Advertisement

ಅಡಿಕೆ ವ್ಯಾಪಾರಿ ದರೋಡೆ ಪ್ರಕರಣದಲ್ಲಿ ಡೀಲ್: ಎಸ್ ಜೆ ಪಾರ್ಕ್ ಇನ್ಸ್ ಪೆಕ್ಟರ್ ಅಮಾನತು

04:09 PM Sep 13, 2020 | keerthan |

ಪುತ್ತೂರು: ಬೆಂಗಳೂರಿನ ಎಸ್ ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿದ್ದ ಯೋಗೀಶ್ ಕುಮಾರ್ ರನ್ನು ಅಮಾನತುಗೊಳಿಸಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಕಮಲ್ ಪಂತ್ ಆದೇಶಿಸಿದ್ದಾರೆ.

Advertisement

ಭ್ರಷ್ಟಾಚಾರ ನಿಗ್ರಹದಳದ ಮಂಗಳೂರು ಘಟಕದಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ಯೋಗೀಶ್ ಕುಮಾರ್ ರವರು ಪುತ್ತೂರಿನಲ್ಲಿ ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಂಜುನಾಥ್ ಸಹಿತ ಹಲವರನ್ನು ಲಂಚ ಪಡೆಯುತ್ತಿದ್ದ ವೇಳೆ ಬಲೆಗೆ ಕೆಡವಿದ್ದ ಎ.ಸಿ.ಬಿ. ತಂಡದಲ್ಲಿದ್ದರು. ಯೋಗೀಶ್ ಕುಮಾರ್ ಈ ಹಿಂದೆ ಕಡಬ ಪೊಲೀಸ್ ಠಾಣಾ ಎಸ್.ಐ. ಆಗಿದ್ದರು. ಪ್ರಸ್ತುತ ಬೆಂಗಳೂರಿನ ಎಸ್.ಜೆ.ಪಾರ್ಕ್ ಠಾಣಾ ವೃತ್ತ ನಿರೀಕ್ಷಕರಾಗಿದ್ದರು. ಅಡಿಕೆ ಉದ್ಯಮಿಯೋರ್ವರ ದರೋಡೆ ಪ್ರಕರಣದಲ್ಲಿ ಡೀಲ್ ನಡೆಸಿ ಎಸ್.ಐ.ಯವರಿಂದ ಆರು ಲಕ್ಷ ರೂ ಲಂಚ ಪಡೆದ ಆರೋಪದಡಿ ಪೊಲೀಸ್ ಕಮೀಷನರ್ ಕಮಲ್ ಪಂತ್ ಯೋಗೀಶ್ ರವರನ್ನು ಅಮಾನತು ಮಾಡಿ ಆದೇಶ ಮಾಡಿದ್ದಾರೆ.

ಸದ್ಯ ಯೋಗೀಶ್ ಪರಾರಿಯಾಗಿದ್ದು ಅವರಿಗಾಗಿ ಶೋಧ ನಡೆಯುತ್ತಿದೆ. ಮೂಲತಃ ಮಡಿಕೇರಿಯವರಾದ ಯೋಗೀಶ್ ರವರು ಪುತ್ತೂರಿನ ಪ್ರತಿಷ್ಠಿತ ಕಾಲೇಜೊಂದರ ಹಳೆ ವಿದ್ಯಾರ್ಥಿ ಆಗಿದ್ದರು.

ಪೊಲೀಸ್ ಇಲಾಖೆಯ ಇನ್ನೊಂದು ಮೂಲದ ಪ್ರಕಾರ, ಯೋಗೀಶ್ ರವರು ನೇರವಾಗಿ ಲಂಚ ಪಡೆದುಕೊಂಡಿಲ್ಲ, ಪೊಲೀಸ್ ಸಿಬ್ಬಂದಿ ತಂದು ನೀಡಿದ ಹಣವನ್ನು ಇವರು ಮುಟ್ಟಿಲ್ಲ. ಆದರೆ, ಅಡಿಕೆ ವ್ಯಾಪಾರಿಯ ದರೋಡೆ ನಡೆಸಿದವರ ಜತೆ ಶಾಮೀಲಾದ ಎಸ್.ಐ.ವಿರುದ್ಧ ಇವರು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಯೋಗೀಶ್ ರವರು ಪರಾರಿಯಾಗಿಲ್ಲ, ಅವರು ಮಡಿಕೇರಿಯ ಮನೆಯಲ್ಲಿದ್ದಾರೆ ಎಂದು ಅವರ ಆಪ್ತರು ಪ್ರತಿಕ್ರಿಯಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next