Advertisement

ಒಂದು ವರ್ಷದಿಂದ ಆಡಳಿತಾಧಿಕಾರಿಗಳದ್ದೇ ಪ್ರಭುತ್ವ

12:21 AM Nov 29, 2019 | Sriram |

ವಿಶೇಷ ವರದಿ-ಕಾಪು: ರಾಜ್ಯದ 116 ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸರಕಾರವು ನಿಗದಿ ಪಡಿಸಿದ ಮೀಸಲಾತಿಯ ವಿವಾದದಿಂದಾಗಿ ಕಾಪು ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಸಂಪೂರ್ಣ ನನೆಗುದಿಗೆ ಬಿದ್ದಿದೆ. ಇದರಿಂದಾಗಿ ಪುರಸಭೆಯಲ್ಲಿ ಕಳೆದೊಂದು ಚುನಾಯಿತ ಪ್ರತಿನಿಧಿಗಳ ಸರಕಾರಕ್ಕೆ ಗದ್ದುಗೆಯಿಲ್ಲದೇ, ವರ್ಷದಿಂದೀಚೆಗೆ ಆಡಳಿತಾಧಿಕಾರಿಗಳದ್ದೇ ಪ್ರಭುತ್ವ ಮೆರೆಯುತ್ತಿದೆ.

Advertisement

ಏನೀ ಸಮಸ್ಯೆ ?
ರಾಜ್ಯದಲ್ಲಿ 2018ರಲ್ಲಿ ಚುನಾವಣೆ ನಡೆದಿದ್ದ 116 ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಅಂದು ಆಡಳಿತದಲ್ಲಿದ್ದ ಸಮ್ಮಿಶ್ರ ಸರಕಾರವು 3.09.2018ರಂದು ಮೀಸಲಾತಿ ಪ್ರಕಟಿಸಿತ್ತು. ಸರಕಾರ ಪ್ರಕಟಿಸಿದ ಮೀಸಲಾತಿಯ ವಿರುದ್ಧ ಕೆಲವು ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ ಹೊಸ ಮೀಸಲಾತಿ ಪ್ರಕ್ರಿಯೆಯೊಳಗೆ 2016ರಲ್ಲಿ ಚುನಾವಣೆ ನಡೆದಿದ್ದ ಪುರಸಭೆಗಳನ್ನೂ ಸೇರಿಸಿದ್ದರಿಂದ ಕಾಪು ಪುರಸಭೆಯು ಕಳೆದೊಂದು ವರ್ಷದಿಂದ ಚುನಾಯಿತ ಪ್ರತಿನಿಧಿಗಳ ಆಡಳಿತದಿಂದ ದೂರ ಉಳಿಯುವಂತಾಗಿದೆ.

2016ರಲ್ಲಿ ಕಾಪು ಪುರಸಭೆ ಅಸ್ತಿತ್ವಕ್ಕೆ
ಕಾಪು, ಮಲ್ಲಾರು ಹಾಗೂ ಉಳಿಯಾರಗೋಳಿ ಗ್ರಾಮ ಪಂಚಾಯತ್‌ಗಳನ್ನು ಸೇರಿಸಿಕೊಂಡು 2015ರಲ್ಲಿ ಕಾಪು ಪುರಸಭೆ ಅಸ್ತಿತ್ವಕ್ಕೆ ಬಂದಿತ್ತು. ಅಸ್ತಿತ್ವಕ್ಕೆ ಬಂದ ವರ್ಷದ ಅಂತರದಲ್ಲಿ 2016ರಲ್ಲಿ ಕಾಪು ಪುರಸಭೆಗೆ ಚುನಾವಣೆ ನಡೆದು ಮೊದಲ 30 ತಿಂಗಳ ಅವಧಿಗೆ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಸಾಮಾನ್ಯ ಮೀಸಲು ನಿಗದಿಯಾಗಿತ್ತು. ಅದರಂತೆ 2016ರಲ್ಲಿ ಸೌಮ್ಯಾ ಸಂಜೀವ ಅಧ್ಯಕ್ಷೆಯಾಗಿ, ಕೆ.ಎಚ್‌. ಉಸ್ಮಾನ್‌ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಪಕ್ಷದ ಒಡಂಬಡಿಕೆಯಂತೆ 2018ರಲ್ಲಿ ಮಾಲಿನಿ ಅವರು ಎರಡನೇ ಅಧ್ಯಕ್ಷೆಯಾಗಿ ಆಯ್ಕೆಯಾದರೆ, ಕೆ.ಎಚ್‌. ಉಸ್ಮಾನ್‌ ಉಪಾಧ್ಯಕ್ಷರಾಗಿ ಮುಂದುವರಿದಿದ್ದರು. ಈರ್ವರು ಅಧ್ಯಕ್ಷರ ಅಧಿಕಾರಾವಧಿಯು 2018 ಡಿಸೆಂಬರ್‌ 3ರಂದು ಕೊನೆಗೊಂಡಿದ್ದು, ಬಳಿಕದ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯದೇ ಇರುವುದರಿಂದ ಪುರಸಭೆಯಲ್ಲಿ ಪ್ರಜಾಪ್ರಭುತ್ವ ಮಾದರಿಯ ಆಡಳಿತಕ್ಕೆ ಕತ್ತರಿ ಬಿದ್ದಿದೆ.

