Advertisement

ಕೇಳಿಸಿತು ಕಪ್ಪು ಮಣ್ಣಿನಲಿ ಕನ್ನಡ ನುಡಿ

12:24 AM Jan 08, 2023 | Team Udayavani |

ಹಾವೇರಿ: ಕನ್ನಡಮ್ಮನಿಗೆ ಜೈಕಾರ ಹಾಕುವ ವೀರ ಕನ್ನಡಿಗರು. ದೈತ್ಯ ಧ್ವಜಗಳನ್ನು ಹಿಡಿದು ಕನ್ನಡಾಂಬೆಯ ಸೇವೆಗೆ ನಿಂತ ಕಾರ್ಯಕರ್ತರು. ಒಂದೆಡೆ ಭೂರಿ ಭೋಜನ, ಇನ್ನೊಂದೆಡೆ ಕನ್ನಡದ ಕಂಪು ಸೂಸುವ ಮನಸ್ಸುಗಳು.

Advertisement

ರಂಗೇರಿದ ಅಕ್ಷರ ಜಾತ್ರೆಯಲ್ಲಿ ಎತ್ತ ಸಾಗಿದರೂ ಕನ್ನಡದ ಗುಂಗು. ಪುಸ್ತಕ ಮಾರಾಟ, ಮಸ್ತಕದಲ್ಲೂ ನಾಡು-ನುಡಿ ಚಿಂತನೆ, ಎಲ್ಲೇ ನೋಡಿದರೂ ಕನ್ನಡ ಕನ್ನಡ ಕನ್ನಡ…

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿ ಅವರಿಂದಲೇ ಉದ್ಘಾಟನೆಗೊಂಡ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಭರ್ಜರಿಯಾಗಿ ಸಾಗುತ್ತಿದೆ. ಎರಡೂ ದಿನ ಕನ್ನಡಿಗರಿಂದ ಸಮ್ಮೇಳನಕ್ಕೆ ದೊರೆತ ಅತ್ಯದ್ಭುತ ಸ್ಪಂದನೆಯಿಂದಾಗಿ ಮತ್ತು ಅಚ್ಚುಕಟ್ಟು ವ್ಯವಸ್ಥೆಗಳಿಂದಾಗಿ ಕಪ್ಪು ಮಣ್ಣಿನ ಕಣ ಕಣದಲ್ಲೂ ಕನ್ನಡ ರಿಂಗಣಿಸುತ್ತಿದೆ.

ಕೊರೊನಾ ಮಹಾಮಾರಿಯಿಂದ ಬೇಸತ್ತಿದ್ದ ಜನರಿಗೆ ಇಂತಹದೊಂದು ಕಾರ್ಯಕ್ರಮ ಅಗತ್ಯವಿತ್ತು ಎನ್ನುವಂತೆ, ಹಳ್ಳಿ ಹಳ್ಳಿಗಳಿಂದ, ಕೇರಿ ಕೇರಿಗಳಿಂದ ಜನಸ್ತೋಮ ಆಗಮಿಸುತ್ತಿದ್ದು, ಈವರೆಗೂ ನಡೆದ ಎಲ್ಲ ಸಾಹಿತ್ಯ ಸಮ್ಮೇಳನಕ್ಕಿಂತಲೂ ಹೆಚ್ಚು ಜನ ಈ ಸಮ್ಮೇಳನಕ್ಕೆ ಭೇಟಿ ಕೊಟ್ಟಂತಾಗಿದೆ. ಸಾಮಾನ್ಯವಾಗಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಲ್ಲಲ್ಲಿ ಚಿಕ್ಕಪುಟ್ಟ ಲೋಪದೋಷಗಳು ಇದ್ದೇ ಇರುತ್ತಿದ್ದವು. ಆದರೆ, ಹಾವೇರಿ ಸಮ್ಮೇಳನ ಇದಕ್ಕೆ ಅಪವಾದ ಎನ್ನುವಂತೆ ಸಾಗುತ್ತಿದ್ದು, ಚಿಂತನ, ಮಂಥನ, ಗೋಷ್ಠಿಗಳು, ಊಟ, ವಸತಿ, ಸಾರಿಗೆ, ಅತಿಥ್ಯ ಎಲ್ಲವೂ ಚೆನ್ನಾಗಿದ್ದು ಸಮ್ಮೇಳನದ ಮೆರಗನ್ನು ಇನ್ನಷ್ಟು ಹೆಚ್ಚಿಸಿದೆ.

