Advertisement

ಸಿಡ್ನಿಯಲ್ಲಿ ಕನ್ನಡದ ಕಂಪು ಹಂಚುತ್ತಿರುವ ಕನಕಾಪುರ ನಾರಾಯಣ

03:18 PM Dec 12, 2020 | Adarsha |

ಸುಮಾರು ಮೂವತ್ತು ವರ್ಷಗಳ ಹಿಂದಿನ ಕಥೆಯಿದು. ಬೆಂಗಳೂರಿನ ಸುಬ್ರಹ್ಮಣ್ಯನಗರ ಬಡಾವಣೆಯ ಹರೆಯದ ಯುವಕನೋರ್ವನ ನಡೆನುಡಿ, ಕಣ್ಣುಗಳಲ್ಲಿ ನೂರಾರು ಕನಸುಗಳು ತುಂಬಿರುತ್ತಿತ್ತು. ತನ್ನ ಗೆಳೆಯರು, ಆತ್ಮೀಯರೊಡನೆ ಸದಾ ತನ್ನ ಕನಸುಗಳ ಕುರಿತು ಹಂಚಿಕೊಳ್ಳುತ್ತಿದ್ದ. ಆಗ ವಿದೇಶಕ್ಕೆ ವಲಸೆ ಹೋಗುವ ಅವಕಾಶ ದೊರೆಯಿತು. ಆತ ಕನಸು ಕಾಣುವುದು ಇನ್ನೂ ಹೆಚ್ಚಾಯಿತು. ಹರೆಯದ ಯುವಕ, ವಿದೇಶಕ್ಕೆ ವಲಸೆ ಎಂದರೆ ಐಷಾರಾಮಿ ಜೀವನ, ಕಾರು, ಆಸ್ತಿ,  ಅದೂ ಇದೂ ಎಂದು ಏನೇನೋ ಕನಸು ಕಾಣುವುದು ವಿಶೇಷವೇನಲ್ಲ. ಆದರೆ ಈ ಯುವಕ ಕನಸು ಕಾಣುತ್ತಿದ್ದುದು ಕನ್ನಡದ ಬಗ್ಗೆ. ಕನ್ನಡಕ್ಕಾಗಿ ಏನಾದರೂ ಮಾಡಬೇಕು ಎಂಬ ಹಂಬಲ.

Advertisement

ಸುತ್ತಮುತ್ತಲಿನ ತನ್ನ ಸಮವಯಸ್ಕರು ಆಟ, ಮೋಜುಮಸ್ತಿಯಲ್ಲಿ  ತೊಡಗಿದಾಗ, ಕನ್ನಡ ಸಾಹಿತ್ಯ, ಹಾಡುಗಳು, ಸಿನೆಮಾ, ಇತಿಹಾಸ ಎಂದೆಲ್ಲ ಮನದ ತುಂಬ ಕನ್ನಡವನ್ನೇ ತುಂಬಿಕೊಂಡು ತನ್ನೊಡನೆ ಹೊತ್ತೂಯ್ಯುವ ಸಾಮಾನು ಸರಂಜಾಮುಗಳಿಗಿಂತಲೂ ದೊಡ್ಡದಾದ ಕನ್ನಡವನ್ನು ಕಲಿಸಿ, ಬೆಳೆಸಿ, ಉಳಿಸುವ ಕನಸಿನ ಗಂಟನ್ನು ಹೊತ್ತು ಕನಕಾಪುರ ನಾರಾಯಣ ವಿಮಾನವೇರಿದ್ದರು.

