Advertisement

ಪಾಲಿಕೆಯಿಂದ ಅದ್ದೂರಿ ರಾಜ್ಯೋತ್ಸವ: ಮೇಯರ್‌

08:12 PM Oct 27, 2022 | Team Udayavani |

ಹುಬ್ಬಳ್ಳಿ: ಕರ್ನಾಟಕ ರಾಜ್ಯೋತ್ಸವ ಆಚರಣೆ ಅಂಗವಾಗಿ ಪಾಲಿಕೆಯಿಂದ ಸಾಂಸ್ಕೃತಿಕ, ಧೀಮಂತ ಸನ್ಮಾನ ಸೇರಿದಂತೆ ವಿವಿಧ ಕಾರ್ಯಕ್ರಮವನ್ನು ಅ. 25ರಿಂದ ನ. 1ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮೇಯರ್‌ ಈರೇಶ ಅಂಚಟಗೇರಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Advertisement

ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಗುವುದು. ಈ ನಿಟ್ಟಿನಲ್ಲಿ ಕನ್ನಡ ಸಂಘಟನೆಗಳ ಮುಖಂಡರು, ಸದಸ್ಯರೊಂದಿಗೆ ಸಭೆ ನಡೆಸಿ ಚರ್ಚಿಸಲಾಗಿದೆ. ಉಪಸಮಿತಿಗಳನ್ನು ರಚಿಸಲಾಗಿದೆ. 67 ಜನರಿಗೆ ಧೀಮಂತ ಸನ್ಮಾನ ಜತೆಗೆ ಪೌರಕಾರ್ಮಿಕರು ಸೇರಿದಂತೆ 16-17 ಕ್ಷೇತ್ರದವರಿಗೆ ಸನ್ಮಾನ ಮಾಡಲಾಗುವುದು. ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇದರಲ್ಲಿ ಉಪ ಮಹಾಪೌರರ ನೇತೃತ್ವದಲ್ಲಿ ಎಲ್ಲ ಸಮಿತಿಯ ಸದಸ್ಯರು ಇರುತ್ತಾರೆ. 50 ವರ್ಷ ಮೇಲ್ಪಟ್ಟ ಹಾಗೂ ಕನಿಷ್ಟ 10 ವರ್ಷ ಅವಳಿನಗರದಲ್ಲಿ ವಾಸವಿದ್ದು, ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡವರನ್ನು ಸನ್ಮಾನಿಸಲಾಗುವುದು. ಸನ್ಮಾನಕ್ಕೆ ಅರ್ಜಿ ಆಹ್ವಾನಿಸದೆ ನೇರವಾಗಿ ಸಮಿತಿ ಸದಸ್ಯರಿಂದ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಸನ್ಮಾನಿತರಿಗೆ ಪ್ರಶಸ್ತಿ, ನೆನಪಿನ ಕಾಣಿಕೆ, ಭಿನ್ನವತ್ತಳೆ ನೀಡಲಾಗುವುದು ಎಂದರು.

28ರಂದು ಬೆಳಗ್ಗೆ 10 ಗಂಟೆಗೆ ಅಮೃತ ಮಹೋತ್ಸವ ನಿಮಿತ್ತ ಧಾರವಾಡದಲ್ಲಿ ನಿರ್ಮಿಸಲಾದ ಮಹಾನಗರ ಪಾಲಿಕೆಯ ನವೀಕೃತ ಸಭಾಭವನದ ಉದ್ಘಾಟನೆ ನಡೆಯಲಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಸೇರಿದಂತೆ ಇನ್ನಿತರೆ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಪಾಲಿಕೆ ವ್ಯಾಪ್ತಿಯ 62 ಸ್ಥಳಗಳಲ್ಲಿ ಕೋಟಿ ಕಂಠ ಗಾಯನ ಹಾಗೂ ಧಾರವಾಡದ ಪಾಲಿಕೆ ಮುಖ್ಯ ಕಚೇರಿ ಎದುರು ಸದಸ್ಯರು, ಅಧಿಕಾರಿ, ಸಿಬ್ಬಂದಿಯಿಂದ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಯಲಿದೆ. ನೂತನ ಸಭಾಭವನದಲ್ಲಿ ಮಧ್ಯಾಹ್ನ 12 ಗಂಟೆಗೆ ಮುಂದುವರಿದ ಸಾಮಾನ್ಯ ಸಭೆ ಹಾಗೂ ಮಧ್ಯಾಹ್ನ 3 ಗಂಟೆಗೆ ವಿಶೇಷ ಸಾಮಾನ್ಯ ಸಭೆ ನಡೆಯಲಿದೆ ಎಂದು ತಿಳಿಸಿದರು.

