Advertisement

ನಾಳೆಯಿಂದ 886ನೇ ಬಸವ ಜಯಂತ್ಯುತ್ಸವ

01:34 PM May 04, 2019 | Team Udayavani |

ಕಲಬುರಗಿ: ಜಗಜ್ಯೋತಿ ಬಸವಣ್ಣವರ 886ನೇ ಜಯಂತ್ಯುತ್ಸವ ಮೇ 5ರಿಂದ ಮೂರು ದಿನಗಳ ಕಾಲ ಜಗತ್‌ ವೃತ್ತದ ಬಸವೇಶ್ವರ ಮೂರ್ತಿ ಆವರಣದಲ್ಲಿ ನಡೆಯಲಿದೆ.

Advertisement

ಲಿಂ| ಡಾ| ಶಿವಕುಮಾರ ಮಹಾಸ್ವಾಮೀಜಿಗಳ ಸಿದ್ಧಗಂಗಾ ಮಠ ವೇದಿಕೆ, ಚಿತ್ತರಗಿ ಇಲಕಲ್ ಮಹಾಂತಸ್ವಾಮಿಗಳ ಹಾಗೂ ಗದಗ ತೊಂಟದಾರ್ಯ ಮಠದ ಸಿದ್ಧಲಿಂಗ ಮಹಾಸ್ವಾಮಿಗಳ ಮಹಾದ್ವಾರದಡಿ ಬಸವ ಜಯಂತಿ ಉತ್ಸವ ಸಮಿತಿ ಹಾಗೂ ಜಿಲ್ಲಾಡಳಿತ ಆಶ್ರಯದಲ್ಲಿ ಬಸವ ಜಯಂತಿ ಉತ್ಸವ ಆಯೋಜಿಸಲಾಗಿದೆ ಎಂದು ಉತ್ಸವ ಸಮಿತಿ ಗೌರವಾಧ್ಯಕ್ಷ, ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲಹಂಗರಗಾ, ಬಸವ ಉತ್ಸವ ಸಮಿತಿ ಅಧ್ಯಕ್ಷ ಪ್ರಶಾಂತ ಅಪ್ಪಣ್ಣ ಗುಡ್ಡಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೂರು ದಿನಗಳ ಕಾಲ ವಿಶೇಷ ಉಪನ್ಯಾಸ, ಕಾಯಕ ಭೂಷಣ ಪ್ರಶಸ್ತಿ ಪ್ರದಾನ, ವಚನ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ ಜರುಗಲಿದೆ. ವಿಶ್ವಗುರು ಬಸವಣ್ಣನವರ ಮತ್ತು ಶರಣರ ಭಾವಚಿತ್ರಗಳ ಭವ್ಯ ಮೆರವಣಿಗೆ ಜರುಗಲಿದೆ ಎಂದರು.

ಮೇ 5ರಂದು ಸಂಜೆ 6ಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಅಖೀಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಜಯಂತ್ಯುತ್ಸವ ಉದ್ಘಾಟಿಸುವರು. ಸಚಿವ ಪ್ರಿಯಾಂಕ್‌ ಖರ್ಗೆ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಬಿ.ಜಿ. ಪಾಟೀಲ ಮುಖ್ಯ ಅತಿಥಿಗಳಾಗಿ, ಉಪನ್ಯಾಸಕರಾಗಿ ಸೊಲ್ಲಾಪುರದ ಕನ್ನಡ ಪ್ರಾಧ್ಯಾಪಕ ಪ್ರೊ| ಬಾಬುರಾವ ಪೂಜಾರ ಆಗಮಿಸುವರು.

ಸೊನ್ನದ ಡಾ| ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಗಣ್ಯರು ಅತಿಥಿಗಳಾಗಿ ಆಗಮಿಸುವರು. ಗೌರವ ಡಾಕ್ಟರೇಟ್‌ಗೆ ಪುರಸ್ಕೃತರಾದ ಡಾ| ಅರುಣಕುಮಾರ ಎಸ್‌. ಪಾಟೀಲ, ಮಾಜಿ ಮಹಾಪೌರ ಡಾ| ಶರಣಕುಮಾರ ಮೋದಿ ಅವರಿಗೆ ವಿಶೇಷ ಸನ್ಮಾನ ನೆರವೇರಲಿದೆ. ವೈದ್ಯರಾದ ಡಾ| ಮುರುಗೇಶ ಪಸ್ತಾಪುರ, ಡಾ| ಶಿವಶರಣ ಝಳಕಿ, ಪ್ರಕಾಶ ದೇಗಲಮಡಿ, ಲಕ್ಷ್ಮೀಕಾಂತ ಜೋಳದ, ಮಾಲಾ ಎಸ್‌.ಐ. ಅವರಿಗೆ ಕಾಯಕ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುವದು ಎಂದರು.