ಸಿಡ್ನಿ ಕನ್ನಡ ಶಾಲೆ

ಸಿಡ್ನಿ ಕನ್ನಡ ಶಾಲೆ ನಾರಾಯಣ್‌ ಅವರ ಕನಸಿನ ಮದಲ ಕೂಸು. ಸಿಡ್ನಿ ನಗರದಲ್ಲಿ ನೆಲೆಸಿದ್ದ ಅನೇಕ ಕನ್ನಡ ಕುಟುಂಬಗಳ ಮಕ್ಕಳಿಗೆ ಮಾತೃಭಾಷೆಯ ಕಲಿಕೆ ದೂರವೇ ಆಗಿತ್ತು. ಹಲವಾರು ಕುಟುಂಬಗಳಲ್ಲಿ ತಂದೆ ತಾಯಿಯರು ಸ್ವತಃ ಆಸಕ್ತಿಯಿಂದ ತಮ್ಮ ಮಕ್ಕಳಿಗೆ ಕನ್ನಡ ಹೇಳಿಕೊಡುತ್ತಿದ್ದರೂ, ಸೂಕ್ತ ರೀತಿಯ ಕಲಿಕೆಗೆ ಅವಕಾಶವಿರಲಿಲ್ಲ. ಇದಕ್ಕೊಂದು ಉತ್ತಮ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಾರಾಯಣ ಕನ್ನಡ ಶಾಲೆ ಪ್ರಾರಂಭಿಸುವುದರೊಂದಿಗೆ ಮೊದಲ ಹೆಜ್ಜೆ ಇಟ್ಟರು.

ಕನ್ನಡ ಕಲಿಯಲು ಬರುವ ಮಕ್ಕಳಿಗೆ ಅವರ ಮನೆಯೇ ಮೊದಲ ಕನ್ನಡದ ಪಾಠಶಾಲೆಯಾಯಿತು. ಸ್ವತಃ ನಾರಾಯಣ ಅವರೇ ಮೊದಲ ಗುರುವಾದರು. ಹಲವು ಸ್ನೇಹಿತರ ಹಿತೈಷಿಗಳ ಹಾರೈಕೆ, ಸಹಾಯದೊಡನೆ ತಮ್ಮ ಪುಟ್ಟ ಮನೆಯ ಕಾರಿನ ಗ್ಯಾರೇಜ್‌ನಲ್ಲಿಯೇ  ಅ ಆ ಇ ಈ ಕಲಿಕೆಗೆ ನಾಂದಿಯಾಯಿತು.

Advertisement

ಆರೆಂಟು ಮಕ್ಕಳೊಡನೆ ಪ್ರಾರಂಭವಾದ ಶಾಲೆ ದಿನದಿನಕ್ಕೆ ಬೆಳೆಯುತ್ತಾ ಹೋಯಿತು. ಮನೆಯಲ್ಲಿ ನಡೆಯುತ್ತಿದ್ದ ಶಾಲೆಗೆ ಸ್ಥಳ ಸಾಕಾಗದೆ ದೊಡ್ಡ ಜಾಗಗಳನ್ನು ಅರಸಬೇಕಾಯಿತು. ಸ್ಥಳೀಯ ಕೌನ್ಸಿಲ್‌ಗ‌ಳ ಸಮುದಾಯ ಭವನಗಳನ್ನು ಬಾಡಿಗೆಗೆ ಪಡೆದು ಶಾಲೆಯನ್ನು ನಡೆಸಲಾರಂಭಿಸಿದರು.

ನಾರಾಯಣ ಅವರ ಕನ್ನಡ ಶಾಲೆ ಸಿಡ್ನಿಯ ಎಲ್ಲೆಡೆ ಕನ್ನಡ ಸಮುದಾಯದ ಗಮನ ಸೆಳೆಯಲಾರಂಭಿಸಿತು. ಶಾಲೆಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಾ ಬಂದಿತು, ಜತೆಗೆ ಆಸಕ್ತಿಯಿಂದ ಹಲವರು ಶಿಕ್ಷಕರಾಗಿ ಸೇವೆ ಸಲ್ಲಿಸಿಲು ಮುಂದೆ ಬಂದರು. ಮಕ್ಕಳನ್ನು ಸೇರಿಸಲು ಬಂದ ಹಲವರು, ತಾವೇ ಶಿಕ್ಷಕರಾಗಿಯೂ ಸೇರಿಕೊಂಡ ಉದಾಹರಣೆಗಳಿವೆ.

ಮುಂದೆ ಬೇಡಿಕೆಗೆ ಅನುಗುಣವಾಗಿ ಸಿಡ್ನಿಯ ವಿವಿಧ ಪ್ರದೇಶಗಳಲ್ಲಿ ಶಾಖೆಗಳನ್ನು ಆರಂಭಿಸಿ, ಪ್ರಸ್ತುತ ಎರಡು ಕಡೆ, ಸ್ಥಳೀಯ ಸರಕಾರಿ ಶಾಲೆಗಳ ಸಭಾಂಗಣಗಳಲ್ಲಿ ವಾರಾಂತ್ಯದ ದಿನಗಳಲ್ಲಿ ಶಾಲೆಗಳು ನಡೆಯುತ್ತವೆ. ಈಗ ಸುಮಾರು 80 ವಿದ್ಯಾರ್ಥಿಗಳು ಮತ್ತು ಹದಿನೈದು ಶಿಕ್ಷಕರಿದ್ದಾರೆ.  ಈವರೆಗೆ ಅನೇಕ ಮಂದಿ ಸ್ವಯಂಪ್ರೇರಿತರಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

