ವಿಜಯಪುರ: 1999ರಲ್ಲಿ ಪಾಕ್ ವಿರುದ್ಧ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ವೀರ ಯೋಧರ ಪರಾಕ್ರಮ ತ್ಯಾಗ-ಬಲಿದಾನ ಸ್ಮರಣೀಯ. ವಿಷಮ ಪರಿಸ್ಥಿತಿ ಮಧ್ಯೆಯೂ ಪಾಕ್ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಭಾರತ ಐತಿಹಾಸಿಕ ವಿಜಯ ದಾಖಲಿಸಿತು ಎಂದು ಸೈನಿಕ ಶಾಲೆ ಪ್ರಾಚಾರ್ಯ, ಭಾರತೀಯ ನೌಕಾಪಡೆಯ ಕ್ಯಾಪ್ಟನ್ ವಿನಯ ತಿವಾರಿ ಬಣ್ಣಿಸಿದರು.
ನಗರದ ಸೈನಿಕ ಶಾಲೆಯಲ್ಲಿ ಶಾಲಾ ಆವರಣದಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಗೌರವ ಸಲ್ಲಿಸಿ ಕಾರ್ಗಿಲ್ ವಿಜಯೋತ್ಸವ ಸ್ಮರಣಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ವೀರ ಸೈನಿಕರು ಪಾಕಿಸ್ತಾನಕ್ಕೆ ಸೆಡ್ಡು ಹೊಡೆದು ತಕ್ಕ ಪಾಠ ಕಲಿಸಿ ವಿಜಯ ಸಾಧಿಸಿದ ಭಾರತೀಯ ಸೇನಾ ವೀರಪುತ್ರರ ಅಮೂಲ್ಯ ತ್ಯಾಗ-ಬಲಿದಾನ ದೇಶದ ಕೋಟ್ಯಂತರ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.
ವೈರಿ ರಾಷ್ಟ್ರದ ವಿರುದ್ಧ ಹೋರಾಟದಲ್ಲಿ ವೀರ ಮರಣ ಅಪ್ಪಿದ ಭಾರತೀಯ ವೀರ ಯೋಧರ ಬಲಿದಾನವನ್ನು ಭಾರತೀಯರಾದ ನಾವು ಅನುದಿನ ಸ್ಮರಿಸುವ ಹಾಗೂ ಗೌರವಿಸಬೇಕು. ನಮ್ಮ ಯೋಧರ ಬಲಿದಾನದ ಋಣವನ್ನು ನಮ್ಮಿಂದ ಎಂದಿಗೂ ತೀರಿಸಲು ಸಾಧ್ಯವಿಲ್ಲ. ಆದರೆ ಭಾರತೀಯ ಸೈನ್ಯದ ಕೆಚ್ಚೆದೆ ಪರಾಕ್ರಮದ ಕುರಿತು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮ ಪಾಲಿನ ಹೆಮ್ಮೆ. ಭಾರತೀಯ ಸೈನ್ಯ ಎಂದರೆ ದೇಶಭಕ್ತಿಯ ಇನ್ನೊಂದು ಹೆಸರು ಎಂದರು.
ಉಪ ಪ್ರಾಚಾರ್ಯ ಲೆಫ್ಟ್ ನೆಂಟ್ ಕಮಾಂಡರ್ ರವಿಕಾಂತ ಶುಕ್ಲಾ, ಆಡಳಿತಾಧಿಕಾರಿ ಮೇಜರ್ ವಿಕ್ರಮ್ ಸಿಂಗ್, ವರಿಷ್ಠ ಶಿಕ್ಷಕ ಜಿ. ಶ್ರೀರಾಮೂರ್ತಿ ಇತರರು ಕಾರ್ಗಿಲ್ ವಿಜಯೋತ್ಸವ ಆಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಕಾರ್ಗಿಲ್ ವಿಜಯ ದಿವಸ ಕುರಿತು ಸೈನಿಕ ಶಾಲೆ ಮಕ್ಕಳಿಗೆ ರಸಪ್ರಶ್ನೆ, ದೇಶಭಕ್ತಿಗೀತೆ ಗಾಯನ ಸೇರಿದಂತೆ ಆನ್ಲೈನ್ ಮೂಲಕ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು