Advertisement

ಕಪಿಲ್‌ ಸ್ಥಾನ ತುಂಬಿದ ಹಾರ್ದಿಕ್‌

09:25 AM Sep 26, 2017 | Team Udayavani |

ಭಾರತ ಕ್ರಿಕೆಟ್‌ ಈಗ ವಿಶ್ವ ಕ್ರಿಕೆಟ್‌ ಮೇಲೆ ಆರ್ಥಿಕವಾಗಿಯೂ, ಕ್ರೀಡೆಯ ದೃಷ್ಟಿಯಿಂದಲೂ ಹಿಡಿತ ಹೊಂದಿದೆ. ಈ ದೇಶದಲ್ಲಿ ಸುನೀಲ್‌ ಗಾವಸ್ಕರ್‌ಗೆ ಪರ್ಯಾಯವಾಗಿ ರಾಹುಲ್‌ ದ್ರಾವಿಡ್‌ ಬಂದಿದ್ದಾರೆ, ಸಚಿನ್‌ ತೆಂಡುಲ್ಕರ್‌ಗೆ ಪರ್ಯಾಯವಾಗಿ ವಿರಾಟ್‌ ಕೊಹ್ಲಿ ಬಂದಿದ್ದಾರೆ, ಸ್ಪಿನ್‌ ದಂತಕಥೆಗಳಾದ ಬಿ.ಎಸ್‌.ಚಂದ್ರಶೇಖರ್‌, ಪ್ರಸನ್ನ, ಬೇಡಿಗೆ ಪರ್ಯಾಯವಾಗಿ ಅನಿಲ್‌ ಕುಂಬ್ಳೆ, ಹರ್ಭಜನ್‌ ಸಿಂಗ್‌, ಆರ್‌. ಅಶ್ವಿ‌ನ್‌ ಬಂದಿದ್ದಾರೆ. ಜಾವಗಲ್‌ ಶ್ರೀನಾಥ್‌ ಜಾಗದಲ್ಲಿ, ಜಹೀರ್‌ ಖಾನ್‌, ಆಶೀಷ್‌ ನೆಹ್ರಾ, ಬುಮ್ರಾ, ಭುವನೇಶ್ವರ್‌
ಬಂದಿದ್ದಾರೆ. ಇಂತಹದೊಂದು ಕ್ರಿಕೆಟ್‌ ರಾಷ್ಟ್ರಕ್ಕಿದ್ದ ಒಂದೇ ಒಂದು ಕೊರಗೆಂದರೆ ವೇಗದ ಬೌಲಿಂಗ್‌ ಆಲ್‌ರೌಂಡರ್‌ ಕಪಿಲ್‌ ದೇವ್‌ ಸ್ಥಾನವನ್ನು ತುಂಬಬಲ್ಲ ವ್ಯಕ್ತಿ ಯಾರು ಎನ್ನುವುದು. ಆ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ಹಾರ್ದಿಕ್‌ ಪಾಂಡ್ಯ ಮಾಡಿದ್ದಾರೆ. ಕಪಿಲ್‌ 25ನೇ ವ್ಯಕ್ತಿಯಾಗಿ ಭಾರತ ಏಕದಿನ ತಂಡವನ್ನು ಪ್ರವೇಶಿಸಿದರೆ, ಹಾರ್ದಿಕ್‌ 215ನೇ ಕ್ರಿಕೆಟಿಗ.

Advertisement

ವೇಗದ ಬೌಲಿಂಗ್‌ ಜೊತೆಗೆ ಅಷ್ಟೇ ಉತ್ತಮ ಉತ್ತಮವಾಗಿ ಬ್ಯಾಟಿಂಗ್‌ ಮಾಡುವ ಆಲ್‌ರೌಂಡರ್‌ ವಿಶ್ವಕ್ರಿಕೆಟ್‌ನ ಇತರೆ ತಂಡಗಳಲ್ಲಿ ಬೇಕಾದಷ್ಟು ಮಂದಿಯಿದ್ದಾರೆ. ಭಾರತದಲ್ಲಿ ಮಾತ್ರ ಈ ವಿಭಾಗದಲ್ಲಿ ನಿರಂತರ ಹುಡುಕಾಟ ನಡೆದರೂ ನಿರೀಕ್ಷೆಗೆ ತಕ್ಕ ಯಶಸ್ಸು ಸಾಧಿಸಿದವರು ಇಲ್ಲ. ರಾಬಿನ್‌ ಸಿಂಗ್‌, ಇರ್ಫಾನ್‌ ಪಠಾಣ್‌, ರೀತಿಂದರ್‌ ಸಿಂಗ್‌ ಸೋಧಿ, ಲಕ್ಷ್ಮಿ ರತನ್‌ ಶುಕ್ಲಾ, ಸಂಜಯ್‌ ಬಂಗಾರ್‌, ಸ್ಟುವರ್ಟ್‌ ಬಿನ್ನಿ ಇವರನ್ನೆಲ್ಲ ಪರ್ಯಾಯವಾಗಬಲ್ಲರೇ ಎಂದು ಯೋಚಿಸಲಾಯಿತು. ಈ ಹೆಸರುಗಳಲ್ಲಿ ರಾಬಿನ್‌ ಸಿಂಗ್‌ ಮತ್ತು
ಇರ್ಫಾನ್‌ ಪಠಾಣ್‌ ಮಾತ್ರ ಅಲ್ಪಮಟ್ಟಿಗೆ ತಾಳಿ ಕೊಂಡವರು. ಉಳಿದವರೆಲ್ಲ ಪೈಪೋಟಿಯಲ್ಲಿ ಬಹಳ ಹಿಂದುಳಿದರು. ಕಪಿಲ್‌ ಸ್ಥಾನ ಖಾಲಿಯೇ ಆಗುಳಿಯಿತು.