ನಾರಾಯಣ ಮತ್ತು ಅವರ ಪತ್ನಿ ರಾಜಲಕ್ಷಿ$¾à, ಇವರೊಡನೆ ವೀಣಾ ಸುದರ್ಶನ್‌, ಸುಮಾ ಅಶೋಕ್‌  ಆರಂಭದಿಂದಲೂ ಕಾರ್ಯ ನಿರ್ವಹಿಸುತ್ತಿರುವ ಪ್ರಮುಖ ಶಿಕ್ಷಕರು. ವಿಶೇಷವೆಂದರೆ ಅಲ್ಲಿ ಕಲಿತ ಮಕ್ಕಳೇ ಅನಂತರದಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಾರೆ ಎಂಬುದು  ಹೆಮ್ಮೆಯ ವಿಷಯ.

ಪಠ್ಯಕ್ರಮದಲ್ಲಿ ಹಲವು ವಿಷಯಗಳು

ನಾರಾಯಣ ಅವರು ಮಕ್ಕಳಿಗೆ ಬರಿಯ ಅ ಆ ಇ ಈ ಕಲಿಸದೆ, ಕರ್ನಾಟಕ ರಾಜ್ಯದ ಪರಂಪರೆ, ಜನಪದ, ಗ್ರಾಮೀಣ ಜೀವನ, ಇತಿಹಾಸ ಎಲ್ಲದರ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಮಕ್ಕಳಿಗೆ ಬೇಸರ ಮೂಡದಂತೆ, ಸುಲಭ ಹಾಗೂ ಶೀಘ್ರ ಕಲಿಕೆಗೆ ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ಪಠ್ಯಕ್ರಮಗಳನ್ನು ರೂಪಿಸಿದ್ದಾರೆ. ಗಾದೆಗಳು, ಒಗಟುಗಳು, ನೀತಿಕತೆಗಳು, ದಿನಬಳಕೆಯ ವಸ್ತುಗಳು ಹೀಗೆ ಅನೇಕ ರೀತಿಯಲ್ಲಿ ಮಕ್ಕಳು ಕನ್ನಡದವರೆ ವ್ಯವಹರಿಸುವ ನಿಟ್ಟಿನಲ್ಲಿ ಚಿಂತಿಸುತ್ತಾರೆ ನಾರಾಯಣ ಅವರು.

ವಯಸ್ಸು ಮತ್ತು ಕಲಿಕೆಯ ಮಟ್ಟಕ್ಕೆ ಅನುಗುಣವಾಗಿ ತರಗತಿಗಳನ್ನು ರಚಿಸಲಾಗುತ್ತದೆ. ಇವರು ರೂಪಿಸಿರುವ ವಿಧಾನವು ವಿದೇಶಗಳ ಕನ್ನಡ ಶಾಲೆಗಳಲ್ಲಿ ಕುತೂಹಲ ಮೂಡಿಸಿ ತಾವೂ ಅಳವಡಿಸಿಕೊಳ್ಳಲು ಆಸಕ್ತಿ ತೋರಿದ್ದಾರೆ. ವರ್ಷಾಂತ್ಯದಲ್ಲಿ ಪರೀಕ್ಷೆ ನಡೆಸಿ ಮಕ್ಕಳೆಲ್ಲರಿಗೂ ಪ್ರಶಂಸಾ ಪತ್ರ ಹಾಗೂ ಶಾಲೆಯ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ಬಹುಮಾನ ನೀಡಿ ಉತ್ತೇಜಿಸುತ್ತಾರೆ. ವರ್ಷಕ್ಕೊಮ್ಮೆ ಕ್ರ್ಯಾಶ್‌ ಕೋರ್ಸ್‌ ಎಂದು ನಡೆಸಿ, ಕಾರಣಾಂತರಗಳಿಂದ ಕನ್ನಡ ಕಲಿಯಲಾಗಿರದ ಅಥವಾ ಕನ್ನಡ ಕಲಿಕೆಯಲ್ಲಿ ಆಸಕ್ತಿ ಇರುವ ಕನ್ನಡೇತರರು, ವಿದೇಶಿಯರಿಗೆ ಕನ್ನಡವನ್ನು ಪರಿಚಯಿಸಿ, ಸುಲಭ ವಿಧಾನದಲ್ಲಿ ಕನ್ನಡ ಕಲಿಸಲಾಗುತ್ತದೆ.