29 ರಿಂದ 31ರ ವರೆಗೆ ಪ್ರತಿದಿನ ಸಂಜೆ 5 ಗಂಟೆಗೆ ನಗರದ ಇಂದಿರಾ ಗಾಜಿನ ಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 31ರಂದು ಬೆಳಗ್ಗೆ 9:30 ಗಂಟೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ ವಾಣಿಜ್ಯ ಕಟ್ಟಡಗಳ ವಲಯ ಕಚೇರಿಗಳ ಮೇಲೆ ಕನ್ನಡ ಧ್ವಜ ಹಾರಿಸಲಾಗುವುದು. ಅವಳಿನಗರದ ಜನತೆ ಕನ್ನಡ ಧ್ವಜ ಹಾರಿಸಬೇಕು ಎಂದು ವಿನಂತಿ ಮಾಡಿಕೊಳ್ಳುತ್ತಿದ್ದೇವೆ. ಅಂದು ಮಧ್ಯಾಹ್ನ 3:30 ಗಂಟೆಗೆ ಧಾರವಾಡದ ಶಿವಾಜಿವೃತ್ತದಿಂದ ಕಲಾಭವನದ ವರೆಗೆ ಮೆರವಣಿಗೆ ನಡೆಯಲಿದೆ ಎಂದರು.

ನ. 1ರಂದು ಬೆಳಗ್ಗೆ 9:30 ಗಂಟೆಗೆ ಸಿದ್ಧಾರೂಢ ಮಠದಿಂದ ನೆಹರು ಮೈದಾನ ವರೆಗೆ ಹಾಗೂ ಧಾರವಾಡದಲ್ಲಿ ಪಾಲಿಕೆಯಿಂದ ಕಡಪಾ ಮೈದಾನ ವರೆಗೆ ಮೆರವಣಿಗೆ ನಡೆಯಲಿದೆ. 25ಕ್ಕೂ ಹೆಚ್ಚು ಕಲಾ ತಂಡಗಳು, ಪ್ರತಿ ವಲಯ ಕಚೇರಿಯಿಂದ ಒಂದೊಂದು ಮತ್ತು ವಿವಿಧ ಸಂಘ-ಸಂಸ್ಥೆಗಳ ಸ್ತಬ್ಧಚಿತ್ರಗಳು ಪಾಲ್ಗೊಳ್ಳಲಿವೆ. ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಂಡ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸ್ತಬ್ಧಚಿತ್ರವನ್ನು ಆಹ್ವಾನಿಸಲಾಗಿದೆ. ಸಂಜೆ 5 ಗಂಟೆಗೆ ನಗರದ ಇಂದಿರಾ ಗಾಜಿನಮನೆಯಲ್ಲಿ ಧೀಮಂತ ಸನ್ಮಾನ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪಾಲಿಕೆಯಿಂದ 2018ರಲ್ಲಿ ಮಹಾಪೌರರಾಗಿದ್ದ ದಿ| ಸುಧೀರ ಸರಾಫ ಅಧಿಕಾರಾವಧಿಯಲ್ಲಿ ಧೀಮಂತ ಪ್ರಶಸ್ತಿ ನೀಡಲಾಗಿತ್ತು. ನಂತರ ಸ್ಥಗಿತಗೊಂಡಿತ್ತು. ಇದೀಗ ಪುನರಾರಂಭಿಸಲಾಗಿದೆ ಎಂದರು.

