Advertisement

ಕಾರ್ಕಳ: ಒಟ್ಟು 10 ಡೆಂಗ್ಯೂ ಪ್ರಕರಣ; 15 ಮಂದಿಯಲ್ಲಿ ರೋಗ ಲಕ್ಷಣ

07:25 PM Jul 26, 2019 | Sriram |

ಕಾರ್ಕಳ: ದ.ಕ., ಉಡುಪಿ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣ ದಿನದಿಂದ ದಿನಕ್ಕೆ ಏರುತ್ತಿದ್ದು, ಕಾರ್ಕಳ ತಾಲೂಕಿನಲ್ಲಿ ಒಟ್ಟು 10 ಮಂದಿಗೆ ಡೆಂಗ್ಯೂ ಭಾದಿಸಿರುವುದು ಖಚಿತವಾಗಿದೆ. 15 ಮಂದಿಯಲ್ಲಿ ರೋಗ ಲಕ್ಷಣ ಕಂಡುಬಂದಿದೆ ಎಂದು ತಾ| ವೈದ್ಯಾಧಿಕಾರಿ ಡಾ| ಕೃಷ್ಣಾನಂದ ಶೆಟ್ಟಿ ಉದಯವಾಣಿಗೆ ತಿಳಿಸಿದರು.

Advertisement

ಹೆಬ್ರಿ ಗ್ರಾಮದಲ್ಲಿ 2, ಕುಕ್ಕುಂದೂರು 1, ನಲ್ಲೂರು 1 ಸೇರಿದಂತೆ ಒಟ್ಟು 10 ಡೆಂಗ್ಯೂ ಪ್ರಕರಣ ಪತ್ತೆಯಾಗಿದೆ. ಮಾಳದಲ್ಲಿ ಇಬ್ಬರಿಗೆ ಮಲೇರಿಯಾ ಇರುವುದು ದೃಢ ಪಟ್ಟಿದೆ.

ಮನೆಗೆ ಭೇಟಿ
ಡೆಂಗ್ಯೂ ಶಂಕಿತ
ಅಥವಾ ಖಚಿತ ಪ್ರಕರಣ ಕಂಡು ಬಂದಲ್ಲಿ ಅಂತಹ ಮನೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬಂದಿ ತತ್‌ಕ್ಷಣವೇ ಭೇಟಿ ನೀಡಿ ಜ್ವರ ಸಮೀಕ್ಷೆ, ಸ್ಥಳೀಯರನ್ನು ಪರೀಕ್ಷೆಗೊಳ ಪಡಿಸುತ್ತಿದ್ದಾರೆ.

ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ವಿವಿಧ ಗ್ರಾಮಗಳಲ್ಲಿ ಸುಮಾರು 95ಕ್ಕೂ ಅಧಿಕ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿ ಗ್ರಾ.ಪಂ. ಕಚೇರಿಗೆ ಮಾಹಿತಿ ಶಿಕ್ಷಣ ವಾಹನ ತೆರಳಿ ಆರೋಗ್ಯ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ಮಾಹಿತಿ, ಕರಪತ್ರ ವಿತರಣೆ ಮಾಡ ಲಾಗಿದೆ.

ಮಾಳ, ನಲ್ಲೂರು ಭಾಗದ ಮೂವರು ಡೆಂಗ್ಯೂ ಬಾಧಿತರು ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ದಿನಂಪ್ರತಿ 40ರಿಂದ 50 ಮಂದಿ ಜ್ವರಪೀಡಿತರು ಆಸ್ಪತ್ರೆಗೆ ಬಂದು ಪರೀಕ್ಷೆಗೊಳಪಡುತ್ತಾರೆ. ಜ್ವರ, ಮೈಕೈ ನೋವು, ಬೆನ್ನು ನೋವು ಕಂಡುಬಂದಲ್ಲಿ ತತ್‌ಕ್ಷಣ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರಕ್ತ ಪರೀಕ್ಷಿಸಿಕೊಳ್ಳುವಂತೆ ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಕೇಶವ ಮಯ್ಯ ಸಲಹೆ ನೀಡುತ್ತಾರೆ.