ಒಂದೂವರೆ ವರ್ಷದಲ್ಲೇ
ಬರಲಿದೆ ಚುನಾವಣೆ
ಹಿಂದಿನ ಮೀಸಲಿನಂತೆ ಕಾಪು ಪುರಸಭೆಯ 2 ನೇ ಅವಧಿಗೆ ಹಿಂದುಳಿದ ವರ್ಗ (ಅ) ಮಹಿಳೆ ಅಧ್ಯಕ್ಷೆಯಾಗಿ, ಸಾಮಾನ್ಯ ವರ್ಗ ಮಹಿಳೆ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಬೇಕಿತ್ತು. ಆದರೆ ಈ ರಾಜ್ಯ ಸರಕಾರ ಕಾಪು ಪುರಸಭೆಗೂ ಹೊಸ ಮೀಸಲಾತಿಯನ್ನು ಹೊರಡಿಸಿದ ಪರಿಣಾಮ ಮತ್ತು ಹೊಸ ಮೀಸಲು ನಿಗದಿಯನ್ನು ಪ್ರಶ್ನಿಸಿ ರಾಜ್ಯದ ಇತರ ಕೆಲವು ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ಕೋರ್ಟ್‌ ಮೆಟ್ಟಿಲೇರಿದ ಪರಿಣಾಮದಿಂದಾಗಿ ಕಾಪು ಪುರಸಭೆಗೂ ಅದು ಅನ್ವಯವಾಗಿ ಬಿಟ್ಟಿದೆ. ಇದರಿಂದ ಕಾಪು ಪುರಸಭೆಯಲ್ಲಿ ಒಂದು ವರ್ಷದಿಂದ ಅಧ್ಯಕ್ಷ-ಉಪಾಧ್ಯಕ್ಷರೇ ಇಲ್ಲದಂತಾಗಿದೆ. ಇದರಿಂದಾಗಿ ಕಾಪು ಪುರಸಭೆಯ ಅಧ್ಯಕ್ಷ – ಉಪಾಧ್ಯಕ್ಷರ 5 ವರ್ಷಗಳ ಅಧಿಕಾರವಧಿಯ ಒಂದು ವರ್ಷ ಅಧಿಕಾರವೇ ಇಲ್ಲದೇ ಉಳಿಯುವಂತಾಗಿದೆ. ಮುಂದಿನ 15 ತಿಂಗಳಲ್ಲಿ ಪುರಸಭೆಯ ಹಿಂದಿನ ಆಡಳಿತಾವಧಿಯು ಕೊನೆಗೊಂಡು ಮತ್ತೆ ಚುನಾವಣೆ ನಡೆಯಲಿದೆ.

