Advertisement

ವರ್ಷ ತುಂಬಿದ ಕಣ್ಣೂರು ವಿಮಾನ ನಿಲ್ದಾಣ; ಇಂದು ಮೆಗಾ ಈವೆಂಟ್‌

07:31 PM Dec 08, 2019 | Sriram |

ಕಾಸರಗೋಡು: ವಿವಿಧ ಕಾರಣ ಗಳಿಂದ ವಿಳಂಬವಾಗಿ ಆರಂಭಗೊಂಡ ಮಹತ್ವಾಕಾಂಕ್ಷೆಯ ಕಣ್ಣೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಡಿ. 9ರಂದು ಒಂದು ವರ್ಷ ಪೂರೈಸಲಿದ್ದು, ಸಾಕಷ್ಟು ಸಾಧನೆ ಮಾಡಿದೆ.

Advertisement

ಕಾಸರಗೋಡು, ಕೊಡಗು, ಕಣ್ಣೂರು ಮೊದಲಾದೆಡೆಗಳ ಪ್ರಯಾ ಣಿಕರನ್ನು ಕೇಂದ್ರವಾಗಿರಿಸಿ ಆರಂಭಿಸಲಾದ ಕಣ್ಣೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಕಳೆದ ವರ್ಷ ಅಂದರೆ 2018 ಡಿಸೆಂಬರ್‌ 9ರಂದು ಉದ್ಘಾಟನೆಗೊಂಡಿತ್ತು.
ಮಂಗಳೂರು ಹಾಗೂ ಕಲ್ಲಿಕೋಟೆ ವಿಮಾನ ನಿಲ್ದಾಣಗಳಿದ್ದರೂ ಇದರ ಮಧ್ಯೆ ಕಣ್ಣೂರು ವಿಮಾನ ನಿಲ್ದಾಣ ಆರಂಭ ಗೊಳ್ಳುವುದರಿಂದ ಪ್ರಯೋಜನವಾಗ ಲಿದೆಯೇ ಎಂದು ಆರಂಭದಲ್ಲಿ ಆತಂಕ ವಿದ್ದರೂ, ಇವುಗಳನ್ನೆಲ್ಲ ಮೀರಿ ನಿರೀಕ್ಷೆಗೂ ಉತ್ತಮ ಸಾಧನೆಯನ್ನು ತೋರಿದೆ. ಉತ್ತರ ಮಲಬಾರ್‌ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರುವ ಕಣ್ಣೂರು ವಿಮಾನ ನಿಲ್ದಾಣದ ಮೂಲಕ ಒಂದು ವರ್ಷದಲ್ಲಿ ಸುಮಾರು ಒಂದು ಮಿಲಿಯನ್‌ ಪ್ರಯಾ ಣಿಕರು ದೇಶ- ವಿದೇಶಕ್ಕೆ ಪ್ರಯಾಣಿಸಿದ್ದಾರೆ. ಈ ನಿಲ್ದಾಣದ ಮೂಲಕ ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ಹೋಗುವವರಿಗೆ ಸಾಕಷ್ಟು ಪ್ರಯೋಜನವಾಗಿದೆ. ಆಂತರಿಕ ಸೇವೆಯ ಜತೆಗೆ ಕೊಲ್ಲಿ ರಾಷ್ಟ್ರದ ಹತ್ತು ವಿಮಾನ ನಿಲ್ದಾಣಗಳ ಪೈಕಿ ಎಂಟು ವಿಮಾನ ನಿಲ್ದಾಣಗಳಿಗೆ ಕಣ್ಣೂರು ವಿಮಾನ ನಿಲ್ದಾಣದಿಂದ ನೇರ ವಿಮಾನಗಳಿವೆ. ಜೆದ್ದಾ ಮತ್ತು ದಮಾಮ್‌ಗಳಿಗೆ ಮಾತ್ರವೇ ಇಲ್ಲಿಂದ ವಿಮಾನವಿಲ್ಲ. ಇದೇ ತಿಂಗಳಿಂದ ದಮ್ಮಾಮ್‌ಗೆ ಈ ನಿಲ್ದಾಣದಿಂದ ವಿಮಾನ ಸೇವೆ ಆರಂಭಗೊಳ್ಳಲಿದೆ. ಜೆದ್ದಾಕ್ಕೂ ಶೀಘ್ರದಲ್ಲೇ ವಿಮಾನ ಸೇವೆ ಆರಂಭಗೊಳ್ಳಲಿದ್ದು, ಇದಕ್ಕಾಗಿ ಪ್ರಾಥಮಿಕ ಹಂತದ ಪ್ರಕ್ರಿಯೆಗಳು ನಡೆಯುತ್ತಿವೆ. ಈ ವಿಮಾನ ನಿಲ್ದಾಣಕ್ಕೆ ಕಣ್ಣೂರು ವಿಮಾನ ನಿಲ್ದಾಣದಿಂದ ವಿಮಾನ ಸೇವೆ ಆರಂಭಗೊಂಡಲ್ಲಿ ದೇಶದಲ್ಲಿಯೇ ಕೊಲ್ಲಿ ರಾಷ್ಟ್ರಕ್ಕೆ ಅತ್ಯಧಿಕ ವಿಮಾನ ಸೇವೆ ಸಲ್ಲಿಸುವ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಕಣ್ಣೂರು ವಿಮಾನ ನಿಲ್ದಾಣ ಪಾತ್ರವಾಗಲಿದೆ. ಪ್ರಸ್ತುತ 3,040 ಮೀ. ರನ್‌ ವೇ ಇದ್ದು, ಇದನ್ನು 4,000 ಮೀ.ಗೆ ಹೆಚ್ಚಿಸುವ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ವಿಮಾನ ನಿಲ್ದಾಣದ ಮೂಲ ಸೌಕರ್ಯಗಳನ್ನು ಕಿಯಾಲ್‌ ಆರಂಭಿಸಿತ್ತು.

