Advertisement

ಕಾಪು ಪುರಸಭೆ: ಲಕ್ಷ್ಮೀನಗರ ಕಾಲನಿಯಲ್ಲಿ ಚರಂಡಿ ಸಮಸ್ಯೆ

11:32 PM Jun 24, 2019 | Team Udayavani |

ಕಾಪು: ನಗರ ಯೋಜನೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ ಲೇಔಟ್‌ ರಚಿಸಿ, ಅಲ್ಲಿ ಮನೆಯನ್ನೂ ಕಟ್ಟಿರುವ ಪರಿಣಾಮ ಪುರಸಭೆ ವ್ಯಾಪ್ತಿಯ ಪಡುಗ್ರಾಮದ 8ನೇ ವಾರ್ಡ್‌ – ಲಕ್ಷ್ಮೀ ನಗರ ಕಾಲನಿಯ 20ಕ್ಕೂ ಅಧಿಕ ಕುಟುಂಬಗಳು ಪ್ರತೀ ಮಳೆಗೂ ಕೃತಕ ನೆರೆಯ ಭೀತಿಯಲ್ಲೇ ಬದುಕುವಂತಾಗಿದೆ.

Advertisement

ಲಕ್ಷ್ಮೀನಗರ ಕಾಲನಿಯಲ್ಲಿ 20ಕ್ಕೂ ಅಧಿಕ ಮನೆಗಳಿದ್ದು, ಇಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸಮರ್ಪಕ ಚರಂಡಿಯ ವ್ಯವಸ್ಥೆಯಿಲ್ಲ. ಹಿಂದೆ ನೀರು ಹರಿಯ ಲೆಂದು ಬಿಟ್ಟಿದ್ದ ತೋಡಿನ ಮೇಲೆಯೇ ಡಾಮರು ಹಾಕಿದ್ದು ಇದರಿಂದಾಗಿ ನೀರು ಹರಿದು ಹೋಗದಂತಾಗಿದೆ. ಚರಂಡಿ ವ್ಯವಸ್ಥೆಯಿಲ್ಲದೇ ಇರುವುದರಿಂದ ಸ್ವಲ್ಪ ಮಳೆ ಬಂದರೂ ಕೃತಕ ನೆರೆಯ ಭೀತಿ ಎದುರಾಗಿ ಬಿಡುತ್ತದೆ.

ಈ ಕಾಲನಿಯಲ್ಲಿ ವರ್ಷದಿಂದ ವರ್ಷಕ್ಕೆ ಮನೆಗಳ ಸಂಖ್ಯೆ ವೃದ್ಧಿಯಾಗುತ್ತಾ ಹೋಗುತ್ತಿದ್ದು, ಲೇಔಟ್‌ ನಿರ್ಮಾಣ ಮತ್ತು ಮನೆ ಕಟ್ಟುವ ಸಂದರ್ಭ ಮೂಲ ಆವಶ್ಯಕತೆಗಳಾದ ರಸ್ತೆ ರಚನೆ ಮತ್ತು ನೀರು ಹರಿಯಲು ಸೂಕ್ತ ಚರಂಡಿ ವ್ಯವಸ್ಥೆಯನ್ನು ಜೋಡಿಸದೇ ಇರುವುದರಿಂದ ಜನ ತೀವ್ರ ತೊಂದರೆ ಎದುರಿಸುವಂತಾಗಿತ್ತು.

ಸ್ವಲ್ಪ ಮಳೆ ಬಂದರೂ ಮನೆಯ ಅಂಗಳದಲ್ಲಿ ನೀರು ನಿಲ್ಲುತ್ತದೆ. ಇದರಿಂದ ಮನೆಯ ಅಡಿಪಾಯ ಕುಸಿತ ಕ್ಕೊಳಗಾಗುವ ಭೀತಿಯಿದೆ. ಅದರೊಂದಿಗೆ ಮನೆಯಲ್ಲಿರುವ ಸಣ್ಣ ಮಕ್ಕಳು ನೀರಿನಲ್ಲಿ ಆಟವಾಡಲು ಹೋದರೆ ಕಾಲಿನಲ್ಲಿ ಬೊಬ್ಬೆಗಳು ಏಳುತ್ತವೆ. ನುಸಿ, ಹುಳಗಳಿಂದಾಗಿ ಸಾಂಕ್ರಾಮಿಕ ರೋಗದ ಭೀತಿ ಇದೆ. ನಮ್ಮ ಸಮಸ್ಯೆಯ ಬಗ್ಗೆ ಮೂರ್‍ನಾಲ್ಕು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡುತ್ತಾ ಬರುತ್ತಿದ್ದೇವೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.