ಕೆಲ ದಶಕಗಳ ಕಾಯುವಿಕೆಯ ನಂತರ ಹಾರ್ದಿಕ್‌ ಪಾಂಡ್ಯ ಬರೋಡಾದಿಂದ ಭಾರತ ತಂಡವನ್ನು ಪ್ರವೇಶಿಸಿದರು. ಇವರ ಪ್ರತಿಭೆ ಬೆಳಕಿಗೆ ಬಂದಿದ್ದು ಐಪಿಎಲ್‌ ಮೂಲಕ. ಅಲ್ಲಿಂದ ಅವರನ್ನು 2016ರ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಲಾ 
ಯಿತು. ಆಸ್ಟ್ರೇಲಿಯಾವನ್ನು ಭಾರತ ಮೂರು ಟಿ20 ಪಂದ್ಯಗಳಲ್ಲಿ ವೈಟ್‌ವಾಷ್‌ ಮಾಡಿದ ಸರಣಿಯಲ್ಲಿ ಹಾರ್ದಿಕ್‌ ಬೌಲಿಂಗ್‌ ಮೂಲಕ ಮಿಂಚಿದರು, ಬ್ಯಾಟಿಂಗ್‌ಗೆ ಅವಕಾಶ ಸಿಗಲಿಲ್ಲ. ಹಾರ್ದಿಕ್‌ ಭಾರತದ ಹೊಸ ಶೋಧ ಎಂದು ಧೋನಿ ಒಪ್ಪಿ ಕೊಂಡರು. 

ಮುಂದೆ ಭಾರತದಲ್ಲಿ ಟಿ20 ವಿಶ್ವಕಪ್‌ ನಡೆದಾಗ ಬಾಂಗ್ಲಾ ವಿರುದ್ಧ ಅತ್ಯಂತ ನಿರ್ಣಾ ಯಕ ಪಂದ್ಯದಲ್ಲಿ ಕೊನೆ ಓವರ್‌ ಎಸೆದ ಪಾಂಡ್ಯ ತಂಡವನ್ನು ಗೆಲ್ಲಿಸಿಯೇ ಬಿಟ್ಟರು. ಬಾಂಗ್ಲಾ ಬ್ಯಾಟ್ಸ್‌ ಮನ್‌ ಅನ್ನು ವಂಚಿಸಿದ ಆ ಎಸೆತವನ್ನು ಭಾರತ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಆದರೆ ಹಾರ್ದಿಕ್‌ ಸ್ಫೋಟಕ ಬ್ಯಾಟ್‌ಮನ್‌ ಕೂಡ ಹೌದು ಎಂದು ಗೊತ್ತಾಗಲಿಕ್ಕೆ ಈ ವರ್ಷ ಇಂಗ್ಲೆಂಡ್‌ನ‌ಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ವರೆಗೆ ಕಾಯ ಬೇಕಾಯಿತು. ಭಾರತದ ಉಳಿದೆಲ್ಲ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಕಡೆಗೆ ಹೊರಟಿದ್ದರೆ ಪಾಂಡ್ಯ ಮಾತ್ರ ತಂಡವನ್ನು ಗೆಲ್ಲಿಸಿಯೇ ಬಿಡುವಂತೆ ಸಿಕ್ಸರ್‌ಗಳ ಮೇಲೆ ಸಿಕ್ಸರ್‌ ಬಾರಿಸಿ 73 ರನ್‌ ಬಾರಿಸಿದ್ದರು. ರನೌಟ್‌ ಆಗದೇ ಹೋಗಿದ್ದರೆ ಫ‌ಲಿತಾಂಶ ಇನ್ನಷ್ಟು ರೋಚಕ ವಾಗುತ್ತಿದ್ದರಲ್ಲಿ ಸಂಶಯವೇ ಇಲ್ಲ. ಮುಂದೆ ಶ್ರೀಲಂಕಾ ಪ್ರವಾಸ, ಸದ್ಯದ ಆಸ್ಟ್ರೇಲಿಯಾ ಪ್ರವಾಸ ದಲ್ಲಿ ಹಾರ್ದಿಕ್‌ ಬೌಲಿಂಗ್‌ಗಿಂತ ಬ್ಯಾಟಿಂಗ್‌ನಲ್ಲೇ ಮೆರೆದಾಡಿದ್ದಾರೆ.

