Advertisement

ಕಪ್ಪತ್ತಗುಡಕ್ಕೆ ಎದುರಾಯ್ತು ಮತ್ತೆ ಆಪತ್ತು

12:55 PM May 25, 2020 | Suhan S |

ಗದಗ: “ಉತ್ತರ ಕರ್ನಾಟಕದ ಸಹ್ಯಾದ್ರಿ’ ಕಪ್ಪತ್ತಗುಡ್ಡ ವನ್ಯಜೀವಿ ಧಾಮದ ಮುಂದುವರಿದ ಭಾಗವಾಗಿ ಪರಿಸರ ಸೂಕ್ಷ್ಮ ವಲಯ(ಇಕೋ ಸೆನ್ಸ್‌ಟೀವ್‌ ಝೋನ್‌) ನಿಗದಿಗೆ ಅರಣ್ಯ ಇಲಾಖೆ ಸಲ್ಲಿಸಿದ್ದ ಕರಡು ಪ್ರಸ್ತಾವನೆಯನ್ನು ರಾಜ್ಯ ಸರಕಾರ ವಾಪಸ್‌ ಕಳುಹಿಸಿದ್ದು, ಇದು ಸರಕಾರವೇ ಕಪ್ಪತ್ತಗುಡ್ಡದಲ್ಲಿನ ಕಲ್ಲು ಕ್ವಾರಿಗಳ ರಕ್ಷಣೆಗೆ ನಿಂತಿದೆ ಎಂಬ ಸಾರ್ವಜನಿಕರ ಆರೋಪಕ್ಕೆ ಪುಷ್ಟಿ ನೀಡಿದೆ.

Advertisement

ಔಷಧೀಯ ಸಸ್ಯಗಳು, ಅಮೂಲ್ಯವಾದ ಖನಿಜ ಸಂಪತ್ತು ಹೊಂದಿರುವ ಕಪ್ಪತ್ತಗಿರಿಗೆ ಮತ್ತೆ ಗಣಿಗಾರಿಕೆಯ ಆಪತ್ತು ಶುರುವಾಗಿದೆ. ಯಾವುದೇ ಕಾರಣಕ್ಕೂ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು, ನಿಸರ್ಗದ ಕೊಡುಗೆ ಉಳಿಸಬೇಕೆಂದು ಆಗ್ರಹಿಸಿ ಲಿಂ| ತೋಂಟದ ಸಿದ್ಧಲಿಂಗ ಸ್ವಾಮಿಗಳ ನೇತೃತ್ವದಲ್ಲಿ ಸ್ಥಳೀಯರು ನಡೆಸಿದ ನಿರಂತರ ಹೋರಾಟದ ಫಲವಾಗಿ ಹಂತ ಹಂತವಾಗಿ ಸಂರಕ್ಷಿತ ಅರಣ್ಯ, ವನ್ಯಜೀವಿಧಾಮದ ಸ್ಥಾನಮಾನ ಹೊಂದಿದೆ. ಪ್ರಸ್ತಾವನೆಯಲ್ಲಿ ಏನೇನಿದೆ?: ಗದಗ, ಮುಂಡರಗಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನಲ್ಲಿ 244.15 ಚದುರ ಕಿ.ಮೀ. ಪ್ರದೇಶವನ್ನು 2019ರ ಮೇ 16ರಂದು ವನ್ಯಜೀವಿ ಧಾಮವನ್ನಾಗಿ ಘೋಷಿಸಿ ಅಧಿಸೂಚನೆ ಹೊರಡಿಸಲಾಗಿದೆ. ವನ್ಯಜೀವಿ ಧಾಮದಲ್ಲಿರುವ ವನ್ಯಜೀವಿಗಳ ಸ್ವಚ್ಛಂದ ಜೀವನಕ್ಕೆ ಧಕ್ಕೆಯಾಗದಿರಲಿ ಎಂಬ ಉದ್ದೇಶದಿಂದ 6ಕಿ.ಮೀ.ವರೆಗೆ ಪರಿಸರ ಸೂಕ್ಷ್ಮ ವಲಯವನ್ನಾಗಿಸಲು ಗದಗ ಅರಣ್ಯ ಉಪಸಂರಕ್ಷಣಾಧಿಕಾರಿ ಕಚೇರಿ ಪ್ರಸ್ತಾವನೆ ಸಲ್ಲಿಸಿತ್ತು. ಹೀಗಾದಲ್ಲಿ ಗದಗ ಜಿಲ್ಲೆಯ 49, ಬಳ್ಳಾರಿ ಜಿಲ್ಲೆಯ ನಾಲ್ಕು ಸೇರಿ 53 ಗ್ರಾಮಗಳು ಬಫರ್‌ ಝೋನ್‌ಗೆ ಒಳಪಡಲಿದ್ದವು.