ತುರ್ತು ಸ್ಪಂದಿಸಿದ ತಹಶೀಲ್ದಾರ್‌
ಕಾಲನಿಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರವಿವಾರ ಸ್ಥಳೀಯರು ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ಅವರಿಗೆ ದೂರವಾಣಿಯ ಮೂಲಕ ಮಾಹಿತಿ ನೀಡಿದ್ದರು. ಸ್ಥಳೀಯರ ಮಾಹಿತಿಯಿಂದ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ಸಮಸ್ಯೆಯನ್ನು ಪರಿಶೀಲಿಸಿದರು. ಪುರಸಭೆ ಎಂಜಿನಿಯರ್‌ ಅವರನ್ನೂ ಕರೆಯಿಸಿಕೊಂಡು ಅವ್ಯವಸ್ಥೆಗೆ ಕಾರಣಗಳೇನು ಎನ್ನುವದರ ಬಗ್ಗೆ ಮಾಹಿತಿ ಪಡೆದು, ನೀರಿನ ಸರಾಗ ಹರಿವಿಗೆ ಪೂರಕವಾಗುವಂತೆ ತೋಡನ್ನು ಬಿಡಿಸಿಕೊಟ್ಟರು.

Advertisement

ಪುರಸಭೆ ಎಂಜಿನಿಯರ್‌ ಪ್ರತಿಮಾ, ಪುರಸಭಾ ಸದಸ್ಯೆ ಅಶ್ವಿ‌ನಿ, ಕಾಪು ಗ್ರಾ.ಪಂ. ಮಾಜಿ ಅಧ್ಯಕ್ಷೆ ಸಾವಿತ್ರಿ ಗಣೇಶ್‌ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

8ನೇ ವಾರ್ಡ್‌ ಲಕ್ಷ್ಮೀ ನಗರ ಕಾಲನಿಯ ಜನರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ನೀಡಿದ್ದೇವೆ. ಫೋಟೋ ತೆಗೆದು ಕೂಡ ಕಳುಹಿಸಿದ್ದೇವೆ. ಆದರೆ ಸಮಸ್ಯೆ ಪರಿಹಾರವಾಗಿರಲಿಲ್ಲ. ವರ್ಷದಿಂದ ವರ್ಷಕ್ಕೆ ನೀರು ನಿಂತು ಉಂಟಾಗುವ ಸಮಸ್ಯೆ ಹೆಚ್ಚಾಗುತ್ತಲೇ ಹೋಗುತ್ತಿತ್ತು. ಇದೀಗ ತಹಶೀಲ್ದಾರ್‌ಗೆ ಮನವಿ ನೀಡಿದ ತತ್‌ಕ್ಷಣ ಅವರು ಸ್ಥಳಕ್ಕೆ ಆಗಮಿಸಿ ಸೂಕ್ತವಾಗಿ ಸ್ಪಂದಿಸಿದ್ದಾರೆ.
– ಧನಂಜಯ ಸಾಲ್ಯಾನ್‌, ಲಕ್ಷ್ಮೀ ನಗರ ಕಾಲನಿ ನಿವಾಸಿ

ಲೇಔಟ್‌ ಮ್ಯಾಪ್‌ ಮತ್ತು ಟೌನ್‌ ಪ್ಲಾನಿಂಗ್‌ನ ನಕ್ಷೆಯಿಲ್ಲದೇ ಲೈಸೆನ್ಸ್‌ ನೀಡಿರುವುದೇ ಇಲ್ಲಿನ ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ರಸ್ತೆಯೂ ಇಲ್ಲದೇ, ಚರಂಡಿಯೂ ಇಲ್ಲದೇ ಇರುವುದರಿಂದ ಮತ್ತು ಟೌನ್‌ ಪ್ಲಾನಿಂಗ್‌ನ ನಿಯಮಾವಳಿಗಳನ್ನು ಗಾಳಿಗೆ ತೂರಿ ಮನೆ ನಿರ್ಮಿಸಿರುವುದರಿಂದ ಈ ರೀತಿಯ ತೊಂದರೆಗಳು ಎದುರಾಗಿವೆ. ಇಲ್ಲಿನದ್ದು ತಗ್ಗು ಪ್ರದೇಶವೂ ಆಗಿರುವುದರಿಂದ ಇಲ್ಲಿ ವಾಸ್ತವ್ಯವಿರುವವರಿಗೆ ತೊಂದರೆಯಾಗುತ್ತಿದೆ. ನೀರಿನ ಸರಾಗ ಹರಿವಿಗೆ ತಡೆ ಇರುವಲ್ಲಿ ತುರ್ತು ಕಾಮಗಾರಿಯಡಿ ತೆರವು ಕಾರ್ಯಾಚರಣೆ ನಡೆಸಲಾಗುವುದು. ಬಳಿಕ ಶಾಶ್ವತ ಕ್ರಮಕ್ಕೆ ಸಂಬಂಧಪಟ್ಟವರಿಗೆ ಸೂಚನೆ ನೀಡುತ್ತೇವೆ.
– ಸಂತೋಷ್‌ ಕುಮಾರ್‌, ತಹಶೀಲ್ದಾರ್‌, ಕಾಪು

Advertisement

Udayavani is now on Telegram. Click here to join our channel and stay updated with the latest news.

Next