ಬಿಜೆಪಿಯ ಅಧಿಕಾರಕ್ಕೇರುವ ಆಸೆಗೆ ತಣೀ¡ರು
ಕಾಪು ಪುರಸಭೆಯಲ್ಲಿ 23 ವಾರ್ಡ್‌ಗಳಿದ್ದು, ಇದರಲ್ಲಿ ಕಾಂಗ್ರೆಸ್‌ನಿಂದ 12 ಮತ್ತು ಬಿಜೆಪಿಯಿಂದ 11 ಮಂದಿ ಚುನಾಯಿತ ಸದಸ್ಯರಿದ್ದಾರೆ. ಪ್ರಥಮ 30 ತಿಂಗಳ ಅವಧಿಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಚುನಾಯಿತರಾಗಿದ್ದವರು ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಎರಡನೇ ಅವಧಿಗೆ ಶಾಸಕರು ಮತ್ತು ಸಂಸದರ ಬಲದೊಂದಿಗೆ ಬಿಜೆಪಿ ಬಹುಮತದೊಂದಿಗೆ ಅಧಿಕಾರ ಪಡೆಯುವ ಹಂತಕ್ಕೆ ಬಂದಿದ್ದರೂ ಕೂಡಾ ಮೀಸಲು ವಿವಾದ ಅಧಿಕಾರದಿಂದ ದೂರ ಉಳಿಯುವಂತೆ ಮಾಡಿದೆ. ಮೀಸಲು ವಿವಾದದ ಪ್ರಕರಣವು ಶೀಘ್ರವಾಗಿ ಇತ್ಯರ್ಥವಾದಲ್ಲಿ ಮುಂದಿನ ಅಧ್ಯಕ್ಷ – ಉಪಾಧ್ಯಕ್ಷರಿಗೆ ಒಂದೂವರೆ ವರ್ಷದ ಅಧಿಕಾರವಧಿ ದೊರೆಯಲಿದೆ.

Advertisement

4 ವರ್ಷದ‌ಲ್ಲಿ 7 ಮಂದಿ ಆಡಳಿತಾಧಿಕಾರಿ,
4 ಮಂದಿ ಮುಖ್ಯಾಧಿಕಾರಿ
ಕಾಪು ಪುರಸಭೆ ಅಸ್ತಿತ್ವಕ್ಕೆ ಬಂದ 4 ವರ್ಷಗಳಲ್ಲಿ 7 ಮಂದಿ ಆಡಳಿತಾಧಿಕಾರಿಗ‌ಳು ಹಾಗೂ 4 ಮಂದಿ ಮುಖ್ಯಾಧಿಕಾರಿಗಳ ಆಡಳಿತ ನಿರ್ವಹಣೆಯನ್ನು ಕಂಡಿದೆ. ಪ್ರಸ್ತುತ ಕುಂದಾ ಪುರ ಉಪ ವಿಭಾಗಾಧಿಕಾರಿ ರಾಜು ಅವರು ಆಡಳಿತಾಧಿಕಾರಿ ಯಾಗಿ ಮತ್ತು ಒಂದೂವರೆ ತಿಂಗಳಿನಿಂದ ವೆಂಕಟೇಶ ನಾವಡ ಅವರು ಮುಖ್ಯಾಧಿಕಾರಿಯಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅಧಿಕಾರ ನಡೆಸಿದ ಅಧಿಕಾರಿಗಳು
ಕಾಪು ಪುರಸಭೆಯಲ್ಲಿ 2015 ಜೂ. 26ರಿಂದ ಜು. 12 ರವರೆಗೆ ಯೋಗೀಶ್ವರ್‌, ಜು. 13ರಿಂದ ಡಿ. 13ರ ವರೆಗೆ ಚಾರುಲತಾ ಸೋಮಲ್‌, ಡಿ. 14ರಿಂದ 2016 ಜೂ. 4ರ ವರೆಗೆ ಅಶ್ವತಿ, 2018 ಡಿ. 5ರಿಂದ 2019 ಫೆ. 4ರ ವರೆಗೆ ಭೂಬಾಲನ್‌, ಫೆ. 5ರಿಂದ ಕೆಲ ತಿಂಗಳು ಅರುಣ್‌ಪ್ರಭ, ಬಳಿಕ ಕೆಲವು ತಿಂಗಳುಗಳ ಕಾಲ ಮಧುಕೇಶ್ವರ್‌ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಪುರಸಭೆಯಲ್ಲಿ ಪ್ರಥಮವಾಗಿ ಅಲ್ಪಾವಧಿಗೆ ಪಿ. ಸುಂದರ ಪ್ರಭು, ಅನಂತರ ಜನಪ್ರತಿನಿಧಿಗಳ ಆಯ್ಕೆಯವರೆಗೆ ಮೇಬಲ್‌ ಡಿ’ಸೋಜಾ, ಅನಂತರದಲ್ಲಿ ಎರಡು ವರ್ಷಗಳ ಕಾಲ ರಾಯಪ್ಪ, ಅವರ ವರ್ಗಾವಣೆಯ ಬಳಿಕ ಕೆಲವು ದಿನಗಳವರೆಗೆ ವೆಂಕಟರಮಣಯ್ಯ ಅವರು ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.

