Advertisement

ಕೋವಿಡ್ ನಿಯಂತ್ರಣ: ಜಿಲಾಡಳಿತಕ್ಕೆ ಹೊಸ ತಲೆ ನೋವು

11:51 AM May 13, 2020 | Naveen |

ಕಲಬುರಗಿ: ಜಿಲ್ಲೆಯಲ್ಲಿ ಮಹಾಮಾರಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವ ಜಿಲ್ಲಾಡಳಿತಕ್ಕೆ ಈಗ ಹೊರ ರಾಜ್ಯಗಳಿಂದ ಬಂದಿರುವ ವಲಸಿಗರನ್ನು ಕ್ವಾರಂಟೈನ್‌ ಮಾಡುವುದು ಹೊಸ ಸವಾಲಾಗಿ ಪರಿಣಮಿಸಿದೆ.

Advertisement

ಲಾಕ್‌ಡೌನ್‌ ಜಾರಿಯಾದ ನಂತರ ಬೆಂಗಳೂರು, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಹಲವೆಡೆಗಳಿಂದ 76 ಸಾವಿರಕ್ಕೂ ಅಧಿಕ ಜನರು ಜಿಲ್ಲೆಗೆ ಬಂದಿದ್ದಾರೆ. ಕೋವಿಡ್ ಅಧಿಕವಾಗಿ ಹರಡಿರುವ ಮಹಾರಾಷ್ಟ್ರವೊಂದರಿಂದಲೇ 23 ಸಾವಿರ ಜನರು ಆಗಮಿಸಿದ್ದಾರೆ. ಆರಂಭದಲ್ಲಿ ಬಂದವರನ್ನು ಕೇವಲ ಹೋಂ ಕ್ವಾರಂಟೈನ್‌ ಮಾಡಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಕೋವಿಡ್  ಆತಂಕ ಹೆಚ್ಚಾದ ಹಿನ್ನೆಲೆಯಲ್ಲಿ ಹೊರಗಡೆಯಿಂದ ಯಾರೇ ಬಂದರೂ, ಅವರನ್ನು ಕಡ್ಡಾಯವಾಗಿ ಪ್ರತ್ಯೇಕ ಸ್ಥಳಗಳಲ್ಲಿ ಕ್ವಾರಂಟೈನ್‌ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ. ಅಲ್ಲದೇ, ಕ್ವಾರಂಟೈನ್‌ಗೆ ಒಳಗಾಗುವವರನ್ನು ಮಾತ್ರವೇ ಕರೆದುಕೊಂಡು ಬರುವ ಷರತ್ತು ಸಹ ವಿಧಿಸಲಾಗುತ್ತಿದೆ.

ಈ ನಡುವೆ ಕೆಲ ಕಡೆಗಳಲ್ಲಿ ಕ್ವಾರಂಟೈನ್‌ ಕೇಂದ್ರಗಳ ಸ್ಥಾಪನೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ಹೊರಗಡೆಯಿಂದ ಬಂದ ವಲಸಿಗರು ಕ್ವಾರಂಟೈನ್‌ ಆಗಲು ಆಕ್ಷೇಪ ಹೊರ ಹಾಕುತ್ತಿದ್ದಾರೆ. ಹೀಗಾಗಿ ಕ್ವಾರಂಟೈನ್‌ ಎನ್ನುವುದೇ ಜಿಲ್ಲಾಡಳಿತಕ್ಕೆ ಹೊಸ ತಲೆ ನೋವಾಗುವ ಸಂಭವ ಇದೆ.

