Advertisement

ತೆಂಗಿನ ಗರಿಗಳ ಗುಡಿಸಲಿನಲ್ಲಿದ್ದ ಕೊರಗಟ್ಟೆ ಶಾಲೆ

10:39 PM Dec 01, 2019 | Sriram |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

ಬಂಟ್ವಾಳ: ಚೆನ್ನೈತ್ತೋಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಅಜ್ಜಿಬೆಟ್ಟು ದ.ಕ. ಜಿ.ಪಂ. ಹಿ.ಪ್ರಾ. ಶಾಲೆಯು ತೆಂಗಿನಗರಿಗಳನ್ನೊಳಗೊಂಡ ಗುಡಿಸಲಿನಲ್ಲಿ ಆರಂಭಗೊಂಡು ಪ್ರಸ್ತುತ ಉತ್ತಮ ಸ್ಥಿತಿಯಲ್ಲಿದೆ. ಅಂದಿನ ಕಾಲದಲ್ಲಿ ಈ ಶಾಲೆಯು ಕೊರಗಟ್ಟೆ ಶಾಲೆ ಎಂದೇ ಖ್ಯಾತಿ ಗಳಿಸಿತ್ತು.

ಹಿರಿಯರ ಮಾಹಿತಿಯ ಪ್ರಕಾರ ಗುಡಿಸಲಿನಲ್ಲಿ ಆರಂಭಗೊಂಡ ಅಜ್ಜಿಬೆಟ್ಟು ಶಾಲೆಯು ಭಜನ ಮಂದಿರದಲ್ಲಿ ಪ್ರಾರಂಭಗೊಂಡಿದೆ ಎನ್ನಲಾಗುತ್ತಿದೆ. ಅಜ್ಜಿಬೆಟ್ಟಿನಲ್ಲಿ 1919ರಲ್ಲಿ ಶಾಲೆಯು ಪ್ರಾರಂಭಗೊಂಡರೆ, ಅಲ್ಲೇ ಪಕ್ಕದ ಗ್ರಾಮವಾದ ಚೆನ್ನೈತ್ತೋಡಿಯಲ್ಲಿ 1918ರಲ್ಲಿ ಶಾಲೆ ಪ್ರಾರಂಭಗೊಂಡಿತ್ತು.

ಒಂದು ಕಾಲದಲ್ಲಿ ಅಜ್ಜಿಬೆಟ್ಟು ಶಾಲೆಯು ತನ್ನ ವ್ಯಾಪ್ತಿಯನ್ನು ಪಡೆದುಕೊಂಡಿದ್ದ ಪ್ರದೇಶದಲ್ಲಿ ಈಗ ಸರಕಾರಿ ಹಾಗೂ ಖಾಸಗಿ ಶಾಲೆಗಳು ಸಹಿತ ಒಟ್ಟು 8 ಶಾಲೆಗಳಿವೆ. ಕಡ್ತಲಬೆಟ್ಟು, ಶ್ರೀನಿವಾಸನಗರ, ಆಲದಪದವು, ಚೆನ್ನೈತ್ತೋಡಿ, ಶಿವನಗರ ಮೊದಲಾದ ಪ್ರದೇಶಗಳಲ್ಲಿ ಶಾಲೆಗಳು ತೆರೆದುಕೊಂಡಿವೆ.

74 ವರ್ಷಗಳ ಬಳಿಕ ಮೇಲ್ದರ್ಜೆಗೆ
ಪಾಸ್ಕಲ್‌ ಮಾಸ್ಟರ್‌ ಈ ಶಾಲೆಯ ಮೊದಲ ಶಿಕ್ಷಕರಾಗಿದ್ದರು ಎನ್ನಲಾಗುತ್ತದೆ. ಪ್ರಾರಂಭದಲ್ಲಿ ಇಲ್ಲಿ 1ರಿಂದ 5ನೇ ತರಗತಿವರೆಗೆ ಮಾತ್ರ ಇದ್ದು, ಬರೋಬ್ಬರಿ 74 ವರ್ಷಗಳ ಬಳಿಕ ಮೇಲ್ದರ್ಜೆಗೇರಿ 1992ರ ಬಳಿಕ 6-7ನೇ ತರಗತಿಗಳು ಆರಂಭಗೊಂಡಿದ್ದವು.

