Advertisement

ಇಂದು ತೆರೆಗೆ ಗ್ರಾಮಾಭಿವೃದ್ಧಿ ಯೋಜನೆ ಸಿನೆಮಾ

08:10 AM Apr 27, 2018 | Team Udayavani |

ಕುಂದಾಪುರ: ಸಮಾಜಮುಖಿ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುರಿತು ಸಿನೆಮಾ ಸಿದ್ಧವಾಗಿದ್ದು, ‘ಕಾನೂರಾಯಣ’ ಎ. 27ರಂದು ರಾಜ್ಯಾದ್ಯಂತ ಬೆಳ್ಳಿತೆರೆಯಲ್ಲಿ ಮೂಡಿ ಬರಲಿದೆ. ಇದರ ನಿರ್ಮಾಪಕತ್ವ ಬರೋಬ್ಬರಿ 37 ಲಕ್ಷ ಜನರದ್ದು. ತಲಾ 10 ರೂ. ಬಂಡವಾಳ ಹಾಕಿ ನಿರ್ಮಿಸಿದ ಸಿನೆಮಾ ಇದು. ಆದ್ದರಿಂದ ಬಿಡುಗಡೆಗೆ ಮುನ್ನವೇ ಗಿನ್ನಿಸ್‌ ದಾಖಲೆಗೆ ಅರ್ಹತೆ ಪಡೆದ ಚಿತ್ರವಾಗಿದೆ.

Advertisement

ಯೋಜನೆ
1982ರಲ್ಲಿ ಡಾ| ಹೆಗ್ಗಡೆಯವರು ಬಡವರ ಉದ್ಧಾರದ ಕಾಳಜಿಯಿಂದ ರೂಪಿಸಿದ ಗ್ರಾಮಾಭಿವೃದ್ಧಿ ಯೋಜನೆ ಇಂದು ಲಕ್ಷಾಂತರ ಜನರಿಗೆ ನೆರಳು ಕೊಡುತ್ತಿದೆ. ಸಣ್ಣಮಟ್ಟಿಗೆ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಾರಂಭಿಸಿದ ಯೋಜನೆ ಇಂದು ರಾಜ್ಯದ 30 ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಾ ಅಂತಾರಾಷ್ಟ್ರೀಯ ಗಮನ ಸೆಳೆದು ಗ್ರೀನ್‌ ಆಸ್ಕರ್‌ ಸೇರಿ ಅನೇಕ ಪ್ರಶಸ್ತಿ ಗಳಿಸಿದೆ. ಸರಕಾರವೇ ಈ ಯೋಜನೆಯ ಕೆಲವು ಉಪಯೋಜನೆಗಳನ್ನು ಅನಂತರ ಅನುಷ್ಠಾನಿಸಿದೆ. ಯೋಜನೆ ಇಂದು 3.72 ಲಕ್ಷ ಸ್ವ ಸಹಾಯ ಸಂಘಗಳನ್ನು ಹೊಂದಿದ್ದು, 36.44 ಲಕ್ಷ ಸದಸ್ಯರಿದ್ದಾರೆ. 6,248 ಕೋ.ರೂ. ಸಾಲವನ್ನು ವಿವಿಧ ಬ್ಯಾಂಕ್‌ಗಳ ಮೂಲಕ ನೇರವಾಗಿ ಸದಸ್ಯರ ವಿವಿಧ ಅಗತ್ಯಗಳಿಗೆ ನೀಡಲಾಗಿದೆ.

ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್‌.ಎಚ್‌. ಮಂಜುನಾಥ್‌ ಅವರ ಮೇಲ್ವಿಚಾರಣೆಯಲ್ಲಿ ಸಿನೆಮಾ ಮೂಡಿಬಂದಿದ್ದು ಟಿ.ಎಸ್‌. ನಾಗಾಭರಣ, ಪನ್ನಗಭರಣ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದರು. ಖ್ಯಾತ ನಟರಾದ ದೊಡ್ಡಣ್ಣ, ಸುಂದರ್‌ರಾಜ್‌, ಗಿರಿಜಾ ಲೋಕೇಶ್‌ ಮೊದಲಾದವರು ಕೂಡಾ ನಟಿಸಿದ್ದು, ಹೊಸನಟರು ತಾರಾಗಣದಲ್ಲಿದ್ದಾರೆ. ಸಿನೆಮಾದ 5 ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿವೆ. ಕುಂದಾಪುರದ ವಿನಾಯಕ ಥಿಯೇಟರ್‌ನಲ್ಲಿ ಶುಕ್ರವಾರ ಮುಂಜಾನೆ 10ಕ್ಕೆ ಉದ್ಘಾಟನೆ ನಡೆಯಲಿದೆ.


ನಡೆದು ಬಂದ ಹಾದಿ

ಖ್ಯಾತ ಹಿರಿಯ ನಿರ್ದೇಶಕ ಟಿ.ಎಸ್‌. ನಾಗಾಭರಣ ಕಥೆ ರಚಿಸಿ, ನಿರ್ದೇಶಿಸಿದ್ದು, ಯೋಜನೆ ನಡೆದು ಬಂದ ಹಾದಿ, ಸವಾಲುಗಳನ್ನು ಎದುರಿಸಿದ ಬಗೆಯನ್ನು ಕಥೆ ಒಳಗೊಂಡಿದೆ. ಯೋಜನೆ ಆರಂಭಿಸುವಾಗ ಜನರಲ್ಲಿ ಇದ್ದ ಆತಂಕ, ಕ್ರಮೇಣ ಆತ್ಮವಿಶ್ವಾಸ ಮೂಡಿ ಸ್ವಯಂಸ್ಫೂರ್ತಿಯಿಂದ ಭಾಗವಹಿಸಿದ್ದು, ಮಹಿಳಾ ಸಶಕ್ತೀಕರಣ, ಆರ್ಥಿಕ ಚೈತನ್ಯ ನೀಡಿದ್ದು, ಇವೆಲ್ಲವನ್ನೂ ಒಳಗೊಂಡಿದೆ. ಕೆಲವರ ಒಂದಷ್ಟು ಪ್ರಶ್ನೆ, ಗೊಂದಲಗಳಿಗೆ ಸಿನೆಮಾ ಉತ್ತರ ನೀಡಲಿದೆ ಎನ್ನುತ್ತಾರೆ ಡಾ| ಎಲ್‌. ಎಚ್‌. ಮಂಜುನಾಥ್‌.

ದುಡ್ಡಿಗಾಗಿ ಅಲ್ಲ
ರಾಜ್ಯದ 140ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ  ಸಿನೆಮಾ ತೆರೆ ಕಾಣುತ್ತಿದೆ. ಯಶೋಗಾಥೆ ಸಹಿತ ಒಂದು ಸದಭಿರುಚಿಯ ಸಿನೆಮಾ ಇದಾಗಿದೆ. ಸಿನೆಮಾ ಹಣ ಮಾಡುವ ಉದ್ದೇಶದಿಂದ ಮಾಡಿದ್ದು ಅಲ್ಲ. ಎಲ್ಲರೂ ಮನೋರಂಜನೆ ದೃಷ್ಟಿಯಿಂದ ನೋಡಬೇಕು. 
– ಡಾ| ಎಲ್‌.ಎಚ್‌. ಮಂಜುನಾಥ್‌, ಕಾ.ನಿ. ನಿರ್ದೇಶಕರು, ಧರ್ಮಸ್ಥಳ ಯೋಜನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next