Advertisement

ಪುರಸಭಾ ವ್ಯಾಪ್ತಿಯಲ್ಲಿ ಡೆಂಗ್ಯೂ ಭಾದಿತರು ಕಂಡುಬಂದಿಲ್ಲ. ಡೆಂಗ್ಯೂ ಕುರಿತಾಗಿ ಮಾಹಿತಿ, ಅರಿವು ಮೂಡಿಸುವ ಕಾರ್ಯ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕರಪತ್ರ ವಿತರಿಸಲಾಗುತ್ತಿದೆ. ಈಗಾಗಲೇ 18 ವಾರ್ಡ್‌ಗಳಲ್ಲಿ ಚರಂಡಿ ಹೂಳು ತೆಗೆದು ಸರಾಗವಾಗಿ ನೀರು ಹರಿಯುವಂತೆ ಮಾಡಲಾಗಿದೆ. 5 ದಿನಗಳಲ್ಲಿ ಇನ್ನುಳಿದ 5 ವಾರ್ಡ್‌ಗಳ ಚರಂಡಿ ಹೂಳು ತೆಗೆದು ನೀರು ನಿಲ್ಲದಂತೆ ಕಾಮಗಾರಿ ನಡೆಸಲಾಗು ವುದು ಎಂದು ಪುರಸಭೆ ಮುಖ್ಯಾಧಿಕಾರಿ ಮೇಬಲ್‌ ಡಿ’ಸೋಜಾ ಹೇಳಿದರು.

ಸೊಳ್ಳೆ ನಿಯಂತ್ರಣಕ್ಕೆ ಮನೆ ಮದ್ದು
ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಸಂಜೆಯಾದರೆ ಸಾಕು ಸೊಳ್ಳೆಗಳು ಮನೆಗಳಿಗೆ ದಾಳಿಯಿಡುತ್ತದೆ. ಅಂತಹ ಸಂದರ್ಭ ಬೇವಿನ ಹೊಗೆ ಹಾಕಿದರೆ ಸೊಳ್ಳೆಗಳು ಸುಳಿಯುವುದಿಲ್ಲ. ಇದಕ್ಕಾಗಿ ಮನೆ ಸಮೀಪದಲ್ಲಿ ಬೇವಿನ ಗಿಡಗಳನ್ನು ನೆಡುವ ಅಗತ್ಯವಿದೆ. ನಿಂತ ನೀರಿನ ಮೇಲೆ ಸೀಮೆ ಎಣ್ಣೆ ಹಾಕಿದರೆ ಸೊಳ್ಳೆಗಳು ಉತ್ಪತ್ತಿಯಾಗುವುದಿಲ್ಲ.

ಗ್ರಾಮೀಣ ಪ್ರದೇಶಗಳಾದ ಅಜೆಕಾರು, ಮುನಿಯಾಲು, ದೊಂಡೇರಂಗಡಿ, ಹಿರ್ಗಾನ, ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಈಗಾಗಲೇ ಜನಜಾಗೃತಿ ಕಾರ್ಯಕ್ರಮ ನಡೆಯುತ್ತಿವೆ. ಬೆಳ್ಮಣ್‌, ಬೋಳ, ಮುಂಡ್ಕೂರು, ಇನ್ನಾ, ಕಲ್ಯಾ, ನಿಟ್ಟೆ ಗ್ರಾಮಗಳಲ್ಲಿ ಆಶಾ ಮತ್ತು ಆರೋಗ್ಯ ಇಲಾಖೆ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಪರಿಸರ ಸ್ವತ್ಛ‌ತೆ ಕುರಿತಾಗಿ ಕಾಳಜಿ ವಹಿಸುವಂತೆ ಗ್ರಾಮಸ್ಥರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ರಕ್ಷಣಾ ವಿಧಾನ
ಡೆಂಗ್ಯೂನಿಂದ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಅಪಾಯ ಹೆಚ್ಚು. ಹೀಗಾಗಿ ಮಕ್ಕಳು, ಗರ್ಭಿಣಿ ಯರು, ವೃದ್ಧರು ಹಾಗೂ ರೋಗಿಗಳು ಹೆಚ್ಚು ಎಚ್ಚರಿಕೆ ವಹಿಸಬೇಕಾಗುತ್ತದೆ. ಸೊಳ್ಳೆ ನಿರೋಧಕ ಹಾಗೂ ಪರದೆ ಬಳಸಿ ಸೊಳ್ಳೆ ಕಚ್ಚುವಿಕೆಯಿಂದ ಪಾರಾಗ ಬಹುದು. ಮೈ ಮುಚ್ಚುವಂತೆ ಬಟ್ಟೆ ಧರಿಸಬೇಕು. ಕಿಟಕಿ, ಬಾಗಿಲಿಗೆ ಸೊಳ್ಳೆ ನಿಯಂತ್ರಣ ಜಾಲರಿ ಅಳವಡಿಸ ಬೇಕು. ಸೊಳ್ಳೆ ಪರದೆ ಬಳಸಬೇಕು.

