಂದಿದ್ದ ಜನಪ್ರಿಯ ಯೋಜನೆ ಪಶು ಭಾಗ್ಯಕ್ಕೆ ಯೋಜನೆಗೆ ಎಳ್ಳು ನೀರು ಬಿಡಲಾಗಿದೆ.
ಹೈನುಗಾರರ ಪಾಲಿಗೆ ವರದಾನ ಆಗಿದ್ದ ಪಶುಭಾಗ್ಯ ಯೋಜನೆಗೆ ಈ ಬಾರಿಯ ಬಜೆಟ್‌ನಲ್ಲಿ ಅನುದಾನವೇ ಇಡದೇ ಹಾಲುತ್ಪಾದನೆಗೆ ಪ್ರೋತ್ಸಾಹ ಕೊರತೆ ಉಂಟಾಗಿದೆ. ಭೂ ರಹಿತರಿಗೂ ಸಾಲದ ನೆರವಾಗಿದ್ದ ಯೋಜನೆಗೆ ಈಗ ಕೋಕ್‌ ಸಿಕ್ಕಿದ್ದು, ಹೈನುಗಾರರ ಕೆಂಗಣ್ಣಿಗೂ ಗುರಿಯಾಗಿದೆ.

Advertisement

ಎರಡೇ ವರ್ಷದ ಭಾಗ್ಯ!: ಸಿದ್ದರಾಮಯ್ಯ ಅವರ ಸರಕಾರ ಇದ್ದಾಗ 2018ರ ಆಗಸ್ಟ್‌ 10 ರಂದು ಅಂದಿನ ಸರಕಾರ ಪಸಂಮೀ 166 ಪಪಯೋ 2018 ಆದೇಶ ಹೊರಡಿಸಿತ್ತು. ಈ ಆದೇಶದ ಪ್ರಕಾರ ಪಶು ಭಾಗ್ಯ ಯೋಜನೆ ಇಡೀ ರಾಜ್ಯಕ್ಕೆ ಅನುಷ್ಠಾನಕ್ಕೆ ಹಸಿರು ನಿಶಾನೆ ಸಿಕ್ಕಿತ್ತು. 2018ರ ಬಜೆಟ್‌ ಯೋಜನೆ ರೈತರ ಮನೆಯಂಗಳಕ್ಕೆ ಬಂದಿತ್ತು. ದಿನಕ್ಕೆ 10 ಲೀ. ಹಾಲು ಹಿಂಡುವ ಎರಡು
ಆಕಳನ್ನು ಒಂದು ಯುನಿಟ್‌ ಎಂದು ಗುರುತಿಸಿ 1 ಲ.ರೂ., ವಿಮೆ 5 ಸಾವಿರ, ಸಾಗಾಣಿಕಾ ವೆಚ್ಚ 5 ಸಾವಿರ, ಪಶು ಆಹಾರ, ಲವಣ ಮಿಶ್ರಣ ಎಂದು 10 ಸಾವಿರ ರೂ. 1.20 ಲ.ರೂ. ಯುನಿಟ್‌ ವೆಚ್ಚ ಎಂದು ಪ್ರಕಟಿಸಿತು. ಇಡೀ ರಾಜ್ಯದ 30 ಜಿಲ್ಲೆಗಳ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ, ಪರಿಶಿಷ್ಟ ಜಾತಿ ಪಂಗಡಗಳ ಫಲಾನುಭವಿಗಳಿದ್ದರೆ ಅದರಲ್ಲೂ ಅಲ್ಪ ಸಂಖ್ಯಾತರಿಗೆ, ವಿಕಲಚೇತನರಿಗೆ, ವಿಶೇಷ ಚೇತನರಿಗೆ ಆದ್ಯತೆ ಕೊಡಬೇಕು. ಸಾಮಾನ್ಯವಾಗಿ ಫಲಾನುಭವಿಗಳ ಆಯ್ಕೆ ಆಯಾ ಶಾಸಕರು ಆಯ್ಕೆ ಮಾಡುತ್ತಾರೆ ಎಂದೂ ಹೇಳಲಾಗಿತ್ತು. ಆದರೂ ಈ ಯೋಜನೆ ಈಗಿಲ್ಲ!

ಶೇ.25ರಿಂದ 50 ಸಬ್ಸಿಡಿ ಇತ್ತು!: ಪಶು ಪಾಲನೆಗೆ ಆದ್ಯತೆ ನೀಡಬೇಕು ಎಂದು ಆರಂಭಿಸಲಾಗಿದ್ದ ಈ ಪಶು ಭಾಗ್ಯ ಯೋಜನೆಯಲ್ಲಿ ರಾಜ್ಯ ಸರಕಾರ ಶೇ.25ರಿಂದ 50 ತನ ಸಬ್ಸಿಡಿ ಕೂಡ ನೀಡುತ್ತಿತ್ತು. ಉಳಿದ ಹಣವನ್ನು ಬ್ಯಾಂಕ್‌ ಸಾಲ ಪಡೆದೂ
ಹೈನುಗಾರಿಕೆ ಆರಂಭಿಸಬಹುದಿತ್ತು. ಅದಕ್ಕೂ ಅಗತ್ಯ ಗೈಡ್‌ಲೈನ್‌ ಇತ್ತು. ಸಾಮಾನ್ಯ ವರ್ಗಕ್ಕೆ ಶೇ.25ರ ತನಕ ಹಾಗೂ ಪರಿಶಿಷ್ಟ ಜಾತಿ ಪಂಗಡಗಳಿಗೆ ಶೇ.50ರ ಸಹಾಯಧನ ಇವರ ಖಾತೆಗೆ ಬಂದು ಬೀಳುತ್ತಿತ್ತು. ಆಕಳು, ಎಮ್ಮೆಗಳಿಗೂ ಈ ಯೋಜನೆ ಲಭ್ಯತೆ ಇತ್ತು. ಈ ಯೋಜನೆಯ ಲಾಭ ಪಡೆದು ಹೈನುಗಾರಿಕೆ ಆರಂಭಿಸಿ ಸುಸ್ಥಿರ ಬದುಕು ನಡೆಸಲು ನೆರವಾಗಿತ್ತು. ಆರ್ಥಿಕವಾಗಿ ಹಿಂದುಳಿದವರಿಗೆ ಹಣಕಾಸಿನ ಚೈತನ್ಯ ಕೊಡುತ್ತಿದ್ದವು.

