Advertisement

ಕಾರ್ಕಳ: ಇನ್ನಷ್ಟು  ಹತ್ತಿರವಾದ ಜವುಳಿ ಪಾರ್ಕ್‌ ಕನಸು

09:09 PM Aug 17, 2021 | Team Udayavani |

ಕಾರ್ಕಳ:  ಗ್ರಾಮೀಣ ಯುವಕರಲ್ಲಿ ಉದ್ಯೋಗ ಭರವಸೆ ಜತೆಗೆ ರೈತರ ಮುಖದಲ್ಲೂ ಮಂದಹಾಸ ಮೂಡಿಸುವ  ಕಾರ್ಕಳ ಕ್ಷೇತ್ರದ ಪ್ರಸ್ತಾವಿತ ಜವುಳಿ ಪಾರ್ಕ್‌ ಹೊಂದುವ  ಕನಸು  ಮತ್ತಷ್ಟೂ ಹತ್ತಿರಕ್ಕೆ ಬಂದಂತಿದೆ. ಬಹು ನಿರೀಕ್ಷಿತ ಯುವ ಜನತೆಯ ಉದ್ಯೋಗದ ಕನಸಿನ  ಜವುಳಿ ಪಾರ್ಕ್‌ ಘಟಕ ಈ ಬಾರಿಯಾದರೂ ತೆರೆಯುವುದೇ ಎಂಬುದನ್ನು ಕಾದು ನೋಡಬೇಕಿದೆ.

Advertisement

2020ರ ಬಜೆಟ್‌ ಮಂಡನೆಯ ವೇಳೆ ಹಾವೇರಿ ಜಿಲ್ಲೆಯ ಶಿಗ್ಗಾವಿ ಮತ್ತು ಕಾರ್ಕಳ ಕ್ಷೇತ್ರದಲ್ಲಿ ನೂತನ ಜವುಳಿ ಪಾರ್ಕ್‌ ಸ್ಥಾಪಿಸುವ ಸಂಬಂಧ ಘೊಷಣೆ ಯಾಗಿತ್ತು. ಇದು 3 ಸಾವಿರ ಮಂದಿಗೆ ಉದ್ಯೋಗ ಒದಗಿಸುವ ಯೋಜನೆಯಾಗಿದೆ. ಅನಂತರ ಈ ಬಗ್ಗೆ ಹೇಳಿಕೊಳ್ಳುವಂತಹ ಪ್ರಗತಿ  ಕಂಡಿರಲಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಸವರಾಜ್‌ ಬೊಮ್ಮಾಯಿ ಈಗ ಸಿಎಂ ಆಗಿದ್ದಾರೆ. ಕಾರ್ಕಳ ಶಾಸಕರಾಗಿದ್ದ ಸುನಿಲ್‌ಕುಮಾರ್‌ ಸಚಿವರಾಗಿದ್ದಾರೆ. ಇಬ್ಬರ ಕ್ಷೇತ್ರಕ್ಕೂ ಒಲಿದ ಜವುಳಿ ಪಾರ್ಕ್‌ ಕಾರ್ಯಾರಂಭ ಮಾಡುವುದಕ್ಕೆ ಈಗ ಹಾದಿ ಸುಗಮವಾಗಿದೆ. ಜವುಳಿ ಪಾರ್ಕ್‌ ಕನಸು ಈಡೇರುವ ವಿಶ್ವಾಸ ಸ್ಥಳೀಯರಲ್ಲಿದೆ.