ಮುಂಬೈನಿಂದ ಬಂದವರಿಂದ ತಗಾದೆ: ಮಾರಣಾಂತಿಕ ಸೋಂಕಿನಿಂದ ಈಗಾಗಲೇ ಜಿಲ್ಲೆ ತತ್ತರಿಸಿದೆ. ಹೊಸ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ಹೊರ ರಾಜ್ಯಗಳಿಂದ ಬಂದ ವಲಸಿಗರಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಮುಂಬೈನಿಂದ ಬಂದು ಆಳಂದ ತಾಲೂಕಿನ ವಿ.ಕೆ. ಸಲಗರ ಗ್ರಾಮದ ವಸತಿ ನಿಲಯದಲ್ಲಿ ಕ್ವಾರಂಟೈನ್‌ ಆಗಿದ್ದ ಕಮಲಾಪುರ ತಾಲೂಕಿನ 30 ವರ್ಷದ ಸೋಂಕಿತ ವ್ಯಕ್ತಿ (ಪಿ-806) ಗೆ ಮೇ 10ರಂದು ಕೋವಿಡ್ ದೃಢ ಪಟ್ಟು ಮತ್ತಷ್ಟು ಆತಂಕ ಹುಟ್ಟಿಸಿದೆ. ಆದ್ದರಿಂದ ವಲಸಿಗರ ಮೇಲೆ ಹೆಚ್ಚಿನ ನಿಗಾ ವಹಿಸುವುದು ಅನಿವಾರ್ಯವಾಗಿದೆ. ಆದರೆ, ಮಂಗಳವಾರ ಬೆಳಗಿನ ಜಾವ ವಿಶೇಷ ಶ್ರಮಿಕ್‌ ರೈಲಿನಲ್ಲಿ ಮುಂಬೈನಿಂದ ಆಗಮಿಸಿದ ಕೆಲ ವಲಸಿಗರು ಕ್ವಾರಂಟೈನ್‌ ಬಗ್ಗೆ ತಗಾದೆ ತೆಗೆದಿದ್ದಾರೆ. ಮುಂಬೈನಿಂದ ಬಂದ ನಂತರ ಮನೆಗೆ ರವಾನಿಸಿ ಹೋಂ ಕ್ವಾರಂಟೈನ್‌ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈಗ ಸರ್ಕಾರದ ಕ್ವಾರಂಟೈನ್‌ ಕೇಂದ್ರಗಳಿಗೆ ರವಾನಿಸುವುದಾಗಿ ಹೇಳುತ್ತಿದ್ದಾರೆ ಎಂದು ನಾಲವಾರ, ಯಾಗಾಪುರ ಮತ್ತು ಅಲಿಪುರದ ವಲಸಿಗರು ರೈಲ್ವೆ ನಿಲ್ದಾಣದಲ್ಲಿ ಹೈಡ್ರಾಮಾ ಸೃಷ್ಟಿಸಿದ್ದರು. ಆದರೆ, ಅಧಿಕಾರಿಗಳು ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೇ ಎಲ್ಲರನ್ನೂ ಅವರ ಊರುಗಳ ಸಮೀಪದ ಕ್ವಾರಂಟೈನ್‌ ಕೇಂದ್ರಗಳಿಗೆ ಸ್ಥಳಾಂತರ ಮಾಡಿದ್ದಾರೆ.

ಜಿಲ್ಲಾಡಳಿತದ ಮುನ್ನೆಚ್ಚರಿಕೆ: ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬರುವವರ ಮೇಲೆ ಜಿಲ್ಲಾಡಳಿತ ಹದ್ದಿನ ಕಣ್ಣಿರಿಸಿದ್ದು, ಹೊರ ಜಿಲ್ಲೆಯಿಂದ ಬಂದ ಎಲ್ಲರ ಆರೋಗ್ಯ ತಪಾಸಣೆ ಮಾಡಿ, ಬಳಿಕ ಒಳ ಬಿಡಲಾಗುತ್ತಿದೆ. ಕ್ವಾರಂಟೈನ್‌ ಕೇಂದ್ರಗಳಲ್ಲೂ ಕಟ್ಟುನಿಟ್ಟಿನ ಕ್ರಮ ವಹಿಸುತ್ತಿದ್ದು, ಉಸ್ತುವಾರಿಗೆ ಕಂದಾಯ ಇಲಾಖೆ ಸಿಬ್ಬಂದಿ ನೇಮಿಸಲಾಗಿದೆ. ಅಲ್ಲಿ ಪರಿಸ್ಥಿತಿ ಬಿಗಡಾಯಿಸಿದರೆ ತಕ್ಷಣವೇ ಪೊಲೀಸ್‌ ಸಿಬ್ಬಂದಿಯನ್ನೂ ರವಾನಿಸುವ ಕೆಲಸವಾಗುತ್ತಿದೆ.

