Advertisement

ಸದಾ ಹರಿಯುತಿಹಳು ನಮ್ಮೊಳಗೆ ಕನ್ನಡವೆಂಬ ಗುಪ್ತಗಾಮಿನಿ

01:30 PM Aug 21, 2019 | Suhan S |

ಮುಂಬಯಿ ಭಾರತದ ಜೀವಾಳ. ಅನೇಕ ಭಾಷೆ, ಧರ್ಮ, ಸಂಸ್ಕೃತಿಗಳ ಸಂಗಮಸ್ಥಾನ. ಆರ್ಥಿಕ ರಾಜಧಾನಿಯಾದ ಮುಂಬಯಿ ಹಾಗೂ ಕನ್ನಡ ನಾಡಿನ ನಂಟು ಇಂದು ನಿನ್ನೆಯದಲ್ಲ. ಸುಮಾರು ಒಂದೂವರೆ ಸಾವಿರ ವರ್ಷಗಳಿಗೆ ಮಿಕ್ಕಿದ ಇತಿಹಾಸವಿದೆ. ಅನೇಕ ಕಾರಣಗಳಿಂದ ಮುಂಬಯಿಗೆ ವಲಸೆ ಬಂದ ಹೊರನಾಡ ಕನ್ನಡಿಗರು ಬರೀ ದುಡಿಮೆಯಲ್ಲೇ ಮುಳುಗಿಲ್ಲ; ಜತೆಗೆ ಸಾಂಸ್ಕೃತಿಕ ಬೇರಿಗೆ ನೀರುಣಿಸುತ್ತಾ ಇಡೀ ಸಂಸ್ಕೃತಿಯ ವೃಕ್ಷದ ಬೆಳವಣಿಗೆಗೆ ಕಾರಣವಾಗುತ್ತಿದ್ದಾರೆ. ತಮ್ಮ ನಾಡು ನುಡಿಗಳ ಮೇಲಿನ ಅಭಿಮಾನ, ಗೌರವ, ಪ್ರೀತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. ತುಸು ಹೆಚ್ಚಿನ ಸಂಖ್ಯೆಯಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕನ್ನಡಿಗರನಗ್ನೂ ಒಳಗೊಂಡಂತೆ ಕರ್ನಾಟಕದ ವಿವಿಧ ಪ್ರದೇಶಗಳಿಂದ ನೂರಾರು ಹೊಂಗನಸುಗಳನ್ನು ಹೊತ್ತು ಬಂದವರು. ತಮ್ಮ ಅಭಿರುಚಿ, ಆಸಕ್ತಿಗೆ ಅನುಗುಣವಾಗಿ ಈ ಮಹಾನ್‌ ನಗರಿಯ ಅಂಗಣವನ್ನು ಬಳಸಿಕೊಂಡು ಯಾವ ಜಾತಿ, ಮತ ಭೇದವಿಲ್ಲದೇ ತಮ್ಮತನವನ್ನು ಮೆರೆದವರು. ಶೂನ್ಯದಿಂದ ಬಂದು ಅಗಾಧವಾದುದನ್ನು ಸಾಧಿಸಿದವರು.

