Advertisement

ರಾಷ್ಟ್ರೀಯವಾದದ ಧ್ರುವತಾರೆ ಕಲ್ಯಾಣ್‌ ಸಿಂಗ್‌

09:06 AM Aug 22, 2021 | Team Udayavani |

ಡಿ. 6, 1992. ಭಾರತದ ರಾಜಕೀಯ ಹಾಗೂ ಸಾಮಾಜಿಕ ಇತಿಹಾಸಕ್ಕೆ ದೊಡ್ಡ ತಿರುವೊಂದನ್ನು ತಂದ ದಿನ. ಅಯೋಧ್ಯೆ ಯಲ್ಲಿ, ಶತಮಾನಗಳಿಂದ ವಿವಾದದ ಕೇಂದ್ರಬಿಂದುವಾಗಿದ್ದ ಬಾಬ್ರಿ ಮಸೀದಿ ಅಂದು ಪತನವಾಯಿತು. ದೇಶಾದ್ಯಂತ ಮಿಂಚಿನ ಸಂಚಲನ ಸೃಷ್ಟಿಸಿದ ಘಟನೆ ಯದು. ಆಗ ಉತ್ತರ ಪ್ರದೇಶದಲ್ಲಿ ಅಧಿಕಾರದಲ್ಲಿದ್ದುದು ಬಿಜೆಪಿ ಸರಕಾರ ಹಾಗೂ ಆಗ ಮುಖ್ಯಮಂತ್ರಿಯಾಗಿದ್ದಿದ್ದು ಕಲ್ಯಾಣ್‌ ಸಿಂಗ್‌. ಆಗಲೇ ಇಡೀ ದೇಶ ಹಿಂದೆಂದಿಗಿಂತ ಹೆಚ್ಚು ಬಾರಿ ಇವರ ಹೆಸರನ್ನು ಕೇಳಿದ್ದು.

Advertisement

ಹಿಂದೂ ರಾಷ್ಟ್ರೀಯವಾದದ ಅಲೆ ಯಡಿ ನಮ್ಮ ದೇಶದಲ್ಲಿ ಮೂಡಿಬಂದ ಅತೀ ದೊಡ್ಡ ನೇತಾರರಲ್ಲಿ ಒಬ್ಬರು ಕಲ್ಯಾಣ್‌ ಸಿಂಗ್‌. ಹಿರಿಯರಾಗಿ ತುಂಬಿದ ಕೊಡದಂತಿದ್ದರೂ ರಾಜಕಾರಣದಲ್ಲಿ ಮಾಗಿದ ಹಣ್ಣಿನಂತಿದ್ದರೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಬೆಳೆಸಿಕೊಂಡ ದೇಶಭಕ್ತಿಯ ಕಸುವು ಅವರ ಮೈಮನ ಗಳಿಂದ ಸಡಿಲಗೊಂಡಿರಲಿಲ್ಲ.

1967ರಲ್ಲಿ ಉತ್ತರ ಪ್ರದೇಶವೆಂಬ ಮಹಾ ರಾಜ್ಯದ ಅಟ್ರೌಲಿಯಿಂದ ಚುನಾ ಯಿತರಾಗಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ ಅವರು ಮೊದಲಿಗೆ ಇದ್ದದ್ದು ಭಾರತೀಯ ಜನಸಂಘದಲ್ಲಿ (ಬಿಜೆಪಿಯ ಹಿಂದಿನ ಹೆಸರು). ಅನಂತರ ಜನತಾ ಪಾರ್ಟಿ, ರಾಷ್ಟ್ರೀಯ ಕ್ರಾಂತಿ ಪಾರ್ಟಿ ಸುತ್ತಾಡಿ ಬಳಿಕ ಬಿಜೆಪಿಗೆ ಕಾಲಿಟ್ಟರು. ಅದೇ ಅವರ ಅಂತಿಮ ನಿಲ್ದಾಣ ವಾಯಿತು.

