Advertisement

ಅಶಕ್ತ ಶಿಶುಗಳಿಗೆ ಕಾಂಗರೂ ಮಾದರಿ ಆರೈಕೆ ಅತ್ಯವಶ್ಯ

03:22 PM May 17, 2019 | Team Udayavani |

ಬೆಳಗಾವಿ: ನಮ್ಮ ದೆಶದಲ್ಲಿ ಶೇ. 45ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ರೋಗಗ್ರಸ್ತರಾಗಿ ಸಾವನ್ನಪ್ಪುತ್ತಿವೆ. ಆದ್ದರಿಂದ ತಾಯ್ತನದ ಬಂಧ ಬಿಗಿಗೊಳಿಸಲು ಕಾಂಗರೂ ಮಾದರಿ ಆರೈಕೆ ಅತ್ಯಗತ್ಯವಾಗಿದೆ ಎಂದು ಯುಎಸ್‌ಎಂ ಕೆಎಲ್ಇ ನಿರ್ದೇಶಕ ಡಾ|ಎಚ್ ಬಿ ರಾಜಶೇಖರ ಹೇಳಿದರು.

Advertisement

ನಗರದ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಚಿಕ್ಕಮಕ್ಕಳ ವಿಭಾಗ ಹಾಗೂ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದಿಂದ ವಿಶ್ವ ಕಾಂಗರೂ ಮಾದರಿ ಆರೈಕೆ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ತಾಯಿ ಮಗುವಿನ ಬಾಂಧವ್ಯ ಗಟ್ಟಿಗೊಳಿಸಲು ಕಾಂಗರೂ ಮಾದರಿ ಆರೈಕೆ ಅತ್ಯಗತ್ಯ ಎಂದರು.

ಹಿಂದಿನಿಂದಲೂ ಈ ಪದ್ಧತಿ ರೂಢಿಯಲ್ಲಿದ್ದರೂ ಅದು ಪ್ರಗತಿ ಹೊಂದುತ್ತ, ಸಂಶೋಧನೆಗೊಳಪಟ್ಟು ಇಂದು ವಿಶಿಷ್ಟ ಪದ್ಧತಿಯಾಗಿ ಹೊರಹೊಮ್ಮಿದೆ. ಅದನ್ನು ಉಪಯೋಗಿಸಿ ಕೊಂಡು ಆರೋಗ್ಯಯುತ ತಾಯ್ತನದ ಸುಖ ಅನುಭವಿಸಲು ಅನುವು ಮಾಡಿಕೊಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕ ಡಾ| ಎಸ್‌.ಸಿ. ಧಾರವಾಡ ಮಾತನಾಡಿ, ಆರೋಗ್ಯ ಶಿಕ್ಷಣವೆನ್ನುವುದು ಜೀವ ಉಳಿಸುವ ಜ್ಞಾನವಾಗಿದೆ. ಇದು ಶಿಶುವಿನ ಜನನದಿಂದ ಹಿಡಿದು ಬೆಳೆದು ದೊಡ್ಡದಾಗಿ ಆರೋಗ್ಯಯುತ ಜೀವನಹೊಂದಿ ಮರಣ ಹೊಂದುವವರೆಗಿನ ಪಯಣವನ್ನು ಸರಾಗಗೊಳಿಸುವ ದಾರಿದೀಪವಾಗಿದೆ ಎಂದರು . ಕಾಂಗರೂ ಮಾದರಿ ಆರೈಕೆ 2.5 ಕೆ.ಜಿಗಿಂತ ಕಡಿಮೆ ತೂಕ ಇರುವ ಮಕ್ಕಳು ಮತ್ತು ದಿನ ತುಂಬದೇ ಹೆರಿಗೆ ಆದ ಮಕ್ಕಳನ್ನು ತನ್ನ ಚರ್ಮಕ್ಕೆ ತಾಗುವಂತೆ ಎದೆಯ ಮೇಲೆ ಹಾಕಿಕೊಂಡು 6 ರಿಂದ 8 ಗಂಟೆಗಳ ಕಾಲ ಆರೈಕೆ ಮಾಡಬೇಕು ಇದರಿಂದ ತಾಯಿ ಮತ್ತು ಮಗುವಿನ ಬಾಂಧ‌ವ್ಯ ಹೆಚ್ಚುವುದಲ್ಲದೇ ಮಗುವಿನ ಉಸಿರಾಟ ಕ್ರಿಯೆಗೆ ಸಹಕಾರಿಯಾಗಿ ದೈಹಿಕ ಚಟುವಟಿಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಗುಣಾತ್ಮಕ ಬೆಳವಣಿಗೆಯಾಗುತ್ತದೆ ಎಂದು ಹೇಳಿದರು. ಕಾಂಗರೂ ಮಾದರಿ ಆರೈಕೆ ಎಂಬುದು ತಾಯ್ತನ ಸಾಕಾರಗೊಳಿಸುವ ಸೇತುವಾಗಿದೆ. ಮಗುವಿನ ಪಂಚೇಂದ್ರಿಯಗಳ ವಿಕಾಸ, ಸುಖ ನಿದ್ದೆ, ಬುದ್ದಿಶಕ್ತಿಯ ಬೆಳವಣಿಗೆ ಹೀಗೆ ಮುಂತಾದ ಅದ್ಬುತ ಗುಣಗಳನ್ನು ಹೊಂದಿದೆ. ಇದನ್ನು ಮಗುವು 2500 ಗ್ರಾಮ್‌ ತೂಕ ತಲುಪುವ ವರೆಗೆ ಅಥವಾ ಅದರ ನಂತರವೂ ಮಾಡಬಹುದಾಗಿದೆ ಎಂದರು.

ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ| ಎಂ.ಎಸ್‌ ಕಡ್ಡಿ, ಕಾಂಗರೂ ಮಾದರಿ ಆರೈಕೆಯ ಪರಿಚಯ, ಅಭಿವೃದ್ಧಿ, ಬೆಳವಣಿಗೆಗಳ ಬಗ್ಗೆ ಪರಿಚಯಿಸಿದರು. ಹಿರಿಯ ಮಕ್ಕಳ ಮಕ್ಕಳ ತಜ್ಞ ಡಾ| ಸುರೇಶ ಕಾಖಂಡಕಿ ಹಾಗೂ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ| ರಾಜೇಶ್ವರಿ ಕಡಕೋಳ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಉಪನ್ಯಾಸ ನೀಡಿದರು.

Advertisement

ಕೆಎಲ್ಇ ಹೋಮಿಯೋಪಥಿಕ್‌ ಕಾಲೇಜಿನ ಪ್ರಾಂಶುಪಾಲ ಡಾ| ಎಂ.ಎ. ಉಡಚನಕರ ಮತ್ತು ಕೆಎಲ್ಇ ಸೆಂಟೇನರಿ ಇನ್‌ಸ್ಟಿಟ್ಯೂಟ್ ಆಫ್‌ ನರ್ಸಿಂಗ ಸೈನ್ಸ್‌ ಪ್ರಾಂಶುಪಾಲ ವಿಕ್ರಾಂತ ನೆಸರಿಮ ಡಾ| ಅನಿತಾ ಮೋದಗೆ, ಸೌಮ್ಯ ವೇರ್ಣೇಕರ, ಡಾ| ಸಂತೋಷಕುಮಾರ ಕರಮಸಿ, ಡಾ| ಬಸವರಾಜ ಕುಡಸೋಮನ್ನವರ, ಸ್ತ್ರೀರೋಗ ತಜ್ಞೆ ಡಾ| ವಿದ್ಯಾ ಕಾಖಂಡಕಿ, ಡಾ| ಸತೀಶ ಧಾಮನಕರ, ಡಾ| ರವೀಂದ್ರ ನರಸಾಪುರೆ, ಡಾ| ಗೀತಾಂಜಲಿ ತೋಟಗಿ, ಡಾ| ದರ್ಶಿತ್‌ ಶೆಟ್ಟಿ, ಡಾ| ಮೋಹನ ಸುಂಕದ ಉಪಸ್ಥಿತರಿದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಭಾವತಿ ಪಾಟೀಲ ನಿರೂಪಿಸಿದರು.

ಹಿರಿಯ ಮಕ್ಕಳ ತಜ್ಞ ಡಾ| ಸುರೇಶ ಕಾಖಂಡಕಿ ಸ್ವಾಗತಿಸಿದರು. ಡಾ| ಅನುರಾಧಾ ಉಗಲೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next