ಇದೀಗ ಕಾರ್ಗೋ ಕಾಂಪ್ಲೆಕ್ಸ್‌ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಈ ವಿಮಾನ ನಿಲ್ದಾಣ ಇನ್ನಷ್ಟು ಅಭಿವೃದ್ಧಿಗೆ ಸಾಧ್ಯತೆಯಿದ್ದು, ಮಂಗಳೂರು ಮತ್ತು ಕಲ್ಲಿಕೋಟೆ ವಿಮಾನ ನಿಲ್ದಾಣಕ್ಕೆ ಭಾರೀ ಸ್ಪರ್ಧೆ ನೀಡುವ ಹಂತಕ್ಕೆ ತಲುಪಲಿದೆ.

ವಿಮಾನ ನಿಲ್ದಾಣ ವಿಳಂಬ
1996ರಲ್ಲಿ ವಿಮಾನ ನಿಲ್ದಾಣ ಯೋಜನೆ ಆರಂಭಿಸಿದರೂ ನನಸಾಗಲು 22 ವರ್ಷಗಳೇ ಬೇಕಾಯಿತು. 2001ರಿಂದ 2006ರ ವರೆಗಿನ ಐದು ವರ್ಷಗಳ ಕಾಲ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿ ಯಾವುದೇ ಪ್ರಕ್ರಿಯೆಯೂ ನಡೆದಿರಲಿಲ್ಲ. 2006ರಲ್ಲಿ ಮತ್ತೆ ವಿಮಾನ ನಿಲ್ದಾಣಕ್ಕೆ ಜೀವ ನೀಡಿತ್ತು. ಇದರಿಂದಾಗಿ 2018ರ ಡಿ.9ರಂದು ವಿಮಾನ ನಿಲ್ದಾಣ ಲೋಕಾರ್ಪಣೆ ಸಾಧ್ಯವಾಯಿತು.

ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕಣ್ಣೂರು ನಗರದಿಂದ 20 ಕಿ.ಮೀ. ದೂರದಲ್ಲಿರುವ ಕಣ್ಣೂರು-ಮಟ್ಟನ್ನೂರು- ಮೈಸೂರು ರಸ್ತೆ ಸಮೀಪದಲ್ಲಿದೆ. ಕರ್ನಾಟಕದ ಕೊಡಗು ಜಿಲ್ಲೆಗೆ ಹತ್ತಿರವಾಗಿರುವ ವಿಮಾನ ನಿಲ್ದಾಣದಿಂದ ಕೊಡಗು ಮತ್ತು ಮೈಸೂರು ಜಿಲ್ಲೆಗಳ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ. ಮಡಿಕೇರಿಯಿಂದ ನೂತನ ಕಣ್ಣೂರು ವಿಮಾನ ನಿಲ್ದಾಣವು 90 ಕಿ.ಮೀ. ಅಂತರದಲ್ಲಿದ್ದು, ಮೈಸೂರಿನಿಂದ 158 ಕಿ.ಮೀ. ದೂರದಲ್ಲಿದೆ. ಪ್ರಥಮ ಹಂತದಲ್ಲಿ ವಿಮಾನ ನಿಲ್ದಾಣದ ಕಾಮಗಾರಿಗೆ 1,892 ಕೋಟಿ ರೂ. ನಿರ್ಮಾಣ ವೆಚ್ಚವಾಗಿದೆ. ಕಿಯಾಲ್‌ ಮೂಲಕ 2014ರ ಫೆಬ್ರವರಿಯಲ್ಲಿ ವಿಮಾನ ನಿಲ್ದಾಣದ ನಿರ್ಮಾಣ ಕಾಮಗಾರಿ ಆರಂಭಗೊಂಡಿತ್ತು. ತಿರುವನಂತಪುರ, ಕೊಚ್ಚಿ, ಕಲ್ಲಿಕೋಟೆಯ ನಂತರ ರಾಜ್ಯದ ನಾಲ್ಕನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಗರಿ ಕಣ್ಣೂರಿಗಿದೆ.