1991ರಲ್ಲಿ ಅವರಿಗೆ ಬಿಜೆಪಿ, ಮುಖ್ಯ ಮಂತ್ರಿ ಪಟ್ಟ ನೀಡಿ, ಗಾದಿಯ ಮೇಲೆ ಕೂರಿಸಿತು. ಅಷ್ಟೊತ್ತಿಗಾಗಲೇ ಬಿಜೆಪಿಯ ಹಿರಿಯ ಧುರೀಣ ಲಾಲ್‌ಕೃಷ್ಣ ಆಡ್ವಾಣಿ ಆರಂಭಿಸಿದ್ದ ರಥಯಾತ್ರೆ ದೇಶ ದೆಲ್ಲೆಡೆ ರಾಮಭಕ್ತಿಯ ಕಿಚ್ಚು ಹೊತ್ತಿಸಿತ್ತು. ಅದೇ ರಾಮಭಕ್ತಿ, ಕಲ್ಯಾಣ್‌ ಸಿಂಗ್‌ ಅವರ ಅಧಿಕಾರವನ್ನು ಕಿತ್ತುಕೊಂಡಿತು. ಬಾಬ್ರಿ ಮಸೀದಿ ಭಗ್ನವಾದ ಬೆನ್ನಲ್ಲೇ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಅದರ ಜತೆಯಲ್ಲೇ ನ್ಯಾಯಾಂಗ ನಿಂದ ನೆಯ ಆಪಾದನೆಯೂ ಅವರನ್ನು ಸುತ್ತುವರಿಯಿತು. ಆದರೂ ಧೃತಿಗೆಡದೆ ಮುಂದುವರಿದರು ಕಲ್ಯಾಣ್‌.

ನ್ಯಾಯಾಂಗದ ದೃಷ್ಟಿಯಲ್ಲಿ ಕಲ್ಯಾಣ್‌ ಏನೇ ಆಗಿದ್ದರೂ ಉತ್ತರ ಪ್ರದೇಶದ ರಾಮಭಕ್ತರ ಪಾಲಿಗೆ ಅವರು ನೆಚ್ಚಿನ ನಾಯಕ. ಅದರ ಪರಿಣಾಮವಾಗಿ 1997 ರಲ್ಲಿ ಮತ್ತೆ ಮುಖ್ಯಮಂತ್ರಿ ಯಾದರು. ಅಧಿಕಾರಕ್ಕೆ ಬಂದ ಕೂಡಲೇ ವಿವಾದಿತ ಕಟ್ಟಡ ಕೆಡವಿದ ಪ್ರಕರಣದಲ್ಲಿ ಕರಸೇವಕರ ಮೇಲೆ ದಾಖಲಿಸಲ್ಪಟ್ಟಿದ್ದ ಪ್ರಕರಣಗಳನ್ನು ಹಿಂಪಡೆದರು. ಇದು ಸರಕಾರಕ್ಕೆ ಬೆಂಬಲ ಕೊಟ್ಟಿದ್ದ ಬಿಎಸ್‌ಪಿಯ ಅಸಮಾಧಾನಕ್ಕೆ ಕಾರಣವಾಯಿತು. ಆಗ ಬಿಎಸ್‌ಪಿ ಬೆಂಬಲ ಹಿಂಪಡೆಯಿತು. ಆದರೂ ಕಾಂಗ್ರೆಸ್‌, ಅಖೀಲ ಭಾರತೀಯ ಲೋಕ ತಾಂತ್ರಿಕ್‌ ಕಾಂಗ್ರೆಸ್‌ನ ಬೆಂಬಲ ದಿಂದ ಮುಖ್ಯಮಂತ್ರಿಯಾಗಿ ಮುಂದು ವರಿದರು.