Advertisement

ಮುಂಬಯಿ ಮಾಯಾನಗರಿ ಇಡೀ ಜಗತ್ತನ್ನು ತನ್ನ ಕಡೆಗೆ ಆರ್ಕಷಿಸಿದರೂ, ಆಧುನಿಕತೆಯ ಗಾಳಿಗೆ ಸಿಲುಕಿ ನಲುಗಲಿಲ್ಲ. ಅಪ್ಪಿ ತಪ್ಪಿಯೂ ನಾವು ನಮ್ಮ ಸಾಂಸ್ಕೃತಿಕ ಧರ್ಮವನ್ನು ಮರೆತಿಲ್ಲ. ಹಾಗಾಗಿ ಅದೊಂದು ಬಹುಶ್ರುತ ತತ್ವವುಳ್ಳ ಬಹುರೂಪಿ ಸಂಸ್ಕೃತಿಯ ನಗರ ಎನ್ನುವುದೇ ಸೂಕ್ತ. ಕರಾವಳಿಯ ಭಾಗದವರು ಇದೇ ನಗರದಲ್ಲಿ ನೆಲೆ ನಿಂತು ತಮ್ಮ ತವರೂರನ್ನು ಮರೆಯದೇ ಅಲ್ಲಿಯ ಅಭಿವೃದ್ಧಿಗಾಗಿ ಕೊಡುಗೆ ನೀಡಿರುವುದು ಉಲ್ಲೇಖನೀಯ. ವಿವಿಧ ಕ್ಷೇತ್ರಗಳಲ್ಲಿನ ಹೊರನಾಡ ಕನ್ನಡಿಗರ ಸಾಧನೆ ಕಂಡು ಕರ್ನಾಟಕದ ಜನತೆ ಬೆರಗು ಪಡುತ್ತಿರುವುದು ಸುಳ್ಳಲ್ಲ. ಮುಂಬಯಿ ಕನ್ನಡಿಗರು ಪ್ರತಿಭಾವಂತರು. ಅವರು ತಮ್ಮ ಕೆಲಸ ಕಾರ್ಯದ ಮಧ್ಯೆಯೂ ವಿವಿಧ ಮನರಂಜನೆ-ಮನೋವಿಕಾಸ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾದವರು. ಅದರ ಪರಿಣಾಮ ಊರಿನಲ್ಲಿ ನಾಟಕಗಳಲ್ಲಿ ಅಭಿನಯಿಸಿದ ಅನುಭವ, ತಾವು ಕಲಿತ ಸಂಗೀತ, ನೃತ್ಯ, ಯಕ್ಷಗಾನಗಳಲ್ಲಿನ ಆಸಕ್ತಿ ಹೊರನಾಡಿನಲ್ಲೂ ಚಿಗಿತುಕೊಂಡಿತು. ಅದಕ್ಕೆ ಸೂಕ್ತ ಅವಕಾಶಗಳೂ ಸಿಕ್ಕವು. ಸಮುದಾಯ ಸಂಘಗಳು, ಕನ್ನಡಪರ ಸಂಘ ಸಂಸ್ಥೆಗಳೂ ಇದನ್ನು ಬೆಂಬಲಿಸಿ ಪ್ರತಿಭಾ ಅನಾವಾರಣಕ್ಕೆ ವೇದಿಕೆ ಒದಗಿಸಿದವು. ಹಾಗಾಗಿ ರಂಗತಂಡಗಳು ಹುಟ್ಟಿಕೊಂಡವು. ಯಕ್ಷಗಾನ ಮೇಳಗಳು ಹುಟ್ಟಿಕೊಂಡವು. ಅತ್ತ್ಯುತ್ತಮ ರಂಗ ಪ್ರಯೋಗಗಳು ಪ್ರದರ್ಶನಗೊಂಡವು. ರಂಗಭೂಮಿಯಲ್ಲಿ ನಟನೆ, ನಿರ್ದೇಶನದಲ್ಲಿ ಅನೇಕ ನಕ್ಷತ್ರಗಳು ಮಿನುಗಿದವು. ಸಾಹಿತ್ಯ ಕ್ಷೇತ್ರದಲ್ಲಿ ಕೈಗೊಂಡ ಸಾಧನೆ ಸಣ್ಣದಲ್ಲ. ಬಾಲಿವುಡ್‌ನ‌ಲ್ಲೂ ಹಲವು ವಿಭಾಗಗಳಲ್ಲಿ ತುಳು- ಕನ್ನಡಿಗರು ತಮ್ಮ ಪ್ರತಿಭೆ ಪ್ರದರ್ಶಿಸಿದರು. ನಿರ್ದೇಶನ, ನಟನೆ, ತಂತ್ರಜ್ಞಾನ- ಎಲ್ಲ ಕ್ಷೇತ್ರದಲ್ಲೂ ಮುಂಬಯಿ ಕನ್ನಡಿಗರು ಮಿಂಚಿದರು.

ಹಣಕಾಸು ಗಳಿಸಿ ತಮ್ಮ ಜೀವನವನ್ನು ಸುಖಕರ ಮಾಡಿಕೊಳ್ಳುವಷ್ಟಕ್ಕೆ ಮಾತ್ರ ಸೀಮಿತರಾಗದ ಈ ಮುಂಬಯಿ ಕನ್ನಡಿಗರು ತಾವು ನಂಬಿದ ದೈವ ದೇವರುಗಳನ್ನು ಮರೆಯದೇ ಮುಂಬಯಿಯಲ್ಲಿಯೂ ಅಸಂಖ್ಯಾತ ದೇವಸ್ಥಾನಗಳ ನಿರ್ಮಿಸಿದರು. ಭಜನಾ ಮಂಡಳಿಗಳು ಹುಟ್ಟಿಕೊಂಡವು. ಇದು ನಮ್ಮ ಸಂಸ್ಕೃತಿಯನ್ನು ಬೆಳೆಸುವಲ್ಲಿ ಮತ್ತು ಹೊಸ ತಲೆಮಾರಿಗೆ ತಲುಪಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ.

ಹಲವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಆಸಕ್ತಿ ತೋರಿದರೂ ಅದಕ್ಕೆ ಸೂಕ್ತ ವಾತಾವರಣ, ವೇದಿಕೆ ಸಿಗಬೇಕು. ಆ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದ್ದು ಇಲ್ಲಿನ ಸಂಘ ಸಂಸ್ಥೆಗಳು. ಕ್ರೀಡಾ ಕ್ಷೇತ್ರದಲ್ಲಿ ಕನ್ನಡದ ಕೀರ್ತಿ ಪತಾಕೆಯನ್ನು ಮುಂಬಯಿ ಮಾತ್ರವಲ್ಲ ದೇಶ ವಿದೇಶಗಳ ಉದ್ದ ಗಲಕ್ಕೂ ಹಾರಿಸಿದರು. ಪತ್ರಿಕೋದ್ಯಮ, ವೈದ್ಯಕೀಯ ಕ್ಷೇತ್ರ, ಶಿಕ್ಷಣ, ಸಾಹಿತ್ಯ, ಚಿತ್ರಕಲೆ, ಪ್ರಕಾಶನ ಸಂಸ್ಥೆ, ರಾಜಕೀಯ, ನ್ಯಾಯಾಂಗ, ಬ್ಯಾಂಕಿಂಗ್‌, ಸಂಘಟನೆ ಇತ್ಯಾದಿ ಕ್ಷೇತ್ರಗಳಲ್ಲೂ ಮುಂಬಯಿ ಕನ್ನಡಿಗರು ಹಿಂದೆ ಉಳಿದಿಲ್ಲ. ಹೀಗೆ ಬಹುಭಾಷಿಕ ನಗರದಲ್ಲಿ ಮುಂಬಯಿ ಕನ್ನಡಿಗರು ತಮ್ಮ ಅಸ್ಮಿತೆಯನ್ನು ಕಾಯ್ದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡ ಅಸ್ಮಿತೆ ನಮ್ಮ ಹೃನ್ಮನಗಳಲ್ಲಿ ಹರಿಯುತ್ತಲೇ ಇದೆ ; ಅದು ಎಂದಿಗೂ ಬತ್ತದು.

ಸದಾ ಕಿವಿಗೆ ನದಿಯ ಜುಳು ಜುಳು ನಾದ ಕೇಳದೆ ತಂಪಾಗಿ ಹರಿವ ನದಿಯನ್ನು ಕಣ್ಮುಂದೆ ತಂದುಕೊಳ್ಳುವುದಾದರೂ ಹೇಗೆ? ಹಚ್ಚಹಸಿರು ಕಾನನವೆಂದೂ ಪುಟಗಟ್ಟಲೆ ಓದಿದರೂ ಒಮ್ಮೆಯಾದರೂ ಆ ಕಲ್ಪನೆಯ ದಟ್ಟ ಕಾನನ ಕಾಣದೇ ಅರ್ಥವಾಗುವುದಾದರೂ ಹೇಗೆ? ಆದರೂ ಭಾಷೆ ಹಾಗಲ್ಲ; ನಮ್ಮೊಳಗೇ ಹರಿವ ಗುಪ್ತಗಾಮಿನಿ. ಅದಕ್ಕೇ ಕನ್ನಡದ ನಾದ ಸದಾ ಕೇಳದಿದ್ದರೂ ಭಾಷೆ ಬಳಸುತ್ತಾ, ಬೆಳೆಯುತ್ತಾ ಹೆಮ್ಮೆ ಪಡುತ್ತಾ ಬದುಕು ಕಟ್ಟುತ್ತಿದ್ದಾರೆ ಮುಂಬಯಿ ಕನ್ನಡಿಗರು. ಅದನ್ನು ಕನ್ನಡ ಅಸ್ಮಿತೆ ಎನ್ನದೆ ಬೇರೇನು ಹೇಳಬೇಕು?

Advertisement

 

•ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next