Advertisement

ಒಂದೇ ಚಿತ್ರಕ್ಕೇ ಬೇಡಿಕೆಯ ನಟಿಯಾದರು ಕಣಣ್ಣಾ

03:00 PM Sep 18, 2017 | |

“ಆ ಹುಡುಗಿ ಅದೇನು ಅದೃಷ್ಟ ಮಾಡಿದ್ದಾಳೆ ನೋಡ್ರಿ, ಕೈ ತುಂಬಾ ಸಿನ್ಮಾ, ಕನ್ನಡವಷ್ಟೇ ಅಲ್ಲದೇ, ಪರಭಾಷೆಯಿಂದಲೂ ಆಫ‌ರ್‌ …’

Advertisement

ರಶ್ಮಿಕಾರನ್ನು ನೋಡಿದ ಕೆಲವರು ಖುಷಿಯಿಂದ ಹಾಗೂ ಇನ್ನು ಕೆಲವರು ಹೊಟ್ಟೆಕಿಚ್ಚಿನಿಂದ ಹೀಗೆ ಮಾತನಾಡಿಕೊಳ್ಳುತ್ತಿದ್ದಾರೆ. ಹಾಗಂತ ಅವರು ಖುಷಿಪಡುವುದರಲ್ಲಿ, ಆಶ್ಚರ್ಯಪಡುವುದರಲ್ಲಿ ತಪ್ಪಿಲ್ಲ. ಮೊನ್ನೆ ಮೊನ್ನೆ ನಿಮ್ಮೆದುರು ಕನ್ನಡಕ ಸರಿಪಡಿಸಿಕೊಂಡು ಸಾನ್ವಿಯಾಗಿ “ಕಿರಿಕ್‌’ ಮಾಡಿದ ಹುಡುಗಿ ರಶ್ಮಿಕಾ ಈಗ ಬಿಝಿ ನಟಿ. ಕನ್ನಡದ ಹುಡುಗಿಯಾಗಿ ಮೊದಲ ಸಿನಿಮಾ ರಿಲೀಸ್‌ ಆಗಿ ಹಿಟ್‌ ಆಗುತ್ತಿದ್ದಂತೆ ಇತ್ತೀಚಿನ ದಿನಗಳಲ್ಲಿ ಯಾವ ನಟಿಯೂ ಈ ಮಟ್ಟಕ್ಕೆ ಬಿಝಿಯಾಗಿದ್ದಿಲ್ಲ. ಆದರೆ ರಶ್ಮಿಕಾ ಮಂದಣ್ಣ ಮಾತ್ರ ಕೈ ತುಂಬಾ ಅವಕಾಶ ಪಡೆಯುತ್ತಾ ಚಿತ್ರರಂಗದಲ್ಲಿ ಗಟ್ಟಿ ನೆಲೆಯೂರುವ ಲಕ್ಷಣ ತೋರುತ್ತಿದ್ದಾರೆ.

“ಕಿರಿಕ್‌ ಪಾರ್ಟಿ’ ಚಿತ್ರ ಆರಂಭವಾದಾಗ ರಶ್ಮಿಕಾ ಮಂದಣ್ಣ ಚಿತ್ರರಂಗದ ನ್ಯೂ ಎಂಟ್ರಿ. ಆದರೆ, ಈಗ ಚಿತ್ರ 100 ದಿನ ಆಗುವಷ್ಟರಲ್ಲಿ ರಶ್ಮಿಕಾ ಎಲ್ಲರಿಗೂ ಪರಿಚಯದ ಮುಖವಾಗಿದ್ದಾರೆ. ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿಬಿಟ್ಟಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ಕೈಯಲ್ಲಿ ಮೂರು ಸಿನಿಮಾಗಳಿವೆ. ಅದರಲ್ಲಿ ಎರಡು ಕನ್ನಡ ಸಿನಿಮಾವಾದರೆ, ಒಂದು ತೆಲುಗು ಸಿನಿಮಾ. ಚಿತ್ರ ಬಿಡುಗಡೆಯಾದ ಮೂರು ತಿಂಗಳೊಳಗೆ ಪರಭಾಷೆಯ ಗಮನ ಸೆಳೆದ ನಟಿ ಎಂಬ ಹೆಗ್ಗಳಿಕೆ ಕೂಡಾ ರಶ್ಮಿಕಾಗಿದೆ. ಪುನೀತ್‌ರಾಜಕುಮಾರ್‌ ಅವರ “ಅಂಜನಿ ಪುತ್ರ’ ಹಾಗೂ ಗಣೇಶ್‌ ನಾಯಕರಾಗಿರುವ “ಚಮಕ್‌’ ಚಿತ್ರಗಳಲ್ಲಿ ಬಿಝಿಯಾಗಿರುವ ರಶ್ಮಿಕಾ ತೆಲುಗಿನಲ್ಲೂ ಒಂದು ಸಿನಿಮಾ ಒಪ್ಪಿಕೊಂಡಿದ್ದು, ನಾಗ ಶೌರ್ಯ ಈ ಚಿತ್ರದ ನಾಯಕ. 