ಕನ್ನಡ ಸಂಸ್ಕೃತಿಯ  ಕಂಪನ್ನು ಹಂಚುವ ಕೂಟ

ನಾರಾಯಣ ರೂಪಿಸಿರುವ ಸಿಡ್ನಿ ಕನ್ನಡ ಶಾಲೆ ಎಂದರೆ, ಅದೊಂದು ಕೇವಲ ಮಕ್ಕಳು ಬಂದು ಪಾಠ ಕಲಿಯುವ ಸ್ಥಳವಲ್ಲ. ಅದು ಸಿಡ್ನಿಯಲ್ಲಿ ಕನ್ನಡದ ಸಂಸ್ಕೃತಿಯ ಕಂಪನ್ನು ಹರಡುವ ಒಂದು ಕೂಟ. ಶಾಲೆಯ ಆರಂಭದೊಂದಿಗೆ ಸುಗಮ ಕನ್ನಡ ಕೂಟ ಎಂಬ ವೇದಿಕೆಯನ್ನೂ ಹುಟ್ಟುಹಾಕಿದ್ದರು. ಅದಕ್ಕೊಂದು ಸಮಿತಿಯಿದ್ದು, ಅದರಲ್ಲಿ ಹಲವು ಸದಸ್ಯರಿದ್ದಾರೆ.

ಆ ವೇದಿಕೆಯಡಿ ಯುಗಾದಿ, ದಸರಾ ಮತ್ತು ರಾಜ್ಯೋತ್ಸವಗಳನ್ನು ಭವ್ಯವಾದ ಕಾರೆಯೋಕೆಯೊಂದಿಗೆ ನಡೆಸುತ್ತಾರೆ. ಸಂಗೀತ ಕಾರ್ಯಕ್ರಮಗಳಲ್ಲಿ ಎಲ್ಲೆಲ್ಲೂ ಇತರ ಭಾಷೆಗಳಿಗ ಪ್ರಾಧಾನ್ಯತೆ ದೊರೆವುದನ್ನು ಕಂಡು, ಕನ್ನಡ ನಾಡಿನಿಂದ ಶಾಸ್ತ್ರೀಯ ಸಂಗೀತಗಾರರನ್ನು ಕರೆಸಿ, ಕಾರ್ಯಕ್ರಮ ನಡೆಸಿ ಅವರನ್ನು ಸಮ್ಮಾನಿಸುತ್ತಾರೆ. ಅನೇಕ ಸುಗಮ ಸಂಗೀತಗಾರರು, ಹಾಸ್ಯ ಕಲಾವಿದರು ಇಲ್ಲಿಗೆ ಆಗಮಿಸಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಎಲ್ಲರಿಗೂ ನಾರಾಯಣ ಅವರ ಮನೆಯರ ಆತಿಥ್ಯ. ಕನ್ನಡಿಗರಲ್ಲೇ ಕೇವಲ ಪುರಂದರ ದಾಸರಿಗಾಗಿ ಆರಾಧನೆ ನಡೆಯುವುದ ಕಂಡು ಕನಕದಾಸರು ಮತ್ತು ಇನ್ನುಳಿದ ದಾಸರ ಕೃತಿಗಳ ಗಾಯನಕ್ಕಾಗಿ  ಕನಕ ನಮನ ಎಂದು ವರ್ಷಕ್ಕೊಮ್ಮೆ ಕಾರ್ಯಕ್ರಮ ನಡೆಸುತ್ತಾರೆ.