ಕಾಪು ಪುರಸಭೆ
ಸದಸ್ಯರ ವಾದವೇನು?
ಕಾಪು ಪುರಸಭೆ ಅಸ್ತಿತ್ವಕ್ಕೆ ಬಂದು ಮೊದಲ 30 ತಿಂಗಳ ಅಧಿಕಾರಾವಧಿಯ ಅನಂತರದ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯನ್ನು ರಾಜ್ಯದ ಇತರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಹೊಸ ಅವಧಿಗೆ ಪ್ರಕಟಿಸಲಾದ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯ ಜತೆಗೆ ಗೆಜೆಟ್‌ ನೋಟಿಫಿಕೇಶನ್‌ನ್ನು ಹೊರಡಿಸಿದ್ದು, ಅದರ ವಿರುದ್ಧ ಕೆಲವು ಸ್ಥಳೀಯಾಡಳಿತ ಸಂಸ್ಥೆಗಳು ಈ ಮೀಸಲಾತಿಯನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿ, ತಡೆಯಾಜ್ಞೆ ತಂದ ಪರಿಣಾಮ ಕಾಪು ಪುರಸಭೆಯೂ ಅಧ್ಯಕ್ಷ-ಉಪಾಧ್ಯಕ್ಷರಿಲ್ಲದೇ ಸೊರಗುವಂತಾಗಿದೆ. ಕಾಪು ಪುರಸಭೆಯ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಬಗ್ಗೆ ಯಾರಿಂದಲೂ ಯಾವುದೇ ತಕರಾರು ಇಲ್ಲದೇ ಇರುವುದರಿಂದ ಸರಕಾರ ವಿಶೇಷ ಮುತುವರ್ಜಿ ವಹಿಸಿ ಇಲ್ಲಿಯ ತಡೆಯಾಜ್ಞೆಯನ್ನು ತೆರವುಗೊಳಿಸುವ ಪ್ರಯತ್ನ ಮಾಡಬೇಕು ಎನ್ನುವುದು ಕಾಪು ಪುರಸಭೆಯ ಸದಸ್ಯರ ವಾದವಾಗಿದೆ.

ಅಧಿಕಾರಿಗಳಿಗೆ ಮನವಿ
ಕಾಪು ಪುರಸಭೆಯಲ್ಲಿ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ಕುರಿತಾದ ಮೀಸಲು ಬಗ್ಗೆ ನಮ್ಮಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಹಿಂದಿನ ಸಮ್ಮಿಶ್ರ ಸರಕಾರದಿಂದ ಆಗಿರುವ ತಪ್ಪನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆಗೆ ಅವಕಾಶ ಮಾಡಿಕೊಡುವಂತೆ ಸಚಿವರು, ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಈ ಕುರಿತಂತೆ ಚುನಾಯಿತ ಸದಸ್ಯರ ಸಭೆ ಕರೆದು, ಉತ್ತಮ ನ್ಯಾಯವಾದಿಗಳನ್ನು ನೇಮಿಸಿಕೊಂಡು ನ್ಯಾಯಾಲಯದಲ್ಲಿ ವಾದ ಮಂಡಿಸುವ ಬಗ್ಗೆ ಕುಂದಾಪುರ ಉಪವಿಭಾಗಾಧಿಕಾರಿಯವರಲ್ಲಿ ವಿನಂತಿಸಲಾಗಿದೆ. ಸರಕಾರ ಮಾಡಿದ ತಪ್ಪಿನಿಂದಾಗಿ ಚುನಾಯಿತ ಜನಪ್ರತಿನಿಧಿಗಳು ಮತ್ತು ಜನಪ್ರತಿನಿಧಿಗಳಿಂದ ಅಭಿವೃದ್ಧಿಯನ್ನು ನಿರೀಕ್ಷಿಸಿರುವ ವಾರ್ಡ್‌ಗಳ ಜನರು ಸಮಸ್ಯೆ ಎದುರಿಸುವಂತಾಗಿದೆ.
– ಅರುಣ್‌ ಶೆಟ್ಟಿ ಪಾದೂರು,ಸದಸ್ಯರು,ಕಾಪು ಪುರಸಭೆ

