Advertisement

ಈ ಬಾರಿ ಕಂಬಳ ನಡೆದೀತೆ?

08:41 AM Feb 14, 2017 | Team Udayavani |

ಮಂಗಳೂರು: ಕಂಬಳಕ್ಕೆ ಅವಕಾಶವಾಗುವಂತೆ ವಿಧಾನಸಭೆಯಲ್ಲಿ ಮಸೂದೆ ಅನುಮೋದನೆಗೊಂಡಿದ್ದು, ವಿಧಾನ ಪರಿಷತ್‌ನಲ್ಲಿ ಮಂಗಳವಾರ ಅಂಗೀಕಾರಧಿಗೊಳ್ಳುವ ನಿರೀಕ್ಷೆ ಇದೆ. ಅಲ್ಲಿಂದ ಮುಂದೆ ರಾಜ್ಯಪಾಲರ ಅಂಕಿತ ದೊರೆಯಬೇಕಿದೆ. ಇದು ಆದಷ್ಟು ಬೇಗನೆ ನಡೆದರೆ ಮಾತ್ರ ಇನ್ನು ಬಾಕಿ ಉಳಿದಿರುವ ಈ ಋತುವಿನ ಕೆಲವು ಕಂಬಗಳಾದರೂ ನಡೆಸಲು ಸಾಧ್ಯವಿದೆ. 

Advertisement

ಕಂಬಳ, ಹೋರಿ ಓಟ ಹಾಗೂ ಎತ್ತಿನಗಾಡಿ ಓಟದ ಸ್ಪರ್ಧೆಗೆ ಅವಕಾಶವಾಗುವಂತೆ ಪ್ರಾಣಿಹಿಂಸೆ ತಡೆ (ಕರ್ನಾಟಕ ತಿದ್ದುಪಡಿ) ಮಸೂದೆ 2017 ವಿಧಾನಸಭೆಯಲ್ಲಿ ಅಂಗೀಕೃತಗೊಂಡು ವಿಧಾನ ಪರಿಷತ್‌ಗೆ ಹೋಗಿದ್ದು ಅಲ್ಲಿ ಮಂಗಳವಾರ ಅಂಗೀಕೃತಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.

