ಅಬುಧಾಬಿ :ಸೌದಿ ಅರೇಬಿಯಾ ಮತ್ತು ಕುವೈಟ್ಗೆ ತೆರಳುವ ದಾರಿಯಲ್ಲಿ ದುಬೈಗೆ ಬಂದು ಸಿಲುಕಿಕೊಂಡಿರುವ ಅನಿವಾಸಿ ಭಾರತೀಯರಿಗೆ ಮರಳಿ ಭಾರತಕ್ಕೆತೆರಳಲು ದುಬೈಯಲ್ಲಿರುವ ಭಾರತೀಯ ದೂತಾವಾಸ ಕೇಂದ್ರ ಕಲ್ಪಿಸಿದ ಉಚಿತ ವಿಮಾನ ಸೇವೆ ಸೌಲಭ್ಯದ ಟಿಕೆಟ್ ಅನ್ನು ಫೆ. 23ರಂದು ದುಬೈ ಹೆಮ್ಮೆಯ ಕನ್ನಡ ಸಂಘದ ಅಧ್ಯಕ್ಷೆ ಮಮತಾ ಮೈಸೂರು, ಕಾರ್ಯದರ್ಶಿ ಸೆಂತಿಲ್ ಬೆಂಗಳೂರು ಮತ್ತು ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು ಅವರು ವಿಮಾನ ನಿಲ್ದಾಣಕ್ಕೆ ತೆರಳಿ ಪ್ರಯಾಣದ ಮೊದಲನೇ ಹಂತದಲ್ಲಿದ್ದ ಅನಿವಾಸಿ ಫಲಾನುಭವಿಗಳಿಗೆ ಹಸ್ತಾಂತರಿಸಿದರು.
ಕೋವಿಡ್ ಕಾರಣದಿಂದ ಭಾರತದಿಂದ ನೇರವಾಗಿ ಸೌದಿ ಅರೇಬಿಯಾ ಮತ್ತು ಕುವೈಟ್ ದೇಶಗಳಿಗೆ ಪ್ರಯಾಣಿಸಲು ನಿರ್ಬಂಧ ಇರುವುದರಿಂದ ಇಲ್ಲಿ ಕೆಲಸ ಮಾಡುತ್ತಿರುವ ನೂರಾರು ಕನ್ನಡಿಗರು ಸೇರಿ ಸಾವಿರಾರು ಭಾರತೀಯರು ಸಂಯುಕ್ತ ಅರಬ್ ಸಂಸ್ಥಾನದ ದುಬೈ ಮೂಲಕ 16 ದಿನಗಳ ಕ್ವಾರಂಟೈನ್ ಮುಗಿಸಿ ಸೌದಿ ಮತ್ತು ಕುವೈತ್ ದೇಶಗಳಿಗೆ ತೆರಳುತ್ತಿದ್ದರು.
ಆದರೆ ಕಳೆದ ಹಲವು ದಿನಗಳಿಂದ ವಿಶ್ವಾದ್ಯಂತ ಕೊರೊನಾ ಆರ್ಭಟ ಹೆಚ್ಚಾಗಿದ್ದರಿಂದ ಸೌದಿ ಮತ್ತು ಕುವೈಟ್ ದೇಶಗಳು ದುಬೈಯಿಂದಲೂ ವಾಯು ಮಾರ್ಗ ಮತ್ತು ಗಡಿಗಳನ್ನು ಮುಚ್ಚಿ ಪ್ರಯಾಣ ನಿರ್ಬಂಧ ಹೇರಿದ್ದರಿಂದ ಸಾವಿರಾರು ಅನಿವಾಸಿಗಳು ದುಬೈಯಲ್ಲಿ ಸಿಲುಕಿಕೊಂಡು ಸಂಕಷ್ಟಕ್ಕೆ ಒಳಗಾಗಿದ್ದರು.
ಇವರ ಸಮಸ್ಯೆಗಳನ್ನು ಮನಗಂಡ ದುಬೈ ಹೆಮ್ಮೆಯ ಕನ್ನಡಿಗರ ಸಂಘವು ಸಂಕಷ್ಟಕ್ಕೆ ಒಳಪಟ್ಟ ಅನಿವಾಸಿ ಸೌದಿ ಕುವೈಟ್ ಕನ್ನಡಿಗರಿಗೆ ಕರ್ನಾಟಕ ಸರಕಾರ ಸಹಾಯಕ್ಕೆ ನಿಲ್ಲಬೇಕು ಎಂದು ಒತ್ತಾಯಿಸಿ ಟ್ವಿಟರ್ ಅಭಿಯಾನವನ್ನು ನಡೆಸಿತ್ತು. ಇದನ್ನು ದುಬೈಯಲ್ಲಿರುವ ರಾಯಭಾರಿ ಕಚೇರಿ ಗಮನಿಸಿರುವುದಾಗಿ ಇಲ್ಲಿನ ಸ್ಥಳೀಯ ಗಲ್ಫ್ ನ್ಯೂಸ್ ಪತ್ರಿಕೆಯಲ್ಲಿ ರಾಯಭಾರಿ ಕಚೇರಿ ಅಧಿಕೃತರು ಉಲ್ಲೇಖೀಸಿದ್ದರು.
ಅಲ್ಲದೇ ಇವರಿಗೆ ಭಾರತಕ್ಕೆ ಮರಳಲು ಕಾನ್ಸುಲೇಟ್ ವತಿಯಿಂದ ನೀಡುತ್ತಿರುವ ಉಚಿತ ವಿಮಾನ ಟಿಕೆಟ್ ಸೌಲಭ್ಯದ ಕನ್ನಡಿಗರ ಅರ್ಜಿಯನ್ನು ಹೆಮ್ಮೆಯ ಕನ್ನಡಿಗರು ಸಂಘದಿಂದ ರಾಯಭಾರಿ ಕಚೇರಿ ಅಧಿಕೃತರಿಗೆ ಹಸ್ತಾಂತರಿಸಲಾಗಿತ್ತು.
ಮೊದಲನೇ ಹಂತದಲ್ಲಿ ಪ್ರಯಾಣಿಸಿದ ಯಾತ್ರಿಕರು ಸುರಕ್ಷಿತವಾಗಿ ತಾಯ್ನಾಡು ತಲುಪಿದ್ದು, ದುಬೈ ಭಾರತೀಯ ಕಾನ್ಸುಲೇಟ್ ಮತ್ತು ಟಿಕೆಟ್ ಪಡೆಯಲು ಸಹಾಯ ಮಾಡಿದ ಕೇರಳದ ಕೆಎಂಸಿಸಿ ಸಂಘಟನೆಗೆ ದುಬೈ ಹೆಮ್ಮೆಯ ಕನ್ನಡಿಗರು ಸಂಘದ ಅಧ್ಯಕ್ಷರು ಧನ್ಯವಾದ ತಿಳಿಸಿದರು.