ಅಭಿವೃದ್ಧಿಗೆ ತೊಡಕು
ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷ – ಉಪಾಧ್ಯಕ್ಷರ ಮೀಸಲಾತಿಗೆ ವಿವಿಧ ಸ್ಥಳೀಯ ಸಂಸ್ಥೆಗಳು ತಡೆಯಾಜ್ಞೆ ತಂದಿರುವುದರಿಂದ ಕಾಪು ಪುರಸಭೆಗೂ ಅದೇ ಕಾನೂನು ಅನ್ವಯವಾಗಿದೆ. ಹಿಂದಿನ ಆಡಳಿತಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ವಾರ್ಡ್‌ಗಳ ವಿವಿಧ ಅಭಿವೃದ್ಧಿಯ ಕುರಿತಾಗಿ ಚರ್ಚಿಸಲಾಗಿತ್ತು. ಶಾಸಕರ ಉಪಸ್ಥಿತಿಯಲ್ಲಿ ಪ್ರಗತಿ ಪರಿಶೀಲನ ಸಭೆ ನಡೆದಿದ್ದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು. ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ವಿಳಂಭದಿಂದ ಅಭಿವೃದ್ಧಿಗೆ ತೊಡಕುಂಟಾಗುತ್ತಿದೆ. ಈ ನಿಟ್ಟಿನಲ್ಲಿ ಶಾಸಕರು ವಿಶೇಷ ಮುತುವರ್ಜಿ ವಹಿಸಿ, ಸರಕಾರಕ್ಕೆ ಒತ್ತಡ ಹೇರಿ ತಡೆಯಾಜ್ಞೆ ತೆರವುಗೊಳಿಸಲು ಪ್ರಯತ್ನಿಸಬೇಕಿದೆ.
– ಸೌಮ್ಯಾ ಸಂಜೀವ,ಪ್ರಥಮ ಅಧ್ಯಕ್ಷರು,
ಕಾಪು ಪುರಸಭೆ

ಸಭೆ ನಡೆಸಲು ಬೇಡಿಕೆ
ಮೀಸಲಾತಿ ಸರಕಾರ ಮಟ್ಟದ ವ್ಯವಸ್ಥೆಯಾಗಿದೆ. ಅದರ ಜತೆಗೆ ಈ ಪ್ರಕರಣವು ಕೋರ್ಟ್‌ನಲ್ಲಿ ಇರುವುದರಿಂದ ನಾವು ಉತ್ತರಿಸಲು ಸಾಧ್ಯವಾಗುವುದಿಲ್ಲ. ಇದರ ನಡುವೆಯೂ ಜನಪ್ರತಿನಿಧಿಗಳ ಸಭೆ ನಡೆಸುವಂತೆ ಪುರಸಭೆಯ ಸದಸ್ಯರು ಬೇಡಿಕೆ ಇಡುತ್ತಿದ್ದಾರೆ. ನನ್ನ ವ್ಯಾಪ್ತಿಯೊಳಗೆ 3 ಪುರಸಭೆಗಳು ಬರುತ್ತಿದ್ದು, ಅದರೊಂದಿಗೆ ವಾರದಲ್ಲಿ 4 ದಿನ ಎಸಿ ಕೋರ್ಟ್‌, ಭೂನ್ಯಾಯ ಮಂಡಳಿ ಸಭೆ ಇತ್ಯಾದಿ ಕೆಲಸದ ಒತ್ತಡಗಳು ಹೆಚ್ಚಿರುವುದರಿಂದ ಸಭೆ ನಡೆಸಲು ವಿಳಂಭವಾಗುತ್ತಿದೆ. ಈ ಬಗ್ಗೆ ಶೀಘ್ರ ಸಭೆ ನಡೆಸಿ, ಪುರಸಬಾ ವ್ಯಾಪ್ತಿಯ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು.
– ರಾಜು ಕೆ., ಸಹಾಯಕ ಕಮೀಷನರ್‌,
ಕುಂದಾಪುರ (ಎಸಿ)

Advertisement

Udayavani is now on Telegram. Click here to join our channel and stay updated with the latest news.

Next