ಕನ್ನಡಿಗರ ವಿರಾಟ ಸ್ವರೂಪ: ಮೊದಲ ದಿನ ಕನ್ನಡಿಗರ ಘರ್ಜನೆಗೆ ಸಾಕ್ಷಿಯಾಗಿ ಗಡಿನಾಡಿನಲ್ಲಿ ಕನ್ನಡ ಮನಸ್ಸುಗಳಿಗೆ ತೊಂದರೆ ಕೊಡುತ್ತಿರುವ ಪರಭಾಷಿಕರಿಗೆ ಖಡಕ್‌ ಎಚ್ಚರಿಕೆ ನೀಡಿದ್ದ ಕನ್ನಡಿಗರು ತಮ್ಮ ವಿರಾಟ ಸ್ವರೂಪ ತೋರಿಸಿದ್ದು ಎರಡನೇ ದಿನ. ಸಾಹಿತ್ಯ ಸಮ್ಮೇàಳನ ನೆಪವಾದರೂ ಕನ್ನಡಾಭಿಮಾನ ಇದರ ಆಂತರ್ಯದಲ್ಲಿ ಅಭಿವ್ಯಕ್ತವಾಗುತ್ತಿತ್ತು. ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆ ಎದುರು ಹಾಕಿರುವ ಕನಕನ ಕೋಟೆಯ ಸೆಟ್‌ನ ಬಳಿ ಸ್ವರ್ಗವೇ ನಿರ್ಮಾಣವಾದಂತಾಗಿದೆ. ಕನ್ನಡದ ತೇರು, ತಾಯಿ ಭುವನೇಶ್ವರಿಯ ಪ್ರತಿಮೆ, ಸಮ್ಮೇಳನ ಅಧ್ಯಕ್ಷರ ಮೆರ ವಣಿಗೆ ರಥ, ಹಾವೇರಿ ಜಿಲ್ಲೆಯ ಹೋರಿ ಓಡಿಸುವ ಜಾನಪದ ಗ್ರಾಮೀಣ ಕ್ರೀಡೆಯ ಸೊಬಗಿನ ಪ್ರತೀಕವಾಗಿ ನಿಂತ ಚಾಮುಂ ಡೇಶ್ವರಿ ಎಕ್ಸ್‌ಪ್ರೆಸ್‌ ಕೊಬ್ಬರಿ ಹೋರಿಯ ಪ್ರತಿಮೆ ಒಂದೇ, ಎರಡೇ ಎಲ್ಲದರ ಎದುರು ನಿಂತು ಕನ್ನಡಾಭಿಮಾನಿಗಳು ಸೆಲ್ಫಿ ತೆಗೆದು ಕೊಳ್ಳುವ ಮತ್ತು ಸಂಭ್ರಮಿಸುವ ಪರಿಗೆ ಸಮ್ಮೇಳನ ಸಾಕ್ಷಿಯಾಯಿತು.