Advertisement

ಹಿಂದುಳಿದ ವರ್ಗಗಳ ಕಣ್ಮಣಿ :

ಲೋಧಿ ಸಮುದಾಯಕ್ಕೆ ಸೇರಿದ ಕಲ್ಯಾಣ್‌ ಸಿಂಗ್‌, ತಮ್ಮ ಸಮುದಾಯದ ಅಭಿವೃದ್ಧಿ ವಿಚಾರದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಂಡವರಲ್ಲ. ಇದೇ ಕಾರಣಕ್ಕಾಗಿ ಬಿಜೆಪಿಯಲ್ಲಿ ಕೆಲವು ಉನ್ನತ ಸಮುದಾಯಗಳಿಗೆ ಸೇರಿದ ನಾಯಕರ ಅಸಮಾಧಾನ ಕಟ್ಟಿಕೊಂಡ ಅವರು, ಪಕ್ಷವನ್ನೂ ಬಿಟ್ಟು ಹೋಗಿದ್ದರು. 2004ರಲ್ಲಿ ಪುನಃ ಬಿಜೆಪಿಗೆ ವಾಪಸಾಗಿದ್ದ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನದಲ್ಲಿ ಕೂರಿಸಲಾಗಿತ್ತು. 2004ರಲ್ಲಿ ಬುಲಂದರ್‌ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. 2009ರಲ್ಲಿ ಮತ್ತೆ ಪಕ್ಷ ತೊರೆದರು. 2014ರಲ್ಲಿ ಪಕ್ಷಕ್ಕೆ ವಾಪ ಸಾದರು. ಆಗ ಪುನಃ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರಾದರು.

ಪಕ್ಷಕ್ಕೆ ಅವರ ಸೇವೆಯನ್ನು ಸ್ಮರಿಸಿ, ಬಿಜೆಪಿ ಅವರಿಗೆ ರಾಜಸ್ಥಾನ ರಾಜ್ಯಪಾಲರ ನ್ನಾಗಿ (2014)ನೇಮಿಸಿತು. ಅನಂತರ ಹಿಮಾಚಲ ಪ್ರದೇಶದ ರಾಜ್ಯಪಾಲರ ಹೊಣೆಯನ್ನು ಹೆಚ್ಚುವರಿಯಾಗಿ ನೀಡಲಾ ಗಿತ್ತು. ರಾಜ್ಯಪಾಲರಾಗಿ 5 ವರ್ಷ ಪೂರೈಸಿ, ಪುನಃ ಸಕ್ರಿಯ ರಾಜಕಾರಣಕ್ಕೆ ಹಿಂದಿರು ಗಿದ ಅವರು, ಬಿಜೆಪಿಯನ್ನು ಮತ್ತಷ್ಟು ಪ್ರಬಲಗೊಳಿಸಲು ಪ್ರಯತ್ನಿಸಿದ್ದರು.

ಕಡೆಯ ಉಸಿರಿನವರೆಗೂ ರಾಮ ಮಂದಿರ ಸಾಕಾರಕ್ಕಾಗಿ ಹಾತೊರೆಯುತ್ತಿದ್ದ ಅವರು, ಅದೇ ಕಾರಣಕ್ಕಾಗಿಯೇ ಹಿಂದು ತ್ವದ ಶಾಶ್ವತ ತಾರೆಯಾಗಿ ಅಭಿಮಾನಿಗಳ ಹೃದಯದಲ್ಲಿ ನೆಲೆಸಲಿದ್ದಾರೆ.

ನನ್ನ ನೋವನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ. ಕಲ್ಯಾಣ್‌ ಸಿಂಗ್‌ ಅವರು ಹಿರಿಯ ಮುತ್ಸದ್ದಿ, ಬೇರುಮಟ್ಟದ ನಾಯಕ, ಶ್ರೇಷ್ಠ ವ್ಯಕ್ತಿ. ಭಾರತದ ಸಾಂಸ್ಕೃತಿಕ ಪುನರುತ್ಥಾನಕ್ಕೆ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ. ಸಮಾಜದ ತುಳಿತಕ್ಕೊಳಗಾದ ವರ್ಗದ ಕೋಟ್ಯಂತರ ಜನರಿಗೆ ಧ್ವನಿಯಾದವರು. ಈ ದುಃಖದ ಸಮಯದಲ್ಲಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಬಯಸುತ್ತೇನೆ.ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next