Advertisement

ಕೋವಿಡ್ 19 ಹಿಮ್ಮೆಟ್ಟಿಸಲು ಕಲಬುರಗಿ ಕಾರ್ಯತಂತ್ರ

05:09 PM Apr 01, 2020 | Suhan S |

ಕಲಬುರಗಿ: ದೇಶದಲ್ಲೇ ಮೊದಲು ಜಿಲ್ಲೆಯ ವೃದ್ಧನನ್ನು ಬಲಿ ಪಡೆದು ಆತಂಕ ಸೃಷ್ಟಿಸಿದ್ದ ಕೋವಿಡ್‌-19 ಎಂಬ ಹೆಮ್ಮಾರಿಯನ್ನು ಹಿಮ್ಮೆಟ್ಟಿಸಲು ಕಲಬುರಗಿ ಜಿಲ್ಲಾಡಳಿತ ಕಾರ್ಯತಂತ್ರ ರೂಪಿಸುತ್ತಲೇ ಇದೆ. ಎರಡು ವಾರಗಳಿಂದ ಕೋವಿಡ್‌-19 ಹಾವಳಿ ಕಡಿಮೆಯಾಗಿದ್ದರೂ ಅಧಿಕಾರಿಗಳು ಮೈಮರೆಯದೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಮುಂಜಾಗ್ರತ ಕ್ರಮವಾಗಿ ಬರೋಬ್ಬರಿ ಆರು ಸಾವಿರ ಬೆಡ್‌ಗಳನ್ನು ಸಿದ್ಧಪಡಿಸುವಲ್ಲಿ ಜಿಲ್ಲಾಡಳಿತ ಕಾರ್ಯೋನ್ಮುಖವಾಗಿದೆ.

Advertisement

ಕೋವಿಡ್‌-19 ಸೋಂಕಿನಿಂದ 76 ವರ್ಷದ ವೃದ್ಧ ಮೃತಪಟ್ಟಿದ್ದಲ್ಲದೇ, ಆತನ ಪುತ್ರಿ ಮತ್ತು ಚಿಕಿತ್ಸೆ ನೀಡಿದ್ದ ವೈದ್ಯನಿಗೂ ಸೋಂಕು ಹರಡಿ ದಿಗ್ಭ್ರಮೆಗೊಳಿಸಿತ್ತು. ಕೋವಿಡ್‌-19 ಕಳಂಕದಿಂದ ಕಲಬುರಗಿ ಎಂದರೆ ನೆರೆ ಜಿಲ್ಲೆಯವರು ಭಯ ಭೀತರಾಗುತ್ತಿದ್ದರು. ಆದರೆ, ಜಿಲ್ಲಾಡಳಿತದ ಅಧಿಕಾರಿಗಳ ತಂಡ ಸಮರ್ಥವಾಗಿ ಮಹಾಮಾರಿ ಸೋಂಕನ್ನು ಎದುರಿಸುವ ಕಾರ್ಯ ನೀತಿ ಕೈಗೊಂಡಿತ್ತು. ಕೊರೊನಾ ಕಾಣಿಸಿಕೊಂಡ ದಿನದಿಂದಲೇ “ಲಾಕ್‌ಡೌನ್‌’ಗೆ ಒತ್ತು ಕೊಟ್ಟು ಜಿಲ್ಲೆಯ ಜನರನ್ನು ಮಾನಸಿಕವಾಗಿ ಸಜ್ಜುಗೊಳಿಸಿತ್ತು.

ಜತೆಗೆ ಜಿಲ್ಲಾಧಿಕಾರಿ ಶರತ್‌ ಬಿ., ಜಿಪಂ ಸಿಇಒ ಡಾ|ರಾಜಾ ಪಿ. ಮತ್ತು ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ, ಪೊಲೀಸ್‌ ಅಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಒಟ್ಟಾಗಿ ಕೋವಿಡ್‌-19ವನ್ನು ಗಂಭೀರವಾಗಿ ಪರಿಗಣಿಸಿ ಸಾಂಘಿಕ ಹೋರಾಟಕ್ಕೆ ಸಜ್ಜಾದರು.

