Advertisement

ಭಾಷೆ ಸಂಸ್ಕೃತಿಯ ಮತ್ತೊಂದು ಮುಖ: ಸಿ.ಟಿ. ರವಿ

10:24 AM Feb 24, 2020 | Sriram |

ಕಾರ್ಕಳ: ಭಾಷೆ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖ ಗಳಿದ್ದಂತೆ. ಭಾಷೆಯ ಮೇಲಿನ ಪ್ರೀತಿ ಕಡಿಮೆಯಾದಲ್ಲಿ ಆ ಸಂಸ್ಕೃತಿಯೂ ಅವನತಿಯತ್ತ ಸಾಗುವುದು. ಆದ್ದರಿಂದ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯ ಕುರಿತು ಅಭಿಮಾನ ಹೊಂದಿರಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಅಭಿಪ್ರಾಯಪಟ್ಟರು.

Advertisement

ಅವರು ಶನಿವಾರ ಕಾರ್ಕಳ ಎಸ್‌ವಿಟಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ರಜತ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು.

ಭಾಷೆ ಸಂಘರ್ಷಕ್ಕೆ ಕಾರಣವಾಗಿಲ್ಲ
ಆಂಗ್ಲ ಭಾಷೆಯ ವ್ಯಾಮೋಹ ಅತಿ ಯಾದಾಗ ನಮ್ಮ ಭಾಷೆಯ ಮೇಲಿನ ಅಭಿಮಾನ ಕಡಿಮೆಯಾಗುವುದು. ಭಾರತದಲ್ಲಿ ಹಲವಾರು ಭಾಷೆಗಳಿದ್ದರೂ ಅದು ಸಂಘರ್ಷಕ್ಕೆ ಕಾರಣವಾಗಿಲ್ಲ. ಇಲ್ಲಿನ ಪ್ರಾದೇಶಿಕ ಭಾಷೆಗಳು ಒಂದಕ್ಕೊಂದು ಪೂರಕ ವಾಗಿದ್ದು, ಭಾಷೆಯನ್ನು ಶ್ರೀಮಂತಗೊಳಿಸಿವೆ ಎಂದು ರವಿ ಬಣ್ಣಿಸಿದರು.

ಕೊಂಕಣಿ ಭಾಷೆಯನ್ನು ಕನ್ನಡ ಭಾಷೆ ಬೆಳೆಸಿದೆ, ಹಾಗೆಯೇ ಕನ್ನಡ ಭಾಷೆಗೆ ಕೊಂಕಣಿಯ ಕೊಡುಗೆ ಯಿದೆ. ಕೊಂಕಣಿ ಭಾಷೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೆ ತಿಳಿಸಿ, ಉಳಿಸುವ ಕಾರ್ಯವಾಗ ಬೇಕೆಂದು ಅವರು ತಿಳಿಸಿದರು.

ಸಾಧಕರಿಗೆ ಸಮ್ಮಾನ
ವಿವಿಧ ಕ್ಷೇತ್ರಗಳ ಕೊಂಕಣಿ ಭಾಷೆಯ 25 ಮಂದಿ ಸಾಧಕರನ್ನು ಈ ಸಂದರ್ಭ ಸಮ್ಮಾನಿಸಲಾಯಿತು.ಸಂಸದೆ ಶೋಭಾ ಕರಂದ್ಲಾಜೆ, ಸರಕಾರದ ಮುಖ್ಯ ಸಚೇತಕ ವಿ. ಸುನಿಲ್‌ ಕುಮಾರ್‌, ಸಮ್ಮೇಳನಾಧ್ಯಕ್ಷ ಗೋಕುಲದಾಸ ಪ್ರಭು, ಬೆಳ್ಳಿಹಬ್ಬ ಸಮಿತಿಯ ಗೌರವಾಧ್ಯಕ್ಷೆ, ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ, ಸಾಮಾಜಿಕ ಕಾರ್ಯಕರ್ತ ದಿನೇಶ್‌ ಕಾಮತ್‌, ಅತ್ತೂರು ಸೈಂಟ್‌ ಲಾರೆನ್ಸ್‌ ಬಸಿಲಿಕಾದ ಧರ್ಮಾಧ್ಯಕ್ಷ ಜಾರ್ಜ್‌ ಡಿ’ಸೋಜಾ, ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್‌ ಕುಮಾರ ಬಾಬು ಬೆಕ್ಕೇರಿ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರು ವೇದಿಕೆಯಲ್ಲಿದ್ದರು.