ಸುಪ್ರೀಂಕೋರ್ಟ್‌ನ ಆದೇಶದಂತೆ ವನ್ಯಜೀವಿಧಾಮದ ಬಫರ್‌ ಝೋನ್‌ ವ್ಯಾಪ್ತಿಯ ಎಲ್ಲ ರೀತಿಯ ಕಲ್ಲು, ಕಡಿ ಹಾಗೂ ಮಣ್ಣು ಗಣಿಗಾರಿಕೆ, ಮಣ್ಣು, ನೀರು, ಗಾಳಿ ಕಲ್ಮಶ ಮತ್ತು ಶಬ್ಧ ಉಂಟು ಮಾಡುವ ಕೈಗಾರಿಕೆ, ಹೊಸ ಸಾಮಿಲ್‌ಗ‌ಳ ಸ್ಥಾಪನೆ, ಬೃಹತ್‌ ಹೈಡ್ರೋಎಲೆಕ್ಟ್ರಿಕ್‌ ಪ್ರಾಜೆಕ್ಟ್, ಯಾವುದೇ ಅಪಾಯಕಾರಿ ವಸ್ತುಗಳ ಉತ್ಪಾದನೆ ಮತ್ತು ಸಂಸ್ಕರಣೆ, ನೈಸರ್ಗಿಕ ಜಲಮೂಲ ಮತ್ತು ಭೂಮಿಯಲ್ಲಿ ಸಂಸ್ಕರಿಸದ ತ್ಯಾಜ್ಯ ಹೊರ ಹಾಕಲು ಅವಕಾಶವಿಲ್ಲ.

ಆದರೆ ಇಕೋ ಟೂರಿಸಂ, ಪ್ರವಾಸಿಗರ ವಸತಿಗಾಗಿ ಸ್ಥಳೀಯರು ನಿರ್ಮಿಸುವ ತಾತ್ಕಾಲಿಕ ಕಟ್ಟಡಗಳ ರೆಸಾರ್ಟ್‌, ಸ್ಥಳೀಯರ ಮನೆ ನಿರ್ಮಾಣ, ಕೃಷಿ ಚಟುವಟಿಕೆ, ಹಸಿರು ಬೆಳೆಸುವುದು, ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ನಿರ್ಮಾಣಕ್ಕೆ ಯಾವುದೇ ಅಡ್ಡಿ ಇಲ್ಲ. ಜತೆಗೆ ಬಫರ್‌ ಝೋನ್‌ನಲ್ಲಿ ಮಳೆ ನೀರು ಕೊಯ್ಲು, ಸಾವಯವ ಕೃಷಿ, ಎಲ್ಲ ಚಟುವಟಿಕೆಗಳಿಗೆ ಹಸಿರು ತಂತ್ರಜ್ಞಾನ ಅಳವಡಿಕೆ, ಕೃಷಿ-ಅರಣ್ಯ, ಪರಿಸರ ಸ್ನೇಹಿ ಸಾರಿಗೆ, ಸ್ಥಳೀಯರಿಗೆ ಕೌಶಲ್ಯ ಅಭಿವೃದ್ಧಿ ಉತ್ತೇಜಿಸುವ ಅಂಶಗಳನ್ನು ಒಳಗೊಂಡಿದೆ.

ಜನನಾಯಕರೇ ಅಡ್ಡಗಾಲು?: ಆದರೆ ಬಫರ್‌ ಝೋನ್‌ ಪ್ರಸ್ತಾವನೆಗೆ ಜನನಾಯಕರೇ ಅಡ್ಡಿ ಪಡಿಸುತ್ತಿದ್ದಾರೆ. ಕಪ್ಪತ್ತಗುಡ್ಡ ವ್ಯಾಪ್ತಿಯಲ್ಲಿ ಸುಮಾರು 50ಕ್ಕಿಂತ ಹೆಚ್ಚು ಕಲ್ಲು ಕ್ವಾರಿ, ಕಲ್ಲು ಕ್ರಷರ್‌ ಯುನಿಟ್‌, ಮಣ್ಣು ಗಣಿಗಳು ಇವೆ. ಈ ಪೈಕಿ ಉದ್ದೇಶಿತ ಬಫರ್‌ ಝೋನ್‌ ವ್ಯಾಪ್ತಿಗೆ ಬರುವ ಶಿರಹಟ್ಟಿ ಭಾಗದ ಬಸಾಪುರ, ಹಿರೇವಡ್ಡಟ್ಟಿ, ಅಕ್ಕಿಗುಂದ, ಛಬ್ಬಿ ಸೇರಿದಂತೆ 5-6 ಕಲ್ಲು ಕ್ವಾರಿಗಳು ಮಾತ್ರ ಸ್ತಬ್ಧಗೊಳ್ಳಲಿದ್ದವು. ಇವು ಗದಗ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಪ್ರಭಾವಿ ರಾಜಕಾರಣಿಗಳಿಗೆ ಸಂಬಂಧಿಸಿವೆ. ಹೀಗಾಗಿ ಅವರೆಲ್ಲರೂ ಆರಂಭದಿಂದಲೂ ಬಫರ್‌ ಝೋನ್‌ ವ್ಯಾಪ್ತಿ ಕುಗ್ಗಿಸಲು ಸರಕಾರದ ಮಟ್ಟದಲ್ಲಿ ಕಸರತ್ತು ನಡೆಸಿದ್ದರು. ಇದೇ ಕಾರಣಕ್ಕೆ ಕರಡು ಸಲ್ಲಿಕೆಯಾಗಿ ನಾಲ್ಕು ತಿಂಗಳು ಕಳೆದರೂ ಎಎಸ್‌ಜೆಡ್‌ ಪ್ರಸ್ತಾವನೆ ನನೆಗುದಿಗೆ ಬಿದ್ದಿತ್ತು ಎಂದು ಖಚಿತ ಮೂಲಗಳು ತಿಳಿಸಿವೆ.