ಖುಷಿಯಲ್ಲಿ ರಶ್ಮಿಕಾ 
ಮೊದಲ ಚಿತ್ರ ಬಿಡುಗಡೆಯಾಗುತ್ತಿದ್ದಂತೆ ರಶ್ಮಿಕಾಗೆ ಈ ಮಟ್ಟಕ್ಕೆ ಅವಕಾಶ ಸಿಗುತ್ತಿರುವ ಹಾಗೂ ಜನ ಗುರುತಿಸುತ್ತಿರುವ ಬಗ್ಗೆ ಸಹಜವಾಗಿಯೇ ಖುಷಿ ಇದೆ. ಇದಕ್ಕೆಲ್ಲಾ ಕಾರಣ ಜನ ತನ್ನನ್ನು ಇಷ್ಟಪಟ್ಟಿದ್ದು ಎನ್ನಲು ರಶ್ಮಿಕಾ ಮರೆಯುವುದಿಲ್ಲ. “ಜನ ಹಾಗೂ ಕನ್ನಡ ಚಿತ್ರರಂಗ ಬೇಗನೇ ನನ್ನನ್ನು ಗುರುತಿಸಿ, ಪ್ರೋತ್ಸಾಹಿಸುತ್ತಿದೆ. ಹಾಗಾಗಿಯೇ ಒಳ್ಳೊಳ್ಳೆ ಅವಕಾಶಗಳು ಸಿಗುತ್ತಿವೆ. ಜನ ಇಷ್ಟಪಡದಿದ್ದರೆ, ಅವರು ನನ್ನ ಅಭಿನಯವನ್ನು ಇಷ್ಟಪಡದಿದ್ದರೆ ನಾನು ಇವತ್ತು ಇಷ್ಟೊಂದು ಅವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಖುಷಿಯಿಂದ ಹೇಳುತ್ತಾರೆ ರಶ್ಮಿಕಾ. ಇನ್ನು, ರಶ್ಮಿಕಾ ಕೆರಿಯರ್‌ ಪ್ಲ್ರಾನಿಂಗ್‌ನಲ್ಲಿ ಅವರ ತಾಯಿಯ ಪಾತ್ರ ಕೂಡಾ ಇದೆಯಂತೆ. ಡೇಟ್ಸ್‌ನಿಂದ ಹಿಡಿದು ಕಥೆ ಡಿಸ್ಕಶನ್‌, ಡಿಸಿಶನ್‌ನಲ್ಲೂ ಅವರ ತಾಯಿಯ ಪಾತ್ರವಿದೆಯಂತೆ. ಏಕೆಂದರೆ ಈಗಷ್ಟೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಮಗಳು ಬಿಝಿಯಾಗುತ್ತಿರುವಾಗ ಆಕೆಯನ್ನು ಬೆಂಬಲಿಸಿ ಸರಿದಾರಿಯಲ್ಲಿ ನಡೆಸಬೇಕೆಂಬ ಉದ್ದೇಶದಿಂದ ಮಗಳ ಕೆರಿಯರ್‌ ಪ್ಲ್ರಾನಿಂಗ್‌ನಲ್ಲಿ ಅವರ ತಾಯಿ ನಿಂತಿದ್ದಾರಂತೆ. 

ಅಂದಹಾಗೆ, ರಶ್ಮಿಕಾ ಒಂದು ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಆದೇನೆಂದರೆ ಇತ್ತೀಚಿನ ದಿನಗಳಲ್ಲಿ ಕನ್ನಡದ ನಟಿಯರಿಗೆ ಹೆಚ್ಚೆಚ್ಚು ಅವಕಾಶ ಸಿಗುತ್ತಿರುವುದು ಮತ್ತು ಕನ್ನಡದ ನಟಿಯರು ಮಿಂಚುತ್ತಿರೋದು. “ಇತ್ತೀಚಿನ ದಿನಗಳಲ್ಲಿ ಕನ್ನಡದ ನಟಿಯರಿಗೆ ಒಳ್ಳೊಳ್ಳೆ ಅವಕಾಶಗಳು ಸಿಗುತ್ತಿವೆ. ಹಿಂದೆ ಮುಂಬೈಯಿಂದ ನಾಯಕಿಯರನ್ನು ಕರೆತರುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಕನ್ನಡದ ನಟಿಯರಿಗೆ ಅವಕಾಶ ಕೊಡುತ್ತಿದ್ದಾರೆ. ಅದರಲ್ಲೂ ಹೊಸ ನಿರ್ದೇಶಕರು ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿದ್ದಾರೆ. ನಮ್ಮ ಕನ್ನಡದ ನಟಿಯರು ಕೂಡಾ ಅದನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ’ ಎಂದು ಖುಷಿಯಿಂದ ಹೇಳುತ್ತಾರೆ ರಶ್ಮಿಕಾ. 