Advertisement

ಕೊಂಕಣಿ ಸಾಹಿತ್ಯ ಅಕಾಡಮಿ ಅಧ್ಯಕ್ಷ ಡಾ| ಕೆ. ಜಗದೀಶ್‌ ಪೈ ಸ್ವಾಗತಿಸಿ, ಶಿಕ್ಷಕ ರಾಜೇಂದ್ರ ಭಟ್‌ ಕಾರ್ಯಕ್ರಮ ನಿರೂಪಿಸಿದರು. ಬೆಳ್ಳಿಹಬ್ಬ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಪಿ. ಶೆಣೈ ವಂದಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಸಾಹಿತ್ಯ ಗೋಷ್ಠಿ, ಭಾಷಾ ಗೋಷ್ಠಿ, ಕವಿ ಗೋಷ್ಠಿ, ಸಾಂಸ್ಕೃತಿ ಕಾರ್ಯಕ್ರಮ ಜರಗಿತು.

ಆಂಗ್ಲ ಪ್ರಾಬಲ್ಯ; ಆತಂಕ
ನೀಲಗಿರಿ ಮರದ ಕೆಳಗಡೆ ಬೇರೆ ಯಾವುದೇ ಗಿಡಗಳು ಬೆಳೆಯುವುದಿಲ್ಲ; ಅಂತೆಯೇ ಆಂಗ್ಲ ಭಾಷೆಯ ಪ್ರಾಬಲ್ಯ ಅತಿಯಾದಾಗ ಸ್ಥಳೀಯ ಭಾಷೆಗಳ ಬೆಳವಣಿಗೆಯಾಗದು. ಆಂಗ್ಲ ಭಾಷೆಯಿಂದಾಗಿ ಭಾರತದಲ್ಲಿರುವ ಪ್ರಾದೇಶಿಕ ಭಾಷೆಗಳು ಸೊರಗುತ್ತಿವೆ ಎಂದು ಸಚಿವರು ಆತಂಕ ವ್ಯಕ್ತಪಡಿಸಿದರು.

ಆಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತಿದೆ. ಆದರೆ ಆಡು ಮುಟ್ಟದ ಸೊಪ್ಪು ಇಲ್ಲದೇ ಇರಬಹುದು; ಕೊಂಕಣಿ ಕುಟುಂಬಗಳಲ್ಲಿ ಆಹಾರವಾಗಿ ಬಳಸದ ಸೊಪ್ಪು ಇರಲಾರದು. ಆಹಾರ ಪದ್ಧತಿಗೆ ಕೊಂಕಣಿಗರು ಪ್ರಸಿದ್ಧರು ಎಂದು ಸಿ.ಟಿ. ರವಿ ಶ್ಲಾ ಸಿದರು.

ಇಂದು ಕೊಂಕಣಿ ಸಾಹಿತ್ಯ ಪ್ರಶಸ್ತಿ ಪ್ರದಾನ
ಫೆ. 23ರಂದು ಬೆಳಗ್ಗೆ 11.30ರಿಂದ ರಜತ ಮಹೋತ್ಸವ ಸಮಾರೋಪ ಸಮಾರಂಭ ನಡೆಯಲಿದೆ. ಸಮ್ಮೇಳನಾಧ್ಯಕ್ಷ, ಸಾಹಿತಿ ಗೋಕುಲದಾಸ ಪ್ರಭು, ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಷಣ ಮಾಡುವರು. ಸಂಜೆ 4.30ಕ್ಕೆ ಕೊಂಕಣಿ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರಗಲಿದ್ದು, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪ್ರಶಸ್ತಿ ಪ್ರದಾನ ಮಾಡುವರು. ಗೃಹಸಚಿವ ಬಸವರಾಜ ಬೊಮ್ಮಾಯಿ, ಸಂಸದೆ ಶೋಭಾ ಕರಂದ್ಲಾಜೆ, ಸರಕಾರದ ಮುಖ್ಯಸಚೇತಕ ವಿ. ಸುನಿಲ್‌ ಕುಮಾರ್‌, ಬೆಳ್ಳಿಹಬ್ಬ ಸಮಿತಿ ಗೌರವಾಧ್ಯಕ್ಷೆ, ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ, ಸಾಹಿತಿ ನಾ ಡಿ’ಸೋಜಾ ಉಪಸ್ಥಿತರಿರುವರು.

