Advertisement

ಕನ್ನಡ ಬರೀ ಭಾಷೆಯಲ್ಲ-ಬದುಕು

04:13 PM Nov 02, 2020 | Suhan S |

ಬೀದರ: ಕನ್ನಡ ಅಂದರೆ ಬರೀ ಭಾಷೆಯಲ್ಲ, ಅದೊಂದು ಬದುಕು. ನಾವು-ನೀವೆಲ್ಲರೂ ಪ್ರತಿನಿತ್ಯ ಕನ್ನಡವನ್ನೇ ಉಸಿರಾಡುತಿದ್ದೇವೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌. ಹೇಳಿದರು.

Advertisement

ನಗರದ ಜಿಲ್ಲಾ ಪೊಲೀಸ್‌ ಪರೇಡ್‌ ಮೈದಾನದಲ್ಲಿ ರವಿವಾರ ನಡೆದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಮಾತನಾಡಿದ ಅವರು, ಕರ್ನಾಟಕ ಏಕೀಕರಣ ಚಳವಳಿಯು, ಕನ್ನಡ ನಾಡಿನ ಚರಿತ್ರೆಯಲ್ಲಿ ಅತ್ಯಂತ ಮಹತ್ವದಾಗಿದೆ. ಅನೇಕ ಮಹನೀಯರು ಹೋರಾಟ ನಡೆಸಿದ್ದು, ಅವರ ತ್ಯಾಗವನ್ನು ನಾವೆಲ್ಲರು ಸ್ಮರಿಸಲೇಬೇಕು ಎಂದು ತಿಳಿಸಿದರು.

ಕರ್ನಾಟಕ ಏಕೀಕರಣ ಚಳವಳಿಯ ಫಲವಾಗಿ 1956ರ ನ. 1 ರಂದು ಕರ್ನಾಟಕ ರಾಜ್ಯ ಉದಯವಾಯಿತು. ಮುಂದೆ 1973 ನ. 1 ರಂದು ಅಂದಿನ ಸಿಎಂ ದಿ. ದೇವರಾಜ ಅರಸ್‌ ರವರು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರು ನಾಮಕರಣ ಮಾಡಿದರು.

ಮಳೆಯಿಂದಾದ ಹಾನಿಗೆ ಪರಿಹಾರ: ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 2.5 ಲಕ್ಷ ಹೆಕ್ಟೇರ್‌ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಹಾನಿಯಾಗಿದೆ. 9 ಮಾನವ ಹಾಗೂ 64 ಜಾನುವಾರು ಹಾನಿಯಾಗಿದ್ದು, ಸದರಿ ಪ್ರಕರಣಗಳಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಮಳೆಯಿಂದ ಹಾನಿಯಾಗಿದ್ದ 1750 ಮನೆಗಳಿಗೆ ಪರಿಹಾರ ನೀಡುವ ಕಾರ್ಯ ಚಾಲ್ತಿಯಲ್ಲಿದೆ ಎಂದರು.

ಸಾಧಕರಿಗೆ ಡಿಸಿ ಅಭಿನಂದನೆ: ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಭಾಲ್ಕಿ ತಾಲೂಕಿನ ಸಾವಯವ ಕೃಷಿಕ ಸೂರಜ್‌ ಸಿಂಗ್‌ ರಜಪೂತ್‌, ನೀಟ್‌ ಪರೀಕ್ಷೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳಾದ ಕಾರ್ತಿಕ ರೆಡ್ಡಿ ಮತ್ತು ಅರ್ಬಾಜ್‌ ಅಹ್ಮದ್‌ ಅವರು ರಾಜ್ಯದಲ್ಲಿಯೇ ಮೊದಲು ಮತ್ತು ಮೂರನೇ ಸ್ಥಾನ ಪಡೆದಿರುವುದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ. ಇದೇ ರೀತಿಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ಉತ್ತಮ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತರಬೇಕೆಂದು ಆಶಯ ವ್ಯಕ್ತಪಡಿಸಿದರು.

Advertisement

ಡಿಸಿ ರಾಮಚಂದ್ರನ್‌ ಅವರು ವಿವಿಧ ತುಕುಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರನ್ನು ಸನ್ಮಾನಿಸಲಾಯಿತು. ಸಂಸದ ಭಗವಂತ ಖೂಬಾ, ಶಾಸಕರದ ರಹೀಮ್‌ ಖಾನ್‌, ರಘುನಾಥರಾವ್‌ಮಲ್ಕಾಪುರೆ, ಅರವಿಂದ ಅರಳಿ, ಜಿಪಂ ಅಧ್ಯಕ್ಷೆ ಗೀತಾಚಿದ್ರಿ, ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್‌, ಎಸ್‌ಪಿ ಡಿ.ಎಲ್‌. ನಾಗೇಶ ಮತ್ತು ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next