Advertisement

ಕಾಂಗ್ರೆಸ್‌ ದಲಿತರನ್ನು ತುಳಿಯುವ ಪಕ್ಷ

12:36 PM Apr 11, 2019 | Naveen |

ಸೇಡಂ: ಕಾಂಗ್ರೆಸ್‌ ಪಕ್ಷದಲ್ಲಿ ಏನೂ ಸರಿಯಿಲ್ಲ. ಅಲ್ಲಿ ದಲಿತರ ಏಳ್ಗೆ ಅಸಾಧ್ಯ.
ಅದೊಂದು ದಲಿತರನ್ನು ತುಳಿಯುವ ಪಕ್ಷವಾಗಿದೆ ಎಂದು ರಾಜ್ಯ ಸರ್ಕಾರದ
ನಿವೃತ್ತ ಮುಖ್ಯ ಕಾರ್ಯದರ್ಶಿ, ಬಿಜೆಪಿ ಮುಖಂಡರಾದ ಕೆ. ರತ್ನಪ್ರಭಾ
ಹೇಳಿದರು.

Advertisement

ತಾಲೂಕಿನ ಮುಧೋಳ ಗ್ರಾಮದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ
ದಲಿತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹತ್ತಾರು ವರ್ಷಗಳು ಕಳೆದರೂ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿಯಾಗಿಲ್ಲ. ಚರಂಡಿ, ರಸ್ತೆಗಳು ನಿರ್ಮಾಣವಾಗಿಲ್ಲ.

ಸಮಸ್ಯೆಗಳ ಸುಳಿಯಲ್ಲೇ ಜನ ಜೀವನ ದೂಡುತ್ತಿದ್ದಾರೆ. ಈಗಲಾದರೂ
ಜನ ಎಚ್ಚೆತ್ತುಕೊಳ್ಳಬೇಕು. ಅನೇಕ ವರ್ಷಗಳ ಕಾಲ ಅ ಧಿಕಾರ ಕೊಟ್ಟಾಗ
ಅಭಿವೃದ್ಧಿ ಮಾಡದವರನ್ನು ಬೆಂಬಲಿಸುವುದು ಬಿಟ್ಟು, ಹೊಸಬರಿಗೆ
ಅವಕಾಶ ಕಲ್ಪಿಸಬೇಕು ಎನ್ನುವ ಮೂಲಕ ಡಾ| ಮಲ್ಲಿಕಾರ್ಜುನ
ಖರ್ಗೆ ಅವರನ್ನು ಪರೋಕ್ಷವಾಗಿ ಟೀಕಿಸಿದರು.

ಮತದಾರರಿಗೆ ಮತವೇ ಬಹುದೊಡ್ಡ ಆಯುಧ, ಅದರ ಸದ್ಬಳಕೆಯಾಗಬೇಕು. ಮತದಾರರು ಜಾಗೃತರಾಗಿ ಮತ ಚಲಾಯಿಸಬೇಕು. ನಾನು ಬಿಜೆಪಿಗೆ ಬರಲು ಪ್ರಮುಖ ಕಾರಣ ಡಾ| ಉಮೇಶ ಜಾಧವ ಎಂದು ಹೇಳಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ ಮಾತನಾಡಿ, ದೇಶದ ಹೊರಗಿನಿಂದ ಪಾಕಿಸ್ತಾನ್‌ ಮತ್ತು ಒಳಗಿನಿಂದ ಡಾ| ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್‌ ಗಾಂಧಿ  ಹೊರತುಪಡಿಸಿದರೆ ಪ್ರಧಾನಿ ಮೋದಿ ಅವರನ್ನು ವಿರೋಧಿಸುವವರೇ ಇಲ್ಲ. ಖರ್ಗೆ ತಮ್ಮ ಮಗನಿಗಾಗಿ ಅನೇಕ
ಮುಖಂಡರನ್ನು ಹೊರಹಾಕಿದ್ದಾರೆ ಎಂದು ಹೇಳಿದರು.

Advertisement

ಲೋಕಸಭೆ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ
ಮಾತನಾಡಿ, ಕಲಬುರಗಿ ರಸ್ತೆಯಲ್ಲಿ ನಿರ್ಮಾಣವಾಗಿರುವ 10 ಸಾವಿರ ಕೋಟಿ
ರೂ. ವೆಚ್ಚದ ಇಎಸ್‌ಐಸಿ ಆಸ್ಪತ್ರೆ ಕೇವಲ ತೋರಿಕೆಗಾಗಿ ಖರ್ಗೆ ಕಟ್ಟಿಸಿದ್ದಾರೆ. ಅಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯವಿಲ್ಲ. ನಮಗೆ ಅವಕಾಶ ಕೊಡಿ ದೇಶದಲ್ಲೇ ನಂ.1 ಆಸ್ಪತ್ರೆಯಾಗಿ ಮಾರ್ಪಾಡು ಮಾಡುತ್ತೇವೆ ಎಂದರು.

ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ, ಶಶಿಲ ನಮೋಶಿ,
ಮಾಜಿ ಉಪ ಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ಜಿಪಂ ಸದಸ್ಯ ಶರಣು ಮೆಡಿಕಲ್‌, ಡಾ| ಮಿಸ್ಕಿನ್‌, ವಿಕ್ರಂ ಪಾಟೀಲ, ಪರ್ವತರೆಡ್ಡಿ ಪಾಟೀಲ
ನಾಮವಾರ, ಡಾ| ಮಧುಸೂಧನರೆಡ್ಡಿ, ಭೀಮರಾಯ ಕೋಡ್ಲಾ,
ಕಲ್ಯಾಣಪ್ಪಗೌಡ ಪಾಟೀಲ, ಧರ್ಮಣ್ಣ ಇಟಗಾ, ನಾಗಪ್ಪ ಕೊಳ್ಳಿ, ವಿಶ್ವನಾಥರೆಡ್ಡಿ ಪಾಟೀಲ, ಓಂಪ್ರಕಾಶ ಪಾಟೀಲ ಹಾಗೂ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next