ಸಮಿತಿಗಳ ಕಾರ್ಯ: ಕೋವಿಡ್‌-19 ವಿದೇಶಗಳನ್ನು ಸುತ್ತಿ ಬಂದವರಿಂದ ಹರಡಿದ ಸೋಂಕು. ಹೀಗಾಗಿ ಸಂಶಯಾಸ್ಪದ ವ್ಯಕ್ತಿಗಳನ್ನು ಪತ್ತೆ ಹಚ್ಚಲು ಡಿಸಿಪಿ ಕಿಶೋರ್‌ ಬಾಬು, ವೈದ್ಯಾಧಿಕಾರಿಗಳನ್ನು ಒಳಗೊಂಡ ಸಮಿತಿ ಕಾರ್ಯಪ್ರವೃತ್ತಗೊಂಡಿತ್ತು. ಅಲ್ಲದೇ, ಖಾಸಗಿ ಆಸ್ಪತ್ರೆಗಳಿಂದ ಮಾಹಿತಿ ಸಂಗ್ರಹ, ಪರೀಕ್ಷಾ ಮಾದರಿ ಹಾಗೂ ಹೋಂ ಕ್ವಾರಂಟೈನ್‌ ವ್ಯವಸ್ಥೆ ಕೊಡಿಸಿಕೊಳ್ಳುವ ಕಾರ್ಯಮಾಡುತ್ತಿದೆ.

ಸಿಇಒ ಡಾ|ರಾಜಾ ಅವರನ್ನೊಳಗೊಂಡು ಮಾನವ ಅಭಿವೃದ್ಧಿ ಸಮಿತಿಯು ಐಸೋಲೋಟೆಡ್‌ ವಾರ್ಡ್‌, ಹೋಂ ಕ್ವಾರಂಟೈನ್‌ ಹಾಗೂ ತಪಾಸಣೆ ಕೇಂದ್ರಗಳಲ್ಲಿ ಆರೋಗ್ಯ ಮತ್ತು ಭದ್ರತಾ ಸಿಬ್ಬಂದಿ ನಿಯೋಜನೆ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಜಿಮ್ಸ್‌ ನಿರ್ದೇಶರು, ಹೆಚ್ಚುವರಿ ಎಸ್‌ಪಿ ಅವರಿದ್ದ ಸಮಿತಿ ನಿತ್ಯ ಔಷಧಿ ಸಂಗ್ರಹ ಹಾಗೂ ಕೊರತೆ ಆಗದಂತೆ ಕ್ರಮ ವಹಿಸುತ್ತಿದೆ.

Advertisement

ಐಸೋಲೇಟೆಡ್‌ ವಾರ್ಡ್‌, ಹೋಂ ಕ್ವಾರಂಟೈನ್‌ ಸ್ಥಳದಲ್ಲಿ ಮೂಲ ಸೌಕರ್ಯಗಳನ್ನು ಇಎಸ್‌ಐ ಡೀನ್‌ ನೇತೃತ್ವದ ಸಮಿತಿ, ಸುಳ್ಳು ಸುದ್ದಿಗಳನ್ನು ಹರಡದಂತೆ ಕಡಿವಾಣ ಹಾಕಲು ಎಸ್‌ಪಿ ಹಾಗೂ ನಗರ ಪೊಲೀಸ್‌ ಆಯುಕ್ತ ಅವರನ್ನೊಳಗೊಂಡ ಸಮಿತಿ ಹಾಗೂ ಕೋವಿಡ್‌-19ಹೋರಾಟದಲ್ಲಿ ಪಾಲ್ಗೊಳ್ಳುವ ಆರೋಗ್ಯ, ಸ್ವಚ್ಛತೆ, ಪಾಲಿಕೆ ಸಿಬ್ಬಂದಿಗೆ ತರಬೇತಿ ಕೊಡುವುದು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಹ ಪ್ರತ್ಯೇಕವಾದ ಸಮಿತಿ ಶ್ರಮಿಸುತ್ತಿದೆ.