ವಿಧಾನ ಪರಿಷತ್‌ನಲ್ಲಿ ಮಂಜೂರಾದ ಬಳಿಕ ಅದು ಸಚಿವ ಸಂಪುಟಕ್ಕೆ ಹೋಗಿ ರಾಜ್ಯಪಾಲರ ಅಂಗೀಕಾರಕ್ಕೆ ಹೋಗಲಿದೆ. ರಾಜ್ಯಪಾಲರು ಅದನ್ನು ಪರಿಶೀಲಿಸಿ ಸಹಿ ಮಾಡಿದ ಬಳಿಕ ಅದು ಕಾನೂನು ಆಗಿ ರೂಪುಗೊಳ್ಳುತ್ತದೆ. ಸಂಪ್ರದಾಯ, ಸಂಸ್ಕೃತಿ ಅನುಸರಿಸುವ ಮತ್ತು ಕೋಣಗಳ ದೇಸಿ ತಳಿ ಉಳಿಸಿ ಬೆಳೆಸುವ ಅಂಶಗಳನ್ನು ಒಳಗೊಂಡು ರಾಜ್ಯ ಪಶುಸಂಗೋಪನಾ ಇಲಾಖೆ ಈ ಮಸೂದೆಯನ್ನು ಮಂಡಿಸಿರುವುದರಿಂದ ರಾಜ್ಯಕ್ಕೆ ಸಂಬಂಧಪಟ್ಟದ್ದಾಗಿರುತ್ತದೆ. ಇದೇ ವೇಳೆ ರಾಜ್ಯಪಾಲರಿಗೆ ಇದರಲ್ಲಿ ಸಂವಿಧಾನಾತ್ಮಕ ವಿಚಾರಗಳು ಕಂಡುಬಂದರೆ ಈ ಮಸೂದೆಯನ್ನು ರಾಷ್ಟ್ರಪತಿಗಳಿಗೂ ಕಳುಹಿಸಿಕೊಡುವ ಅಧಿಕಾರವನ್ನು ಹೊಂದಿರುತ್ತಾರೆ. ಇದು ಅವರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಈ ಹಿಂದೆಯೂ ಕೆಲವು ಮಸೂದೆಗಳು ವಿಧಾನಮಂಡಲದಲ್ಲಿ ಮಂಜೂರಾಗಿದ್ದರೂ ರಾಜ್ಯಪಾಲರು ರಾಷ್ಟ್ರಪತಿಗಳ ಬಳಿಗೆ ಕಳುಹಿಸಿಕೊಟ್ಟ ಉದಾಹರಣೆಗಳಿವೆ. ಆದರೆ ಪ್ರಸ್ತುತ ಮಂಡಿಸಿರುವ ಮಸೂದೆಯಲ್ಲಿ ಇಂತಹ ಸಾಧ್ಯತೆಗಳು ಕಡಿಮೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಇನ್ನು ಕೆಲವು ಕಂಬಳ ಮಾತ್ರ ಸಾಧ್ಯ
ಸಾಮಾನ್ಯವಾಗಿ ಅವಿಭಜಿತ ದ.ಕನ್ನಡ ಜಿಲ್ಲೆಯಲ್ಲಿ ನವೆಂಬರ್‌ ತಿಂಗಳ ಕೊನೆಯ ವಾರದಿಂದ ಮಾರ್ಚ್‌ ಹಾಗೂ ಎಪ್ರಿಲ್‌ ತಿಂಗಳ ಪ್ರಥಮಾರ್ಧದವರೆಗೆ ಕಂಬಳಗಳು ಆಯೋಜನೆಗೊಳ್ಳುತ್ತವೆ. ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ ಈಗಾಗಲೇ ಹಲಧಿವಾರು ಕಂಬಳಗಳ ದಿನಾಂಕಗಳು ಮುಗಿದಿವೆ. ಪ್ರಸ್ತುತದ ಕಂಬಳ ಮಸೂದೆ ಫೆಬ್ರವರಿ ತಿಂಗಳ ಅಂತ್ಯಕ್ಕೆ ಅನುಷ್ಠಾನವಾಗಬಹುದು. ಒಂದು ಕಂಬಳಕ್ಕೆ ಸಿದ್ಧತೆ ಮಾಡಲು ಕನಿಷ್ಠ 10 ದಿನಗಳು ಬೇಕಾಗುತ್ತವೆ. ಆದುದರಿಂದ ವಾರಕ್ಕೆ ಒಂದು ಕಂಬಳವಷ್ಟೇ ಆಯೋಜಿಸಲು ಸಾಧ್ಯ. ಆದುದರಿಂದ ಈ ಬಾರಿ ಕೆಲವು ಕಂಬಳಗಳು ಮಾತ್ರ ನಡೆಯಬಹುದು ಎಂದು ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ ಅವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಎಲ್ಲಿ ಕಂಬಳ?
ದ.ಕ.ಜಿಲ್ಲೆಯಲ್ಲಿ ಕಂಬಳ ಸೀಸನ್‌ ಇನ್ನು ಒಂದೂವರೆ ತಿಂಗಳು ಮಾತ್ರ ಉಳಿದಿವೆ. ಮೂಡಬಿದಿರೆ, ಮಿಯಾರು, ಪುತ್ತೂರು, ಉಪ್ಪಿನಂಗಡಿ, ಅಡ್ವೆ ನಂದಿಕೂರು, ತಲಪಾಡಿ, ಜಪ್ಪಿನಮೊಗರು, ವೇಣೂರು, ಬಂಗಾಡಿ ಕಂಬಳಗಳು ಆಯೋಜನೆಗೊಳ್ಳುವ ಸಾಧ್ಯತೆಗಳಿವೆ ಎಂದು ಕಂಬಳ ಸಂಘಟಕರ ಅಭಿಪ್ರಾಯವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next