Advertisement

ಸ್ಟಾರ್‌ಗಳ ನಾಯಕಿ
ಈಗಷ್ಟೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ರಶ್ಮಿಕಾ ಸ್ಟಾರ್‌ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಸ್ಟಾರ್‌ಗಳ ಹೀರೋಯಿನ್‌ ಎಂದು ಗಾಂಧಿನಗರ ಮಾತನಾಡಿಕೊಳ್ಳುತ್ತಿದೆ. ರಶ್ಮಿಕಾ ಸ್ಟಾರ್‌ ಸಿನಿಮಾನೇ ಬೇಕು ಎಂದು ಕಾಯೋದಿಲ್ಲವಂತೆ. ಅವರಿಗೆ ಕಥೆ, ಪಾತ್ರ ಇಷ್ಟವಾದರೆ ಸಿನಿಮಾ ಮಾಡುತ್ತಾರಂತೆ.  ಈ ನಡುವೆಯೇ ರಶ್ಮಿಕಾ ಕಿವಿಗೆ ಒಂದು ಮಾತು ಬಿದ್ದಿದೆ. ಅದು  ಸ್ಟಾರ್‌ ಸಿನಿಮಾಗಳಲ್ಲಿ ನಾಯಕಿಯರ ಪಾತ್ರಗಳಿಗೆ ಮಹತ್ವವಿರಲ್ಲ ಎಂಬುದು.  ಆದರೆ, ರಶ್ಮಿಕಾ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಅದು ಶಕ್ತಿಮೀರಿ ಪಾತ್ರಕ್ಕೆ ನ್ಯಾಯ ಒದಗಿಸೋಕೆ. ಮಿಕ್ಕಿದ್ದನ್ನು ಜನರಿಗೆ ಬಿಡೋದೆಂದು. “ನನಗೆ “ಕಿರಿಕ್‌ ಪಾರ್ಟಿ’ ಚಿತ್ರದ ಆಫ‌ರ್‌ ಬಂದಾಗ ನನ್ನ ಪಾತ್ರವನ್ನು ಜನ ಈ ಮಟ್ಟಕ್ಕೆ ಇಷ್ಟಪಡುತ್ತಾರೆಂದು ನಾನಂದುಕೊಂಡಿರಲಿಲ್ಲ. ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದೆ. ಅದನ್ನು ಜನ ಇಷ್ಟಪಟ್ಟಿದ್ದಾರೆ. ಎಷ್ಟರಮಟ್ಟಿಗೆಂದರೆ ನನ್ನ ಹೆಸರು ರಶ್ಮಿಕಾ ಎಂಬುದು ಅನೇಕರಿಗೆ ಮರೆತೇ ಹೋಗಿದೆ. ಎಲ್ಲರೂ ಸಾನ್ವಿ ಎಂದೇ ಕರೆಯುತ್ತಾರೆ. ಅದೇ ರೀತಿ ನನ್ನ ಮುಂದಿನ ಚಿತ್ರಗಳ ಪಾತ್ರಗಳನ್ನು ನಿಷ್ಠೆಯಿಂದ ಮಾಡುತ್ತೇನೆ. ನನ್ನನ್ನು ನಂಬಿದ ಜನರಿಗೆ ಮೋಸವಾಗಬಾರದು, ಏನಪ್ಪಾ ಈ ಹುಡುಗಿ ಈ ತರಹದ ಪಾತ್ರ ಮಾಡಿದ್ದಾಳಾ ಎನ್ನುವಂತಾಗಬಾರದು ಎಂಬ ಕಾರಣಕ್ಕೆ ಎಚ್ಚರದ ಹೆಜ್ಜೆ ಇಡುತ್ತಿದ್ದೇನೆ’ ಎನ್ನುವುದು ರಶ್ಮಿಕಾ ಮಾತು.

Advertisement

Udayavani is now on Telegram. Click here to join our channel and stay updated with the latest news.

Next