27,000 ಜನರ ಗುರುತು: ಕೋವಿಡ್‌-19 ಹೊರಡದಂತೆ ತಡೆಯಲು ವಿದೇಶದಿಂದ ಮರಳಿ ಬಂದವರ ಮೇಲೆ ಜಿಲ್ಲಾಡಳಿತ ಕಟ್ಟುನಿಟ್ಟಾಗಿ ಕಣ್ಣಿಡುವ ಕಾರ್ಯ ಮಾಡಿತ್ತು. ಜತೆಗೆ ಹೊರದೇಶದಿಂದ ಬಂದವರ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಕರೆ ನೀಡಿತು. ಇದುವರೆಗೆ 487 ಜನ ವಿದೇಶಯಾನಿಗಳನ್ನು ಗುರುತಿಸಲಾಗಿದೆ. ಇದರ ಜೊತೆಗೆ ಮಾನವ ಅಭಿವೃದ್ಧಿ ಸಮಿತಿ ಜಿಲ್ಲಾದ್ಯಂತ ಅಭಿಯಾನ ಕೈಗೊಂಡ ಕಳೆದ ಒಂದು ತಿಂಗಳಲ್ಲಿ ಹೊರ ಜಿಲ್ಲೆ, ಹೊರ ರಾಜ್ಯದಿಂದ ಬಂದ 27 ಸಾವಿರ ಜನರನ್ನು ಪತ್ತೆ ಹಚ್ಚಲಾಗಿದೆ. ಇದಕ್ಕಾಗಿ 205 ವೈದ್ಯರು, 1,686 ವೈದ್ಯಕೀಯ ಸಿಬ್ಬಂದಿ, 1,844 ಆಶಾ ಕಾರ್ಯಕರ್ತೆಯರು ಸೇರಿ ಒಟ್ಟು 3,735 ಜನ ಶ್ರಮಿಸುತ್ತಿದ್ದಾರೆ.

ಕೋವಿಡ್‌-19 ವಿಷಯದಲ್ಲಿ ಯಾವುದೇ ಸ್ಥಿತಿ ಉದ್ಭವಿಸಿದರೂ ಎದುರಿಸಲು ಜಿಲ್ಲಾಡಳಿತ ಸಿದ್ಧತೆಯಲ್ಲಿ ನಿರತವಾಗಿದೆ. ಐಎಸ್‌ಐ ಮತ್ತು ಜಿಮ್ಸ್‌ ಆಸ್ಪತ್ರೆಗಳನ್ನು ಕೋವಿಡ್‌-19ಗೆ ಮೀಸಲು ಎಂದು ಘೋಷಿಸಲಾಗಿದೆ. ಸರ್ಕಾರದ ನಿರ್ದೇಶನ ಮೇರೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಬೆಡ್‌ ಗಳನ್ನೂ ಸಜ್ಜುಗೊಳಿಸಲಾಗುತ್ತಿದೆ.  –ಶರತ್‌ ಬಿ., ಜಿಲ್ಲಾಧಿಕಾರಿ, ಕಲಬುರಗಿ

ಜಿಲ್ಲೆಯಲ್ಲಿ ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಹೊರ ಜಿಲ್ಲೆ, ಹೊರ ರಾಜ್ಯದಿಂದ 27 ಸಾವಿರ ಜನರನ್ನು ಗುರುತಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಚೆಕ್‌ಪೋಸ್ಟ್‌ ಮೂಲಕ ಬಂದ ಮತ್ತು ಈಗಾಗಲೇ ಗ್ರಾಮಕ್ಕೆಬಂದು ಸೇರಿದವರ ತಾಳೆ ಹಾಕುವ ಕಾರ್ಯ ಮಾಡಲಾಗುತ್ತಿದೆ. ಡಾ|ರಾಜಾ ಪಿ., ಸಿಇಒ, ಜಿಪಂ.

 

-ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next