ಸ್ಥಳೀಯ ಗಾಯಕರು, ಯಾವುದೇ ವಿಧದ ಕಲಾವಿದರು, ಸಾಹಿತಿಗಳು, ಬೇರಾವುದೇ ಕ್ಷೇತ್ರದ ಪ್ರತಿಭೆಗಳನ್ನು ಕಂಡರೂ ಅವರನ್ನು ತಮ್ಮ ವೇದಿಕೆಗೆ ಕರೆತಂದು, ಅವರನ್ನು ಪ್ರೋತ್ಸಾಹಿಸಿ, ಅವರಿಗೊಂದು ಉತ್ತಮ ವೇದಿಕೆ ಕಲ್ಪಿಸುವುದು ನಾರಾಯಣ ಅವರ ಹಿರಿಯ ಗುಣ. ವರ್ಷಕ್ಕೊಮ್ಮೆ ಹೀಗೆ ಪ್ರತಿಭಾವಂತರೊಬ್ಬರನ್ನು ಸಾರ್ವಜನಿಕವಾಗಿ ಸಮ್ಮಾನಿಸಿ, ತಮ್ಮ ಕೂಟದ ವತಿಯಿಂದ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ.

ಹೊರನಾಡ ಚಿಲುಮೆ

ವೈದ್ಯಕೀಯ ಸಲಹೆ, ಅಡುಗೆಗಳ ಕಲಿಕೆಗೆ ಪ್ರಾತ್ಯಕ್ಷಿಕೆ, ಆಹಾರ ಸೇವನೆಯ ಸಲಹೆ, ಪ್ರವಾಸ, ನಾಟಕ, ಸಿನೆಮಾ ಪ್ರದರ್ಶನ ಹೀಗೆ ಒಂದೆರಡಲ್ಲ ಸಿಡ್ನಿ ಕನ್ನಡ ಶಾಲೆ ಆಯೋಜಿಸುವ ಕಾರ್ಯಕ್ರಮಗಳು ಸುಮಾರು ಏಳೆಂಟು ವರ್ಷಗಳಿಂದ ಪ್ರಕಟವಾಗುತ್ತ, ಪ್ರಪಂಚದೆಡೆ ಓದುಗ ಬಳಗವನ್ನು ಸೃಷ್ಟಿಸಿಕೊಂಡಿರುವ “ಹೊರನಾಡ ಚಿಲುಮೆ’ ಅಂತರ್ಜಾಲ ಮಾಸಪತ್ರಿಕೆಯ  ಹೆಗ್ಗಳಿಕೆ.

ಯಾವುದೇ ದೊಡ್ಡ ಸಂಘ ಸಂಸ್ಥೆಗಳು, ಅಷ್ಟೇ ಏಕೆ ಸರಕಾರಿ ಕಚೇರಿಗಳೂ ಮಾಡಲಾಗದಷ್ಟು ಕನ್ನಡದ ಕಾಯಕವನ್ನು  ಕನಕಾಪುರ ನಾರಾಯಣ ಹದಿನೈದು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ಅವರು ಕನಸು ಕಾಣುತ್ತಿದ್ದ ದಿನದಿಂದಲೂ ಅವರೊಡನೆ ಭಾಗಿಯಾಗಿ, ಅವರ ಕಾರ್ಯಗಳಿಗೆಲ್ಲ ಸರಿಸಮವಾಗಿ ಹೆಗಲುಕೊಡುವ ಅವರ ಪತ್ನಿ  ರಾಜಲಕ್ಷ್ಮೀ ನಾರಾಯಣ ಅವರ ಸಹಕಾರ ನಾರಾಯಣ ಅವರ ಕನಸನ್ನು ನನಸುಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿಕೊಂಡು ಬಂದಿದೆ. ಅಂತೆಯೇ ಮಕ್ಕಳಾದ ಸಂಜಯ್‌ ಮತ್ತು ಸಿಂಧು ನಾರಾಯಣ್‌ ಕೂಡ ತಂದೆಗೆ ಜತೆಯಾಗಿದ್ದಾರೆ.

ಕನ್ನಡದ ಕಾಯಕಕ್ಕಾಗಿ ಸದಾಕಾಲ ಏನಾದರೊಂದು ಹೊಸತು ಯೊಚಿಸುವ ನಾರಾಯಣ ಅವರಿಂದ ಮುಂದೇನು ಬರಲಿದೆಯೋ ಕಾದು ನೋಡಬೇಕು.

ನಾಗಶೈಲ ಕುಮಾರ್‌, ಸಿಡ್ನಿ

Advertisement

Udayavani is now on Telegram. Click here to join our channel and stay updated with the latest news.

Next