Advertisement

ವಿದ್ಯಾರ್ಥಿಗಳ ಸಂಖ್ಯೆಯ ದೃಷ್ಟಿಯಿಂದ ಶಾಲೆಯು ಇನ್ನೂ ತೀರಾ ಹಿಂದುಳಿದಿದ್ದು, ಅಂದರೆ ಪ್ರಸ್ತುತ ಶಾಲೆಯಲ್ಲಿ ಕೇವಲ 34 ಮಂದಿ ವಿದ್ಯಾರ್ಥಿಗಳಿದ್ದಾರೆ. ಇಬ್ಬರು ಖಾಯಂ ಶಿಕ್ಷಕರು ಹಾಗೂ ಒಬ್ಬರು ಅತಿಥಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

90 ಸೆಂಟ್ಸ್‌ ಆಸ್ತಿ
ಶಾಲೆಯು ಒಟ್ಟು 90 ಸೆಂಟ್ಸ್‌ ಆಸ್ತಿಯನ್ನು ಹೊಂದಿದ್ದು, ತರಗತಿ ಕೊಠಡಿಗಳು, ಬಾವಿ, ಕ್ರೀಡಾಂಗಣ, ಶೌಚಾಲಯಗಳು, ಕೈತೋಟ ಮೊದಲಾದ ಸೌಕರ್ಯಗಳನ್ನು ಒಳಗೊಂಡಿದೆ. 2011-12ನೇ ಸಾಲಿಯಲ್ಲಿ ಶಾಲೆಯ ವಿದ್ಯಾರ್ಥಿ ನಿತಿನ್‌ ಇನ್‌ಸ್ಪೈರ್‌ ಅವಾರ್ಡ್‌ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ರಸಪ್ರಶ್ನೆಯಲ್ಲಿ ದೇವಿಕಾ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು.

ಹಳೆ ವಿದ್ಯಾರ್ಥಿಗಳು
ಶಾಲೆಯ ಹಳೆ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದ್ದು, ವಾಮದಪದವು ಜೂನಿಯರ್‌ ಕಾಲೇಜಿನಲ್ಲಿ ಉಪಪ್ರಾಂಶುಪಾಲರಾಗಿರುವ ರಾಘವೇಂದ್ರ ಬಳ್ಳಾಲ್‌, ಎಸ್‌ಇಝಡ್‌ನ‌ಲ್ಲಿ ಅಧಿಕಾರಿಯಾಗಿರುವ ಯೋಗೀಶ್‌ ಕಳಸಡ್ಕ ಮೊದಲಾದವರು ಶಾಲೆಯ ಹಳೆವಿದ್ಯಾರ್ಥಿಗಳಾಗಿದ್ದಾರೆ.

ತೀರಾ ಗ್ರಾಮೀಣ ಪ್ರದೇಶದ ಈ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಕೇವಲ 34 ಮಂದಿ ಇದ್ದಾರೆ. ಇಬ್ಬರು ಖಾಯಂ ಶಿಕ್ಷಕರು ಹಾಗೂ ಒಬ್ಬರು ಅತಿಥಿ ಶಿಕ್ಷಕರು ದುಡಿಯುತ್ತಿದ್ದಾರೆ. ಮೂಲ ಸೌಕರ್ಯಗಳು ಉತ್ತಮವಾಗಿದ್ದು, ಶಾಲೆಗೆ ಕೈತೋಟವೂ ಇದೆ.
-ಪೂರ್ಣಿಮಾ, ಮುಖ್ಯ ಶಿಕ್ಷಕಿ.

ಅಜ್ಜಿಬೆಟ್ಟು ಶಾಲೆಯಲ್ಲಿ ನಾನು ಕಲಿಯುತ್ತಿದ್ದ ವೇಳೆ ತನ್ನ ತಂದೆ ಸುಂದರ ಬಲ್ಲಾಳ್‌ ಹಾಗೂ ತಾಯಿ ಶಶಿಕಲಾ ಬಲ್ಲಾಳ್‌ ಅವರು ಶಿಕ್ಷಕರಾಗಿದ್ದು, ವಿಶೇಷವೆಂದರೆ ಆಗ ಅವರಿಬ್ಬರೇ ಶಿಕ್ಷಕರಾಗಿದ್ದರು. ಆಗ ಒಂದು ದೊಡ್ಡ ಕೊಠಡಿಯಲ್ಲಿ 1ರಿಂದ 5ನೇ ತರಗತಿವರೆಗೆ ಕ್ಲಾಸ್‌ ನಡೆಯುತ್ತಿತ್ತು. ಆಗಿನ ವ್ಯವಸ್ಥೆಯಲ್ಲಿ ಸುತ್ತಮುತ್ತಲ ಮನೆಯವರು ಶಾಲೆಗೆ ಸಹಕಾರ ನೀಡುತ್ತಿದ್ದರು.
-ರಾಘವೇಂದ್ರ ಬಲ್ಲಾಳ್‌ ಕೆ.ಎಸ್‌.,
ಉಪಪ್ರಾಂಶುಪಾಲರು,ವಾಮದಪದವು ಜೂನಿಯರ್‌ ಕಾಲೇಜು,
(ಹಳೆ ವಿದ್ಯಾರ್ಥಿ)

-  ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next