Advertisement

ಪರಿಷ್ಕರಣೆಗೆ ಆದೇಶ: ಈ ನಡುವೆ ಇಕೋ ಸೆನ್ಸ್‌ಟಿವ್‌ ಝೋನ್‌ ರಚನೆಗೆ ಸಿದ್ಧಪಡಿಸಿದ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಕೆಯಾಗಿ ನಾಲ್ಕು ತಿಂಗಳಾಗಿವೆ. ವಿಧಾನಸಭೆ ಉಪ ಚುನಾವಣೋತ್ತರ ರಾಜಕೀಯ ಚಟುವಟಿಕೆಗಳು, ಮಹಾಮಾರಿ ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮಗ್ನವಾಗಿದ್ದ ರಾಜ್ಯ ಸರಕಾರ, ಎದುರಾಗಬಹುದಾದ ಹೋರಾಟ ಹತ್ತಿಕ್ಕಲು ಇದೇ ಸಕಾಲ ಎಂದು ಭಾವಿಸಿದಂತಿದ್ದು, ಇಎಸ್‌ಜೆಡ್‌ ಕರಡು ಪರಿಷ್ಕರಿಸುವಂತೆ ಅರಣ್ಯ ಇಲಾಖೆಗೆ ಸೂಚಿಸಿ, ಇತ್ತೀಚೆಗೆ ಕರಡು ವಾಪಸ್‌ ಕಳುಹಿಸಿದೆ.

ವನ್ಯಜೀವಿಗಳ ಜೀವನ ನಿಯಂತ್ರಿಸಲು ಸಾಧ್ಯವಿಲ್ಲ. ಅವುಗಳ ಮುಕ್ತತೆಗೆ ಬಫರ್‌ ಝೋನ್‌ ಮಾಡಲಾಗುತ್ತದೆ. ಈ ಪ್ರಸ್ತಾವನೆ ಬದಲಾವಣೆಯಲ್ಲಿ ವೈಯಕ್ತಿಕ ಹಿತಾಸಕ್ತಿ ಅಡಗಿದೆ. ವ್ಯಕ್ತಿಗಳ ಸ್ವಾರ್ಥಕ್ಕಾಗಿ ಇಡೀ ಸಮುದಾಯ ಬಲಿ ಕೊಡಬಾರದು. ಜನರ ಜೀವನಾಡಿ ಕಪ್ಪತ್ತಗುಡ್ಡದ ಸಂರಕ್ಷಣೆಗೆ ಸಾಧ್ಯವಾದಷ್ಟು ಕಠಿಣ ಕ್ರಮ ಕೈಗೊಳ್ಳಬೇಕು. ಈಗಾಗಲೇ ಸಲ್ಲಿಕೆಯಾಗಿರುವ ಪ್ರಸ್ತಾವನೆಯನ್ನು ತಕ್ಷಣವೇ ಅಂಗೀಕರಿಸಿ ಅನುಷ್ಠಾನಕ್ಕೆ ತರಬೇಕು. -ಡಾ| ತೋಂಟದ ಸಿದ್ಧರಾಮ ಶ್ರೀ, ಗದಗ-ಡಂಬಳ

ವನ್ಯಜೀವಿ ಧಾಮದ ಇಎಸ್‌ಜೆಡ್‌ನ್ನು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕರಡು ರಚಿಸಿ, ಸರಕಾರಕ್ಕೆ ಸಲ್ಲಿಸಲಾಗಿತ್ತು. ಈ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆಯಾಗಿ, ಕೆಲ ಪರಿಷ್ಕರಣೆ ಮಾಡಿಕೊಡುವಂತೆ ಪ್ರಸ್ತಾವನೆ ವಾಪಸ್‌ ಕಳಿಸಿದೆ. ಅದರಂತೆ ಮತ್ತೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆಸಿ, ಯಾವೆಲ್ಲ ಬದಲಾವಣೆ ಮಾಡಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. -ಸೂರ್ಯಸೇನ್‌, ಡಿಸಿಎಫ್‌.

 

– ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next