ಬದಲಾಯ್ತು ಯೋಜನೆ: ಕಾಂಗ್ರೆಸ್‌ ಜೆಡಿಎಸ್‌ ಸಮ್ಮಿಶ್ರ ಸರಕಾರದ ಬಜೆಟ್‌ನಲ್ಲಿ ಈ ಯೋಜನೆ ಕಳೆದ ವರ್ಷದ ಆಗಸ್ಟ್‌ 16ಕ್ಕೆ ಕೊಂಚ ಬದಲಾಯಿಸಿ ಆದೇಶ ಬಂತು. ಹೈನುಗಾರಿಕೆ, ಕುರಿ, ಮೇಕೆಗಳ ಸಾಕಾಣಿಕೆಗೂ ನೆರವಾಗುವಂತೆ ಯೋಜಿಸಲಾಯಿತು.
ಒಂದು ಆಕಳು ಅಥವಾ ಒಂದು ಎಮ್ಮೆಗೆ ಒಂದು ಘಟಕ ಎಂದು ಪರಿಗಣಿಸಿ 60 ಸಾವಿರ ರೂ. ನಿಗದಿ ಮಾಡಲಾಗಿತ್ತು. ಎಸ್‌ಸಿಎಸ್‌ಟಿಗೆ ಶೇ.90ರ ವರೆಗೆ, ಸಾಮಾನ್ಯ ವರ್ಗಕ್ಕೆ ಶೇ.50 ಸಹಾಯಧನ ನೀಡಲು ಸರಕಾರ ಮುಂದಾಯಿತು. ಒಂದು ಆಕಳು ಎಸ್‌ಸಿಎಸ್‌ಟಿ ಫಲಾನುಭವಿ ಖರೀದಿಸಿದರೆ 54 ಸಾ.ರೂ., 6 ಸಾ.ರೂ. ಬ್ಯಾಂಕ್‌ ಸಾಲ, ಸಾಮಾನ್ಯ ವರ್ಗದವರಿಗೆ 30 ಸಾವಿರ
ರೂ. , ಸಾಲ ಮತ್ತ 30 ಸಾವಿರ ರೂ. ಸಿಗುತ್ತಿತ್ತು.

ಮಹಿಳೆಯರ ನೆರವಾಗಲು ಶೇ.50 ಸಹಯಧನ ಕೂಡ ಇತ್ತು. ಕುರಿ ಮೇಕೆ ಘಟಕಕ್ಕೆ 15 ಸಾವಿರ ರೂ.ಗೆ ಘಟಕವಾಗಿಸಿ 13. 500, ಸಾಮಾನ್ಯರಿಗೆ 10 ಸಾವಿರ ರೂ. ನೆರವಿನ ಯೋಜನೆ ನೀಗಿತ್ತು. ಈಗ ಪಶು ಭಾಗ್ಯವೂ ಇಲ್ಲ, ವಿಶೇಷ ಘಟಕವೂ ಇಲ್ಲ. ಮೊದಲ ವರ್ಷ ಇದ್ದ ಸ್ಪಷ್ಟ ಯೋಜನೆ, ಎರಡನೇ ವರ್ಷದಲ್ಲಿ ಸಮ್ಮಿಶ್ರ ಸರಕಾರದಂತೆ ಇದೂ ಸಮ್ಮಿಶ್ರವಾಯ್ತು. ಯೋಜನೆಯ
ಮೂರನೇ ವರ್ಷ ಬಿಜೆಪಿ ಸರಕಾರ ಬಂತು. ಸರಕಾರ ಬದಲಾದಂತೆ ಯೋಜನೆಯೂ ಹೋಯ್ತು.

Advertisement

ಪಶು ಭಾಗ್ಯ ಯಜನೆ ಇರಬಕಿತ್ತು. ಕೊರೊನಾ ಕಷ್ಟದಲ್ಲಿ ಹೈನುಗಾರಿಕೆಗೆ ಒಂದೊಳ್ಳೆ ದಾರಿ ಆಗಿತ್ತು ಬದುಕಿಗೆ . ರೈತರ ಸರಕಾರ ಎನ್ನುತ್ತಾರೆ, ಯೋಜನೆ ಯಾಕೆ  ನಿಲ್ಲಿಸ್ತಾರೆ?
– ಮೋಹನ ನಾಯ್ಕ, ಹೈನುಗಾರ

– ರಾಘವೇಂದ್ರ ಬೆಟಕೊಪ್ಪ

Advertisement

Udayavani is now on Telegram. Click here to join our channel and stay updated with the latest news.

Next