Advertisement

ನಾಲ್ಕು ಸಾವಿರ ಜನರಿಗೆ ವ್ಯವಸ್ಥೆ
ಹೊರಗಡೆಯಿಂದ ಬಂದವರಿಗೆ ಕ್ವಾರಂಟೈನ್‌ ಮಾಡಲು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಮತ್ತು ಅಲ್ಪಸಂಖ್ಯಾತ ಇಲಾಖೆ ಸುಮಾರು 40 ವಸತಿ ನಿಲಯಗಳನ್ನು ಬಳಕೆ ಮಾಡಲಾಗುತ್ತಿದೆ. ಅಲ್ಲಿ ಸುಮಾರು ನಾಲ್ಕು ಸಾವಿರ ಜನರಿಗೆ ಕ್ವಾರಂಟೈನ್‌ ವ್ಯವಸ್ಥೆ ಆಗಲಿದೆ. ಜತೆಗೆ ವಸತಿ ಗೃಹಗಳು ಹಾಗೂ ಸಮುದಾಯ ಭವನಗಳನ್ನೂ ಕ್ವಾರಂಟೈನ್‌ ಕೇಂದ್ರಗಳನ್ನಾಗಿ ಜಿಲ್ಲಾಡಳಿತ ಪರಿವರ್ತಿಸುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಜಿಲ್ಲೆಗೆ ಹೊರ ಭಾಗದಿಂದ ಯಾರೇ ಬಂದರೂ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್‌ ಮಾಡಲಾಗುತ್ತದೆ. ನಂತರದಲ್ಲಿ 12-14ನೇ ದಿನ ಪ್ರತಿಯೊಬ್ಬರ ಗಂಟಲು ದ್ರಾವಣ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಪ್ರಯೋಗಾಲಯದ ವರದಿ ನೆಗೆಟಿವ್‌ ಬಂದರೆ, ಮನೆಗೆ ಕಳುಹಿಸಿಕೊಡಲಾಗುತ್ತದೆ.
ಡಾ| ರಾಜಾ ಪಿ.,
ಸಿಇಒ ಜಿಪಂ

ಮುಂಬೈನಿಂದ ರೈಲು ಮೂಲಕ ಒಟ್ಟು 1,251 ಜನರು ಆಗಮಿಸಿದ್ದಾರೆ. ಕಲಬುರಗಿ ಜಿಲ್ಲೆ ಮಾತ್ರವಲ್ಲದೇ, ಯಾದಗಿರಿ, ವಿಜಯಪುರದ ಕಾರ್ಮಿಕರು ಸಹ ಇದ್ದರು. ಜಿಲ್ಲೆಯ ಕಾರ್ಮಿಕರನ್ನು ಆಯಾ ತಾಲೂಕುಗಳಿಗೆ ಸ್ಥಳಾಂತರಿಸಿ ಕ್ವಾರಂಟೈನ್‌ ಮಾಡಲಾಗಿದೆ. ಹೊರ ಜಿಲ್ಲೆಯವರನ್ನು ಅವರ ಜಿಲ್ಲೆಗೆ ರವಾನಿಸಲಾಗಿದೆ.
ಶರತ್‌ ಬಿ.,
ಜಿಲ್ಲಾಧಿಕಾರಿ

ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next