ಕಾರ್ಕಳ ಕ್ಷೇತ್ರದ ಬೆಳವಣಿಗೆಗೆ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದ್ದರೂ, ಯುವ ಸಮೂಹಕ್ಕೆ ಉದ್ಯೋಗ ಸೃಷ್ಟಿಯಾಗಲು ಜವುಳಿ ಪಾರ್ಕ್‌ ನಿರ್ಮಾಣ ಅಗತ್ಯವಿದೆ. ಜವುಳಿ ಉದ್ಯಮಕ್ಕೆ ಉತ್ತೇಜನ ನೀಡಬೇಕಿದ್ದರೆ  ಕಾರ್ಕಳದಲ್ಲಿ  ಜವುಳಿ ಪಾರ್ಕ್‌ ಸ್ಥಾಪನೆ ಆಗಬೇಕೆನ್ನುವುದು ಶಾಸಕರ ಇಚ್ಛೆಯಾಗಿತ್ತು. ಹಲವು ವರ್ಷಗಳಿಂದ ಸರಕಾರಕ್ಕೆ ಒತ್ತಡ ತರುವ ಪ್ರಯತ್ನ ನಡೆಸಿದ್ದರು.  ಕಾರ್ಕಳದ ಮಿಯ್ನಾರಿನ ಅಡ್ಕರ ಪಲ್ಕೆಯಲ್ಲಿ 20 ಎಕರೆ ಜಾಗ  ಗುರುತಿಸಲಾಗಿತ್ತು. ಅರಣ್ಯ ಸಮಸ್ಯೆಯಿಂದ ಸಮಸ್ಯೆಯಾಯಿತೆಂದು ಅಂತಿಮವಾಗಿ ಹೆಬ್ರಿಯ ಚಾರ ಗ್ರಾಮದಲ್ಲಿ  ಜವಳಿ ಪಾರ್ಕ್‌ಗೆ (ಟೆಕ್ಸ್‌ಟೈಲ್ಸ್‌)  ಸ್ಥಳ ಗುರುತಿಸಲಾಗಿದೆ.

3 ಸಾವಿರ ಯುವಕರಿಗೆ  ಉದ್ಯೋಗ ಕಲ್ಪಿಸುವ ನಿರೀಕ್ಷಿತ ಜವುಳಿ ಪಾರ್ಕ್‌ ನಿರ್ಮಾಣದಿಂದ ಸ್ಥಳೀಯವಾಗಿ  ವ್ಯಾಪಾರ ವಹಿವಾಟಿನ ಮೇಲೆ ಉತ್ತಮ ಪರಿಣಾಮ ಉಂಟಾಗಲಿದೆ. ಜತೆಗೆ ಜಿಲ್ಲೆಯ ಸಣ್ಣಪುಟ್ಟ  ಜಿನ್ನಿಂಗ್‌ ಮಿಲ್‌ಗ‌ಳಿಗೂ ಉತ್ತೇಜನ ಸಿಗಲಿದೆ.  ಸಹಕಾರಿ ಕ್ಷೇತ್ರದಲ್ಲಿ  ಜವುಳಿ ಗಿರಣಿಗಳನ್ನು ಮರಳಿ ತೆರೆಯಲು ಸಹಕಾರಿಯಾಗಲಿದೆ. ಇದರಿಂದ ಆರ್ಥಿಕ ಚಟುವಟಿಕೆ ವೃದ್ಧಿಯಾಗಲಿದೆ. ಸರಕು ಸಾಗಣೆಯಿಂದ ಸರಕಾರದ ಬೊಕ್ಕಸಕ್ಕೂ ಆದಾಯ ಸಿಗಲಿದೆ.

Advertisement

ಎಸ್‌ಪಿವಿ ರಚಿಸಿ ಜಾಗ ಹಸ್ತಾಂತರ :

ಗಾರ್ಮೆಂಟ್‌ ಫ್ಯಾಕ್ಟರಿಯನ್ನು ಸ್ಥಾಪಿಸುವ  ಉದ್ಯಮಿಗೆ 25 ಕೋ.ರೂ. ಅಥವಾ ಯೋಜನಾ ವೆಚ್ಚದ ಶೇ.25ರಷ್ಟು  ಸಬ್ಸಿಡಿ  ದೊರೆಯಲಿದೆ.  ವಿಶೇಷ ವಾಹಕ ರಚನೆಯಾದಲ್ಲಿ ಸಬ್ಸಿಡಿ 40 ಕೋ.ರೂ. ಅಥವಾ  ಯೋಜನಾ ವೆಚ್ಚದಲ್ಲಿ  ಶೇ.40ರಷ್ಟು  ಸಿಗುತ್ತದೆ.  ಜವುಳಿ ಪಾರ್ಕ್‌ ಸ್ಥಾಪಿಸಲು ಆಸಕ್ತ ಉದ್ಯಮಿಗಳು ಎಸ್‌ಪಿವಿ ರಚಿಸಿಕೊಂಡು ಅಗತ್ಯ ಜಮೀನನ್ನು ವಶಕ್ಕೆ ಪಡೆದ  ಅನಂತರವೇ ಜವುಳಿ ಪಾರ್ಕ್‌ ಸ್ಥಾಪನೆ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ.