Advertisement

ಗೋಪಿನಾಥ್‌ ಮುತ್ತುಕ್ಕಾಡ್‌ ಅವರಿಂದ ಮ್ಯಾಜಿಕ್‌ ಶೋ, ಸಿನಿಮಾ ತಾರೆಯರಿಂದ ನೃತ್ಯ, ಸಂಗೀತ, ಕಥಕ್‌ ನಡೆಯಲಿದೆ. ಕಣ್ಣೂರು ವಿಮಾನ ನಿಲ್ದಾಣ ಹಾಗೂ ಸಂಬಂಧಪಟ್ಟ ಸಂಸ್ಥೆಗಳಲ್ಲಿ ದುಡಿಯುವವರನ್ನು ಸಮ್ಮಾನಿಸಲಾಗುವುದು. ಸೈಕ್ಲಿಂಗ್‌ ಕ್ಲಬ್‌ ನೇತೃತ್ವದಲ್ಲಿ ಕಣ್ಣೂರು, ತಲಶೆÏàರಿ, ಕೂತುಪರಂಬ, ತಳಿಪರಂಬ ಮುಂತಾದ ಕಡೆಗಳಿಂದ ವಿಮಾನ ನಿಲ್ದಾಣಕ್ಕೆ ಸೈಕಲ್‌ ರ್ಯಾಲಿ ನಡೆಯಲಿದೆ. ವಿಮಾನ ನಿಲ್ದಾಣದಲ್ಲಿ ಭಾರತೀಯ ವಾಯು ಸೇನೆಯ ಯುದ್ಧ ವಿಮಾನಗಳ ಪ್ರದರ್ಶನ ನಡೆಯಲಿದೆ.

ರಾಜ್ಯದ ನಾಲ್ಕನೇ ನಿಲ್ದಾಣ
ಕಣ್ಣೂರು ಜಿಲ್ಲೆಯ ಮಟ್ಟನ್ನೂರು ನಗರಸಭಾ ವ್ಯಾಪ್ತಿಯಲ್ಲಿರುವ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಾಜ್ಯದ ನಾಲ್ಕನೇ ವಿಮಾನ ನಿಲ್ದಾಣವಾಗಿದೆ. ಕಣ್ಣೂರು ಇಂಟರ್‌ನ್ಯಾಶನಲ್‌ ಏರ್‌ಪೋರ್ಟ್‌ ಲಿಮಿಟೆಡ್‌ (ಕಿಯಾಲ್‌) ಮೂಲಕ ಸಾಕಾರ ಕಂಡ ವಿಮಾನ ನಿಲ್ದಾಣ ನಿರ್ಮಾಣವು ಖಾಸಗಿ ಮತ್ತು ಸರಕಾರಿ ಸಹಭಾಗಿತ್ವದಿಂದ ನಡೆದಿದೆ. ಮಟ್ಟನ್ನೂರು ನಗರಸಭಾ ವ್ಯಾಪ್ತಿಯ 2,300 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲಾಗಿದ್ದು, ವಿಮಾನ ನಿಲ್ದಾಣವು 3,040 ಮೀ. ಉದ್ದದ ರನ್‌ ವೇ ಹೊಂದಿದ್ದು, ಅದನ್ನು 4 ಸಾವಿರ ಮೀ. ವರೆಗೆ ಹೆಚ್ಚಿಸಲು ಕಾಮಗಾರಿ ನಡೆಯುತ್ತಿದೆ.

ಪ್ರಮುಖರ ಉಪಸ್ಥಿತಿ
ವಿಮಾನ ನಿಲ್ದಾಣಕ್ಕೆ ಒಂದು ವರ್ಷ ಪೂರ್ತಿಗೊಂಡ ಹಿನ್ನೆಲೆಯಲ್ಲಿ ಡಿ.9ರಂದು ಸಂಜೆ ಕಣ್ಣೂರು ನಾಯನ್ನಾರ್‌ ಅಕಾಡೆಮಿಯಲ್ಲಿ ಮೆಗಾ ಈವೆಂಟ್‌ ನಡೆಯಲಿದೆ. ಸಚಿವ ಇ.ಪಿ. ಜಯರಾಜನ್‌ ಕಾರ್ಯಕ್ರಮ ಉದ್ಘಾಟಿಸುವರು. ಸಚಿವರಾದ ರಾಮಚಂದ್ರನ್‌ ಕಡನ್ನಪಳ್ಳಿ, ಕೆ.ಕೆ. ಶೈಲಜಾ, ಇ. ಚಂದ್ರಶೇಖರನ್‌, ವಿ.ಕೆ. ರವೀಂದ್ರನ್‌, ಕಣ್ಣೂರು ಜಿಲ್ಲೆಯ ಸಂಸದರು, ಶಾಸಕರು, ರಾಜಕೀಯ, ಸಾಮಾಜಿಕ, ವ್ಯಾಪಾರ ವಲಯದ ಪ್ರಮುಖರು ಭಾಗವಹಿಸುವರು.

Advertisement

Udayavani is now on Telegram. Click here to join our channel and stay updated with the latest news.

Next