Advertisement

ಶಿಥಿಲಾವಸ್ಥೆ ತಲುಪಿದ ಕಾರಟಗಿ ಪ್ರಾಥಮಿಕ ಶಾಲೆ ಕಟ್ಟಡ

11:17 AM Jul 22, 2019 | Team Udayavani |

ಕಾರಟಗಿ: ನೂತನ ತಾಲೂಕು ಕೇಂದ್ರವಾದ ಪಟ್ಟಣದ ಬಸವೇಶ್ವರ ನಗರದ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ವಿದ್ಯಾರ್ಥಿಗಳು ಭಯದಲ್ಲೆ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

1997ರಲ್ಲಿ ಆರಂಭವಾದ ಈ ಶಾಲೆಯಲ್ಲಿ 1ರಿಂದ 7ನೇ ತರಗತಿಗಳು ನಡೆಯುತ್ತಿದ್ದು, 100 ವಿದ್ಯಾರ್ಥಿಗಳಿದ್ದಾರೆ. ಇವರಿಗೆ ಬೋಧನೆ ಮಾಡಲು ಐವರು ಶಿಕ್ಷಕರಿದ್ದಾರೆ. ಆದರೆ ಮಕ್ಕಳಿಗೆ ವ್ಯವಸ್ಥಿತವಾದ ಕೊಠಡಿಗಳಿಲ್ಲ. ಎರಡು ಶಾಲಾ ಕೊಠಡಿಗಳ ಮೇಲ್ಛಾವಣಿ ಕಿತ್ತು ಹೋಗಿದ್ದು ಅರೆಬರೆಯಾಗಿ ಕಬ್ಬಿಣದ ಸರಳು ಕಾಣುತ್ತವೆ. ಕೆಲವೊಮ್ಮೆ ವಿದ್ಯಾರ್ಥಿಗಳು ಶಾಲೆಯಲ್ಲಿ ಕುಳಿತಾಗ ಮೇಲ್ಛಾವಣಿಯ ಸಿಮೆಂಟ್ ತುಣುಕುಗಳು ಬಿದ್ದ ಘಟನೆಗಳು ಜರುಗಿವೆ. ಅಲ್ಲದೇ ಶಾಲಾ ಕಟ್ಟಡದ ಹೊರಮೇಲ್ಮೈ ಕೂಡ ಅಲ್ಲಲ್ಲಿ ಬಿರುಕು ಬಿಟ್ಟಿದ್ದು ಭಾರಿ ಮಳೆಗಾಳಿ ಬೀಸಿದ ಸಮಯದಲ್ಲಿ ಅವಘಡ ಸಂಭವಿಸುವ ಸಾಧ್ಯತೆಗಳಿವೆ. ಶಾಲೆಯಲ್ಲಿ ಬಿಸಿಯೂಟ, ಬೆಳಗಿನ ಕ್ಷೀರ ಭಾಗ್ಯ ಸಮರ್ಪಕವಾಗಿದೆ. ವಿದ್ಯಾರ್ಥಿಗಳು ನಿತ್ಯ ಫ್ಲೊರೈಡಯುಕ್ತ ನೀರನ್ನೇ ಸೇವಿಸುತ್ತಿದ್ದಾರೆ. ಮುಖ್ಯವಾಗಿ ಈ ಶಾಲೆಗೆ ಕಾಂಪೌಂಡ್‌ ಇಲ್ಲದ ಕಾರಣ ಸಂಜೆ ಶಾಲೆ ಅವಧಿ ಮುಗಿಯುತ್ತಿದ್ದಂತೆ ಕಿಡಿಗೇಡಿಗಳ ಹಾವಳಿ ಹೆಚ್ಚಾಗುತ್ತದೆ. ಅಲ್ಲದೇ ಶಾಲಾ ಆವರಣ ಹಾಗೂ ಕೊಠಡಿಗಳಲ್ಲಿ ಅನೈತಿಕ ಚಟುವಟಿಕೆಗಳೂ ನಡೆಯುತ್ತಿವೆ. ಇದರಿಂದಾಗಿ ಶಾಲೆಯ ಪರಿಸರ ಸಂಪೂರ್ಣ ಹದಗೆಟ್ಟಿದೆ. ಶಿಕ್ಷಣ ಇಲಾಖೆ ಶಾಲೆ ಸಮಸ್ಯೆಗಳತ್ತ ಗಮನಹರಿಸದೇ ನಿರ್ಲಕ್ಷ್ಯ ತೋರಿದ್ದಾರೆ.

ಬಸವೇಶ್ವರ ನಗರದ ಸರಕಾರಿ ಶಾಲೆಗೆ ಆವರಣ ಗೋಡೆ ಇಲ್ಲದ ಕಾರಣ ಶಾಲೆಯಲ್ಲಿ ಕೆಲ ಕಿಡಿಗೇಡಿಗಳು ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದರಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವ ನಿಟ್ಟಿನಲ್ಲಿ ಈ ಕುರಿತು ಎಸ್‌ಡಿಎಂಸಿ ಅವರೊಂದಿಗೆ ಚರ್ಚಿಸಿ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದೇವೆ.•ಸೋಮಪ್ಪ ಎಂ., ಮುಖ್ಯಶಿಕ್ಷಕ

ಶಾಲಾ ಆವರಣ ಗೋಡೆ ನಿರ್ಮಾಣಕ್ಕೆ ಎಚ್ಕೆಆರ್‌ಡಿಬಿ ಯೋಜನಯಡಿ ಬೇಡಿಕೆ ಸಲ್ಲಿಸಿದ್ದೇವೆ. ಶಾಲಾ ಕೊಠಡಿಗಳ ದುರಸ್ತಿಗಾಗಿ ಇಲಾಖೆ ಗಮನಕ್ಕೆ ತರಲಾಗಿದೆ. ಅಲ್ಲದೆ ಶುದ್ಧ ಕುಡಿವ ನೀರು ಪೂರೈಕೆಗಾಗಿ ಪುರಸಭೆ ವತಿಯಿಂದ ಕೊಳವೆ ಬಾವಿ ಕೊರೆಸಲಾಗಿದೆ. ಶೀಘ್ರದಲ್ಲೇ ಶುದ್ಧ ಕುಡಿವ ನೀರು ಪೂರೈಕೆಗೆ ಹಾಗೂ ಶಾಲೆಯಲ್ಲಿ ಸಂಜೆ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಮುಖ ಶಿಕ್ಷಕರು ಗಮನಕ್ಕೆ ತಂದಿದ್ದಾರೆ. ಅಗತ್ಯ ಕ್ರಮಕೈಗೊಳ್ಳಲಾಗುವುದು.•ತಿಮ್ಮಣ್ಣ ನಾಯಕ,ಸಿ.ಆರ್‌.ಪಿ.

Advertisement

Udayavani is now on Telegram. Click here to join our channel and stay updated with the latest news.

Next