Advertisement

ಉಪ ಮಹಾಪೌರ ಉಮಾ ಮುಕುಂದ, ಸಭಾನಾಯಕ ತಿಪ್ಪಣ್ಣ ಮಜ್ಜಗಿ, ವಿಪಕ್ಷ ನಾಯಕ ರಾಜಾರಾವ ಮನ್ನೆಕುಂಟ್ಲ, ಸದಸ್ಯರಾದ ಸುವರ್ಣಾ ಕಲ್ಲಕುಂಟ್ಲ, ಸಂದೀಲಕುಮಾರ ಎಸ್‌., ಮೊಹ್ಮದಆರೀಫ ಭದ್ರಾಪೂರ, ಮೊಹ್ಮದಇಕ್ಬಾಲ ನವಲೂರ, ಪಾಲಿಕೆ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ, ಸಹಾಯಕ ಆಯುಕ್ತ ಎಸ್‌.ಸಿ. ಬೇವೂರ ಇದ್ದರು.

ಗುಂಡಿ ಮುಚ್ಚಲು 3.28 ಕೋಟಿ

ಅವಳಿನಗರದ ರಸ್ತೆಗಳಲ್ಲಿ ಬಿದ್ದಿರುವ ತಗ್ಗು-ಗುಂಡಿ ಗಳನ್ನು ಅಂದಾಜು 3.28 ಕೋಟಿ ರೂ. ವೆಚ್ಚದಲ್ಲಿ ಮುಚ್ಚುವ ಕೆಲಸವನ್ನು ಗುರುವಾರದಿಂದಲೇ ಆರಂಭಿಸ ಲಾಗುವುದು ಎಂದು ಆಯುಕ್ತ ಡಾ| ಗೋಪಾಲಕೃಷ್ಣ ಬಿ. ತಿಳಿಸಿದರು. ಪಾಲಿಕೆ ಅಭಿಯಂತರರು ಖುದ್ದಾಗಿ ಸ್ಥಳ ಪರಿಶೀಲನೆ ಮಾಡಿ ತಗ್ಗು-ಗುಂಡಿಗಳನ್ನು ಗುರುತಿಸಿದ್ದಾರೆ. ಈಗಾಗಲೇ ವರ್ಕ್‌ ಆರ್ಡರ್‌ ಕೂಡ ನೀಡಲಾಗಿದೆ. ರಸ್ತೆಗಳನ್ನು ಯಂತ್ರ ಮತ್ತು ಕಾರ್ಮಿಕರಿಂದ ಅವಶ್ಯವಿದ್ದೆಡೆ ಡಾಂಬರ್‌ ಹಾಗೂ ಸಿಮೆಂಟ್‌ ಕಡಿ ಮೂಲಕ ಮುಚ್ಚಲಾಗುವುದು ಎಂದರು.

ಹೆಸರು ನೋಂದಣಿ

ಹುಬ್ಬಳ್ಳಿ: ಪಾಲಿಕೆ ವತಿಯಿಂದ ರಾಜ್ಯೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅ.29 ಮತ್ತು 30ರಂದು ಪ್ರತಿದಿನ ಸಂಜೆ 5 ಗಂಟೆಗೆ ಇಂದಿರಾ ಗಾಜಿನಮನೆಯಲ್ಲಿ ಆಯೋಜಿಸಿದ್ದು, ಇದರಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಂಗೀತ, ನೃತ್ಯ ಅಭಿರುಚಿಯುಳ್ಳವರು ಪಾಲ್ಗೊಳ್ಳಬಹುದಾಗಿದೆ. 29ರಂದು ಸಂಗೀತ ಸ್ಪರ್ಧೆ, 30ರಂದು ನೃತ್ಯ ಸ್ಪರ್ಧೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಆಸಕ್ತಿಯುಳ್ಳವರು ಅ.28ರ ಸಂಜೆ 6 ಗಂಟೆಯೊಳಗಾಗಿ ಹೆಸರನ್ನು ಮಹಾನಗರ ಪಾಲಿಕೆ ಸಹಾಯವಾಣಿ ಕೇಂದ್ರದ ವಾಟ್ಸ್‌ಆ್ಯಪ್‌ ಸಂಖ್ಯೆ 8277803778ಗೆ ಕಳುಹಿಸಬಹುದು. 31ರಂದು ಸಂಜೆ 6 ಗಂಟೆಗೆ ಹಾಸ್ಯ ಕಲಾವಿದ ಮಹಾದೇವ ಸತ್ತಿಗೇರಿ ಮತ್ತು ತಂಡದಿಂದ ನಗೆ ಹಬ್ಬ ಇದೆ. ನ. 1ರಂದು ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಪಾಲಿಕೆ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next