ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಕಣ್ಣಾ ಮುಚ್ಚೆ’ ಸಿನಿಮಾ ತೆರೆಗೆ ಬರಲು ತಯಾರಾಗಿದೆ. ಈಗಾಗಲೇ ತನ್ನ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ “ಕಣ್ಣಾ ಮುಚ್ಚೆ’ ಚಿತ್ರತಂಡ, ಇತ್ತೀಚೆಗೆ ಲಿರಿಕಲ್ ವಿಡಿಯೋ ಸಾಂಗ್ಸ್ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.
“ಕೃಷಿ ಸ್ಟುಡಿಯೋಸ್’, “ಸಚಿತ್ ಫಿಲಿಂಸ್’ ಹಾಗೂ “ಶಿವ ಸಿನಿಮಾಸ್’ ಬ್ಯಾನರ್ನಲ್ಲಿ ಜಂಟಿಯಾಗಿ ನಿರ್ಮಾಣವಾಗಿರುವ “ಕಣ್ಣಾ ಮುಚ್ಚೆ’ ಸಿನಿಮಾಕ್ಕೆ ಈ ಹಿಂದೆ “ಮಾಜರ್’ ಸಿನಿಮಾವನ್ನು ನಿರ್ದೇಶಿಸಿದ್ದ ಲೋಕಲ್ ಲೋಕಿ ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ.
ಇದೇ ವೇಳೆ “ಕಣ್ಣಾ ಮುಚ್ಚೆ’ ಹಾಡುಗಳ ಬಗ್ಗೆ ಮಾತನಾಡಿದ ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್, “ಬಹಳ ಸಮಯದ ಚಿತ್ರರಂಗದಿಂದ ಸ್ವಲ್ಪ ದೂರ ಉಳಿಯಬೇಕಾಯಿತು. ಅದಾದ ಬಳಿಕ ಈ ಚಿತ್ರತಂಡವು ನನ್ನನ್ನು ಸಂಪರ್ಕಿಸಿ ನಾನೇ ಈ ಸಿನಿಮಾಕ್ಕೆ ಸಂಗೀತ ಸಂಯೋಜಿಸಬೇಕೆಂದು ಕೋರಿಕೊಂಡಿದ್ದರಿಂದ ಮತ್ತೆ ಸಂಗೀತದ ಕೆಲಸ ಮಾಡಬೇಕಾಯಿತು. ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿವೆ’ ಎಂದರು.
ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಲೋಕಲ್ ಲೋಕಿ, “ಮೊಬೈಲ್ ಅಂಗಡಿ ಹುಡುಗ ನೊಬ್ಬ ಪ್ರೀತಿನೇ ಮಾಡದವನು, ಪ್ರೀತಿಯಲ್ಲಿ ಬೀಳುತ್ತಾನೆ. ಅಮಾಯಕ ಹುಡುಗಿಗೆ ಏನನ್ನು ಕಂಡರೆ ಇಷ್ಟವಿಲ್ಲದಿದ್ದರೂ ಲವ್ ಹುಟ್ಟಿಕೊಳ್ಳುತ್ತದೆ. ಮುಂದೆ ಇಬ್ಬರು ದೂರ ಆಗುತ್ತಾರೆ. ಕೊನೆಗೆ ಅವಳು ಸಿಕ್ತಾಳಾ? ಈತನ ಪ್ರೀತಿಗೆ ಜೀವ ಬರುತ್ತದಾ? ಎನ್ನುವುದು ಸಿನಿಮಾದ ಕಥೆಯ ಒಂದು ಎಳೆ’ ಎಂದರು.
ರವಿ ಕೃಷ್ಣ ನಾಯಕನಾಗಿದ್ದು, ತೇಜಸ್ವಿನಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಉಗ್ರಂ ರವಿ, ನಾಗೇಂದ್ರ ಅರಸ್, ಕೃಷ್ಣ, ಮಮತಾ, ಪ್ರಶಾಂತ್ ಸಿದ್ದಿ, ಜಯ ಸೂರ್ಯ ಮುಂತಾದವರು ನಟಿಸಿದ್ದಾರೆ.
ಜಿ. ಎಸ್. ಕಾರ್ತಿಕ ಸುಧನ್