ದ್ರಾವಣ ಸಿಂಪಡಣೆ
ಸೊಳ್ಳೆಗಳ ಲಾರ್ವಾ (ಮೊಟ್ಟೆ) ಪತ್ತೆಯಾದ ಪ್ರದೇಶಗಳಲ್ಲಿ ರಾಸಾಯನಿಕ ದ್ರಾವಣ ಸಿಂಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಪ್ರಕರಣಗಳನ್ನು ತಡೆಗಟ್ಟಲು ನಿರಂತರವಾಗಿ ಶ್ರಮಿಸಲಾಗುತ್ತಿದೆ.
-ಡಾ| ಪ್ರಶಾಂತ್‌ ಭಟ್‌, ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಉಡುಪಿ

ಸಮಸ್ಯೆ ಇದ್ದರೆ ನಮಗೆ ತಿಳಿಸಿ
ನಗರದಲ್ಲಿ ಡೆಂಗ್ಯೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ “ಉದಯವಾಣಿ’ ಕೂಡ ಜಾಗೃತಿ ಮೂಡಿಸುವ ಜತೆಗೆ ನಗರವಾಸಿಗಳಿಗೆ ತಮ್ಮ ಸಮಸ್ಯೆ-ಪರಿಹಾರ ಮಾರ್ಗೋಪಾಯಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲು ವೇದಿಕೆ ನೀಡುತ್ತಿದೆ. ಆ ಮೂಲಕ ಜನರು ಕೂಡ ಡೆಂಗ್ಯೂ ಹಾಗೂ ಮಲೇರಿಯಾ ವ್ಯಾಪಕವಾಗುವುದನ್ನು ತಡೆಗಟ್ಟುವುದಕ್ಕೆ ತಮ್ಮ ಜವಾಬ್ದಾರಿ ಮೆರೆಯುವುದು ಆವಶ್ಯಕ. ನಗರದಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳು ಕಂಡುಬಂದರೆ ಆ ಬಗ್ಗೆ ಸೂಕ್ತ ವಿವರದೊಂದಿಗೆ ಫೋಟೋ ತೆಗೆದು ಕಳುಹಿಸಬಹುದು. ಅಲ್ಲದೆ ಕೆಳ ಹಂತದ ಅಧಿಕಾರಿಗಳಿಂದ ಸಮಸ್ಯೆಗೆ ಸೂಕ್ತ ಸ್ಪಂದನೆ ದೊರೆಯದಿದ್ದರೂ ಆ ಬಗ್ಗೆ ಗಮನಕ್ಕೆ ತಂದರೆ ಉನ್ನತ ಅಧಿಕಾರಿಗಳ ಗಮನಸೆಳೆಯುವ ಪ್ರಯತ್ನ ಮಾಡಲಾಗುವುದು.
9148594259

ಮಾಹಿತಿಗೆ ಸಂಪರ್ಕಿಸಿ
ಸಾಂಕ್ರಾಮಿಕ ರೋಗ ಕಂಡುಬಂದಲ್ಲಿ ಅಥವಾ ಆರೋಗ್ಯ ಇಲಾಖೆಗೆ ಸಂಬಂಧಪಟ್ಟ ಯಾವುದೇ ಮಾಹಿತಿ ಪಡೆಯಲು 08258 – 231788 ಅಥವಾ ಆರೋಗ್ಯ ಸಹಾಯವಾಣಿ 104 ನಂಬರ್‌ ಅನ್ನು ಸಂಪರ್ಕಿಸಿ.
ಡಾ| ಕೃಷ್ಣಾನಂದ ಶೆಟ್ಟಿ ,
ತಾಲೂಕು ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next