Advertisement

ಮೇ 6ರಂದು ಪ್ರಾಧ್ಯಾಪಕ ಪ್ರೊ| ಟಿ. ಗುರುಬಸಪ್ಪಾ ಉಪನ್ಯಾಸ ನೀಡುವರು. ಸುರೇಶ ಪಾಟೀಲ ಜೋಗೂರ, ಅಪ್ಪಾರಾವ ಅಕ್ಕೋಣೆ ಅವರಿಗೆ ವಿಶೇಷ ಸನ್ಮಾನ, ಡಾ| ರಾಜಶೇಖರ ಪಾಟೀಲ, ಡಾ| ಮಂಜುನಾಥ ದೋಶೆಟ್ಟಿ, ಡಾ| ಸಂತೋಷ ಪಾಟೀಲ ಹೆಬ್ಟಾಳ, ಮಹೇಶ ಆರ್‌., ಡಾ| ಶಿವಶರಣ ಝಳಕಿ ಅವರಿಗೆ ಕಾಯಕ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮೇ 7ರಂದು ಸಂಜೆ 6ಕ್ಕೆ ಅಕ್ಕಲಕೋಟೆಯ ಡಾ| ಗುರುಲಿಂಗಪ್ಪ ದಬಾಲೆ ವಿಶೇಷ ಉಪನ್ಯಾಸ ನೀಡುವರು. ಬೆಳಗ್ಗೆ 10ಕ್ಕೆ ರಕ್ತದಾನ ಶಿಬಿರವನ್ನು ಡಾ| ಶರಣಬಸಪ್ಪಾ ಬಿ. ಶಿವಶೆಟ್ಟಿ ಉದ್ಘಾಟಿಸುವರು. ಅದೇ ದಿನ ಸಂಜೆ 4ಕ್ಕೆ ನಗರೇಶ್ವರ ಶಾಲೆಯಿಂದ ಬಸವೇಶ್ವರ ಪ್ರತಿಮೆ ವರೆಗೆ ವಿಶ್ವಗುರು ಬಸವಣ್ಣನವರ ಮತ್ತು ಶರಣರ ಭಾವಚಿತ್ರಗಳ ಭವ್ಯ ಮೆರವಣಿಗೆ ಜರುಗಲಿದೆ. ಎಲ್ಲ ಕಾರ್ಯಕ್ರಮಗಳಿಗೆ ಹರ, ಗುರು, ಚರಮೂರ್ತಿಗಳು, ಜನಪ್ರತಿನಿಧಿಗಳು, ವಿವಿಧ ಕ್ಷೇತ್ರಗಳಲ್ಲಿನ ಗಣ್ಯರು ಆಗಮಿಸುವರು ಎಂದು ವಿವರಿಸಿದರು.

ಬಸವ ಜಯಂತಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಕಲ್ಯಾಣರಾವ ಮೂಲಗೆ ಕುಮಸಿ, ಪ್ರಧಾನ ಕಾರ್ಯದರ್ಶಿ ಸಿದ್ಧರಾಜ ಬಿರಾದಾರ ಮಹಾಗಾಂವ, ಮಾಜಿ ಮಹಾಪೌರ ಡಾ| ಶರಣಕುಮಾರ ಮೋದಿ, ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ ಮಳಖೇಡ, ಶರಣು ಪಪ್ಪಾ, ಡಾ| ಶ್ರೀಶೈಲ ಘೂಳಿ ಹಾಗೂ ಮುಂತಾದವರು ಇದ್ದರು.

ಪ್ರತ್ಯೇಕ ಬಸವ ಜಯಂತ್ಯುತ್ಸವ
ಇಬ್ಬರೂ ಒಗ್ಗೂಡಿ ಬಸವೇಶ್ವರ ಜಯಂತ್ಯುತ್ಸವ ಆಚರಿಸೋಣ ಎಂಬುದಾಗಿ ಜಾಗತಿಕ ಲಿಂಗಾಯತ ಮಹಾಸಭಾದವರನ್ನು ಪೂರ್ವಬಾವಿ ಸಭೆಗೆ ಆಹ್ವಾನಿಸಲಾಗಿತ್ತು. ಆದರೆ ಸಭೆಗೆ ಬರಲಿಲ್ಲ. ಆದರೆ ಮೇ 8ರಿಂದ ಜಾಗತಿಕ ಮಹಾಸಭಾ ಹಾಗೂ ಬಸವ ಕಾಯಕ ಸಂಘಟನೆಗಳ ಆಶ್ರಯದಲ್ಲಿ ಏ. 8ರಿಂದ ಐದು ದಿನಗಳ ಕಾಲ ಬಸವೇಶ್ವರ ಮೂರ್ತಿ ಆವರಣದಲ್ಲಿ ಪ್ರತ್ಯೇಕವಾಗಿ ಬಸವ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿ ಪದಾಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next