ಕ್ಯಾಸಿನೋ ತೆರೆಯುವ ಉದ್ದೇಶವಿಲ್ಲ
ಕಾರ್ಕಳ: ರಾಜ್ಯದಲ್ಲಿ ಕ್ಯಾಸಿನೋ ತೆರೆಯುವ ಉದ್ದೇಶ ವಿಲ್ಲ. ಅಮೆರಿಕ, ಸಿಂಗಾಪುರ, ಶ್ರೀಲಂಕಾ ಕ್ಯಾಸಿನೋ ದಿಂದಾಗಿ ಪ್ರಸಿದ್ಧಿಗೆ ಬಂದಿವೆ; ಗೋವಾದ ಪ್ರವಾಸೋ ದ್ಯಮ ಅಭಿವೃದ್ಧಿಯಲ್ಲಿ ಕ್ಯಾಸಿನೋ, ಕ್ಲಬ್‌, ಪಬ್‌ ಸಹಕಾರಿಯಾಗಿವೆ ಎಂದು ಹೇಳಿದ್ದೇನೆಯೇ ವಿನಾ ರಾಜ್ಯದಲ್ಲಿ ಕ್ಯಾಸಿನೋ ತೆರೆಯುವ ಯೋಚನೆ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಸ್ಪಷ್ಟನೆ ನೀಡಿದರು.

ಶನಿವಾರ ಕಾರ್ಕಳದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮ ಊರಿನಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಬೇರೆಡೆಗೆ ಪ್ರವಾಸ ಹೋಗುತ್ತಾರೆ. ಅವರನ್ನು ತಡೆಯಲು ಸಾಧ್ಯವಿಲ್ಲ. ಲಾಸ್‌ ವೇಗಸ್‌, ಶ್ರೀಲಂಕಾ ದೇಶಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಪ್ರವಾಸ ಕೈಗೊಳ್ಳುತ್ತಾರೆ. ಅಲ್ಲಿ ಖರ್ಚಾಗುವ ದುಡ್ಡನ್ನು ಇಲ್ಲೇ ಉಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸ ಬೇಕಾಗಿದೆ ಎಂದರು. ಕ್ಯಾಸಿನೋ, ಕ್ಲಬ್‌, ಪಬ್‌ಗ ತೆರಳುವ ಅನೇಕರು ಇಲ್ಲಿ ಮಡಿವಂತ ರಾಗಿ ಕಾಣುತ್ತಾರೆ. ಆದರೆ ಇಂತಹ ಉದ್ದೇಶವಿಟ್ಟುಕೊಂಡು ವಿದೇಶಕ್ಕೆ ತೆರಳಿ, ದುಡ್ಡು ಖರ್ಚು ಮಾಡುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಅಪಾಯಕಾರಿ ಮಾನಸಿಕತೆ
ಅಮೂಲ್ಯ ಲಿಯೋನಾ ಪಾಕ್‌ ಪರ ಘೋಷಣೆ ಕೂಗಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಶತ್ರು ದೇಶದ ಗುಣಗಾನ ಮಾಡುವ ಇಂಥವರ ಮಾನಸಿಕತೆ ಬಹಳ ಅಪಾಯಕಾರಿ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆಕೆ ತನ್ನ ಬೆನ್ನ ಹಿಂದೆ ಮಾರ್ಗದರ್ಶಕರ ತಂಡವೇ ಇದೆ ಅಂದಿದ್ದಳು. ಆ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಸಮಾಜದ ಒಳಗಿರುವ ಶತ್ರುಗಳನ್ನು ನಿಗ್ರಹಿಸುವ ಹೊಣೆಗಾರಿಕೆ ಸಮಾಜದ್ದೇ ಆಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next