Advertisement

ಅಚ್ಚುಕಟ್ಟು ವ್ಯವಸ್ಥೆ: ಅದ್ಯಾಕೋ ಗೊತ್ತಿಲ್ಲ ಹಾವೇರಿ ಸಮ ತಟ್ಟಾದ ನೆಲದ ಗಮ್ಮತ್ತು ಇರಬೇಕು. ಸಮ್ಮೇಳನದ ವೇದಿಕೆ, ಊಟದ ವೇದಿಕೆ, ಮಾಧ್ಯಮ ಕೊಠ ಡಿ, ವಾಣಿಜ್ಯ ಮಳಿಗೆಗಳು, ಸಂತೆ ಬೀದಿ, ವಾಹನಗಳ ಪಾರ್ಕಿಂಗ್‌, ವಿಐಪಿಗಳ ಓಡಾಟದ ಪ್ರತ್ಯೇಕ ರಸ್ತೆ, ಕಾರ್ಯಕರ್ತರಿಗೆ ಪ್ರತ್ಯೇಕ ಊಟ, ವಿಶ್ರಾಂತಿ ವ್ಯವಸ್ಥೆ, ಪೊಲೀಸರಿಗೆ ಪ್ರತ್ಯೇಕ ಊಟ, ವಿಶ್ರಾಂತಿ ವ್ಯವಸ್ಥೆ. ಎಲ್ಲಿಯೂ ಕಿಂಚಿತ್ತು ಧೂಳಿಲ್ಲ, ಧೂಳು ಏಳುವ ಹೊತ್ತಿಗೆ ಮತ್ತೆ ಟ್ರ್ಯಾಕ್ಟರ್ ಗಳು ನೀರು ಸಿಂಪಡಿಸುತ್ತವೆ. ಕುಡಿಯಲು ನೀರಿನ ವ್ಯವಸ್ಥೆ, ಸಮ್ಮೇಳನ ಜಾಗದಿಂದ ಹಾವೇರಿ ನಗರಕ್ಕೆ ಮತ್ತು ಹಾವೇರಿಯಿಂದ ಸಮ್ಮೇಳನ ಜಾಗಕ್ಕೆ ಓಡಾಡಲು ವಾಹನ ವ್ಯವಸ್ಥೆ, ಶೌಚಾಲಯ ಅದರಲ್ಲೂ ಮೊಬೈಲ್‌ ಶೌಚಾಲಯಗಳ ಬಳಕೆ ಎಲ್ಲವೂ ಅಚ್ಚುಕಟ್ಟಾಗಿ ನಡೆಯುತ್ತಿರುವುದು ಮಾತ್ರ ಈ ಸಮ್ಮೇಳನದ ಯಶಸ್ಸಿನ ಹೆಜ್ಜೆ ಎಂದೆನ್ನಲೇಬೇಕು.

ನೆಟ್‌ವರ್ಕ್‌ ಜಾಮ್‌: ಸಮ್ಮೇಳನದ ಸ್ಥಳದಲ್ಲಿ ಲಕ್ಷಾಂತರ ಜನರು ಸೇರಿದ್ದರಿಂದ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಕರೆ ಮಾಡಲಷ್ಟೇ ಅಲ್ಲ, ಡಿಜಿಟಲ್‌ ವ್ಯಾಪಾರಕ್ಕೂ ಸಮಸ್ಯೆ ತಂದೊಡ್ಡಿತು. ಇವತ್ತಿನ ದಿನಗಳಲ್ಲಿ ಬಹುತೇಕ ಜನರು ಫೋನ್‌ ಪೇ, ಗೂಗಲ್‌ ಪೇನಂಥ ಡಿಜಿಟಲ್‌ ಮಾಧ್ಯಮದ ಮೂಲಕವೇ ವ್ಯಾಪಾರ, ವ್ಯವಹಾರ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಸಮ್ಮೇಳನಕ್ಕೆ ಬಂದವರು ವಾಣಿಜ್ಯ ಮಳಿಗೆ, ಪುಸ್ತಕ ಮಳಿಗೆಗಳಲ್ಲಿ ವಸ್ತುಗಳನ್ನು ಖರೀದಿಸಿ, ಡಿಜಿಟಲ್‌ ಹಣ ಪಾವತಿಗೆ ಮುಂದಾದಾಗ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಹಣ ಸಂದಾಯ ಮಾಡುವುದೇ ಸಮಸ್ಯೆಯಾಯಿತು. ಹೀಗಾಗಿ, ಅನೇಕರು ವಸ್ತುಗಳನ್ನು ಖರೀದಿಸಲಾಗಲಿಲ್ಲ. ನಗದು ಇದ್ದರಷ್ಟೇ ಖರೀದಿ ಮಾಡುವ ಅನಿವಾರ್ಯತೆ ಎದುರಾಗಿದ್ದರಿಂದ ಎಲ್ಲ ರೀತಿಯ ವ್ಯಾಪಾರಕ್ಕೂ ತೊಂದರೆಯಾಯಿತು.

-ಬಸವರಾಜ್‌ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next