ಮತ್ತಷ್ಟೂ  ಕೈಗಾರಿಕೆ  ಘಟಕದ ಭರವಸೆ :

ಕಾರ್ಕಳ ಕ್ಷೇತ್ರಕ್ಕೆ ಮತ್ತಷ್ಟು ದೂರದೃಷ್ಟಿಯ ಯೋಜನೆಗಳು ದೊರಕುವ ಭರವಸೆ ಚಿಗುರೊಡೆದಿದೆ. ಜವುಳಿ ಘಟಕದ ಜತೆ ಕಾರ್ಕಳ ಪರಿಸರದಲ್ಲಿ  ಕೈಗಾರಿಕೆಗೆ 100 ಎಕರೆ  ಪ್ರತ್ಯೇಕ ಭೂಮಿ ಗುರುತಿಸಲು, ಕನ್ನಡ ಭವನ ನಿರ್ಮಾಣಕ್ಕೆ ಜಾಗ ಗುರುತಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದು ಕ್ಷೇತ್ರಕ್ಕೆ  ಮತ್ತಷ್ಟೂ ಕೈಗಾರಿಕ ಘಟಕ ತರುವ  ಪ್ರಯತ್ನದಲ್ಲಿ ಸಚಿವರು ಇದ್ದಾರೆ ಎನ್ನುವುದನ್ನು ಸೂಚಿಸುತ್ತಿದೆ.

ಜವುಳಿ ಪಾರ್ಕ್‌ ನಿರ್ಮಿಸುವುದಕ್ಕೆ ಸಂಬಂಧಿಸಿ ಜಾಗ ಕಾದಿರಿಸುವ ಕೆಲಸ ಅಂತಿಮಗೊಂಡಿದೆ. ಮುಂದಿನ ದಿನಗಳಲ್ಲಿ ಅದಕ್ಕೆ ವೇಗ ನೀಡುವ ಪ್ರಯತ್ನ  ಖಂಡಿತವಾಗಿಯೂ ನಡೆಯಲಿದೆ. ವಿ. ಸುನಿಲ್‌ಕುಮಾರ್‌,ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು

ಜವುಳಿ ಪಾರ್ಕ್‌ ತೆರೆಯಲು  ಹೆಬ್ರಿಯ ಚಾರ ಗ್ರಾಮದಲ್ಲಿ  20 ಎಕರೆ ಜಾಗ ಗುರುತು ಮಾಡಿ, ಜಿಲ್ಲಾಧಿಕಾರಿಗಳಿಂದ ಸರಕಾರಕ್ಕೆ ಅನುಮೋದನೆಗಾಗಿ ಹೋಗಿದೆ. ಈ ಹಿಂದೆ ಮಿಯ್ನಾರು ಭಾಗದಲ್ಲಿ ಜಾಗದ ಹುಡುಕಾಟ ನಡೆಸಲಾಗಿತ್ತು. ಶಿವಶಂಕರ್‌, ಅಸಿಸ್ಟೆಂಟ್‌ ಡೈರೆಕ್ಟರ್‌ ಕೈಮಗ್ಗ ಮತ್ತು ಜವಳಿ ಇಲಾಖೆ ಉಡುಪಿ

 

-ಬಾಲಕೃಷ್ಣ ಭೀಮಗುಳಿ

 

Advertisement

Udayavani is now on Telegram. Click here to join our channel and stay updated with the latest news.

Next