ಕಪಿಲ್‌ ದೇವ್‌ ಕಥನ
1983ರಲ್ಲಿ ಭಾರತ ವಿಶ್ವಕಪ್‌ ಗೆದ್ದ ತಂಡದ ನಾಯಕರಾಗಿದ್ದ ಕಪಿಲ್‌ ದೇವ್‌ ಅವರು ಜಿಂಬಾಬ್ವೆ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್‌ ಶಕ್ತಿಯನ್ನು ತೋರಿದರು. ಆಗ ಭಾರತ 17 ರನ್‌ಗೆ 5 ವಿಕೆಟ್‌ ಕಳೆದುಕೊಂಡಿದ್ದರಿಂದ ಪಂದ್ಯ ಸೋಲುವುದು
ಖಾತ್ರಿಯಾಗಿತ್ತು. ಆಗ ಸ್ಫೋಟಿಸಲು ಶುರು ಮಾಡಿದ ಕಪಿಲ್‌ 138 ಎಸೆತಗಳಲ್ಲಿ 16 ಬೌಂಡರಿ, 6 ಸಿಕ್ಸರ್‌ ಬಾರಿಸಿ 175 ರನ್‌ ಗಳಿಸಿ ತಂಡದ ಮೊತ್ತವನ್ನು 266ಕ್ಕೆ ಒಯ್ದರು. ಪರಿಣಾಮ ಭಾರತ ಗೆಲುವು ಸಾಧಿಸಿತು. ಅಷ್ಟು ಮಾತ್ರವಲ್ಲ ಮುಂದಿನ ಸುತ್ತು ಪ್ರವೇಶಿಸಿತು. ಒಂದುವೇಳೆ ಇಂತಹ ಸ್ಫೋಟಕ ಇನಿಂಗ್ಸ್‌ ಬರದಿದ್ದರೆ 83ರ ವಿಶ್ವಕಪ್‌ ಭಾರತ ಗೆದ್ದೇ ಗೆಲ್ಲುತ್ತಿತ್ತು ಎನ್ನುವುದು ಕಷ್ಟ. ತಮ್ಮ
ವೃತ್ತಿಜೀವನದಲ್ಲಿ ಕಪಿಲ್‌ ದೇವ್‌ ಬ್ಯಾಟಿಂಗ್‌ಗಿಂತ ಬೌಲಿಂಗ್‌ನಲ್ಲಿ ಮಿಂಚಿದ್ದೇ ಜಾಸ್ತಿ. ಟೆಸ್ಟ್‌ನಲ್ಲಿ ಅವರು ಗಳಿಸಿದ 434 ವಿಕೆಟ್‌ ಗಳಿಸಿದ್ದರು. ಅದು ಬಹಳ ವರ್ಷ ವಿಶ್ವದಾಖಲೆಯಾಗಿ ಉಳಿದಿತ್ತು. ಈಗ ಕೆಲವು ವರ್ಷಗಳ ಹಿಂದೆ ಅದನ್ನು ಹಲವು ಬೌಲರ್‌ಗಳು ಮೀರಿದ್ದಾರೆ. ಏಕದಿನದಲ್ಲೂ ಕಪಿಲ್‌ ಬೌಲಿಂಗ್‌ ಶ್ರೇಷ್ಠವಾಗಿಯೇ ಇತ್ತು, ಅವರ ವಿಕೆಟ್‌ ಗಳಿಕೆ 253. ಬೌಲಿಂಗ್‌ನ ಜೊತೆಜೊತೆಗೇ ಬ್ಯಾಟಿಂಗ್‌ನಲ್ಲೂ ನಿರಂತರವಾಗಿ ಆಪತಾºಂಧವನ ಸ್ಥಾನ ನಿರ್ವಹಿಸಿದ್ದರು. ಸದ್ಯ ಆ ಸ್ಥಾನವನ್ನು ಹಾರ್ದಿಕ್‌ ತುಂಬಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next