ಮದ್ದೂರು: ಕನ್ನಡ ಭಾಷೆಯನ್ನು ಉತ್ತುಂಗ ಶಿಖರಕ್ಕೆ ಕೊಂಡೊಯ್ಯಲು ಹಲವು ಮಹಾನ್ ದಾರ್ಶನಿಕರು ಶ್ರಮಿಸಿದ್ದಾರೆ. ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದು, ಇಂತಹ ಭವ್ಯ ಪರಂಪರೆಯನ್ನು ಹೊಂದಿರುವ ಕನ್ನಡ ಭಾಷೆಯನ್ನು ಪ್ರತಿಯೊಬ್ಬರು ಹೆತ್ತ ತಾಯಿಯಂತೆ ಪ್ರೀತಿಸಬೇಕು ಎಂದು ಶಾಸಕ ಡಿ.ಸಿ.ತಮ್ಮಣ್ಣ ಮನವಿ ಮಾಡಿದರು.
ಪಟ್ಟಣದ ತಾಲೂಕು ಸರ್ಕಾರಿ ಕ್ರೀಡಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ನಡೆದ 65ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ಭಾಷೆಗೆ ಎರಡುವರೆ ಸಾವಿರ ವರ್ಷಗಳ ಇತಿಹಾಸವಿರುವ ಪುರತಾನ ಭಾಷೆಯಾಗಿದೆ. ಇಂತಹ ಸೊಗಸಾದ ಭಾಷೆಯನ್ನು ಬಿಟ್ಟು ಪಾಶ್ಚಿಮಾತ್ಯ ಭಾಷೆಗೆ ಮಾರುಹೋಗುವುದು ಸರಿಯಲ್ಲ ಎಂದರು.
ಅತ್ಯುನ್ನತ ಸ್ಥಾನಗಳಿಸಿ: ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುವ ಮೂಲಕ ಆಂಗ್ಲ ಮಾಧ್ಯಮಕ್ಕೆ ಒಳಗಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗ್ರಾಮೀಣ ಭಾಗದ ಅದರಲ್ಲೂ,ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಅತ್ಯುನ್ನತ ಸ್ಥಾನಗಳಿಸಿ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರುಗಳಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಭಾಷೆ ಉಳಿಸಿ ಬೆಳೆಸಿ: ತಹಶೀಲ್ದಾರ್ ವಿಜಯ್ಕುಮಾರ್ ಮಾತ ನಾಡಿ, ದುಡಿಮೆ ಹಾಗೂ ಅನ್ನ ನೀಡುವ ಭಾಷೆಯನ್ನು ಯಾರು ಮರೆಯದೆ ಉಳಿಸಿ, ಬೆಳೆಸುವ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸವಿದೆ. ಸಂಸ್ಕೃತಿ, ಸಂಪ್ರದಾಯ, ಕಲೆ, ಸಾಹಿತ್ಯಗಳನ್ನೊಳಗೊಂಡ ಕನ್ನಡ ಭಾಷೆಗೆ ಅಳಿವಿನಂಚಿನಲ್ಲಿರುವುದು ಸತ್ಯಕ್ಕೆ ದೂರವಾಗಿದೆ. ಸಾವಿರಾರು ವರ್ಷಗಳು ಭಾಷೆ ಸದೃಢವಾಗಿ ನಿಲ್ಲುತ್ತದೆ. ಸರ್ಕಾರ ಮಾತೃಭಾಷೆ ಶಿಕ್ಷಣ ಕಡ್ಡಾಯಗೊಳಿಸಿದೆ. ನಾಗರಿಕರು ಕನ್ನಡ ಭಾಷೆಯನ್ನು ಗಟ್ಟಿಗೊಳಿಸಲು ಮುಂದಾಗುವ ಜತೆಗೆ ಸಾಮಾನ್ಯರು ಆಂಗ್ಲ ವ್ಯಾಮೋಹವನ್ನು ಬಿಡಬೇಕಾಗಿದೆ ಎಂದು ಮನವಿ ಮಾಡಿದರು.
ಪ್ರತಿಭಾ ಪುರಸ್ಕಾರ: 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಭಾರತೀನಗರ ಸರ್ಕಾರಿ ಪ್ರೌಢಶಾಲೆಯ ಎಚ್.ವಿ ಸಿಂಚನಾ, ಮೋನಿಕ ಹಾಗೂ ಚಿಕ್ಕಅಂಕನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮೂವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಿಸಲಾಯಿತು. ಕನ್ನಡ ಮಾಧ್ಯಮದಲ್ಲಿ 125 ಅಂಕ ಗಳಿಸಿದ 75 ವಿದ್ಯಾರ್ಥಿಗಳನ್ನು ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.
ಪುರಸಭಾ ಅಧ್ಯಕ್ಷ ಸುರೇಶ್ ಕುಮಾರ್, ಉಪಾಧ್ಯಕ್ಷೆ ಸುಮಿತ್ರ ರಮೇಶ್, ಸದಸ್ಯರಾದ ತೈಲೂರು ಪ್ರಸನ್ನ, ಮಹೇಶ್, ಬಿ.ಸಿ.ಸರ್ವ ಮಂಗಳ, ವನಿತಾ, ಸಿದ್ದರಾಜು, ಆದಿಲ್ ಅಲಿಖಾನ್, ಪ್ರಮೀಳಾ, ಬಿಇಒ ಮಹಾದೇವು, ಸಿಪಿಐ ಪ್ರಸಾದ್, ಪಿಎಸ್ಐ ರವಿ ಕುಮಾರ್ ಮತ್ತು ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ಶಿಕ್ಷಣಕ್ಕೆ ಆದ್ಯತೆ : ಕ್ಷೇತ್ರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರಾಥಮಿಕ, ಪ್ರೌಢಶಾಲೆ ಪದವಿ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕೈಗಾರಿಕಾ ತರಬೆರತಿ ಸಂಸ್ಥೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನು ತೆರೆಯುವ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅಭಿವೃದ್ಧಿ ಗೆ ಶ್ರಮಿಸುತ್ತಿದ್ದೇವೆ. ಇದರಿಂದ ಮದ್ದೂರು ಕ್ಷೇತ್ರದಲ್ಲಿ ಶಿಕ್ಷಣ ಪ್ರಗತಿ ಹೊಂದಿದೆ ಎಂದು ತಮ್ಮಣ್ಣ ಹೇಳಿದರು.